ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಉತ್ತರಖಂಡ ಸರ್ಕಾರ, ರಸ್ತೆ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಲು ಮಾಡಿದವರಿಗೆ 1 ಲಕ್ಷ ರೂ. ವರೆಗೂ ಬಹುಮಾನ ನೀಡುವ ಹೊಸ ಪ್ರಸ್ತಾಪಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಿದೆ.
ಉತ್ತರಖಂಡ ರಾಜ್ಯದ ಸಾರಿಗೆ ಇಲಾಖೆಯ ಪ್ರಕಾರ, 2019 ರಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳಲ್ಲಿ 866 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರೆ, 1459 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿಗಳು ಹೇಳುವಂತೆ, ನ್ಯಾಯಾಲಯದ ವಿಚಾರಣೆ ಮತ್ತು ಪದೇ ಪದೇ ಪೊಲೀಸ್ ಠಾಣೆ ಮೆಟ್ಟಿಲೇರುವ ತೊಂದರೆಗಳಿಗೆ ಹೆದರುತ್ತಿರುವುದರಿಂದ ಅನೇಕ ಮಂದಿ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವುದರಿಂದ ತಪ್ಪಿಸಿಕೊಳ್ಳುತ್ತಾರೆ, ಹಿಂದೇಟು ಹಾಕುತ್ತಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ಸರ್ಕಾರದ ಈ ಕ್ರಮವು ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರಿಗೆ ನೆರವು ನೀಡಲು, ಅವರ ಜೀವ ಉಳಿಸಲು ಪ್ರೇರಣೆ ನೀಡಿ ಸಹಾಯ ಮಾಡುತ್ತದೆ. ರಸ್ತೆ ಸುರಕ್ಷತಾ ನಿಧಿಯಿಂದ ಇಂತಹ ಪ್ರಕರಣಗಳಲ್ಲಿ 1 ಲಕ್ಷ ರೂ.ವರೆಗೆ ಬಹುಮಾನ ನೀಡುವ ಅಧಿಕಾರ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಇರುತ್ತದೆ ಎಂದು ಅಧಿಖಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉತ್ತರಖಂಡ: ಕೊರೊನಾ ನಡುವೆಯೂ ಹರಿದ್ವಾರದಲ್ಲಿ ಕುಂಬಮೇಳ ನಡೆಸಲು ಸರ್ಕಾರದ ಸಿದ್ದತೆ!
ಈ ಯೋಜನೆಗೆ ಹೆಚ್ಚುವರಿಯಾಗಿ, ಸರ್ಕಾರವು ’ಪಬ್ಲಿಕ್ ಹೈ ಆ್ಯಪ್’ ಅನ್ನು ಸಹ ಆರಂಭಿಸಲಾಗುತ್ತದೆ. ಇದರ ಮೂಲಕ ಅಪಘಾತ ಮಾತ್ರವಲ್ಲದೇ, ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ಮತ್ತು ಮಾದಕ ವಸ್ತುಗಳ ಪ್ರಕರಣಗಳ ಬಗ್ಗೆಯೂ ವಿಡಿಯೋ, ಫೋಟೋ ಸಾಕ್ಷಿಗಳೊಂದಿಗೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.
ಗೃಹ ಇಲಾಖೆ ಮತ್ತು ಪೊಲೀಸರ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಸಭೆಯಲ್ಲಿ ಈ ಕ್ರಮಗಳ ಕುರಿತು ಚರ್ಚಿಸಲಾಗಿದೆ. ನಗರ ಮತ್ತು ಹೆದ್ದಾರಿಯಲ್ಲಿ ಗಸ್ತು ತಿರುಗಲು ಸುಮಾರು 100 ಹೊಸ ಸ್ಕಾರ್ಪಿಯೋ ವಾಹನಗಳನ್ನು ತೆಗೆದುಕೊಳ್ಳಲಾಗುವುದು. ಮಹಿಳೆಯರಿಗೆ ಅಗ್ನಿಶಾಮಕ ಸೇವೆಯಲ್ಲಿ ಅವಕಾಶ ನೀಡಲಾಗುವುದು ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.