ತುಮಕೂರಿನ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅಕ್ರಮಗಳು ನಡೆದಿದ್ದು, ಕೂಡಲೇ ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಸ್ಮಾರ್ಟ್ ಸಿಟಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಕೋಟ್ಯಂತರ ರೂಪಾಯಿ ಹಣ ಪೋಲಾಗಿದೆ. ಇದರ ಉಸ್ತುವಾರಿ ವಹಿಸಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ದ ತನಿಖೆ ಆಗಬೆಕು ಎಂದು ಆಗ್ರಹಿಸಿದ್ದಾರೆ.
ಈಗ ತುಮಕೂರಿನಲ್ಲಿ ನಡೆದಿರುವ ಒಂದು ಕಾಮಗಾರಿಯೂ ಗುಣಮಟ್ಟದಿಂದ ಕೂಡಿಲ್ಲ. ಎಲ್ಲವೂ ಕಳಪೆಯಿಂದ ಕೂಡಿವೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಉಸ್ತುವಾರಿ ವಹಿಸಿರುವ ಶಾಲಿನಿ ರಜನೀಶ್ ಅವರನ್ನು ಅಮಾನತು ಮಾಡಬೇಕು. ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಾಮಗಾರಿಯ ಬಗ್ಗೆ ತನಿಖೆ ನಡೆಸದಿದ್ದರೆ, ಉಪಚುನಾವಣೆಯ ನಂತರ ಸ್ಮಾರ್ಟ್ ಸಿಟಿ ಕಚೇರಿಗೆ ಬೀಗ ಜಡಿಯುತ್ತೇನೆ. ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯಹಾರ ನಡೆದಿರುವುದು ಕಳಪೆ ಕಾಮಗಾರಿಯಿಂದ ಗೊತ್ತಾಗುತ್ತದೆ ಎಂದು ಆರೋಪಿಸಿದರು.
ತುಮಕೂರು ನಗರಕ್ಕೆ ನೀರು ಪೂರೈಕೆ ಮಾಡುವ ಜಲಸಂಗ್ರಹಾಗಾರದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದು ಇದಕ್ಕೆ ಶೇಕಡ 50ರಷ್ಟು ಹಣ ವೆಚ್ಚವಾಗಿದೆ. ಇದನ್ನು ಬಿಡುಗಡೆ ಮಾಡಬೇಕು ಎಂದು ಸಂಸದ ಬಸವರಾಜು ಒತ್ತಾಯಿಸಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.
ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದಿದ್ದು ಅದರಲ್ಲಿ ಅವ್ಯಹಾರ ನಡೆದಿದೆ ಎಂದು ಈ ಹಿಂದೆ ನಾನುಗೌರಿ.ಕಾಂ ಜಾಲತಾಣ ಸುದ್ಧಿಯನ್ನು ಪ್ರಕಟಿಸಿತ್ತು. ಕಾಮಗಾರಿಗಳು ವೈಜ್ಞಾನಿಕವಾಗಿ ನಡೆದಿಲ್ಲ ಎಂಬ ಬಗ್ಗೆಯೂ ಬೆಳಕು ಚೆಲ್ಲಿತ್ತು. ಇದೀಗ ಮಾಜಿ ಸಚಿವರು ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಯ ಕುರಿತು ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: 2 ಸಾವಿರ ಕೋಟಿ ರೂ ಖರ್ಚಾದರೂ ’ಸ್ಮಾರ್ಟ್’ ಆಗದ ತುಮಕೂರು.. ಏಕೆ?
ಸಂಸದ ಜಿ.ಎಸ್.ಬಸವರಾಜು ಮತ್ತು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕೂಡ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದನಿ ಎತ್ತಿದ್ದರು. ಸಂಸದರು ಮತ್ತು ಶಾಸಕರು ತಮ್ಮದೇ ಸರ್ಕಾರದಲ್ಲಿ ಕಾಮಗಾರಿಯಲ್ಲಿ ಆಗಿರುವ ಅವೈಜ್ಞಾನಿಕತೆ ಮತ್ತು ಅವ್ಯವಹಾರದ ಕುರಿತು ತನಿಖೆ ನಡೆಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬಹುದಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಈಗಿನ ವಿಶೇಷವೆಂದರೆ ಮತ್ತೆ ಸಂಸದ ಜಿ.ಎಸ್.ಬಸವರಾಜು ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ನಡುವೆ ಸಮರ ಏರ್ಪಟ್ಟಿರುವುದು ತಿಳಿಯುತ್ತದೆ. ಬಸವರಾಜು ಹಣ ಬಿಡುಗಡೆ ಮಾಡಬೇಕು ಅಂದರೆ, ಸೊಗಡು ಶಿವಣ್ಣ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಒಂದಂತೂ ಸತ್ಯ ಅಪ್ಪ ಮಗ ವರ್ಸಸ್ ಸೊಗಡು ಗುದ್ದಾಟ ಮುಂದುವರೆದಿದೆ.