Homeಮುಖಪುಟಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

ಆನಂದ್ ತೇಲ್ತುಂಬ್ಡೆ ಜಾಮೀನು ತೆರೆದಿಟ್ಟ ಪ್ರಶ್ನೆಗಳಿಗೆ ಉತ್ತರ ಹುಡುಕುವುದೆಲ್ಲಿ?

- Advertisement -
- Advertisement -

ಆನಂದ್ ತೇಲ್ತುಂಬ್ಡೆ ಪ್ರಖರ ಚಿಂತಕ, ಬರಹಗಾರ, ರಾಜಕೀಯ ವಿಶ್ಲೇಷಕ ಹಾಗೂ ಹೋರಾಟಗಾರ. ಕೇವಲ ಜನಪರ ಚಿಂತನೆಗಳೆಷ್ಟೇ ಅಲ್ಲದೆ, ಅವರ ವೃತ್ತಿಪರ ತಂತ್ರಜ್ಞಾನ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲೂ ಮೇಧಾವಿ. ಸ್ವತಂತ್ರ ಭಾರತದ 75 ವರ್ಷಗಳು ಇತಿಹಾಸದಲ್ಲಿ 72 ವಸಂತಗಳನ್ನು ಕಂಡ ಹಿರಿಯ ಜೀವ; ತಮ್ಮ ಘನ ವ್ಯಕ್ತಿತ್ವವನ್ನು ರೂಪಿಸಿದ ಚಿಂತನೆ ಮತ್ತು ವಿಚಾರಗಳೇ ತಪ್ಪು ಎಂದು ಬಿಂಬಿತವಾಗುವ ಕಾಲವೊಂದು ಬರಬಹುದು ಎಂದುಕೊಂಡಿದ್ದರೋ, ಇಲ್ಲವೋ ಗೊತ್ತಿಲ್ಲ.

ಅವರಷ್ಟೇ ಅಲ್ಲದೆ ಅವರಂತಹ ಅನೇಕ ಹೋರಾಟಗಾರರ ಸದ್ಯದ ಬವಣೆಗೆ ಸಾಕ್ಷಿಯಾಗಿರುವವರಿಗೆ ಇದು ಅತ್ಯಂತ ಚಿಂತನೆಗೆ ಈಡು ಮಾಡುವ ಕಾಲ.

