Homeಕರ್ನಾಟಕಉತ್ತರ ಕನ್ನಡ: ಪರೇಶ್ ಮೇಸ್ತ “ಪ್ರಕರಣ”ದ ಪುಂಡರಿಗೆ ಬಿಡುಗಡೆ ಭಾಗ್ಯ!!

ಉತ್ತರ ಕನ್ನಡ: ಪರೇಶ್ ಮೇಸ್ತ “ಪ್ರಕರಣ”ದ ಪುಂಡರಿಗೆ ಬಿಡುಗಡೆ ಭಾಗ್ಯ!!

- Advertisement -
- Advertisement -

2017ರ ಡಿಸೆಂಬರ್‍ನ ಅಂತ್ಯಾರ್ಧದ ಅತ್ಯಂತ ಆತಂಕದ ದಿನಗಳವು! ಇಡೀ ಉತ್ತರ ಕನ್ನಡ ಕೋಮು ಕಿಚ್ಚಿನಲ್ಲಿ ಬೆಂದು ಬಸವಳಿದ ಸಂದರ್ಭವದು!! ಹೊನ್ನಾವರದ ಮೀನುಗಾರ ಕುಲದ ಪರೇಶ್ ಮೇಸ್ತಾ ನಿಗೂಢವಾಗಿ ಸತ್ತದ್ದನ್ನು ಸಂಘಪರಿವಾರದ ಧರ್ಮಾಕಾರಣ ಪಂಡಿತರು ಎದುರಾಗಿದ್ದ ಅಸೆಂಬ್ಲಿ ಇಲೆಕ್ಷನ್‍ಗೆ ಅಸ್ತ್ರವಾಗಿ ಮಾಡಿಕೊಂಡಿದ್ದರು. ಪರೇಶ್‍ನನ್ನು ಸಾಬರ ಸೈತಾನರು ಕೊಂದು ಕೆರೆಗೆಸೆದಿದ್ದಾರೆಂದು ಹುಸಿ ಹುಯಿಲೆಬ್ಬಿಸಿದ ಬಿಜೆಪಿ ಕೊಳ್ಳಿ ದೆವ್ವಗಳು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರದಂಥ ಆಯಕಟ್ಟಿನ ತಾಲ್ಲೂಕುಗಳಲ್ಲಿ ಕೋಮುಗಲಭೆ ಎಬ್ಬಿಸಿ ಕೇಕೆ ಹಾಕಿದವು. ಸಾಬರ ಅಟ್ಟಾಡಿಸಿ ಕಾಡಿತು; ಐಜಿಪಿ ಕಾರಿಗೆ, ಚಾಲಕನಿಗೇ ಬೆಂಕಿ ಹಾಕಲಾಯಿತು….

ಪರೇಶ್‍ನ ಪ್ರಕರಣ ಸಿಬಿಐ ವಹಿಸಬೇಕೆಂದು ಕೂಗು ಮಾರಿ ಶೋಭಕ್ಕ, ಅಸಡ್ಡಾಳ ಹಲಬುಗಾರ ಅನಂತ್ಮಾಣಿ ಆಗಿಯಾಗಿ ಯಡ್ಡಿ ಸಕಲ ಚೆಡ್ಡಿಗಳೆಲ್ಲ ಏಕಕಂಠದಲ್ಲಿ ಬೊಬ್ಬೆಹೊಡೆದರು. ಅಂದಿನ ಸಿದ್ದು ಸರ್ಕಾರ ಪ್ರತಿಷ್ಟೆಗೆ ಬೀಳದೆ ಪ್ರಕರಣ ಸಿಬಿಐಗೆ ವಹಿಸಿತು. ಮೋದಿ-ಶಾ ಮೂಗಿನಡಿಯೇ ಇರುವ ಸಿಬಿಐ ಮಾತ್ರ ಇವತ್ತಿಗೂ ಪರೇಶನ ಮುಸ್ಲಿಮರು ಹತ್ಯೆ ಮಾಡಿದ್ದಾರೋ ಅಥವಾ ಆತನೇ ಕಾಲು ಜಾರಿ ಕೆರೆಗೆ ಬಿದ್ದು ಸತ್ತನೋ ಎಂಬ ತನಿಖೆ ಮಾಡುತ್ತಲೇ ಇಲ್ಲ. ಆದರೆ ಬಿಜೆಪಿ ಪರೇಶ್ ಮೇಸ್ತಾನ ಮರಣ ಮಹಿಮೆಯನ್ನೇ ಪ್ರಣಾಳಿಕೆ ಮಾಡಿಕೊಂಡು ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಬಂಪರ್ ಎಮ್ಮೆಲ್ಲೆ ಕೊಯ್ಲು ಮಾಡಿತು. ಶಾಸಕರಾಗುವ ಕನಿಷ್ಠ ಯೋಗ್ಯತೆಯೂ ಇಲ್ಲದ ಕಾರವಾರದ ರೂಪಾಲಿ ನಾಯ್ಲ್, ಕುಮಟೆಯ ದಿನಕರ ಶೆಟ್ಟಿ, ಭಟ್ಕಳದ ಸುನೀಲ್ ನಾಯ್ಕ್ ಮತ್ತು ಶಿರಸಿಯ ಕಾಗೇರಿ ಮಾಣಿಗಳೆಲ್ಲ ಖುದ್ದು ದಿಗಿಲು ಬೀಳುವಂತೆ ವಿಧಾನಸೌಧಕ್ಕೆ ಎಂಟ್ರಿ ಹೊಡೆದಿದ್ದರು. ಸಾಯುವತನಕ ಪರೇಶನ ಫೋಟೋಕ್ಕೆ ಪೂಜೆ ಸಲ್ಲಿಸುವ ಋಣಕ್ಕೆ ಬಿದ್ದಿದ್ದರು.

ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶನ ಪಾರ್ಥಿವ ಶರೀರ ಕಂಡ ಕ್ಷಣವೇ ಶೂದ್ರ ಹುಡುಗರ ಮತಾಂಧ ಮಸಲತ್ತಿಗಿಳಿದ ಬಿಜೆಪಿಯ ಜನಿವಾರ ಲೀಡರ್‍ಗಳು ಚುನಾವಣೆಯ ಗೆಲುವಿನ ಗಣಿತ ಹಾಕತೊಡಗಿದ್ದರು. ಕಾರವಾರ, ಕುಮಟಾ, ಹೊನ್ನಾವರ ಮತ್ತು ಶಿರಸಿಯ ಸುಮಾರು 2,000 ಶೂದ್ರ ಹುಡುಗರು ಕಮ್ಯುನಲ್ ಕ್ರಿಮಿನಲ್ ಕೇಸ್‍ಗೆ ಬಿದ್ದರು. ಕೋರ್ಟ್-ಕಚೇರಿ ಅಲೆಯುತ್ತ ಉದ್ಯೋಗ, ವ್ಯವಹಾರ ಹಾಳು ಮಾಡಿಕೊಂಡರು. ಸರ್ಕಾರಿ ನೌಕರಿ ಸಿಗದಂತಾಯಿತು. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ತಮ್ಮಿಂದ ಶಾಸಕರಾದವರ ಕೊರಳಪಟ್ಟಿ ಹಿಡಿದು ಕೇಸ್ ಖತಮ್ ಮಾಡಿಸುವಂತೆ ಒತ್ತಾಯಿಸತೊಡಗಿದರು. ಯಡ್ಡಿ ಜತೆಗಿನ “ಸಲಿಗೆ” ಬಳಸಿ ಸಿಎಂ ಒಪ್ಪಿಗೆಯೂ ಸೂಚಿಸಿದರು. ರೂಪಾಲಿಗೆ ಜಿಲ್ಲೆಯ ಬಿಜೆಪಿ ಪುರುಷ ಶಾಸಕರಿಗಿಂತ “ಗ್ರೇಟ್”ಎಂಬ ಪ್ರಶಂಸೆ ಬಂತು.

ಒಂದು ಹಂತದಲ್ಲಿ ಬಿಜೆಪಿಯ “ಗಂಡು ಎಮ್ಮಲ್ಲೆ”ಗಳೆಲ್ಲ ರೂಪಾಲಿ ಮೇಲೆ ಮುರುಕೊಂಡು ಬಿದ್ದರು. ಆಕೆ ಮಹಿಳಾ ಕೋಟಾದಲ್ಲಿ ಮಂತ್ರಿಗಿರಿಗೆ, ನಿಗಮದ ಪೀಠಕ್ಕೆ ಪ್ರಯತ್ನ ಪಟ್ಟಂತೆಲ್ಲಾ ಕಲ್ಲು ಹಾಕಿದರು. ಬಿಜೆಪಿಯಲ್ಲಿ ಶಾಸಕರ ಸಮರ ಜೋರಾಯಿತು. ತಂತಮ್ಮ ಕ್ಷೇತ್ರದಲ್ಲಿ ಹೇತ್ಲಾಂಡಿ ಎನಿಸಿಕೊಳ್ಳುವ ಭಯಕ್ಕೆ ಬಿದ್ದು ಗಂಡು ಶಾಸಕರು ಒಂದಾಗಿ ತಮ್ಮ ಶಿಷ್ಯರ ಮೇಲಿನ ಕಮ್ಯುನಲ್ ಕೇಸು ವಾಪಸ್ ಪಡೆಯುವಂತೆ ಯಡ್ಡಿಬಳಿ ಎಡತಾಕತೊಡಗಿದರು. ಇವರಿಗೂ ಯಡ್ಡಿ ‘ತಥಾಸ್ತು’ ಎಂದರು.

ಕಂತ್ರಿ ಕಸರತ್ತಿನಲ್ಲಿ ನಿಸ್ಸೀಮನಾದ ದಿನಕರ ಶೆಟ್ಟಿ ಎದುರಾಳಿ ರೂಪಾಲಿಗೆ ಮುಖಭಂಗ ಮಾಡಲು ಒಳಗೊಳಗೇ ಪ್ರಯತ್ನ ನಡೆಸಿದ್ದರು. ಹೀಗಾಗಿ ಮೊನ್ನೆ ಕುಮಟಾದ ನಾಲ್ಕು ಪ್ರಕರಣದ 18 ಜನರ ಮೇಲಿನ ಕೇಸು ಸರ್ಕಾರ ವಾಪಸ್ ಪಡೆದಿದೆ. ಅಷ್ಟೇ ಅಲ್ಲ ಕಾರವಾರದ ಕೇಸ್ ನಿಖಾಲಿ ನೆನೆಗುದಿಗೆ ಬಿದ್ದಿದೆ ಎಂಬ ಗುಲ್ಲು ಎಬ್ಬಿಸಲಾಗಿದೆ. ಅಲ್ಲಿಗೆ ರೂಪಾಲಿ ನಾಯ್ಕ್ ಪೇಚಿಗೆ ಬಿದ್ದಂತಾಗಿದೆ. ಆಕೆ ಹೇಳಿಕೆ ಮೇಲೆ ಹೇಳಿಕೆ ಕೊಡುತ್ತ ತನ್ನ ಕ್ಷೇತ್ರದ ಪುಂಡರ ಮೇಲಿನ ಪ್ರಕರಣಗಳೂ ಸದ್ಯವೇ ಸರ್ಕಾರ ಹಿಂಪಡೆಯುತ್ತದೆಂದು ಸಮಜಾಯಿಸಿ ಕೊಡತೊಡಗಿದ್ದಾರೆ. ಸ್ಪೀಕರ್ ಕಾಗೇರಿಯೂ ಯೆಡ್ಡಿ ಬೇಕಂತಲೇ ತನ್ನ ಕ್ಷೇತ್ರದ ಗಲಭೆಗ್ರಸ್ತರ ಪ್ರಕರಣ ನಿಖಾಲಿ ಮಾಡಿಲ್ಲವೆಂಬ ಗುಮಾನಿಗೆ ಬಿದ್ದಿದ್ದಾರೆ. ಕಾಗೇರಿ ಎಂದಿದ್ದರೂ ಯಡ್ಡಿ ವಿರೋಧಿ ಪಾಳಯದ ಕಲಿ. ಭಟ್ಕಳದ ಸುನೀಲ್ ನಾಯ್ಕ್ ಇದೆಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ ಕಳ್ಳ ಕಾಸು ಮಾಡುವ ಸ್ಕೆಚ್‍ನಲ್ಲಿ ತಲ್ಲೀನನಾಗಿದ್ದಾನೆ. ಆದರೆ, ಒಂದಂತೂ ಖರೆ, ಪರೇಶ್ ಪ್ರಕರಣ ಕ್ರಿಮಿನಲ್ ಕೇಸ್ ಖತಮ್ ಬಿಜೆಪಿಯ ಶಾಸಕರ ನಡುವಿನ ಗ್ಯಾಂಗ್ ವಾರ್‍ಗೆ ಹೊಸ ಆಯಾಮವಂತೂ ಕೊಟ್ಟಿದೆ!!

