ಪತ್ರಕರ್ತ, ಹೋರಾಟಗಾರ, ಸ್ವರಾಜ್ ಇಂಡಿಯಾ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಅಕ್ರಮ ಬಂಧನ ವಿರೋಧಿಸಿ, ಕೂಡಲೇ ಬಿಡುಗಡೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಜೀವಪರ ಮನಸ್ಸುಗಳು ಕರೆ ನೀಡಿದ್ದಾರೆ.
ಇಂದು ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನಾ ಧರಣಿ ನಡೆಯಲಿದ್ದು ನಂತರ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಹಕ್ಕೊತ್ತಾಯ ಸಲ್ಲಿಸುವ ಯೋಜನೆ ನಡೆಸಿದ್ದಾರೆ.
ಗೌರಿ ಮೀಡಿಯಾ ಟ್ರಸ್ಟ್ ಕಾರ್ಯದರ್ಶಿಯೂ ಆದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ರಾಯಚೂರು ಪೊಲೀಸರು ಅಕ್ರಮವಾಗಿ ಬಂಧಿಸಿರುವುದು ಆಳುವ ಪಕ್ಷದ ದಮನಕಾರಿ ಪ್ರವೃತ್ತಿಯನ್ನು ಇದು ಮತ್ತೆ ಮತ್ತೆ ಎತ್ತಿ ತೋರಿಸುತ್ತಿದೆ ಎಂದು ನೂರಾರು ಪ್ರಜ್ಞಾವಂತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
#We_are_with_DMNMurthy #We_are_with_Peoples_Media ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ನೂರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ನರಸಿಂಹಮೂರ್ತಿಯವರ ಬಂಧನವನ್ನು ವಿರೋಧಿಸಿದ್ದು ಇಂದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ.
“ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ದುರುದ್ದೇಶಪೂರ್ವಕ ಬಂಧನವನ್ನು ಖಂಡಿಸುತ್ತೇವೆ. ಜನಪರ ಮಾಧ್ಯಮಗಳ ಮೇಲಿನ ದಬ್ಬಾಳಿಕೆಯನ್ನು ಸಹಿಸುವುದಿಲ್ಲ, ಜನಪರ ಮಾಧ್ಯಮ ಪ್ರಯತ್ನದ ಜೊತೆಗೆ ನಾವಿದ್ದೇವೆ ಎನ್ನು ಪೋಸ್ಟಿಗೆ ನಿಮ್ಮ ಒಪ್ಪಿಗೆಯಿದ್ದರೆ ತಿಳಿಸಿ ನಿಮ್ಮ ಹೆಸರನ್ನೂ ಸೇರಿಸಲಾಗುವುದು. ಈ ಸಂದರ್ಭದಲ್ಲಿ ನಾವೆಲ್ಲಾ ಪರಸ್ಪರ ಜೊತೆಗಿದ್ದೇವೆ ಎಂಬುದಕ್ಕೆ ಮಹತ್ವವಿದೆ” ಎಂಬ ಫೇಸ್ಬುಕ್ ಬರಹವೊಂದಕ್ಕೆ ಒಂದು ಸಾವಿರಕ್ಕಿಂತಲೂ ಅಧಿಕ ಜನರು ತಮ್ಮ ಹೆಸರನ್ನು ಸೂಚಿಸಿ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.