ಭೀಮಾ ಕೋರೆಗಾಂವ್ ಘಟನೆ

2018ರಲ್ಲಿ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ಭೀಮಾ ಕೋರೆಗಾಂವ್ ಸಂಗ್ರಾಮದಲ್ಲಿ ದಲಿತರ ಗೆಲುವಿನ 200ನೇ ವರ್ಷದ ಸಂಭ್ರಮಾಚರಣೆಗೆ ಅನೇಕ ಬಗೆಯ ತಯಾರಿಗಳು ನಡೆದಿದ್ದವು. 1818ರಲ್ಲಿ ಮಹಾರ್ ಸಮುದಾಯದ ಜನರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜೊತೆ ಸೇರಿ, ಜಾತಿ ವ್ಯವಸ್ಥೆಯಲ್ಲಿ ಪ್ರಬಲವಾಗಿದ್ದ ಮತ್ತು ಸಂಖ್ಯೆಯಲ್ಲಿ ದೊಡ್ಡದಾಗಿದ್ದ ಪೇಶ್ವೆಗಳ ಸೇನೆಯನ್ನು ಸೋಲಿಸಿದ್ದರು; ಅದರ ನೆನಪಿನಲ್ಲಿ ಸ್ಮಾರಕವನ್ನು ಸ್ಥಾಪಿಸಿ ಪ್ರತಿವರ್ಷ ಆ ಗೆಲುವನ್ನು ನೆನಪಿಸಿಕೊಳ್ಳುತ್ತಾ ಬಂದಿದ್ದು ಇತಿಹಾಸ. ಈ ಗೆಲವು ಕೇವಲ ಒಂದು ಯುದ್ಧದ ಗೆಲುವಲ್ಲ. ಮಹಾರರ ಸ್ವಾಭಿಮಾನ ಮತ್ತು ಶತಮಾನಗಳ ದಮನ-ದೌರ್ಜನ್ಯದ ವಿರುದ್ಧ ದಲಿತರಿಗೆ ದೊರೆತ ನೈತಿಕ ಗೆಲುವಾಗಿತ್ತು. ಈ ಗೆಲುವಿನ ಸಂಭ್ರಮಾಚರಣೆಗೆ ಸ್ವತಃ ಬಾಬಾಸಾಹೇಬ ಅಂಬೇಡ್ಕರರೂ ಸ್ಥಾಯಿ ಮುದ್ರೆ ಒತ್ತಿ ಅದನ್ನು ಸಾಂಕೇತಿಕವಾದ ಜಾತಿವಿನಾಶದ ದ್ಯೋತಕವಾಗಿ ಗುರುತಿಸಿದ್ದರು. ಆದರೆ ಇಂದಿನ ಸಮಯದಲ್ಲಿ ಇತಿಹಾಸವನ್ನೇ ಮರುಚಿತ್ರಿಸುವ ಪ್ರಯತ್ನ ಮಾಡುತ್ತಿರುವವರಿಗೆ ಇಂತಹ ಒಂದು ಸಂಭ್ರಮಾಚರಣೆ ಬೆದರಿಸಿರುವ ಸಾಧ್ಯತೆಗಳೇ ಹೆಚ್ಚು. ಹಿಂದೂ, ಹಿಂದುತ್ವ ಎನ್ನುವ ಮಂಕುಬೂಧಿ ಎರಚಿ ಜನರನ್ನು ಮರಳು ಮಾಡುತ್ತಿರುವ ಸಂಘ ಪರಿವಾರದವರು, ಪೇಶ್ವೆಗಳ ಸೋಲನ್ನು ಇತಿಹಾಸದಿಂದ ಮರೆಮಾಚುವ ಪ್ರಯತ್ನ ಮಾಡುವುದು ಸಹಜ. ಈ ಹಿನ್ನೆಲೆಯಲ್ಲಿಯೇ ನಡೆದದ್ದು ಭೀಮಾ ಕೋರೆಗಾಂವ್ ಹಿಂಸಾಚಾರ. ಹಿಂದುತ್ವವಾದಿಗಳು ಎಬ್ಬಿಸಿದ ಗಲಭೆಯನ್ನು ಬೇಕೆಂತಲೇ ಮರೆಮಾಚಿ, ’ಎಲ್ಗಾರ್ ಪರಿಷತ್’ ಅಡಿಯಲ್ಲಿ ನಡೆದ ಈ 200ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಂದಾಗಿ ಹಿಂಸಾಚಾರ ಭುಗಿಲೆದ್ದಿತು ಎಂದು ಸುಳ್ಳುಸುಳ್ಳೇ ದೂರು ದಾಖಲಿಸಿ ಆ ದೂರಿನ ಆಧಾರದ ಮೇಲೆ ಸುಮಾರು 16 ಜನ ಪ್ರಖ್ಯಾತ ಹೋರಾಟಗಾರರು, ಚಿಂತಕರು, ಬರಹಗಾರರನ್ನು ಯುಎಪಿಎ ಅಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಲಾಯಿತು. ಅದರಲ್ಲಿ ಆನಂದ್ ತೇಲ್ತುಂಬ್ಡೆ ಒಬ್ಬರು. ಅವರನ್ನು ಅಂಬೇಡ್ಕರ್ ಅವರ ಜನ್ಮದಿನದಂದೇ ಬಂಧಿಸಿದ್ದು ಈ ದೇಶದ ಪ್ರಾಜ್ಞರಿಗೆ ಅಘಾತವನ್ನುಂಟುಮಾಡಿತ್ತು.

ಕಾನೂನಿನ ತೊಡಕು

ಯುಎಪಿಎ ಕಾಯ್ದೆ (ಅನ್‌ಲಾಫುಲ್ ಆಕ್ಟಿವಿಟೀಸ್ [ಪ್ರಿವೆನ್ಷನ್] ಆಕ್ಟ್), ಅಂದರೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಬಂಧಿತರಾದವರಿಗೆ ಜಾಮೀನಿನ ಅವಕಾಶಗಳು ಅತ್ಯಂತ ಕಠಿಣವಾಗಿವೆ.