ಪರೇಶ್ ಸಾವಿನ ನಂತರದ 140 ಪ್ರಕರಣ ಮತ್ತು ಟಿಪ್ಪು ಜಯಂತಿ ವಿರುದ್ಧ ಹಿಂದೂತ್ವದ ಕಹಳೆ ಮೊಳಗಿಸಿ ಸಿಕ್ಕಿಬಿದ್ದವರ ಕೇಸ್ ಖತಮ್ ಮಾಡಿಸಿ ಓಟ್ ಬ್ಯಾಂಕ್ ಭದ್ರತೆಗೆ ತಿಪ್ಪರಲಾಗ ಹಾಕುತ್ತಿರುವ ಜಿಲ್ಲೆಯ ಬಿಜೆಪಿ ಶಾಸಕ-ಸಂಸದ-ಮಂತ್ರಿಗೆ ಪರೇಶ್ ಸಾವಿನ ರಹಸ್ಯ ಭೇದಿಸಿ ಆತನ ಹೆತ್ತವರಿಗೆ ನ್ಯಾಯ ಕೊಡಿಸಬೇಕೆಂಬ ತುಡಿತವೇನೂ ಇಲ್ಲ. ಸಂಘಪರಿವಾರದ ರಿಂಗ್ ಮಾಸ್ಟರ್‍ಗಳಿಗೇ ಬೇಡದ ಈ ತನಿಖೆ ಉಸಾಬರಿ ಬಿಜೆಪಿಯ ಬೊಬ್ಬೆಕೋರರ ಅಸಲಿ ಅವತಾರ ಅನಾವರಣವಾಗುತ್ತದೆಂಬುದು ಸಂಘಸರದಾರಿಗೆ ಗೊತ್ತಿದೆ. ಹಾಗಾಗಿ ಸಿಬಿಐ ತನಿಖೆಗೆ ಬಿಜೆಪಿ ಭೂಪರೇ ಅಡ್ಡಗಾಲು ಹಾಕಿ ಕುಂತಿದ್ದಾರೆ. ಇವತ್ತಿಗೂ ಪರೇಶ್‍ನ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯೇ ಬಂದಿಲ್ಲ! ಇವತ್ತಿನ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅಂದು ಬಿಜೆಪಿ ರಷ್ಟ್ರಾಧ್ಯಕ್ಷನಾಗಿ ಪರೇಶ್‍ನ ಮನೆಗೆ ಬಂದು ಆತನ ಹೆತ್ತವರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು; ಅಂದಿನ ಗೃಹ ಮಂತ್ರಿ ರಾಜ್‍ನಾಥ್ ಸಿಂಗ್, ಯಡ್ಡಿ ಸೇರಿದಂತೆ ವಗೈರೆ ಹಿರಿ-ಮರಿ ಪುಢಾರಿಗಳು ಸರತಿಯಂತೆ ಪರೇಶನ ಮನೆಗೆ ಬಂದು ಮೊಸಳೆ ಕಣ್ಣಿರು ಕೋಡಿ ಹರಿಸಿದ್ದರು.

