ಉತ್ತರ ಪ್ರದೇಶದ ಬರೇಲಿಯಲ್ಲಿ 24 ವರ್ಷದ ದಲಿತ ವ್ಯಕ್ತಿ ಹಣಕಾಸಿನ ತೊಂದರೆ ಇದೆ ಎಂದು ಕಾರಣ ನೀಡಿ, ತನ್ನ ಮಗನ ಜನ್ಮದಿನದಂದು ಔತಣ ಮತ್ತು ಮದ್ಯ ಕೊಡಿಸಲು ನಿರಾಕರಿಸಿದ್ದಕ್ಕೆ ನಾಲ್ವರು ಕಬ್ಬಿಣದ ರಾಡ್ಗಳಿಂದ ಹೊಡೆದಿದ್ದರು. ಆಸ್ಪತ್ರೆಯಲ್ಲಿದ್ದ ಆ ವ್ಯಕ್ತಿ ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಪರಿದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸಚಿನ್ ಎಂಬವರೇ ಮೃತ ದುರ್ದೈವಿ, ಜುಲೈ 11 ರಂದು ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಬುಧವಾರ ಕೊನೆಯುಸಿಗಳೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಮೃತ ಸಚಿನ್ನ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಅದೇ ಗ್ರಾಮದ ವಿಶಾಲ್, ಅಕ್ಕು, ಆಕಾಶ್ ಮತ್ತು ಕಲ್ಲು ಎಂಬ ನಾಲ್ವರ ವಿರುದ್ಧ ಐಪಿಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ವಿಶಾಲ್ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ಬಗ್ಗೆ ವಿವರಣೆ ನೀಡಿರುವ ಪೊಲೀಸರು, ಜುಲೈ 11ರಂದು ವಿಶಾಲ್ ಹಾಗೂ ಗುಂಪಿನವರು ಕಬ್ಬಿಣದ ರಾಡ್ಗಳನ್ನು ಹಿಡಿದುಕೊಂಡು ಮನೆಗೆ ನುಗಿದ್ದರು. ಮಗನ ಹುಟ್ಟು ಹಬ್ಬದ ಪ್ರಯುಕ್ತ ಪಾರ್ಟಿ ಕೊಡಿಸಬೇಕು ಎಂದು ಬೇಡಿಕೆ ಇಟ್ಟಿದ್ದರು” ಎಂದು ಹೇಳಿದ್ದಾರೆ.
”ಹಣಕಾಸಿನ ಸಮಸ್ಯೆಯಿಂದ ಸಂತ್ರಸ್ತ ಅದನ್ನು ತಳ್ಳಿ ಹಾಕಿದ್ದರು. ಹೀಗಾಗಿ ಆರೋಪಿಗಳು ಮದ್ಯ ಕೊಡಿಸಲೇಬೇಕು ಎಂದು ಬೆದರಿಸಿದ್ದರು. ಅದನ್ನೂ ನಿರಾಕರಿಸಿದಾಗ, ಸಚಿನ್ ಅವರನ್ನು ಮನೆಯಿಂದ ಹೊರಗೆ ತಳ್ಳಿ, ಕಟ್ಟಿಹಾಕಿ ರಾಡ್ನಿಂದ ಹಲ್ಲೆ ಮಾಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.