Homeಕರ್ನಾಟಕದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಸ್ವರಾಜ್ ಇಂಡಿಯಾ ಆಗ್ರಹ..

ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಸ್ವರಾಜ್ ಇಂಡಿಯಾ ಆಗ್ರಹ..

ನರಸಿಂಹಮೂರ್ತಿ ಅವರ ಏಕಾಏಕಿ ಬಂಧನದಿಂದ ಆಡಳಿತ ಪಕ್ಷವು ಅದರ ವಿರುದ್ಧ ಮಾತನಾಡುವ ವ್ಯಕ್ತಿಗಳ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎನ್ನುವ ಆತಂಕ ಸೃಷ್ಟಿಯಾಗಿದೆ. ಭಿನ್ನಮತದ ಧ್ವನಿಗಳನ್ನು ಹತ್ತಿಕ್ಕುವುದು ಮತ್ತು ನಿಗ್ರಹಿಸುವುದು ಪ್ರಜಾಪ್ರಭುತ್ವಕ್ಕೆ ಒಂದು ಗಂಭೀರ ಹಿನ್ನಡೆ ಎಂದು ಆರೋಪಿಸಿದ್ದಾರೆ.

- Advertisement -
- Advertisement -

ಸ್ವರಾಜ್ ಇಂಡಿಯಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನವನ್ನು ಸ್ವರಾಜ್ ಇಂಡಿಯಾ ಖಂಡಿಸುತ್ತದೆ. ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ಆಧಾರರಹಿತ ಎಂದು ಸ್ವರಾಜ್ ಇಂಡಿಯಾ ಪಕ್ಷವು ಹೇಳಿದೆ.

