Homeಮುಖಪುಟರಾಜಕೀಯ ವಿಷಯವಾಗಬೇಕಿರುವ ಶ್ರೀಮಂತ ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಕಂದರ

ರಾಜಕೀಯ ವಿಷಯವಾಗಬೇಕಿರುವ ಶ್ರೀಮಂತ ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಕಂದರ

- Advertisement -
- Advertisement -

ಭಾರತ ಜೋಡೊ ಯಾತ್ರೆಯಿಂದ ಏನನ್ನಾದರೂ ಸಾಧಿಸಲಾಗಿದೆಯೋ ಇಲ್ಲವೋ, ಆದರೆ ಇಷ್ಟು ಮಾತ್ರ ನಿಜ; ಶ್ರೀಮಂತರು ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಕಂದರದ ಪ್ರಶ್ನೆಯು ದೇಶದ ಮನಸ್ಥಿತಿಯಲ್ಲಿ ಎಚ್ಚೆತ್ತುಕೊಳ್ಳುತ್ತಿದೆ. ರಾಹುಲ್ ಗಾಂಧಿ ನಿರಂತರವಾಗಿ ಬಡವರ ದುಃಸ್ಥಿತಿ ಮತ್ತು ಶ್ರೀಮಂತರಲ್ಲಿ ಹೆಚ್ಚುತ್ತಿರುವ ಸಂಪತ್ತಿನ ಪ್ರಶ್ನೆಯನ್ನು ಎತ್ತಿದ್ದಾರೆ. ದಿನೇದಿನೇ ಹಲವಾರು ಪಟ್ಟು ಹೆಚ್ಚುತ್ತಿರುವ ಗೌತಮ್ ಅದಾನಿಯ ಸಾಮ್ರಾಜ್ಯದ ಮೇಲೆ ಮೊಟ್ಟಮೊದಲ ಬಾರಿ ಒಂದು ದೊಡ್ಡ ಪಕ್ಷದ ನಾಯಕರೊಬ್ಬರು ಬೊಟ್ಟು ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಆರ್ಥಿಕ ತಜ್ಞರು ಹಾಗೂ ವಿಶ್ವದ ಹೆಸರಾಂತ ಸಂಸ್ಥೆಗಳ ವರದಿಗಳೂ ಈ ಪ್ರಶ್ನೆಯನ್ನು ಎತ್ತುತ್ತಿವೆ. ಇವುಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ; ಏಕೆಂದರೆ, ದೇಶದಲ್ಲಿ ಅರ್ಥಿಕ ಅಸಮಾನತೆಯ ಅನುಪಾತ ಪ್ರತಿದಿನ ಪತ್ರಿಕೆ ಓದುವ ವ್ಯಕ್ತಿಗೂ ತಿಳಿದಿಲ್ಲ. ಮನೆಯಲ್ಲಿ ಎಸಿ ಮತ್ತು ಕಾರ್ ಇಟ್ಟುಕೊಳ್ಳುವ, 50 ಲಕ್ಷ ರೂಪಾಯಿಗಳ ಮನೆಯ ಮಾಲೀಕ ಹಾಗೂ ಪ್ರತಿ ತಿಂಗಳು ಒಂದು ಲಕ್ಷಕ್ಕೂ ಹೆಚ್ಚು ಗಳಿಸುವ ವ್ಯಕ್ತಿ ತನ್ನನ್ನು ತಾನು “ಮಿಡಲ್ ಕ್ಲಾಸ್” ಎಂದು ಕರೆದುಕೊಳ್ಳುತ್ತಾಳೆ/ನೆ.

