ತೃಣಮೂಲ ಕಾಂಗ್ರೆಸ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ, ಡೋಲಾ ಸೇನ್ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ತ್ರಿಪುರಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮತ್ತು ಖೋವಾಯಿಯ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ)ಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಅವರ ಕರ್ತವ್ಯಕ್ಕೆ ಟಿಎಂಸಿ ಮುಖಂಡರು ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಭಿಷೇಕ್ ಬ್ಯಾನರ್ಜಿ ಜೊತೆಗೆ ಪಶ್ಚಿಮ ಬಂಗಾಳ ಸಚಿವ ಬ್ರಾತ್ಯ ಬಸು ಮತ್ತು ಪಕ್ಷದ ವಕ್ತಾರ ಕುನಾಲ್ ಘೋಷ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ತ್ರಿಪುರಾದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತೃಣಮೂಲ ಪಕ್ಷದ 14 ನಾಯಕರು ಮತ್ತು ಕಾರ್ಯಕರ್ತರನ್ನು ಭಾನುವಾರ ಬಂಧಿಸಲಾಗಿತ್ತು. ನಂತರ ಅಲ್ಲಿಗೆ ಪಕ್ಷದ ಕಾರ್ಯಕರ್ತರ ಗುಂಪು ಸಚಿವ ಬ್ರಾತ್ಯ ಬಸು ಮತ್ತು ಸಂಸದ ಡೋಲಾ ಸೇನ್ ಅವರ ನೇತೃತ್ವದಲ್ಲಿ ಖೊವಾಯಿ ಪೊಲೀಸ್ ಠಾಣೆಗೆ ಬಂದಿರುವುದಾಗಿ ಎಫ್ಐಆರ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗಬೇಕು: ಮಮತಾ ಬ್ಯಾನರ್ಜಿ
ತೃಣಮೂಲ ನಾಯಕರ ಗುಂಪು ಹೆಚ್ಚುವರಿ ಎಸ್ಪಿ ಮತ್ತು ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದೆ. ಪೊಲೀಸರ ವಿರುದ್ಧ ಕಿರುಚಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ ಹೆಚ್ಚುವರಿ ಎಸ್ಪಿ ಮತ್ತು ಖೋವಾಯಿಯ ಎಸ್ಡಿಪಿಒ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಅವರ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿದ ಆರೋಪದಲ್ಲಿ ತ್ರಿಪುರಾ ಪೊಲೀಸರು ಟಿಎಂಸಿ ಮುಖಂಡರ ವಿರುದ್ಧ ದೂರು ದಾಖಲಿಸಿದ್ದಾರೆ.
ಕಳೆದ ವಾರ ಅಗರ್ತಲಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತ್ರಿಪುರಾದಲ್ಲಿ ಬಿಜೆಪಿ ಪ್ರಜಾಪ್ರಭುತ್ವದ ಉಸಿರುಗಟ್ಟಿಸುತ್ತಿದೆ ಎಂದು ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಬಗ್ಗೆ ತನಿಖೆ ನಡೆಯಲಿ: ಪ್ರಧಾನಿ ಭೇಟಿ ಬಳಿಕ ಮಮತಾ ಬ್ಯಾನರ್ಜಿ ಹೇಳಿಕೆ