ಈ ಕುರಿತು ಸ್ವರಾಜ್ ಇಂಡಿಯಾ ಪಕ್ಷದ ಪರವಾಗಿ ಚಾಮರಸ ಮಾಲಿ ಪಾಟೀಲ, ಅಮ್ಜದ್ ಪಾಷ, ದೇವನೂರ ಮಹಾದೇವರವರು ಹೇಳಿಕೆ ಬಿಡುಗಡೆ ಮಾಡಿದ್ದು, ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಗೌರಿ ಮೀಡಿಯಾ ಟ್ರಸ್ಟ್ ನ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಹೇಳಿ ಬಂಧಿಸಲಾಗಿರುವುದು ಆಧಾರ ರಹಿತ. ದೊಡ್ಡಿಪಾಳ್ಯ ನರಸಿಂಹಮೂರ್ತಿ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ಬಹಿರಂಗವಾಗಿ ತೊಡಗಿಸಿಕೊಂಡಿದ್ದಾರೆ. ಪತ್ರಕರ್ತರಾಗಿ ಮತ್ತು ಬರಹಗಾರರಾಗಿಯೂ ಮನ್ನಣೆ ಗಳಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ನಿಂದ ಬಿಡುಗಡೆಯಾಗುತ್ತಿರುವ ನ್ಯಾಯಪಥ ಪತ್ರಿಕೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್ 24 ರಂದು ರಾಯಚೂರಿನಲ್ಲಿ ‘ಪರ್ಯಾಯ ಮಾಧ್ಯಮಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ನರಸಿಂಹಮೂರ್ತಿ ಅವರನ್ನು ಪ್ರಮುಖ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಅಲ್ಲಿಯೇ ರಾಯಚೂರು ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ಅಕ್ಟೋಬರ್ 25ರಂದು ಬಂಧಿಸಲಾಗಿದೆ ಎಂದು ರಾಯಚೂರು ಪೊಲೀಸರು ಹೇಳಿಕೆ ನೀಡಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಕರೆ ತಂದು ನವೆಂಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನರಸಿಂಹಮೂರ್ತಿ ಅವರ ಮೇಲೆ ದೇಶದ್ರೋಹದಂತಹ ಗಂಭೀರ ಪ್ರಕರಣಗಳನ್ನು ರಾಯಚೂರು ಪೊಲೀಸ್ ದಾಖಲಿಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಎರಡು ದಶಕಗಳ ಹಿಂದೆ ನಡೆದಿವೆ ಎನ್ನಲಾದ ನಕ್ಸಲೀಯ ಚಟವಟಿಕೆಗಳಿಗೆ ಗಂಟು ಹಾಕುವ ಪ್ರಯತ್ನ ಮಾಡಲಾಗಿದೆ. ನರಸಿಂಹಮೂರ್ತಿ ಅವರನ್ನು ಮೊದಲು ವಿಚಾರಣೆಗೆ ಎಂದು ವಶಕ್ಕೆ ಪಡೆದು, ನಂತರ ಬಂಧಿಸಿ, ಗಂಭೀರ ಆರೋಪ ಮಾಡುತ್ತಿರುವುದು, ಕರ್ನಾಟಕದಲ್ಲಿ ಪತ್ರಿಕೋದ್ಯಮದ ಅಭಿವ್ಯಕ್ತಿ ಮತ್ತು ರಾಜಕೀಯ ಪ್ರತಿರೋಧದ ಧ್ವನಿ ಅಡಗಿಸಲು ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಸಾರ್ವಜನಿಕ ಜೀವನದಲ್ಲಿ ಅತ್ಯಂತ ಸಕ್ರಿಯವಾಗಿರುವ ವ್ಯಕ್ತಿ. ಕರ್ನಾಟಕದ ಜನರು ದೊಡ್ಡಿಪಾಳ್ಯ ಅವರನ್ನು ಕಳೆದ ಮೂರು ದಶಕಗಳಿಂದ ನೋಡಿದ್ದಾರೆ. ಪತ್ರಕರ್ತರಾಗಿ ‘ದಿ ಸಂಡೇ ಇಂಡಿಯನ್, ‘ಗೌರಿ ಲಂಕೇಶ್ ಪತ್ರಿಕೆ, ‘ನ್ಯಾಯಪಥ’ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಗೌರವಯುತ ರಾಜಕೀಯ ಕಾರ್ಯಕರ್ತರೂ ಆಗಿದ್ದು, ಸದ್ಯಕ್ಕೆ ಸ್ವರಾಜ್ ಇಂಡಿಯಾ- ಕರ್ನಾಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ಬಹಿರಂಗವಾಗಿ ಕೆಲಸ ಮಾಡಿಕೊಂಡು ಓಡಾಡುತ್ತಿದ್ದ ನರಸಿಂಹಮೂರ್ತಿ ಅವರನ್ನು ‘ತಲೆಮರೆಸಿಕೊಂಡಿದ್ದರು’ ಎಂದು ಹೇಳುವುದು ಅತ್ಯಂತ ದುರದೃಷ್ಟಕರ ಮತ್ತು ಸೇಡಿನ ರಾಜಕಾರಣದ ಲಕ್ಷಣಗಳನ್ನು ತೋರಿಸುತ್ತದೆ ಎಂದಿದ್ದಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನವು ಪ್ರಗತಿಪರ, ಉದಾರವಾದಿ, ಪ್ರಜಾಪ್ರಭುತ್ವವಾದಿ ಹಾಗೂ ಅಂಬೇಡ್ಕರ್ ವಾದಿ  ಚಿಂತಕರು ಹಾಗೂ ಆಡಳಿತ ಪಕ್ಷದ ರಾಜಕೀಯ ನೀತಿ ಮತ್ತು ನಡತೆಗಳನ್ನು ಪ್ರಶ್ನಿಸುವ ಮತ್ತು ಬಹಿರಂಗವಾಗಿಯೇ ವಿಮರ್ಶಿಸುವ ಕಾರ್ಯಕರ್ತರ ಮೇಲೆ ನಡೆಯುತ್ತಿರವ ಇನ್ನೊಂದು ದಾಳಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕು ಕಾರ್ಯಕರ್ತರ ಮತ್ತು ಚಿಂತಕರ ಮೇಲೆ ಸುಳ್ಳು ಪ್ರಕರಣಗಳನ್ನು ಹೊರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ನರಸಿಂಹಮೂರ್ತಿ ಅವರ ಏಕಾಏಕಿ ಬಂಧನದಿಂದ ಆಡಳಿತ ಪಕ್ಷವು ಅದರ ವಿರುದ್ಧ ಮಾತನಾಡುವ ವ್ಯಕ್ತಿಗಳ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎನ್ನುವ ಆತಂಕ ಸೃಷ್ಟಿಯಾಗಿದೆ. ಭಿನ್ನಮತದ ಧ್ವನಿಗಳನ್ನು ಹತ್ತಿಕ್ಕುವುದು ಮತ್ತು ನಿಗ್ರಹಿಸುವುದು ಪ್ರಜಾಪ್ರಭುತ್ವಕ್ಕೆ ಒಂದು ಗಂಭೀರ ಹಿನ್ನಡೆ ಎಂದು ಆರೋಪಿಸಿದ್ದಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಮೇಲೆ ಮಾಡಲಾಗಿರುವ ಆರೋಪಗಳ ಬಗ್ಗೆ ನ್ಯಾಯಯುತ ಮತ್ತು ತ್ವರಿತ ತನಿಖೆಯಾಗಬೇಕು. ಕಾನೂನಾತ್ಮಕವಾಗಿ ನರಸಿಂಹಮೂರ್ತಿ ಅವರ ವಿಚಾರಣಾಪೂರ್ವ ಬಂಧನವನ್ನು ತಕ್ಷಣ ಕೊನೆಗೊಳಿಸಿ ಬಿಡುಗಡೆ ಮಾಡಬೇಕು ಎಂದು ಸ್ವರಾಜ್ ಇಂಡಿಯಾ ಆಗ್ರಹಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...