ಗೌತಮ್ ಅದಾನಿ

ಪ್ರಸಿದ್ಧ ಅರ್ಥಿಕ ತಜ್ಞ ಥಾಮಸ್ ಪಿಕೆಟಿಯ ನಿರ್ದೇಶನದಲ್ಲಿ ಬಂದ ಜಾಗತಿಕ ಅಸಮಾನತೆ ವರದಿ (ವರ್ಲ್ಡ್ ಇನ್‌ಈಕ್ವಾಲಿಟಿ ರಿಪೋರ್ಟ್) 2022, ಈ ವರದಿಯು ನಮಗೆ ಭಾರತದ ಆರ್ಥಿಕ ವಿಷಮತೆಯ ಚಿತ್ರಣವನ್ನು ನೀಡುತ್ತದೆ. ಇದರ ಅನುಗುಣವಾಗಿ, 2021ರಲ್ಲಿ ಭಾರತದ ಪ್ರತಿ ವಯಸ್ಕ ವ್ಯಕ್ತಿಯ ಪ್ರತಿ ತಿಂಗಳ ಸರಾಸರಿ ಆದಾಯ ಸುಮಾರು 17 ಸಾವಿರ ಆಗಿತ್ತು. ಆದರೆ ದೇಶದ ಕೆಳ ಅರ್ಧ ಜನಸಂಖ್ಯೆಯ ಸರಾಸರಿ ಆದಾಯ 5 ಸಾವಿರವೂ ಇದ್ದಿಲ್ಲ. ಅದೇ ಸಮಯದಲ್ಲಿ ಮೇಲಿನ 10% ವ್ಯಕ್ತಿಗಳ ಸರಾಸರಿ ಆದಾಯ ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿಗಳಷ್ಟಿತ್ತು. ಉತ್ತುಂಗದಲ್ಲಿರುವ 1%ರಲ್ಲಿ ಪ್ರತಿ ವ್ಯಕ್ತಿಯ ಪ್ರತಿತಿಂಗಳ ಆದಾಯ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿಗಳಷ್ಟು.

ಒಂದು ವೇಳೆ ಆದಾಯದ ಬದಲಿಗೆ ಒಟ್ಟು ಸಂಪತ್ತಿನ ಅಂಕಿ ಅಂಶಗಳನ್ನು ನೋಡಿದರೆ, ಈ ಅಸಮಾನತೆಯು ಇನ್ನಷ್ಟು ಭಯಂಕರವಾಗಿ ಗೋಚರಿಸುತ್ತದೆ. 2021ರಲ್ಲಿ ದೇಶದ ಸರಾಸರಿ ವಯಸ್ಕ ವ್ಯಕ್ತಿಯ ಮನೆ, ಭೂಮಿ ಮತ್ತು ಆಸ್ತಿ, ಇವೆಲ್ಲವುಗಳ ಒಟ್ಟಾರೆ ಮೊತ್ತ ಸುಮಾರು 10 ಲಕ್ಷ ರೂಪಾಯಿಗಳಷ್ಟು. ಕೆಳಗಿರುವ ಅರ್ಧ ಜನಸಂಖ್ಯೆಯ ಬಳಿ ಒಟ್ಟಾರೆ ಸಂಪತ್ತಿನ ಸರಾಸರಿ ಮೊತ್ತ ಒಂದು ಲಕ್ಷ ರೂಪಾಯಿಗಳು, ಅದೇ ಸಮಯದಲ್ಲಿ ಮೇಲಿನ 10% ವ್ಯಕ್ತಿಗಳ ಬಳಿರುವ ಸರಾಸರಿ ಸಂಪತ್ತು 65 ಲಕ್ಷ ಹಾಗೂ ಮೇಲಿನ 1% ಜನರ ಬಳಿಯ ಸರಾಸರಿ ಸಂಪತ್ತು 3.2 ಕೋಟಿ ರೂಪಾಯಿಗಳು. ದೇಶದ ಅರ್ಧದಷ್ಟು ಜನರ ಬಳಿ ದೇಶದ ಒಟ್ಟಾರೆ ಸಂಪತ್ತಿನ ಕೇವಲ 6% ಮಾತ್ರ ಇದ್ದು, ಅದೇ ಸಮಯದಲ್ಲಿ ಮೇಲಿನ 10% ಜನರ ಬಳಿ ದೇಶದ 65% ಸಂಪತ್ತು ಇದೆ. ಹಾಗೂ ದೇಶದ ಕಾಲು ಭಾಗ ಸಂಪತ್ತು ಕೇವಲ 1% ಜನರ ಬಳಿಯೇ ಕ್ರೋಢೀಕೃತವಾಗಿದೆ.

