ದೇವರಿಗೊಂದು ಪತ್ರ
ಓ ಪ್ರಭುವೆ
ನೀ ನನ್ನ ಅಸ್ಪೃಶ್ಯನನ್ನಾಗಿಸಿದ್ದಕ್ಕೆ
ಕೃತಜ್ಞತೆಗಳು
ಜಗದ ದುಃಖ ಅವಮಾನಗಳ
ಜೊತೆಯಾಗಿಸಿದ್ದಕ್ಕೆ.
ಪಕ್ಕದ ಅಮೆರಿಕಾದೊಳು
ಕರಿಯರ ಕೊಲೆಯಾದಾಗಲೆಲ್ಲ
ಸೋದರರ ಸಾವಿಗಾಗಿ ಅಳುವ
ರುಡಾಲಿಗಳು ನಾವೆ.
ಅನುಮಾನದ ತುಪಾಕಿಗೆ
ಬಲಿಯಾದ ಮೆಕ್ಲಿನ್, ಫ್ಲಾಯ್ಡ್
ಲಾಕಪ್ನಲ್ಲಿ ಕೊಲೆಯಾದ ಸ್ಟೀವ್
ಗಲ್ಲಿಗೇರಿದ ಬೆಂಜಮಿನ್
ಇವರೆಲ್ಲ ನನ್ನ ರಕ್ತ ಸಂಬಂಧಿಗಳೆ.
ಪ್ರತಿದಿನ ಬಜಾರಿನೊಳು
ಬಿಕರಿಯಾಗುತ್ತಿರುವ
ಸೂಳೆಯರು ನನ್ನ ಸೋದರಿಯರೆ.
ಓ ಪ್ರಭುವೆ
ಇಲ್ಲಿ! ನಾವು ಎಷ್ಟೊಂದು ಧನ್ಯರು
ಈ ಸಂತೆಯೊಳು
ನಮ್ಮ ಬೆವರಿಗೆ, ಕಣ್ಣೀರಿಗೆ
ಎಷ್ಟೊಂದು ಬೇಡಿಕೆ.
ಸಾವಿನ ಸರತಿಯಲ್ಲಿ
ನಾವು ಕಾಯಬೇಕಿಲ್ಲ
ನಮ್ಮ ಸತ್ತ ಶವವೂಳಲು
ಈ ಭೂಮಿಯ ನೀ ಛಿದ್ರಮಾಡಲಿಲ್ಲ
ಅದಕ್ಕೆ ನಾವು ನಿನಗೆ ಮತ್ತಷ್ಟು ಕೃತಜ್ಞರು.
’ಶವ ಯಾತ್ರೆ’
ಶವಯಾತ್ರೆಗೆ ಸಜ್ಜಾಗಿದ್ದ ತಮಟೆಗಳು
ಕುಣಿದು ಕುಪ್ಪಳಿಸುತ್ತಿರುವಂತೆ
ಮಧ್ಯರಾತ್ರಿಯೊಂದು ಕನಸ್ಸು ಬಿತ್ತು.
ತಮಟೆಗಳ ಸದ್ದಡಗಿದ ಮೇಲೆ
ಶವ ಕೇಳಿತು.
ದಯಮಾಡಿ ಭೇದವಿಲ್ಲದ ಜಾಗದಲಿ
ನನಗೊಂದು ಗೋರಿಮಾಡಿ
ಈ ಶವಕ್ಕೊಂದು ಜಾತಿಯಿಲ್ಲದ ಮಸಣ ಹುಡುಕಿ ಎಂದು.
ಕೆಲವರು ನಗುತ್ತಿದ್ದರೆ
ಕೆಲವರು ಮೌನ
ಶವ ಮತ್ತೆ ಕೇಳಿತು.
ಎಲ್ಲಿ ಬಂದೂಕಿನ ಗುಂಡು ಸಿಡಿಯುವುದಿಲ್ಲವೋ
ಹೆಣ್ಣಿನ ಚೀರು ಧ್ವನಿ ಕೇಳುವುದಿಲ್ಲವೋ
ಮುಳ್ಳು ತಂತಿಯ ಗಡಿಗಳಿರುವುದಿಲ್ಲವೊ
ಮನುಷ್ಯರೆಲ್ಲ ಮನುಷ್ಯರೇ
ಆಗಿರುವ ಜಾಗದಲಿ ನನಗೊಂದು ಗೋರಿಮಾಡಿ.
ತಮಟೆಗಳ ಕುಣಿತ ಹೆಚ್ಚಾಯಿತು,
ಶವ ಕೂಗಿಕೊಳ್ಳುತ್ತಲೇ ಇತ್ತು.
ಕಣ್ಣೀರು ಜಾರದ, ಮುಖಬಾಡಿ, ತುಟಿಯೊಣಗಿ
ರಕ್ತದ ಕಲೆ ಇರದ ಜಾಗ ಹುಡುಕಿ.
ಗದ್ದಲ ಮತ್ತಷ್ಟು ಜೋರಾಯಿತು.
ಎಲ್ಲರೂ ಶವಕ್ಕೆ ಸಿಂಗರಿಸಿ
ಹೂತುಹಾಕಲು ಮುಂದಾದರು.
ಕೊನೆಯದಾಗಿ..!
ಅಂತಿಮ ಯಾತ್ರೆಗೆ ಬಂದಿದ್ದ
ಪಾದ್ರಿಯೊಬ್ಬರು
ಭೂಮಿಯ ಮೇಲಿನ ಮನುಷ್ಯರೆಲ್ಲರು
ದೇವರ ಮಕ್ಕಳು
ನಾವೆಲ್ಲರೂ ಸಮಾನರು ಎಂದು
ಶವದ ಎದುರು ಪ್ರಾರ್ಥಿಸಿದರು.
ಇದನ್ನೂ ಓದಿ: ನಿದ್ದೆಯಲ್ಲಿ ಮನುಷ್ಯ…!