ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಎನ್ಡಿಎ ಮೈತ್ರಿಕೂಟಕ್ಕೆ ತೀವ್ರ ಪೈಪೋಟಿ ನೀಡಿದ ಆರ್ಜೆಡಿ ಪಕ್ಷದ ಮುಖಂಡ ತೇಜಸ್ವಿ ಯಾದವ್ ಬಿಹಾರ ವಿರೋಧ ಪಕ್ಷದ ನಾಯಕನಾಗಬಾರದು ಎಂದು ಜೆಡಿಯು ಆಗ್ರಹಿಸಿದೆ.
ರಾಷ್ಟ್ರೀಯ ಜನತಾದಳದ ನಾಯಕ(ಆರ್ಜೆಡಿ) ತೇಜಶ್ವಿ ಯಾದವ್ ಅವರ ಹೆಸರು ಹಲವಾರು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಇರುವುದರಿಂದ, ಅವರು ಪ್ರತಿಪಕ್ಷದ ನಾಯಕರಾಗುವುದನ್ನು ತಡೆಯಬೇಕೆಂದು ಬಿಹಾರದಲ್ಲಿ ಆಡಳಿತಾರೂಢ ಜೆಡಿಯು ಒತ್ತಾಯಿಸಿದೆ.
ಜೆಡಿಯು ಪಕ್ಷದ ಮುಖಂಡ ಮೇವಾಲಾಲ್ ಚೌಧರಿ ಅವರು ಭ್ರಷ್ಟಾಚಾರದ ಕಳಂಕ ಸಂಬಂಧಿಸಿದಂತೆ ಮೊನ್ನೆ ತಾನೇ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡು ದಿನಗಳ ನಂತರ ಜೆಡಿಯುನಿಂದ ಈ ಬೇಡಿಕೆ ಬಂದಿದೆ.
ಮೇವಾಲಾಲ್ ಚೌಧರಿ ಅವರನ್ನು ನಿತೀಶ್ ಕುಮಾರ್ ಸಂಪುಟದಲ್ಲಿ ಶಿಕ್ಷಣ ಸಚಿವರನ್ನಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ವಾಗ್ದಳಿ ನಡೆಸಿದ್ದಕ್ಕಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮೇಲೆ ಜೆಡಿಯು ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ್ ಸಿಂಗ್, ಕಾರ್ಯಕಾರಿ ಅಧ್ಯಕ್ಷ ಅಶೋಕ್ ಚೌಧರಿ ಮತ್ತು ವಕ್ತಾರರಾದ ಸಂಜಯ್ ಸಿಂಗ್, ನೀರಜ್ ಕುಮಾರ್ ಮತ್ತು ಅಜಯ್ ಅಲೋಕ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಹಾರದ ಶಿಕ್ಷಣ ಸಚಿವ!
2010-15ರ ಅವಧಿಯಲ್ಲಿ ಭಾಗಲ್ಪುರ್ ಜಿಲ್ಲೆಯ ಬಿಹಾರ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಅವಧಿಯಲ್ಲಿ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ 67 ವರ್ಷದ ಮೇವಾಲಾಲ್ ಚೌಧರಿ ಅವರನ್ನು 2017 ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಅಮಾನತುಗೊಳಿಸಲಾಗಿತ್ತು. ಆದರೆ ಈ ಚುನಾವಣೆಯ ನಂತರ ಅವರಿಗೆ ಶಿಕ್ಷಣ ಖಾತೆ ನೀಡಲಾಗಿತ್ತು.
ನಿತೀಶ್ ಕುಮಾರ್ ತಮ್ಮ ಸಂಪುಟಕ್ಕೆ “ಭ್ರಷ್ಟ” ವ್ಯಕ್ತಿಯನ್ನು ಸೇರಿಸಿಕೊಂಡಿದ್ದಕ್ಕಾಗಿ ಮುಖ್ಯಮಂತ್ರಿಯ ಮೇಲೆ ಆರ್ಜೆಡಿಯ ತೇಜಸ್ವಿ ಯಾದವ್ ವಾಗ್ದಾಳಿ ಹಲ್ಲೆ ನಡೆಸಿದ್ದರು.
ಚೌಧರಿ ಅವರು ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಬಂಡವಾಳ ಮಾಡಿಕೊಂಡ ಜೆಡಿಯು ನಾಯಕರು, ತಮ್ಮ ಸರ್ಕಾರ “ಅಪರಾಧ, ಭ್ರಷ್ಟಾಚಾರ ಮತ್ತು ಕೋಮುವಾದಕ್ಕೆ ವಿರೋಧವಾಗಿದೆ” ಎಂದಿದ್ದಾರೆ.
ತೇಜಸ್ವಿ ಯಾದವ್ ಅವರ ವಿರುದ್ಧ “ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಎಸ್ಸಿ / ಎಸ್ಟಿ ಕಾಯ್ದೆಯಡಿ ಕೂಡ ಪ್ರಕರಣ ದಾಖಲಾಗಿವೆ” ಎಂದು ಆರೋಪಿಸಿದ್ದಾರೆ.
ಆಡಳಿತ ಪಕ್ಷದ ಶಾಸಕರಾದ ಚೌಧರಿ ಅವರನ್ನು ಕೂಡ ಸರ್ಕಾರ ರಕ್ಷಿಸುತ್ತಿಲ್ಲ. ಪ್ರಕರಣದ ತನಿಖೆ ಮುಂದುವರೆಸುವಂತೆ ರಾಜ್ಯಸರ್ಕಾರ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಿದೆ. ಈ ವಿಷಯದಲ್ಲಿ ರಾಜ್ಯಪಾಲರ ಒಪ್ಪಿಗೆಗೆ ಸರ್ಕಾರ ಕಾಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜೆಡಿಯು ನಾಯಕರು ತಿಳಿಸಿದ್ದಾರೆ.
ಇನ್ನು ರಾಘೋಪುರ ವಿಧಾನಸಭಾ ಸ್ಥಾನದಿಂದ ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ, ತೇಜಸ್ವಿ ಯಾದವ್ ಅವರು ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂಬುದನ್ನು “ಉದ್ದೇಶಪೂರ್ವಕ ಲೋಪ”ಎಂದು ಚುನಾವಣಾ ಆಯೋಗ ಗಮನಿಸಬೇಕು ಎಂದು ಜೆಡಿಯು ನಾಯಕರು ಒತ್ತಾಯಿಸಿದ್ದಾರೆ.