ಉಕ್ರೇನ್ ರಾಜಧಾನಿ ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿಯಾಗಿದೆ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ವಿದ್ಯಾರ್ಥಿಯು ಕೀವ್ನಿಂದ ಪಾರಾಗಲು ಯತ್ನಿಸಿದ್ದರು. ಈ ವೇಳೆ ಆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವುದಾಗಿ ಸಚಿವರು ಹೇಳಿದ್ದಾರೆ. ವಿದ್ಯಾರ್ಥಿಯನ್ನು ಮತ್ತೆ ಕೀವ್ ನಗರಕ್ಕೆ ಕರೆದೊಯ್ದು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
“ಕೀವ್ನಿಂದ ಹೊರಟ ವಿದ್ಯಾರ್ಥಿಗೆ ಗುಂಡು ಹಾರಿಸಲಾಗಿದೆ ಎಂಬ ವರದಿಗಳನ್ನು ನಾವು ಕೇಳಿದ್ದೇವೆ. ಅವರನ್ನು ಮತ್ತೆ ಕೀವ್ಗೆ ಕರೆದೊಯ್ಯಲಾಗಿದೆ. ಯುದ್ಧದಲ್ಲಿ ಈ ಘಟನೆ ಸಂಭವಿಸಿದೆ” ಎಂದು ಜನರಲ್ ವಿಕೆ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಉಕ್ರೇನ್ ಮೇಲಿನ ದಾಳಿಯ ನಂತರ ಪುಟಿನ್ ಅವರು ಮೋದಿ ಜೊತೆಗೆ ಮಾತುಕತೆಗೆ ಮನವಿ ಮಾಡಿಲ್ಲ
ಯುದ್ಧ ಪೀಡಿತ ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರಿಸುವ ಸಂಬಂಧ ಉಕ್ರೇನ್ನ ನೆರೆಯ ರಾಷ್ಟ್ರಗಳಿಗೆ ವಿಶೇಷ ಪ್ರತಿನಿಧಿಗಳನ್ನಾಗಿ ನಾಲ್ವರು ಮಂತ್ರಿಗಳನ್ನು ಕಳುಹಿಸಲಾಗಿದೆ ಎನ್ನಲಾಗಿದ್ದು, ಅದರಲ್ಲಿ ಜನರಲ್ ಸಿಂಗ್ ಒಬ್ಬರಾಗಿದ್ದಾರೆ.
ಮಾರ್ಚ್ 1ರಂದು ಉಕ್ರೇನ್ನ ಖಾರ್ಕಿವ್ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ, ಕರ್ನಾಟಕದ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಎಸ್.ಜಿ. ನಿಧನರಾಗಿದ್ದರು.
“ಖಾರ್ಕಿವ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಶೆಲ್ ದಾಳಿಯಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ ಎಂದು ನಾವು ತೀವ್ರ ದುಃಖದಿಂದ ದೃಢೀಕರಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟರ್ನಲ್ಲಿ ತಿಳಿಸಿದ್ದರು.
ಇದನ್ನೂ ಓದಿರಿ: ‘ಈ ಗುಲಾಬಿಯಿಂದ ಏನು ಮಾಡುವುದು?’: ಕೇಂದ್ರ ಸರ್ಕಾರದ ವಿರುದ್ಧ ಉಕ್ರೇನ್ನಿಂದ ಹಿಂತಿರುಗಿದ ವಿದ್ಯಾರ್ಥಿ ಆಕ್ರೋಶ