Homeಕವನಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

ಅನುವಾದಿತ ಕವನ; ನಿನ್ನ ಹಸಿವೆಯಿಂದ ಭಯಗೊಂಡಿದ್ದೇನೆ

- Advertisement -
- Advertisement -

ನಾ ನಿನ್ನ ಊರಿನಿಂದ
ಮತ್ತು ನಿನ್ನ ಲೋಕದಿಂದ
ಪೂರಾ ಸೋತುಹೋಗಿದ್ದೇನೆ
ಅನಿಷ್ಟದ ನಗುವನ್ನು
ಕಿರೀಟದಂತೆ ಮುಡಿಸಿಕೊಂಡ
ನಿಮ್ಮ ಆತ್ಮದ ರೀತಿ ರಿವಾಜುಗಳು ಹೊಲಸು ನಾರುತ್ತಿವೆ
ಇನ್ನು ಸಹಿಸಲಾಗದು!

ನಿಮ್ಮ ತಕ್ಕಡಿಯಲ್ಲಿ ನಮ್ಮ ಬದುಕನ್ನಿಟ್ಟು
ಬರುಹೋಗುವ ಉಸಿರನ್ನು ನೋಡುವುದಕ್ಕೂ
ನಾಚಿಕೆಯಾಗುತ್ತದೆ.

ದೇವರು ನಿನ್ನದೇ ಕಲ್ಪನೆಯ ಕೆಟ್ಟ ಸೃಷ್ಟಿಯೆಂದು ಯಾರಿಗೆ ಗೊತ್ತಿಲ್ಲ
ಧರ್ಮವೆಂಬುದು ಸೃಷ್ಟಿಯ ಬಹುದೊಡ್ದ ಹಗರಣ
ಜಾತಿಯೆಂಬೊಂದು ಆಳ ಆಳದ ಬಾವಿ
ನೀರು ಎಲ್ಲಾ ವಿಕಾರವನ್ನು ಮುಚ್ಚಿಹಾಕಿದೆ..

ನಿಮ್ಮ ಕಲೆಯಿಂದ
ಮತ್ತು ನಿಮ್ಮ ವಿಜ್ಞಾನದಿಂದ ನಾನು
ವಿಪರೀತ ಬೇಸತ್ತು ಹೋಗಿದ್ದೇನೆ
ಇಲ್ಲಿ ರಕ್ತವನ್ನು ಉಗುಳು ಮತ್ತು
ಆಕ್ರಂದನವನು ದೇವಳದ ಭಜನೆ ನುಂಗಿಹಾಕಿದೆ
ಇಲ್ಲಿ ಸತ್ಯವನ್ನು ಸಂಸತ್ತಿನ ಟಾಯ್ಲೆಟ್ ಪೇಪರ್ ಮಾಡಿ
ನೇತುಹಾಕಲಾಗುತ್ತದೆ
ಮುಂಜಾನೆಯಿಂದ ಸಂಜೆವರೆಗೆ ಹೊಸಕಿಹೋದ ಜನರ ಕನಸುಗಳನ್ನು ಒರೆಸಲಾಗುತ್ತದೆ

ನಾನು ಶತಮಾನಗಳಿಂದ ಅನ್ನದ ಅಗುಳನ್ನೂ ಕಾಣದ
ಈ ದೇಶದ ಅನ್ನನಾಳದಿಂದ ಬಂದಿದ್ದೇನೆ
ನಿಮ್ಮ ಹಸಿವೆಯಿಂದ ನನಗೆ ಭಯವಾಗುತ್ತದೆ

