ದೇಶದ ಆರ್ಥಿಕತೆಗೆ ನಡೆಸಿರುವ ಶಸ್ತ್ರಚಿಕಿತ್ಸೆ ಸರಿಯಾಗಿ ನಡೆಸಿಲ್ಲ. ಶಸ್ತ್ರಚಿಕಿತ್ಸೆ ತಪ್ಪಾಗಿದ್ದರೆ ಅದಕ್ಕೆ ಪ್ರಿಸ್ಕ್ರಿಪ್ಷನ್ ಬರೆದುಕೊಟ್ಟರೆ ಉಪಯೋಗಕ್ಕೆ ಬರುವುದಿಲ್ಲ ಎಂದು ಮಾಜಿ ಹಣಕಾಸುವ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರ್ ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ 106 ದಿನಗಳು ಕಳೆದು ನಿನ್ನೆ ಬಿಡುಗಡೆಯಾದ ಮರುದಿನವೇ ಪತ್ರಿಕಾಗೋಷ್ಟಿ ನಡೆಸಿದ ಚಿದಂಬರಂ ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಕುಟುಕಿದ್ದಾರೆ. ಬಿಜೆಪಿ ಆರ್ಥಿಕತೆಯ ವಿಷಯವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೂ ಅದು ಭಂಡತನದ ಸಮರ್ಥನೆಗೆ ಇಳಿದಿದೆ ಎಂದಿದ್ದಾರೆ.
ಜಿಎಸ್ಟಿ ಅವೈಜ್ಞಾನಿಕ ಜಾರಿ ಮತ್ತು ನೋಟು ರದ್ದು ಕ್ರಮಗಳು ತೆರಿಗೆ ಭಯೋತ್ಪಾದನೆಯಾಗಿದ್ದು ಇದೆಲ್ಲವನ್ನೂ ಪ್ರಧಾನಮಂತ್ರಿ ಕಚೇರಿ ಏಕಮುಖವಾಗಿ ತೆಗೆದುಕೊಂಡ ನಿರ್ಧಾರಗಳನ್ನು ಭಂಡತನದಿಂದ ಸಮರ್ಥಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
2019-20ರ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಉತ್ತಮ ಸ್ಥಿತಿಗೆ ಬರುವ ಸಾಧ್ಯತೆ ಇಲ್ಲ. ಈ ವರ್ಷಾಂತ್ಯದಲ್ಲಿ ಜಿಡಿಪಿ ದರ ಶೇಕಡ 5ಕ್ಕೆ ಏರಿದರೆ ನಾವು ಪುಣ್ಯವಂತರು. ಇದರ ನಡುವೆ ಅರ್ಥಶಾಸ್ತ್ರಜ್ಞ ಡಾ. ಅರವಿಂದ ಸುಬ್ರಮಣ್ಯನ್ ನೀಡಿರುವ ಎಚ್ಚರಿಕೆಯನ್ನು ಸರ್ಕಾರ ಪರಿಗಣಿಸಬೇಕು. ಈ ಸರ್ಕಾರದಡಿ ಜಿಡಿಪಿ ಶೇಕಡ 5ಕ್ಕೆ ತಲುಪುದು ಸಂಶಯವಾಗಿದೆ. ಈಗ ಶೇಕಡ 1.5 ಮೇಲಿದೆ ಎಂದು ಹೇಳಬಹುದು ಎಂದಿದ್ದಾರೆ.
ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ಚಕಾರ ಎತ್ತಿಲ್ಲ. ಈ ಬಗ್ಗೆ ಮೌನ ವಹಿಸಿದ್ದಾರೆ. ಸಚಿವರನ್ನು ಗದರುವ ಕೆಲಸ ಬಿಡಬೇಕು ಎಂದು ಚಿದಂಬರಂ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಕುರಿತು ಪ್ರತಿಕ್ರಿಯಿಸಿರುವ ಚಿದಂಬರಂ, ಕಣಿವೆ ರಾಜ್ಯದ 75 ಲಕ್ಷ ಜನರಿಗೆ ಮೂಲ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ. 106 ದಿನಗಳ ಕಾಲ ಜೈಲಿನಲ್ಲಿದ್ದ ಕಾರಣ ನಾನು ಕಣಿವೆ ರಾಜ್ಯದ ಜನರ ಕುರಿತು ಮಾತನಾಡಿಲ್ಲ. ಅಲ್ಲಿನ ರಾಜಕೀಯ ನಾಯಕರೊಂದಿಗೆ ಚರ್ಚಿಸಲೂ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಯಾವುದೇ ದೋಷಾರೋಪ ಇಲ್ಲದೆಯೂ ಅಲ್ಲಿನ ನಾಯಕರನ್ನು ಬಂಧನ ಮಾಡಲಾಗಿದೆ. ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗಿದೆ. ಅವರ ಪರವಾಗಿ ನ್ಯಾಯಯುತ ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ.