Homeಮುಖಪುಟಸ್ಮಾರ್ಟ್ ಸಿಟಿ ಗುತ್ತಿಗೆದಾರರಿಗೆ ದಂಡ : ಪ್ರಾಮಾಣಿಕ ಆಯುಕ್ತ ಬೂಬಾಲನ್ ಎತ್ತಂಗಡಿಗೆ ಬಸವಜ್ಯೋತಿ ತೀವ್ರ ಯತ್ನ

ಸ್ಮಾರ್ಟ್ ಸಿಟಿ ಗುತ್ತಿಗೆದಾರರಿಗೆ ದಂಡ : ಪ್ರಾಮಾಣಿಕ ಆಯುಕ್ತ ಬೂಬಾಲನ್ ಎತ್ತಂಗಡಿಗೆ ಬಸವಜ್ಯೋತಿ ತೀವ್ರ ಯತ್ನ

- Advertisement -
- Advertisement -

ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಭೂಬಾಲನ್ ಅವರಿಗೆ ಗುತ್ತಿಗೆದಾರರ ಕಿರುಕುಳ ಹೆಚ್ಚಾಗಿದೆ. ತಮಗೆ ದಂಡ ಹಾಕಿದರೆಂಬ ಕಾರಣಕ್ಕೆ ಭೂಬಾಲನ್ ಅವರನ್ನು ತುಮಕೂರಿನಿಂದ ಎತ್ತಂಗಡಿ ಮಾಡಿಸಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಗುತ್ತಿಗೆದಾರರು ‘ಬಸವಜ್ಯೋತಿ’ ಮೇಲೆ ಒತ್ತಡ ತಂದು ಭೂಬಾಲನ್ ವರ್ಗಾವಣೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಅವರನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಹುದ್ದೆಯಿಂದ ಬಿಡುಗಡೆಗೊಳಿಸಿ, ಆ ಜಾಗಕ್ಕೆ ಲಿಂಗಾಯತ ಸಮುದಾಯದ ನಾಗರಾಜ್ ಅವರನ್ನು ತರುವುದು ಖಚಿತವಾಗಿದೆ.

ಭೂಬಾಲನ್ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿ. ಜೊತೆಗೆ ದಕ್ಷ, ಪ್ರಾಮಾಣಿಕ ಎಂಬ ಹೆಸರು ಗಳಿಸಿದ್ದಾರೆ. ಅದನ್ನು ಕಾರ್ಯತಃ ಮಾಡಿಯೂ ತೋರಿಸಿದ್ದಾರೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಬಂದಿದ್ದಾರೆ. ಸ್ಮಾಟ್ ಸಿಟಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸುವಂತಹ ಸಾಹಸಕ್ಕೆ ಕೈಹಾಕಿದವರು ಭೂಬಾಲನ್.

ತುಮಕೂರು ನಗರದ ಒಳರಸ್ತೆಗಳ ಅಭಿವೃದ್ದಿ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದ ಮೆ/ಆರ್.ಎಂ.ಎನ್ ಇನ್ ಫ್ರಾಸ್ಟ್ರಕ್ಚರ್ಸ್ ಗೆ 50,4,630 ರೂಪಾಯಿ, ಅಶೋಕ ರಸ್ತೆ ಅಭಿವೃದ್ಧಿ ಗುತ್ತಿಗೆ ಹಿಡಿದಿದ್ದ ಸಿದ್ದಾರ್ಥ ಸಿವಿಲ್ ವರ್ಕ್ಸ್ ಪ್ರೈ., ಲಿಮಿಟೆಡ್ ಗೆ 26,97,720 ರೂ, ಅಮಾನಿಕೆರೆ ಏರಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಮೆ/ಆರ್.ಎಂ.ಎನ್. ಇನ್ ಫ್ರಾಸ್ಟ್ರಕ್ಚರ್ಸ್ ಗೆ 23,42,295 ರೂಪಾಯಿ, ಡಾ.ರಾಧಕೃಷ್ಣ ರಸ್ತೆ ಅಭಿವೃದ್ಧಿ ಗುತ್ತಿಗೆ ಪಡೆದಿದ್ದ ಶ್ರೀ ಶ್ರೀನಿವಾಸ ಕನ್ ಸ್ಟ್ರಕ್ಷನ್ಸ್ ಪ್ರೈ.ಲಿ.ಗೆ 16,42,295 ರೂ. ಭಗವಾನ್ ಮಹಾವೀರ್ ರಸ್ತೆ ಅಭಿವೃದ್ಧಿ ಗುತ್ತಿಗೆ ಪಡೆದ ಶ್ರೀ ಸುಧಾಕರ ಪೆರಿಟಾಲ ಕಂಪನಿಗೆ 10,3,460 ರೂ. ಮಹಿಳಾ ಥೀಮ್ ಪಾರ್ಕ್ ಗುತ್ತಿಗೆ ತೆಗೆದುಕೊಂಡಿದ್ದ ಮೆ/ರಾಜೇಗೌಡ ಅಂಡ್ ಕೋ ಗೆ 6,77, 377 ರೂ. ಟ್ರಾಮಾ ಸೆಂಟರ್ ಅಭಿವೃದ್ಧಿಪಡಿಸುವ ಗುತ್ತಿಗೆ ಪಡೆದಿರುವ ಕೆ.ಬಿ.ಆರ್. ಇನ್ ಫ್ರಾಟಿಕ್ ಲಿ ಕಂಪನಿಗೆ 5,28,000 ರೂ ದಂಡ ವಿಧಿಸಿದ್ದರು.

ಹಾಗೆಯೇ ಫೀಲ್ಡ್ ಮಾರ್ಷಲ್ ಕರಿಯಪ್ಪ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಶ್ರೀನಿವಾಸ ಕನ್ ಸ್ಟ್ರಕ್ಷನ್ಸ್ ಪ್ರೈ., ಲಿ ಕಂಪನಿಗೆ 5,65,119 ರೂ. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಲು ಆಲದ ಮರಗಳ ವಿಶಾಲ ರಾಜಮಾರ್ಗದ ನಿರ್ಮಾಣ ಮತ್ತು ಅಭಿವೃದ್ಧಿಯ ಗುತ್ತಿಗೆ ಪಡೆದಿದ್ದ ಮೆ/ಎ1 ಕನ್ ಸ್ಟ್ರಕ್ಷನ್ 4,19, 625 ರೂ. ಮೂರು ಪಾರ್ಕ್ ಗಳ ಅಭಿವೃದ್ಧಿ ಗುತ್ತಿಗೆದಾರ ಮೆ/ಸಾಯಿತ್ರಿಷ ಇನ್ ಫ್ರಾ ಇಂಜಿನಿಯರ್ಸ್ 1,26,200 ರೂ, ಮಹಾತ್ಮ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿ (ಪಿಎಂಸಿ ವತಿಯಿಂದ ನಕ್ಷೆಗಳ ವಿಳಂಬಕ್ಕಾಗಿ) ಕ್ಯಾಡ್ ಫೋರಂ ಬೆಂಗಳೂರು ಗುತ್ತಿಗೆದಾರ ಕಂಪನಿಗೆ 3,08,060 ರೂ ದಂಡ ವಿಧಿಸಿ ಕೂಡಲೇ ಎಲ್ಲಾ ಗುತ್ತಿಗೆದಾರ ಕಂಪನಿಗಳು ದಂಡ ಪಾವತಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದ್ದರು..

ಅದೇ ಕಾರಣಕ್ಕೆ ಮೊದಲ ಬಾರಿಗೆ ಬಸವಜ್ಯೋತಿ ಗುತ್ತಿಗೆದಾರರ ಲಾಬಿಗೆ ಮಣಿದು ವರ್ಗಾವಣೆ ಮಾಡಿಸಿದ್ದರು. ಆಗ ವರ್ಗಾವಣೆ ವಿರೋಧಿಸಿ ತುಮಕೂರು ನಗರದ ನಾಗರಿಕರು ಪ್ರತಿಭಟನೆ ನಡೆಸಿದ್ದರು. ವರ್ಗಾವಣೆ ರದ್ದು ಗೊಳಿಸಬೇಕು ಎಂದು ಪಟ್ಟುಹಿಡಿದಿದ್ದರು.. ಜನರ ಒತ್ತಾಯಕ್ಕೆ ‘ಬಸವಜ್ಯೋತಿ’ ಮಣಿಯಲೇ ಬೇಕಾಯಿತು ಹಾಗಾಗಿ ಭೂಬಾಲನ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಬೇಕಾಯಿತು.

ಇದೀಗ ಮತ್ತೆ ಭೂಬಾಲನ್ ಅವರಿಗೆ ಕಿರುಕುಳ ಮುಂದುವರಿದಿದೆ. ಭೂಬಾಲನ್ ಇದ್ದರೆ ನಮ್ಮ ಕೆಲಸ ನಡೆಯುವುದಿಲ್ಲವೆಂಬುದು ಅರಿತಿರುವ ಗುತ್ತಿಗೆದಾರರು ಬಸವಜ್ಯೋತಿ ಮೇಲೆ ಒತ್ತಡ ತಂದು ಆಯುಕ್ತರನ್ನು ವರ್ಗಾವಣೆ ಮಾಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಈಗಾಗಲೇ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ಹುದ್ದೆಯಿಂದ ಭೂಬಾಲನ್ ಅವರನ್ನು ಹೊರಗೆ ಕಳಿಸಲಾಗಿದೆ. ಅಲ್ಲಿ ಅವರಿದ್ದರೆ ನಮ್ಮ ‘ವ್ಯವಹಾರ’ ಸುಸೂತ್ರವಾಗಿ ನಡೆಯುವುದಿಲ್ಲವೆಂಬ ಸತ್ಯ ಭ್ರಷ್ಟ ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ತಿಳಿದುಹೋಗಿರುವುದರಿಂದ ದಕ್ಷ ಅಧಿಕಾರಿ ಎತ್ತಂಗಡಿಗೆ ಇನ್ನಿಲ್ಲದ ಕಸರತ್ತು ತೀವ್ರಗೊಂಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಭೂಬಾಲನ್ ಜಾಗಕ್ಕೆ ‘ಜಾತಿಬಂಧವ’ ರನ್ನೇ ಕರೆತಂದು ಕೂರಿಸಿದರೆ ಹುಲ್ಲುಗಾವಲಿನಲ್ಲಿ ಮೇಯ್ದು ದುಂಡಗಾಗಲು ಈ ಪಟಲಾಂ ತುದಿಮೇಲೆ ನಿಂತಿದ್ದಾರೆ. ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ‘ಅಮ’ ಪಾತ್ರ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ದಕ್ಷ ಅಧಿಕಾರಿಗಳನ್ನು ಕಂಡರೆ ಆಗದವರ ಪಟ್ಟಿ ದೊಡ್ಡದಾಗಿದೆ. ಮಣಿವಣ್ಣನ್ ತುಮಕೂರು ನಗರಸಭೆಯ ಆಯುಕ್ತರಾಗಿ ಕೆಲಸ ಮಾಡಿದಾಗಲೂ ಇದೇ ಬಸವಜ್ಯೋತಿ ಅವರನ್ನು ವರ್ಗಾವಣೆ ಮಾಡಿಸಿದ್ದರು ಎಂಬ ಮಾತುಗಳು ಗುಟ್ಟಾಗಿ ಉಳಿದಿಲ್ಲ. ಅಭಿವೃದ್ಧಿಯ ‘ಹರಿಕಾರ’ನೆಂಬ ಬಿರುದು ಪಡೆದಿರುವ ವ್ಯಕ್ತಿಯೂ ಕೂಡ ಭೂಬಾಲನ್ ವರ್ಗಾವಣೆಗೆ ತಂತ್ರ ಹೆಣೆಯುತ್ತಲೇ ಇದ್ದಾರೆ. ಆ ಮೂವರು ಸೇರಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮತ್ರಿಯ ಮೇಲೆ ಭೂಬಾಲನ್ ವರ್ಗಾವಣೆಗೆ ಒತ್ತಡ ಹೇರಿದ್ದಾರೆ. ಇದು ವರ್ಕೌಟ್ ಆದರೆ ಇನ್ನು ಕೆಲವೇ ದಿನಗಳಲ್ಲಿ ಭೂಬಾಲನ್ ತುಮಕೂರಿನಿಂದ ಬೇರೆಡೆ ವರ್ಗಾವಣೆಯಾಗುವುದು ಖಚಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಅತ್ಯಂತ ದುರದೃಷ್ಟಕರ, ಸ್ವೀಕಾರಾರ್ಹವಲ್ಲ..’; ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

0
ಅನಿವಾಸಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು "ತಮ್ಮ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ" ಎಂಬ ಟೀಕೆಗಳ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಆಡಳಿತಾರೂಢ ಬಿಜೆಪಿ...