ವಿವಾದಾತ್ಮಕ ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಯ ವೇಳೆ ಹಿಂಸಾಚಾರದ ಆರೋಪ ಹೊತ್ತವರನ್ನು ಹೆಸರಿಸಿ ಉತ್ತರ ಪ್ರದೇಶ ಸರ್ಕಾರ ಅಳವಡಿಸಿದ ಹೋರ್ಡಿಂಗ್ಗಳ ವಿಷಯವನ್ನು ಉತ್ತರ ಪ್ರದೇಶದ ಹೈಕೋರ್ಟ್ ವಿಚಾರಣೆ ನಡೆಸಿತು. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ವಿಚಾರಣೆಯಲ್ಲಿ, ನ್ಯಾಯಾಲಯವು ಸರಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿತು. ಪ್ರಶ್ನೆಗಳಿಗೆ ಸರ್ಕಾರಿ ಪ್ರತಿನಿಧಿಗಳು ಉತ್ತರಿಸಿದರು. ಈ ಕುರಿತು ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದ್ದು, ನಾಳೆ ಮಧ್ಯಾಹ್ನ ತೀರ್ಪು ನಿರೀಕ್ಷಿಸಲಾಗಿದೆ.
ಉತ್ತರ ಪ್ರದೇಶದ ಉಚ್ಛನ್ಯಾಯಾಲಯವಾದ ಅಲಹಾಬಾದ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದರು. ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಬೇಕಿದ್ದ ವಿಚಾರಣೆಯು ಸರ್ಕಾರದ ಕೋರಿಕೆಯ ಮೇಲೆ ಸಂಜೆ 3 ಕ್ಕೆ ಮುಂದೂಡಿತ್ತು. ಆ ಸಮಯದಲ್ಲಿ ಮುಖ್ಯ ನ್ಯಾಯಾಧೀಶರು ಸರಕಾರಕ್ಕೆ ನಾಗರಿಕರ ಖಾಸಗಿತನ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹಕ್ಕಿಲ್ಲ, ವಿಚಾರಣೆ ಪ್ರಾರಂಭವಾಗುವ ಮೊದಲೇ ಸರಕಾರ ಅದನ್ನು ಸರಿಪಡಿಸುವ ಬಗ್ಗೆ ಭರವಸೆಯಿದೆ” ಎಂದು ಹೇಳಿದ್ದರು.
“ಅಡ್ವೊಕೇಟ್ ಜನರಲ್ ಆಡಳಿತದ ಪರವಾಗಿ ಹಾಜರಾಗಿ ಸರ್ಕಾರದ ಅಭಿಪ್ರಾಯಗಳನ್ನು ಮಂಡಿಸಿದರು. ವಿಚಾರಣೆಯ ನಂತರ ನ್ಯಾಯಾಲಯವು ತನ್ನ ಆದೇಶಗಳನ್ನು ಕಾಯ್ದಿರಿಸಿದೆ, ನಾಳೆ ಮಧ್ಯಾಹ್ನ 3 ಗಂಟೆಗೆ ತೀರ್ಪು ನೀಡಬಹುದು” ಎಂದು ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನೀರಜ್ ತ್ರಿಪಾಠಿ ಸುದ್ದಿಗಾರರಿಗೆ ತಿಳಿಸಿದರು.
ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರ ಆರೋಪದ ಹೆಸರಿನಲ್ಲಿ ಉತ್ತರ ಪ್ರದೇಶ ಸರ್ಕಾರವು ಆರೋಪಿಗಳ ವಿಳಾಸ ಮತ್ತು ಫೋಟೋಗಳನ್ನು ಹೊತ್ತ ಹೋರ್ಡಿಂಗ್ಗಳನ್ನು ಲಕ್ನೋದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿತ್ತು. ಆದಿತ್ಯವಾರ ರಜಾದಿನವಾದರು ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಅವರ ನ್ಯಾಯಾಲಯವು ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು.
ಅನೇಕ ಆರೋಪಿಗಳಿಗೆ ವೈಯಕ್ತಿಕ ಆಸ್ತಿ ಲಗತ್ತು ನೋಟಿಸ್ಗಳನ್ನು ಈಗಾಗಲೇ ಸರ್ಕಾರ ಕಳುಹಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಹೋರ್ಡಿಂಗ್ಗಳನ್ನು ಹಾಕಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.