ಕೆರೆ ಹಳ್ಳಗಳಿಗಾಗಿ
ನನ್ನನ್ನು ಬಿಟ್ಟುಬಿಡಿ
ಅಲ್ಲಿ ಕಪ್ಪೆ ಮೀನುಗಳು ನನಗಾಗಿ ಕಾಯುತ್ತಿರಬಹುದು
ಯಾರಾದರೂ ಜೀವದ ಗೆಳೆಯನೊಂದಿಗೆ
ಮಳೆಯನ್ನು ನನ್ನ ಅಂಗಿಯನ್ನಾಗಿಸಿ
ನನ್ನ ಕುರಿ ಆಡುಗಳು ನೆನೆಯುವ ಆ ದಿಕ್ಕಿನತ್ತ
ಈಜಲು ಹೋಗುವೆ
ಅಲ್ಲಿ ಯಾವುದಾದರೂ ಮಾವಿನ ಮರದ ಮೇಲೆ
ನನ್ನ ಎರಡೂ ಕೈಗಳು ಸಿಕ್ಕಿಕೊಂಡಿರಬೇಕು
ಮತ್ತು ಅಲ್ಲೇ ಎಲ್ಲೋ ಹತ್ತಿರದಲ್ಲಿ ಸಿಕ್ಕುಸಿಕ್ಕಾದ ನನ್ನ ಮೀನಿನ ಬಲೆ
ನನ್ನ ಬೆರಳುಗಳಿಗಾಗಿ ಕರೆಯುತ್ತಿರಬಹುದು

ಮುಕ್ತಿಬೋಧದ ಬಗ್ಗೆ ಯಾವ ಅಭಿಪ್ರಾಯವೂ ಇಲ್ಲ
ಮಾರ್ಕ್ಸ್ ನನಗೆ ಗುರುತಿಲ್ಲ
ಅಂಬೇಡ್ಕರ್ ಹೆಸರನ್ನೇ ಕೇಳಿರುವೆ ಮೊದಲಬಾರಿ
ಬಹುಶಃ ಅಜ್ಞೇಯನಾಗುವುದೆ ನಿಮ್ಮ ಸಂಸ್ಕೃತಿಯ ದೊಡ್ದ ಕೊಡುಗೆಯಿದ್ದೀತು
ಈಗ ನನ್ನನ್ನು ಹೋಗಲು ಬಿಡಿ

ಗಾಲಿಬನನ್ನು ನಾಲಿಗೆಯಲೂ ನೆನೆಯುವುದಿಲ್ಲ
ಜಯಸಿಯೇ ಯುದ್ಧದ ನಿರರ್ಥಕತೆಯನ್ನು ಸಾರಿದ ಮೊದಲ ಕವಿಯೆಂದು
ವಾದಿಸುವುದಿಲ್ಲ ನಾನು
ನನಗೆ ಹೋಗಲು ಬಿಡಿ

ನನ್ನನ್ನು ನೀವು ಪುಕ್ಕಲು ಎನ್ನಿ
ಪಲಾಯನವಾದಿ ಎನ್ನಿ
ಆದರೆ ಹೋಗಲು ಬಿಡಿ

ನಾನು ಹೋಗುವ ಅಜ್ಞಾತವಾಸದ ಅರ್ಥ
ಬಹುಶಃ ನಿಮಗೆ ಗೊತ್ತಿದ್ದೀತು ಅಥವಾ
ನಿಮಗೆಂದಿಗೂ ಗೊತ್ತಾಗದು
ತುದಿ ಮಣಿಸಿ ಬಾಗಿಸಿದ ಬಿದಿರ ಚಿಗುರು ಸಂಕಟದಲಿ
ನಡುಗಿದ್ದು
ಅದೇ ನನಗೆ ಹೇಳಿಕೊಟ್ಟಿದೆ
ಹೇಗೆ ವಿನಮ್ರತೆ ದೈನೇಸಿಯಾಗಿ ಬದಲಾಗುವ ಮೊದಲು
ಪ್ರತಿಭಟನೆಯಾಗಿ ಬದಲಾಗುವುದೇ
ಬದುಕಿನ ಸಾಕ್ಷಿಯಾಗಿದೆ..!

ಹಿಂದಿ ಮೂಲ: ಪರಾಗ್ ಪಾವನ್
ಕನ್ನಡಕ್ಕೆ: ರೇಣುಕಾ ನಿಡಗುಂದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...