ಕಾಯ್ದೆಯನ್ನು ವಿವರಿಸುವಾಗ ಸುಪ್ರೀಂಕೋರ್ಟ್ ಇತರ ಕೋರ್ಟ್‌ಗಳಿಗೆ ನಿರ್ದೇಶನ ನೀಡುತ್ತ ’ಜಾಮೀನು ನೀಡುವ ಸಮಯದಲ್ಲಿ ಅರ್ಜಿಯಲ್ಲಿ ಹೇಳಲಾದ ಅಂಶಗಳ ಹೊರತಾಗಿ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಕೇವಲ ವಿಶಾಲವಾದ ಒಂದು ಅಂದಾಜು ಅಥವಾ ಅನಿಸಿಕೆಗಳ ಆಧಾರದ ಮೇಲೆ ಮಾತ್ರ ಜಾಮೀನು ಅರ್ಜಿ ತೀರ್ಮಾನ ಮಾಡಬೇಕು’ ಎಂದು ಹೇಳಿದೆ. ಹಾಗೆಂದರೆ ಪ್ರಾಸಿಕ್ಯೂಷನ್ ಪ್ರಸ್ತುತಪಡಿಸುವ ಕೇಸಿಗೆ ಹೆಚ್ಚಿನ ಮಹತ್ವವಿದೆ ಎಂಬುದು ಮುಖ್ಯ ಅಂಶ. ಹೀಗಿರುವಾಗ ಆನಂದ್ ತೇಲ್ತುಂಬ್ಡೆ ಮತ್ತು ಅವರಂತೆ ಯುಎಪಿಎ ಕಾಯ್ದೆಯ ಕಠಿಣ ಸಂಕೋಲೆಯಲ್ಲಿ ಸಿಕ್ಕಿಕೊಂಡ ಇತರರ ಕೇಸು ಎಷ್ಟೇ ಹಾಸ್ಯಾಸ್ಪದವಾಗಿದ್ದರೂ, ಅವರೆಲ್ಲಾ ಅದರ ಕಷ್ಟವನ್ನು ಅನುಭವಿಸಬೇಕು. ವರವರರಾವ್ ಅವರು ಆರೋಗ್ಯದ ಹಿನ್ನೆಲೆಯಲ್ಲಿ ಮತ್ತು ಸುಧಾ ಭಾರದ್ವಾಜ್ ಅವರು ಚಾರ್ಜ್‌ಶೀಟ್ ಸಲ್ಲಿಕೆಯ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಹೊರಗೆ ಬಂದರು. ಆದರೆ ಸ್ಟ್ಯಾನ್‌ಸ್ವಾಮಿ ಅವರಿಗೆ ಆ ಅದೃಷ್ಟ ದೊರಕಲಿಲ್ಲ. ಅವರು ಬಂಧನದಲ್ಲೇ ಮೃತಪಟ್ಟರು. ಕೇವಲ ಮೇಲ್ನೋಟಕ್ಕೆ ಕಾಣುವ ಅಂಶಗಳ ಆಧಾರದಲ್ಲಿ ಬಂಧಿಸಲು ಶುರು ಮಾಡಿದರೆ ಮತ್ತು ಅದಕ್ಕೆ ಕಾರ್ಯಾಂಗದ ಸಮ್ಮತಿ ಹಾಗೂ ಕಾನೂನು ಚೌಕಟ್ಟಿನ ಸಹಾಯ ದೊರಕಿದಾಗ ಎನಾಗಬಹುದು ಎಂದು ಇತಿಹಾಸದುದ್ದಕ್ಕೂ ನೋಡಿದ್ದೇವೆ. ವರ್ತಮಾದಲ್ಲೂ ನೋಡುತ್ತಿದ್ದೇವೆ. ಆರೋಪದಲ್ಲಿ ಹುರುಳಿದೆ ಅಥವಾ ಇಲ್ಲ ಎಂಬುದು ಮುಖ್ಯ ವಿಷಯವೇ ಅಲ್ಲ.

ಇದನ್ನೂ ಓದಿ: NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು…

ಮುಂಬೈ ಹೈಕೋರ್ಟ್ ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡುವಾಗ ಸಾಕ್ಷಿಗಳನ್ನು ಪರಿಶೀಲಿಸುತ್ತ ಅವಕ್ಕೂ ತೇಲ್ತುಂಬ್ಡೆ ಅವರಿಗೂ ಯಾವುದೇ ಸಂಬಂಧಗಳಿಲ್ಲ ಅಥವಾ ಸಾಬೀತಾಗುವುದಿಲ್ಲ ಎಂದು ಹೇಳಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿ ಬಂಧನದಲ್ಲಿರುವ ರೋನಾ ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿ ಸಿಕ್ಕಿರುವ ಈಮೇಲ್‌ಗಳನ್ನು ಪುಣೆಯ ಪೋಲಿಸರು ಹ್ಯಾಕ್ ಮಾಡಿ ಸೇರಿಸಿದ್ದು ಎಂದು ವಿಧಿವಿಜ್ಞಾನ ಪ್ರಯೊಗಾಲಯಗಳು ಹೇಳುತ್ತವೆ. ಅಂದರೆ ವ್ಯವಸ್ಥೆಯು ಕೈಯಲ್ಲಿದ್ದರೆ ಯಾರ ಮೇಲಾದರೂ ಹೇಗಾದರೂ ಆರೋಪಗಳನ್ನು ಹೊರಿಸಿ ಅದನ್ನು ಸಾಬೀತು ಮಾಡಬಹುದಾ? ಎಂಬ ಪ್ರಶ್ನೆ ಮೂಡುವುದು ಸಹಜ. ಆರೋಪಗಳು ಅಷ್ಟೊಂದು ಗಂಭೀರವಾಗಿದ್ದರೆ ಆರೋಪ ಪಟ್ಟಿ ಸಲ್ಲಿಸಲು ಇಷ್ಟು ಸಮಯ ಬೇಕಾ ಎಂಬುದು ಕೂಡ ಸರಿಯಾದ ಪ್ರಶ್ನೆ. ಆದರೆ ಈ ಪ್ರಶ್ನೆಗಳನ್ನು ಯಾರು ಕೇಳಬೇಕು. ಕೇಳುವವರ ಮೇಲೆ ಯುಎಪಿಎ ಕಾಯ್ದೆಯ ಪ್ರಯೋಗ ಆಗುವುದಿಲ್ಲ ಎಂಬ ಖಾತರಿ ಇದೆಯಾ?

ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ಶೀತಲ ಸಮರಗಳು ನಡೆದಾಗ ಅಥವಾ ಅವುಗಳ ಮಧ್ಯೆ ಅಪವಿತ್ರ ಮೈತ್ರಿ ಏರ್ಪಟ್ಟಾಗ ಅಲ್ಲಿ ಸೊರಗುವುದು ನ್ಯಾಯದಾನ ವ್ಯವಸ್ಥೆ ಮತ್ತು ಅಮಾಯಕ ನಾಗರಿಕರು. ಮೇಲ್ನೋಟಕ್ಕೆ ಕಾಣುವ ಅಂಶಗಳನ್ನಷ್ಟೇ ಜಾಮೀನು ಸಮಯದಲ್ಲಿ ಪರಿಗಣಿಸಿ ಎಂದು ಹೇಳಿದಾಗ ಪರೋಕ್ಷವಾಗಿ ಜಾಮೀನು ಕೊಡಬೇಡಿ ಎಂದೇ ಹೇಳಿದಂತಲ್ಲವೇ?

