ಈಗಾಗಲೇ ರಾಜ್ಯದ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆಯಿಂದ ಪರದಾಡುತ್ತಿರುವ ತೆಲಂಗಾಣ ರಾಜ್ಯಕ್ಕೆ ಮತ್ತೊಂದು ಆಘಾರ ಎದುರಾಗಿದೆ. ತೆಲಂಗಾಣದಲ್ಲಿ ಅಕ್ಟೋಬರ್ 19ರಂದು ಓಲಾ, ಊಬರ್ ಕ್ಯಾಬ್ ಗಳು ಸೇವೆ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಕರೆ ನೀಡಿವೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವು ಓಲಾ, ಊಬರ್ ಕ್ಯಾಬ್ ಗಳ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಅಕ್ಟೋಬರ್ 19 ರಂದು ಎಲ್ಲಾ ಚಾಲಕರು ಮತ್ತು ಕಂಪನಿಯವರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿವೆ. ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿದೆ.
ತೆಲಂಗಾಣ ರಾಜ್ಯ ಟ್ಯಾಕ್ಸಿ ಮತ್ತು ಡ್ರೈವರುಗಳ ಸಂಘಟನೆಯ (ಟಿಎಸ್ ಟಿಡಿ ಜೆಎಸಿ) ಪ್ರತಿಭಟನೆಗೆ ವಿಪಕ್ಷಗಳು ಮತ್ತು ವಿವಿಧ ಸಂಸ್ಥೆಗಳು ಬೆಂಬಲ ಸೂಚಿಸುವುದಾಗಿ ಹೇಳಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಓಲಾ, ಊಬರ್ ಗಳು ಸಂಪೂರ್ಣ ಬಂದ್ ಆಚರಿಸಲಿವೆ. ಸುಮಾರು 50 ಸಾವಿರ ಕ್ಯಾಬ್ ಗಳ ಸಂಚಾರ ಬಂದ್ ಆಗಲಿದೆ. ಈಗಾಗಲೇ ವಿವಿಧ ಕಂಪನಿಗಳ ನೌಕರರಿಗೆ, ಸಂದೇಶ ನೀಡಲಾಗಿದ್ದು, ಕಚೇರಿಗಳಿಗೆ ತೆರಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಟ್ಯಾಕ್ಸಿಗಳ ಸಂಚಾರದಲ್ಲಿ ಪ್ರತಿ ಕಿ.ಮೀ ಗೆ ಕನಿಷ್ಠ 22 ರೂ. ನಿಗದಿಪಡಿಸಬೇಕು, ಕರ್ತವ್ಯದಿಂದ ತೆಗೆದು ಹಾಕಲಾದ ನೌಕರರನ್ನು ಮತ್ತೆ ನೇಮಕ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು, ಚಾಲಕರಿಗೆ ಕನಿಷ್ಠ ಉದ್ಯೋಗ ಖಾತರಿ, ಓಲಾ-ಊಬರ್ ಚಾಲಕರ ಕಲ್ಯಾಣ ಮತ್ತು ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಇನ್ನೂ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ತಮ್ಮ ಬೇಡಿಕೆಗಳ ಬಗ್ಗೆ ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೆ ಸಾರಿಗೆ ಸಚಿವಾಲಯ ಮನವಿಗೆ ಸ್ಪಂದಿಸಿಲ್ಲ ಎಂದು ಟಿಎಸ್ ಟಿಡಿ ಜೆಎಸಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಉತ್ತಮ್ ಕುಮಾರ್ ರೆಡ್ಡಿ ಮಾತನಾಡಿ, ಬಂದ್ ಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಕಾಂಗ್ರೆಸ್, ಟಿಜೆಸ್, ಸಿಪಿಐ, ಸಿಪಿಎಂ ಸೇರಿದಂತೆ ಅನೇಕ ಪಕ್ಷಗಳು ಮತ್ತು ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದು ತಿಳಿಸಿದರು.
ಅಂದಹಾಗೆ, ತೆಲಂಗಾಣ ಸಾರಿಗೆ ಸಂಸ್ಥೆಯ (ಟಿಎಸ್ ಆರ್ ಟಿಸಿ) ಸಿಬ್ಬಂದಿಗಳು, ಟಿಎಸ್ ಆರ್ ಟಿಸಿಯನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವುದೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಕ್ಟೋಬರ್ 5ರಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಶುರುವಾಗಿ ಹನ್ನೆರಡು ದಿನವಾದರೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಸರ್ಕಾರ ಪ್ರತಿಭಟನಾ ನಿರತರ ಜೊತೆಗೆ ಮಾತುಕತೆಗೆ ಮುಂದಾಗಿಯೇ ಇಲ್ಲ. ಬದಲಿಗೆ ಪ್ರತಿಭಟನಾ ನಿರತ 48,000 ನೌಕರರನ್ನು ಕೆಲಸದಿಂದ ಕಿತ್ತು ಹಾಕಿದೆ. ಈಗಾಗಲೇ ಇಬ್ಬರು ಪ್ರತಿಭಟನಾಕಾರರು ಆತ್ಮಾಹುತಿ ಮಾಡಿಕೊಂಡಿದ್ದರೂ ತೆಲಂಗಾಣ ಸರ್ಕಾರ ಯಾವ ಕಾರಣಕ್ಕು ಅವರ ಬೇಡಿಕೆಗಳಿಗೆ ಮಣಿಯುವುದಿಲ್ಲ, ವಜಾ ಮಾಡಿರುವ ನೌಕರರನ್ನು ವಾಪಾಸ್ ಕೆಲಸಕ್ಕೆ ತೆಗೆದುಕೊಳ್ಳುವುದೂ ಇಲ್ಲ ಎಂಬ ಹಠ ಹಿಡಿದು ಕೂತಿದೆ.
ಈಗ ಓಲಾ, ಉಬರ್ ಚಾಲಕರೂ ಪ್ರತಿಭಟನೆಗೆ ಮುಂದಾಗಿರೋದ್ರಿಂದ ತೆಲಂಗಾಣದ ಜನ ಸಾರಿಗೆಗೆ ಪರದಾಡುವ ಪರಿಸ್ಥಿತಿ ಎದುರಾಗುವ ಸಂಭವವಿದೆ.