ಇವರೆಲ್ಲಾ ಈಗ ಗಪ್‍ಚುಪ್ ಆಗಿರುವುದೇ ಪರೇಶ್ ಮೇಸ್ತಾನ ಸಾಬರು ಕೊಂದಿಲ್ಲ ಎಂಬುದು ಖಾತ್ರಿಪಡಿಸುವಂತಿದೆ. ಅನಂತ್ಮಾಣಿಗೆ ರಾಜಕಾರಣದ ದೀಕ್ಷೆ ಕೊಟ್ಟು ಸಂಸದನಾಗಿ ಮಾಡಿದ್ದ ಆತನ ಗುರು-ಅಂದಿನ ಉತ್ತರ ಕನ್ನಡದ ಹಿಂದೂತ್ವದ ಬೆಂಕಿ ನಾಯಕ ಡಾ| ಚಿತ್ತರಂಜನ್ ಎಮ್ಮೆಲ್ಲೆಯಾಗಿದ್ದಾಗಲೇ ಹತನಾಗಿದ್ದರು. ಬಿಜೆಪಿ ವಾಜಪೇಯಿ ಸರ್ಕಾರವಿದ್ದಾಗಲೇ ಈ ಕೇಸ್ ಪತ್ತೆಯಾಗದ ಪ್ರಕರಣವೆಂದು ಸಿಬಿಐ “ಸಿ-ರಿಪೋರ್ಟ್” ಜಡಿದಿದೆ. ಭಟ್ಕಳದ ಮತ್ತೊಬ್ಬ ಹಿಂದೂ ಮುಂದಾಳು ತಿಮ್ಮಪ್ಪ ನಾಯ್ಕನ ಕೊಲೆ ತನಿಖೆಯೂ ಸರಿಯಾಗಿ ಆಗಲಿಲ್ಲ. ಈ ಹಳ್ಳ ಹಿಡಿದ ಕೇಸ್‍ಗಳ ಬಗ್ಗೆಯೇ ತಲೆಕೆಡಿಸಿಕೊಳ್ಳದ ಅನಂತ್ಮಾಣಿ, ಯಡ್ಡಿ, ಶೋಭಕ್ಕ, ಅಮಿತ್ ಶಾ, ಮೋದಿ. ಮುಂತಾದ ಹಿಂದೂ ಕುಲೋದ್ಧಾರಕರಿಗೆ ಪಾಪದ ಬೆಸ್ತರ ಹುಡುಗ ಪರೇಶ್‍ನ ಸಾವೆಲ್ಲಾ ಯಾವ ಲೆಕ್ಕ?

ಓಟ್ ಬ್ಯಾಂಕ್‍ಗಾಗಿ ಹೆಣದ ರಾಜಕಾರಣ ಮಾಡುವ ಬಿಜೆಪಿಗರ ಬಣ್ಣವೀಗ ಬಯಲಾಗುತ್ತಿದೆ. ಹಿಂದೂತ್ವದ ಅಮಲೇರಿಸಿಕೊಂಡು ಪರೇಶ್ ಸಾವಿನ ನಂತರ ದೊಂಬಿ-ಹಿಂಸಾಚಾರಕ್ಕಿಳಿದಿದ್ದ ಶೂದ್ರ ಹುಡುಗರಿಗೀಗ ಸತ್ಯ ಗೊತ್ತಾಗಿದೆ. 13-12-2017ರಂದು ಹೊನ್ನಾವರದ ಶನಿದೇವರ ಅಂಗಳ ಮತ್ತು ಸಾಬರ ಗುಡ್‍ಲಕ್ ಹೋಟೆಲಿನ ಮುಂಭಾಗದಲ್ಲಾದ ಪೊಲೀಸರ ಲಾಠಿ ಚಾರ್ಜ್‍ಗೆ ಬೆದರಿದ ಪರೇಶ್ ಮೇಸ್ತಾ ಬಚಾವಾಗಲು ಪಕ್ಕದ ಶೆಟ್ಟಿಕೆರೆ ಆವರಣ ಗೋಡೆ ಹಾರಿ ಅವಿತಿಟ್ಟುಕೊಳ್ಳುವ ಪ್ರಯತ್ನದಲ್ಲಿ ಕಾಲುಜಾರಿ ಕೆರೆಗೆ ಬಿದ್ದು ಸತ್ತಿದ್ದಾನೆ; ಆತನನ್ನು ಸಾಬರು ಸಾಯಿಸಿಲ್ಲ ಎಂದು ಈಗ ವ್ಯಾಖ್ಯಾನ ಮಾಡಲಾಗುತ್ತಿದೆ. ಪೊಲೀಸರಿಗೆ, ಸಿಬಿಐಗೆ ಮತ್ತು ಪ್ರಜ್ಞಾವಂತರಿಗೂ ಇದೇ ಜಿಜ್ಞಾಸೆಯಿದೆ. ಸಂಘ ಸರದಾರರಿಗೆ ಇದು ಮೊದಲೇ ಗೊತ್ತಿದೆ? ಆದರೆ ಹಿಂದೂತ್ವದ ಅಭಿಯಾನಕ್ಕಾಗಿ ಪರೇಶ್‍ನ ಸಂಘಿಗಳು ಬಿಡಲು ಸಿದ್ಧರಿಲ್ಲ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...