ಇದನ್ನೂ ಓದಿ: ಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

ಈ ಅಂಕಿಅಂಶಗಳಿಂದಲೇ ದೇಶದ ಅಸಮಾನತೆಯ ಸಂಪೂರ್ಣ ಚಿತ್ರಣ ಸಿಗುವದಿಲ್ಲ. ಅದಕ್ಕೆ ನಾವು ಮೇಲಿನ 1%ಕ್ಕಿಂತ ಇನ್ನೂ ಮೇಲೆ ಇಣುಕಬೇಕಾಗುತ್ತದೆ. ಅಂತಾರಾಷ್ಟ್ರೀಯ ಪತ್ರಿಕೆಯಾದ ’ಫೋರ್ಬ್ಸ್’ ಜಗತ್ತಿನ ಧನಿಕ ಬಿಲಿಯನೇರ್ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಅಂದರೆ, ಯಾವ ವ್ಯಕ್ತಿಯ ಒಟ್ಟಾರೆ ಸಂಪತ್ತು 1 ಬಿಲಿಯನ್ ಅಂದರೆ 100 ಕೋಟಿ ಡಾಲರ್ ಅಂದರೆ 8,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆಯೋ ಅವರುಗಳ ಪಟ್ಟಿ. ಈ ಪತ್ರಿಕೆಯ ಪ್ರಕಾರ, ಈ ವರ್ಷ ಏಪ್ರಿಲ್ ತನಕ ಭಾರತದಲ್ಲಿ ತಮ್ಮ ಘೋಷಿತ ಆಸ್ತಿ 1 ಬಿಲಿಯನ್ ಕೋಟಿಗಿಂತಲೂ ಹೆಚ್ಚಿರುವ 166 ಇಂತಹ ವ್ಯಕ್ತಿಗಳಿದ್ದಾರೆ. ಇದರಲ್ಲಿ ಅಘೋಷಿತ ಅಂದರೆ ಕಪ್ಪು ಹಣದ ಲೆಕ್ಕ ಸೇರಿಸಿರುವುದಿಲ್ಲ. ಒಂದು ವೇಳೆ ಒಬ್ಬ ವ್ಯಕ್ತಿ ಅಂದರೆ ಗೌತಮ್ ಅದಾನಿಯ ಆಸ್ತಿಯ ಲೆಕ್ಕ ಹಾಕಿದರೆ ಇಂದು ಅವರ ಒಟ್ಟು ಆಸ್ತಿ ಸುಮಾರು 14 ಲಕ್ಷ ಕೋಟಿಯಷ್ಟಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ದೇಶದಲ್ಲಿ ಕೋವಿಡ್ ಹಾಗೂ ಲಾಕ್‌ಡೌನ್ ಶುರುವಾದಾಗ ಆ ವ್ಯಕ್ತಿಯ ಒಟ್ಟು ಆಸ್ತಿ 66,000 ಕೋಟಿ ಇತ್ತು. ಅಂದರೆ ಕಳೆದ ಎರಡೂವರೆ ವರ್ಷಗಳಲ್ಲಿ ಅವರ ಆಸ್ತಿ 20 ಪಟ್ಟು ಹೆಚ್ಚಳವಾಗಿದೆ.