ಎನ್‌ಐಎ ಎಷ್ಟರಮಟ್ಟಿಗೆ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ? ನಿಷೇಧಿತ ಮಾವೋ ಸಂಘಟನೆಯ ಜೊತೆ ಸಂಬಂಧ ಇದೆ ಎಂದು ಅದು ಹೇಳಿದರೆ ಇಲ್ಲ ಎಂದು ಸಾಬೀತು ಮಾಡುವುದು ಹೇಗೆ? ಪ್ರಚೋದನಕಾರಿ ಭಾಷಣದಿಂದ ಗಲಭೆ ಆಯಿತು ಎನ್ನುವುದಾದರೆ ದೆಹಲಿಯಲ್ಲಿ ನಡೆದ ಗಲಭೆಗಳ ಸಮಯದಲ್ಲಿ ಕೇಂದ್ರದ ಮಂತ್ರಿ “ಗೋಲಿಮಾರೋ ಸಾಲೋಂಕೋ” ಎಂದಾಗ ಎನ್‌ಐಎ ಎಲ್ಲಿತ್ತು? ನಮ್ಮ ಮಾನ್ಯ ಪ್ರಧಾನಮಂತ್ರಿಗಳ ’ಅರ್ಬನ್ ನಕ್ಸಲ್’ ಎಂದು ಕೆಲವು ಜನರನ್ನು ಕರೆಯುವಾಗ, ಹಾಗೆಂದರೆ ಯಾರ್‍ಯಾರು ಹೇಳಿ ಎಂದು ಪ್ರಶ್ನಿಸುವವರು ಯಾರು? ಅವರೇ ಮಾತನಾಡುತ್ತ, “ಜನ ಹಾಕಿಕೊಂಡ ಬಟ್ಟೆಯಿಂದಲೇ ಅವರನ್ನು ಗುರುತಿಸಬಹುದು” ಎಂದಾಗ ಒಂದು ಇಡೀ ಸಮೂಹವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವರ ನಡೆಯನ್ನು ಟೀಕಿಸುವವರು ಯಾರು? ಈ ಎಲ್ಲ ಪ್ರಶ್ನೆಗಳನ್ನು ಕೇಳುವವರ ಮೇಲೆ ಯುಎಪಿಎ ತೂಗುಗತ್ತಿ ಇರುವುದಿಲ್ಲವಾ?

ಇತ್ತೀಚೆಗೆ ನ್ಯಾಯಾಂಗದ ಕೆಲಸದಲ್ಲಿ ಕಾರ್ಯಾಂಗದ ಹಸ್ತಕ್ಷೇಪದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಕಾನೂನು ಮಂತ್ರಿಗಳು ಕೊಲಿಜಿಯಂ ಬಗ್ಗೆ ನೀಡಿದ ಹೇಳಿಕೆ ಇರಬಹುದು ಅಥವಾ ಜಡ್ಜ್‌ಗಳ ಆಯ್ಕೆ ಪಟ್ಟಿಯನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸಿದ ವಿಚಾರ ಇರಬಹುದು; ಇಂಥ ಬೆಳವಣಿಗೆಗಳು ನ್ಯಾಯದಾನ ವ್ಯವಸ್ಥೆಯ ಮೇಲೆ ಜನರ ವಿಶ್ವಾಸವನ್ನು ಕಡಿಮೆ ಮಾಡುತ್ತವೆ.

ಆದರೆ ಈ ಎಲ್ಲ ನಿರಾಶಾದಾಯಕ ಬೆಳವಣಿಗೆಗಳ ನಡುವೆಯೂ ಒಳ್ಳೆಯ ಬೆಳವಣಿಗೆಯಂತೆ ಆನಂದ್ ತೇಲ್ತುಂಬ್ಡೆ ಅವರ ಜಾಮೀನು ತೀರ್ಪು ಭರವಸೆಯಾಗಿ ಕಾಣಿಸುತ್ತದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೆಚ್ಚಿನ ವಿವರಣೆಯನ್ನು ನೀಡದೆ “ಎಸ್‌ಎಲ್‌ಪಿ ತಿರಸ್ಕೃತವಾಗಿದೆ” ಎಂಬ ಒಂದೇ ವಾಕ್ಯದಲ್ಲಿ ಎನ್‌ಐಎ ಸಲ್ಲಿಸಿದ್ದ ಜಾಮೀನು ವಿರೋಧಿ ಅರ್ಜಿಯನ್ನು ತಿರಸ್ಕರಿಸಿದ್ದು ಉತ್ತಮ ಬೆಳವಣಿಗೆ. ಇದು ಉಳಿದ ಭೀಮಾ ಕೋರೇಗಾಂವ್ ಆರೋಪಿಗಳಿಗೂ ಅನ್ವಯವಾಗಲಿ ಎಂಬುದು ಈ ದೇಶದ ಲಕ್ಷಾಂತರ ನಾಗರಿಕರ ಆಶಯವಾಗಿದೆ.

