ಮೊದಲನೆಯ ಫೋಟೋದಲ್ಲಿರುವವರ ಹೆಸರು ಗೋಪಾಲಿಕ ಅಂತರ್ಜನಂ..ಸಂಪ್ರದಾಯವಾದಿ ನಂಬೂದಿರಿ ಬ್ರಾಹ್ಮಣ ಕುಟುಂಬದ ಮಗಳು.
ಕಳೆದ 29 ವರ್ಷದಿಂದ ಮಲಪ್ಪುರಂ ಜಿಲ್ಲೆಯ ಸರಕಾರೀ ಶಾಲೆಯೊಂದರಲ್ಲಿ ಅರೇಬಿಕ್ ಶಿಕ್ಷಕಿ..
ಅನ್ಯಮತೀಯ ಅದ್ಯಾಪಕಿಗೆ ಮೊದಲು ಕರ್ಮಠರಿಂದ ವಿರೋಧ ವ್ಯಕ್ತವಾದರೂ ನಂತರ ಊರವರ , ವಿದ್ಯಾರ್ಥಿಗಳ ಹೆಮ್ಮೆಗೆ ಪಾತ್ರವಾದ ಈ ಅಧ್ಯಾಪಕಿಯನ್ನು ವಿಶ್ವ ಅರೇಬಿಕ್ ದಿನದಂದು ಮಲಪ್ಪುರಂ ಜಿಲ್ಲೆಯ ಸಮಸ್ತ ಮುಸ್ಲಿಂ ಸಂಘಟನೆಗಳು ಆದರಿಸಿ ಸನ್ಮಾನಿಸಿತ್ತು..
ಎರಡನೆಯ ಚಿತ್ರದಲ್ಲಿರುವವರು ಡಾ. ಫಿರೋಜ್ ಖಾನ್.
ತಾತ ಪ್ರಸಿದ್ಧ ಭಜನೆಕಾರ ಗಫೂರ್ ಖಾನರಿಂದ ತೊಡಗಿ ಸ್ವಯಂ ಸಂಸ್ಕೃತ ಅಭ್ಯಸಿಸಿದ್ದ ತಂದೆ ರಂಜಾನ್ ಖಾನ್ ರವರೆಗೆ ಸಂಸ್ಕೃತದ ಸೆಳೆತ ರಕ್ತದಲ್ಲೇ ಇದ್ದ ವಿದ್ಯಾರ್ಥಿ.
ಸಂಸ್ಕೃತ ಅಧ್ಯಯನದಲ್ಲಿ ಶಾಸ್ತ್ರಿ, ಶಿಕ್ಷಾ ಶಾಸ್ತ್ರಿ, ಆಚಾರ್ಯ ಅಧ್ಯಯನ ಮುಗಿಸಿ ಜೈಪುರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಪಿಹೆಚ್ ಡಿ ಪದವಿ ಪಡೆದ ಪ್ರತಿಭಾವಂತ.
ತನ್ನ ಅರ್ಹತೆಯ ಮೇರೆಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರೊಫೆಸರ್ ಆಗಿ ಆಯ್ಕೆಯಾದ ಫಿರೋಜ್ ಮುಸಲ್ಮಾನ ಎನ್ನುವ ಒಂದೇ ಕಾರಣಕ್ಕಾಗಿ ಅಲ್ಲಿಯ “ದೇಶಪ್ರೇಮಿ” ವಿದ್ಯಾರ್ಥಿಗಳ ವಿರೋಧದಿಂದಾಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡುವಂತಾಯಿತು…
ಮೊದಲನೆಯವರಿಗೆ ಸಮಾಜ, ಸಮುದಾಯ ಎರಡೂ ಸ್ವಾಗತಿಸಿ ಗೌರವಿಸಿದರೆ ಎರಡನೆಯವರು ಮೋದಿಜಿಯ ಸ್ವಂತ ಕ್ಷೇತ್ರದಲ್ಲೇ ಯಾರ ಸಹಕಾರವೂ ದೊರೆಯದೆ ತನ್ನ ಧರ್ಮದ ಕಾರಣದಿಂದ ಸೋಲೊಪ್ಪಿಕೊಂಡರು…
ವ್ಯತ್ಯಾಸ ಇಷ್ಟೇ.. ಮೊದಲನೆಯದು ನಡೆದದ್ದು ಕೇರಳದಲ್ಲಿ .. ಎರಡನೆಯದು ಯೋಗಿಯ ರಾಮರಾಜ್ಯದಲ್ಲಿ… ಎಂದು ಕಿಶನ್ ಕುಮಾರ್ ಹೆಗಡೆಯವರು ಪ್ರಸ್ತುತ ವಿದ್ಯಾಮಾನಕ್ಕೆ ಮೌಲಿಕ ಬೆಳಕು ಚೆಲ್ಲಿದ್ದಾರೆ.
ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ
ಇನ್ನು “ಆಚಂಗಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ವನ್ನು ಮಡಿಬಟ್ಟೆಯಲ್ಲಿ ಸುತ್ತಿಟ್ಟಿದ್ದರೆ. ನಮಗೆ ಎಸ್.ಕೆ. ಕರೀಂಖಾನರಂತ ಮೇರು ವ್ಯಕ್ತಿಗಳು ದೊರೆಯುತ್ತಿರಲಿಲ್ಲ”
ತಾನು ಗಳಿಸಿದ ಜ್ಞಾನವನ್ಬು ಇತರರಿಗೆ ಹಂಚಲೇಬೇಕೆಂದು ಈ ನೆಲದಲ್ಲಿ ಕಾನೂನಿಲ್ಲ. ಆದರೆ ಅದು ಆಶಯ. ಸಂವಿಧಾನದ ಆಶಯ ಕೂಡಾ. ನಾರಾಯಣ ಶಾಸ್ತ್ರಿಯವರು ಕರೀಂಖಾನರಿಗೆ ಸಂಸ್ಕೃತ ಕಲಿಸಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ಇನ್ನೂ ಸಂವಿಧಾನ ರಚನೆಯೂ ಆಗಿರಲಿಲ್ಲ.
ನಾರಾಯಣ ಶಾಸ್ತ್ರಿಗಳ ನಡೆ ನಮ್ಮ ಪರಂಪರೆಯಾಗಬೇಕಿತ್ತು. ದುರಾದೃಷ್ಡವೆಂದರೆ ಅವರ ಮುಂದುವರಿಕೆಯಾಗಬೇಕಾದವರು ಮುಸ್ಲಿಮನಿಂದ ಸಂಸ್ಕೃತ ಕಲಿಯಲಾರೆವೆಂದು ಹೋಮ ಹವನ ಮಾಡುತ್ತ ಕುಳಿತಿದ್ದಾರೆ ” ಎಂದು ಪ್ರಸಾದ್ ರಕ್ಷಿದಿಯವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಂಸ್ಕೃತ ಕಲಿಸಲು ಮುಸ್ಲಿಂ ಪ್ರಾಧ್ಯಾಪಕರನ್ನು ನೇಮಿಸಿಕೊಂಡ ಬಂಗಾಳದ ರಾಮಕೃಷ್ಣ ಮಿಷನ್ ವಿದ್ಯಾಮಂದಿರ..
ಸಂಸ್ಕೃತದಿಂದ ಸಂಸ್ಕೃತಿ ಎಂಬ ಮಾತು ಅರ್ಥಹೀನ ಎಂಬುದಕ್ಕೆ ಬನಾರಸ್ ವಿಶ್ವವಿದ್ಯಾಲಯದ
ಈ ಅಸಂಸ್ಕೃತ ವಿದ್ಯಾರ್ಥಿಗಳೇ ಸಾಕ್ಷಿ. ಉರ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಪ್ರೊ ಗೋಪಿಚಂದ್ ನಾರಂಗ್. ಭಾಷೆಗೂ ಮತಧರ್ಮಕ್ಕೂ ಸಂಬಂಧವಿಲ್ಲ. ವಿಶ್ವವಿದ್ಯಾನಿಲಯಗಳ ಜೊತೆ ಮತಧರ್ಮಗಳ ಹೆಸರುಗಳನ್ನು ಮೊದಲು ಕಿತ್ತೊಗೆಯಬೇಕು. ಅವು ಮತಧರ್ಮ ನಿರಪೇಕ್ಷತೆಗೆ ಸಲ್ಲುವುದಿಲ್ಲ. ಬನಾರಸ್ ಸಂಸ್ಕೃತ ವಿದ್ಯಾರ್ಥಿಗಳ ವರ್ತನೆ ಜಗತ್ತಿನ ಎದುರು ಭಾರತ ತಲೆತಗ್ಗಿಸುವಂತೆ ಮಾಡಿದೆ ಎಂದು ಪಂಡಿತಾರಾಧ್ಯ ಮೈಸೂರುರವರು ಅಭಿಪ್ರಾಯಪಟ್ಟಿದ್ದಾರೆ.