ಇನ್ನೊಂದು ಪ್ರಶ್ನೆ ಹಾಗೇ ಉಳಿಯುತ್ತದೆ. ಈ ಅಸಮಾನತೆ ಹೆಚ್ಚುತ್ತಿದೆಯೋ ಅಥವಾ ಕಡಿಮೆಯಾಗುತ್ತಿದೆಯೋ? ಜಾಗತಿಕ ಅಸಮಾನತೆಯ ವರದಿ ಹೇಳುವುದೇನೆಂದರೆ, ತೊಂಭತ್ತರ ದಶಕದಿಂದ ಇಲ್ಲಿಯವರೆಗೆ ಇಡೀ ಜಗತ್ತಿನಲ್ಲಿ ಅಸಮಾನತೆ ಹೆಚ್ಚುತ್ತಿದೆ. ಹಾಗೂ ಭಾರತದಲ್ಲಿ ಶ್ರೀಮಂತ ಮತ್ತು ಬಡವರ ನಡುವಿನ ಕಂದರ ಅತ್ಯಂತ ವೇಗವಾಗಿ ಆಳವಾಗುತ್ತಿದೆ. ಕೋವಿಡ್ ಸಾಂಕ್ರಾಮಿಕವು ಜಗತ್ತಿನಲ್ಲಿ ಅಸಮಾನತೆಯ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದರ ಅಂಕಿಂಶಗಳು ನಮಗೆ ವಿಶ್ವ ಬ್ಯಾಂಕ್ ಮೂಲಕ 2022ರಲ್ಲಿ ಪ್ರಕಟಿತವಾದ ವರದಿಯಲ್ಲಿ ಸಿಗುತ್ತವೆ. ಈ ವರದಿಯ ಪ್ರಕಾರ, ಸಾಂಕ್ರಾಮಿಕದ ಕಾರಣದಿಂದ ಇಡೀ ಜಗತ್ತಿನಲ್ಲಿ ಬಡವರ ಮತ್ತು ಶ್ರೀಮಂತರ ನಡುವಿನ ಕಂದರ ಅತ್ಯಂತ ಆಳವಾಗಿದೆ. ಇಡೀ ಜಗತ್ತಿನಲ್ಲಿ ಸುಮಾರು 7 ಕೋಟಿ ಜನರು ಬಡತನದ ರೇಖೆಯ ಕೆಳಗೆ ದೂಡಲ್ಪಟ್ಟಿದ್ದಾರೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಂಖ್ಯೆ ಭಾರತದಿಂದಲೇ ಕಾಣಿಸಿಕೊಂಡಿದೆ. ಇಲ್ಲಿ ಮಹಾಮಾರಿಯ ಕಾರಣದಿಂದ 5 ಕೋಟಿಗಿಂತಲೂ ಹೆಚ್ಚಿನ ಕುಟುಂಬಗಳು ಬಡತನದ ರೇಖೆಯಿಂದ ಕೆಳಗೆ ಬಂದಿದ್ದಾರೆ. ಈ ಅಂಕಿಅಂಶಗಳನ್ನು ಇಟ್ಟುಕೊಂಡು ಬಹಳಷ್ಟು ಚರ್ಚೆ ಆಯಿತು. ಸರಕಾರಿ ಹಾಗೂ ದರಬಾರಿ ಅರ್ಥಶಾಸ್ತ್ರಜ್ಞರು ಈ ವರದಿಯನ್ನು ಸುಳ್ಳು ಎಂದು ಬಿಂಬಿಸುವ ಅಸಫಲ ಪ್ರಯತ್ನ ಮಾಡಿದರು. ಸರಕಾರದ ಓಲೈಕೆಯ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ಅಂತೂ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆಯ ಅಂಕಿಅಂಶಗಳನ್ನು ಕೊಟ್ಟು, ಮೋದಿ ಆಳ್ವಿಕೆಯಲ್ಲಿ ಬಡತನ ಕಡಿಮೆ ಆಗುತ್ತಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಿದರು. ಆದರೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಡ್ರೀಜ್ ಅವರು ಕಳೆದ ವಾರ ಒಂದು ಲೇಖನ ಬರೆದು ಸುರ್ಜಿತ್ ಭಲ್ಲಾ ಅವರು ನೀಡಿದ ಅಂಕಿಅಂಶಗಳು ಸುಳ್ಳು ಹಾಗೂ ಅವರ ವಾದ ತಪ್ಪು ಎಂದು ಸಾಬೀತುಪಡಿಸಿದರು.

ಜಗತ್ತಿನಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ಸ್ಪಷ್ಟಪಡಿಸುವ ಈ ಎರಡೂ ವರದಿಗಳು, ಅಸಮಾನತೆಯನ್ನು ತಗ್ಗಿಸಲು ಮೂರು ಪರಿಹಾರಗಳನ್ನು ಸೂಚಿಸುತ್ತವೆ. ಮೊದಲನೆಯದ್ದು, ಧನಿಕ ಸೇಠರ ಮೇಲೆ ಆಸ್ತಿಯ ತೆರಿಗೆ ಹಾಕುವುದು, ಎರಡನೆಯದ್ದು, ಶ್ರೀಮಂತರ ಮೇಲೆ ಆದಾಯ ತೆರಿಗೆ ದರ ಹೆಚ್ಚಿಸುವುದು ಹಾಗೂ ಮೂರನೆಯದಾಗಿ ಬಡವರ ಆದಾಯ ಹೆಚ್ಚಿಸಲು ನೇರವಾಗಿ ಅವರಿಗೆ ಕ್ಯಾಶ್ ಟ್ರಾನ್ಸ್‌ಫರ್ ಮಾಡಿ ಹಣ ತಲುಪಿಸುವುದು. ಗಮನಿಸಬೇಕಾದ ಅಂಶವೇನೆಂದರೆ, ಸಾಮಾನ್ಯವಾಗಿ ಬಂಡವಾಳದ ಸಮರ್ಥನೆ ಮಾಡುವ ವರ್ಲ್ಡ್ ಬ್ಯಾಂಕ್ ಕೂಡ ಈ ಪರಿಹಾರಗಳನ್ನು ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

ಪ್ರಶ್ನೆ ಏನೆಂದರೆ, ಯಾವ ದೇಶದಲ್ಲಿ ಬಡವರೇ ಬಹುಸಂಖ್ಯಾತರಾಗಿದ್ದಾರೋ, ಅಲ್ಲಿ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಶ್ರೀಮಂತ ಬಡವರ ನಡುವಿನ ಕಂದರದ ಪ್ರಶ್ನೆಯನ್ನು ಯಾಕೆ ಎತ್ತುತ್ತಿಲ್ಲ? ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸುವ ಪ್ರಸ್ತಾಪದ ಮೇಲೆ ದೇಶದಲ್ಲಿ ಚರ್ಚೆ ಯಾಕೆ ಆಗುತ್ತಿಲ್ಲ? ಬಡವರಿಗೆ ನೇರವಾಗಿ ಹಣ ತಲುಪಿಸುವ ಯೋಜನೆಗಳು ಯಾಕೆ ರೂಪುಗೊಳ್ಳುತ್ತಿಲ್ಲ? ಭಾರತ ಜೋಡೊ ಯಾತ್ರೆಯಲ್ಲಿ ಇಲ್ಲಿಯ ತನಕ ರಾಹುಲ್ ಗಾಂಧಿ ಹೆಚ್ಚುತ್ತಿರುವ ವಿಷಮತೆಯ ಬಗ್ಗೆಯಂತೂ ಮಾತನಾಡಿದ್ದಾರೆ, ಆದರೆ ಅದನ್ನು ತಗ್ಗಿಸುವ ಪ್ರಸ್ತಾಪ ಯಾಕೆ ಇಟ್ಟಿಲ್ಲ? ದೇಶದ ನಾಯಕರು ಇಂತಹ ಯಾವುದೇ ಒಂದು ಪ್ರಸ್ತಾಪ ಇಡಲಿ ಎಂದು ದೇಶ ಕಾಯುತ್ತಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...