ಅಂಬೇಡ್ಕರ್ ಅವರ ಮೊಮ್ಮಗಳ ಪತಿ ಅಂಬೇಡ್ಕರ್ ಜಯಂತಿಯಂದೇ ಜೈಲಿಗೆ ಹೋದದ್ದು ವಿಪರ್ಯಾಸವಾದರೆ ಸಂವಿಧಾನ ದಿನದಂದೇ ಅವರಿಗೆ ಜಾಮೀನು ದೊರತಿದ್ದು ಒಂದು ಬೆಳಕಿನ ಕಿರಣದಂತೆ ಗೋಚರವಾಗುತ್ತದೆ. ನ್ಯಾಯಾಲಯಗಳು ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿದಂತೆ ಸಂವಿಧಾನದ ಆಶಯಗಳನ್ನು ಈಡೇರಿಸುವುದು ಸುಲಭ. ಆನಂದ ತೇಲ್ತುಂಬ್ಡೆ ಅವರ ತೀರ್ಪು, ಸುಳ್ಳು ಕೇಸುಗಳಿಗೆ ಸಿಕ್ಕಿ ಜೈಲಿನಲ್ಲಿ ಇನ್ನೂ ಯುಎಪಿಎ ಕ್ರೂರ ಕಾನೂನಿನಡಿ ಸಿಲುಕಿ ನಲುಗುವವರಿಗೆ ಒಂದು ಮಾರ್ಗದರ್ಶನವಾಗಬಹುದು ಎಂಬುದೇ ಆಶಾವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನ್ಯಾಯಾಂಗದ ಮೇಲೆ ಹೆಚ್ಚಿನ ನಾಗರೀಕರಿಗೆ ವಿಶ್ವಾಸ ಇದೆಯೆಂದು ನಂಬಲಾಗದು. ಅದಕ್ಕೆ ಕಾರಣ ಪ್ರಭುತ್ವದ ಪರವಾಗಿ ಸಂವಿಧಾನ ವಿರೋಧಿ ತೀರ್ಪು ಕೊಟ್ಟು ವೈಯುಕ್ತಿಕ ಲಾಭ ಗಳಿಸಿಕೊಂಡ ಭ್ರಷ್ಟ ನ್ಯಾಯಾಧೀಶರು.ಕಳಕೊಂಡದ್ದನ್ನು ಮರುಗಳಿಸಲು ಇಂತಹ ತೀರ್ಪಗಳು ಅವಶ್ಯಕ. ಭೀಮಾ-ಕೋರೇಕಾಂವ್ ಪ್ರಕರಣದಡಿ ಜೈಲಲ್ಲಿರುವ ಇತರರಿಗೂ ಮತ್ತು ಸುಳ್ಳು ಪ್ರಕರಣದಡಿ ಜೈಲಲ್ಲಿರುವ ಸಂಜೀವ್ ಭಟ್ ಅವರಿಗೂ ಕೂಡಲೇ ಜಾಮೀನು ಸಿಗಬೇಕು. ಆಪ್, ಕಾಂಗ್ರೆಸ್, ಟಿಎಮ್ಸಿ ಮತ್ತಿತರ ರಾಜಕೀಯ ಪಕ್ಷಗಳು ಮೌನವಾಗಿರುವುದು ಏನನ್ನು ಸೂಚಿಸುತ್ತದೆ!?

LEAVE A REPLY

Please enter your comment!
Please enter your name here

- Advertisment -

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...