Homeಕರ್ನಾಟಕವಿಜಯನಗರ: ‘ಆರ್‌ಎಸ್‌ಎಸ್‌ ಆಳ ಅಗಲ’ ಕೃತಿ ಉಚಿತವಾಗಿ ಹಂಚಿಕೆ

ವಿಜಯನಗರ: ‘ಆರ್‌ಎಸ್‌ಎಸ್‌ ಆಳ ಅಗಲ’ ಕೃತಿ ಉಚಿತವಾಗಿ ಹಂಚಿಕೆ

ಬಲಿಷ್ಠ ಸಂಘಟನೆ ಎಂದು ಬಿಂಬಿಸಿಕೊಳ್ಳುವ ಆರ್‌ಎಸ್‌ಎಸ್‌, ಮಾನವತಾವಾದಿ ದೇವನೂರರು ಬರೆದಿರುವ ಈ ಚಿಕ್ಕ ಕೃತಿಯಿಂದಾಗಿ  ನಡುಗಿ ಹೋಗಿದೆ: ಪೀರ್‌ ಬಾಷಾ

- Advertisement -
- Advertisement -

ನಾಡಿನ ಸಾಕ್ಷಿ ಪ್ರಜ್ಞೆ, ನೆಲ ಸಂಸ್ಕೃತಿಯ ಪ್ರತಿಪಾದಕರಾದ ದೇವನೂರ ಮಹಾದೇವ ಅವರು ಬರೆದಿರುವ ಆರ್‌ಎಸ್‌ಎಸ್‌ ಆಳ ಮತ್ತು ಅಗಲ ಕೃತಿಯನ್ನು ವಿಜಯನಗರದಲ್ಲಿ ಉಚಿತವಾಗಿ ಹಂಚುವ ಕಾರ್ಯಕ್ರಮ ನಡೆಯಿತು.

ಪ್ರಗತಿಪರ ಸ್ನೇಹಿತರು, ವಿಜಯನಗರ ಜಿಲ್ಲಾ ಡಾ.ಬಿ.ಆರ್‌.ಅಂಬೇಡ್ಕರ್ ಸಂಘದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮ ನಡೆಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಚಿಂತಕ ಪೀರ್‌ ಬಾಷಾ ಮಾತನಾಡಿ, “ಬಲಿಷ್ಠ ಸಂಘಟನೆ ಎಂದು ಬಿಂಬಿಸಿಕೊಳ್ಳುವ ಆರ್‌ಎಸ್‌ಎಸ್‌, ಮಾನವತಾವಾದಿ ದೇವನೂರರು ಬರೆದಿರುವ ಈ ಚಿಕ್ಕ ಕೃತಿಯಿಂದಾಗಿ  ನಡುಗಿ ಹೋಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಅವರು ಕರ್ನಾಟಕಕ್ಕೆ ಬಂದು ಸಭೆ ಮಾಡುವಷ್ಟು ಆತಂಕ ಆರ್‌ಎಸ್‌ಎಸ್‌ಗೆ ಉಂಟಾಗಿದೆ. ಇದು ದೇವನೂರರಿಗಿರುವ ಶಕ್ತಿ. ಅವರ ವಿಚಾರಗಳಿಗಿರುವ ಶಕ್ತಿ” ಎಂದು ಬಣ್ಣಿಸಿದರು.

“ಆರ್‌ಎಸ್‌ಎಸ್‌ ಹುಟ್ಟಿ ನೂರು ವರ್ಷಗಳಾಗುತ್ತಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವನ್ನು ಆರ್‌ಎಸ್‌ಎಸ್‌ನವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಸರಿ, ಅಂಬೇಡ್ಕರ್‌ ಬರೆದಿರುವ ಸಂವಿಧಾನವನ್ನು ಅಪ್ರಸ್ತುತಗೊಳಿಸಬೇಕು ಎಂದು ಎಲ್ಲ ರೀತಿಯ ಹುನ್ನಾರ ಮಾಡುತ್ತಿರುವುದನ್ನು ದೇವನೂರರು ತಮ್ಮ ಕೃತಿಯಲ್ಲಿ ಬಯಲಿಗೆಳೆದಿದ್ದಾರೆ” ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಚಾತುರ್‌ವರ್ಣ ಪದ್ಧತಿಯಲ್ಲಿ ನಂಬಿಕೆ ಇಟ್ಟಿದೆ. ಭಾರತದ ಸಂವಿಧಾನ ಜಾತಿ ವ್ಯವಸ್ಥೆ ಬೇಡ ಎನ್ನುತ್ತದೆ. ಆರ್‌ಎಸ್‌ಎಸ್ ಭಗವಾಧ್ವಜ ಬೇಕು ಎಂದರೆ ಅಂಬೇಡ್ಕರರ ಸಂವಿಧಾನ ತ್ರಿವರ್ಣ ಧ್ವಜದಲ್ಲಿ ನಂಬಿಕೆ ಇಟ್ಟಿದೆ. ನಮ್ಮ ಸಂವಿಧಾನ ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿದ್ದರೆ, ಆರ್‌ಎಸ್‌ಎಸ್‌ನವರು ಮನುವಾದದಲ್ಲಿ ನಂಬಿಕೆ ಇಟ್ಟಿದ್ದಾರೆ. ಈ ವಿಚಾರಗಳನ್ನು ದೇವನೂರರು ಸರಳವಾಗಿ ವಿವರಿಸಿದ್ದಾರೆ. ಇಲ್ಲಿಯವರೆಗೆ ಈ ಕೃತಿಯ ಒಂದು ಲಕ್ಷ ಪ್ರತಿ ಮಾರಾಟವಾಗಿವೆ. ವಿದ್ಯಾರ್ಥಿಗಳು ಖರೀದಿಸಿ ಓದುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

ಚಿಂತಕ ಕೆ.ರಮೇಶ್ ಮಾತನಾಡಿ, “ಆರ್‌ಎಸ್‌ಎಸ್‌ನ ನಿಜ ಬಣ್ಣವನ್ನು ದೇವನೂರರು ಬಯಲು ಮಾಡಿದ್ದಾರೆ. ಆರ್‌ಎಸ್‌ಎಸ್‌ ದೇಶದಲ್ಲಿ ಹೇಗೆ ವಿಷಬೀಜವನ್ನು ಬಿತ್ತುತ್ತಿದೆ ಎಂಬ ವಿಚಾರಗಳನ್ನು ಅತ್ಯಂತ ಸ್ಪಷ್ಟವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಕೃತಿಯನ್ನು ಓದುವ ದೊಡ್ಡ ಆಂದೋಲನ ಆಗಬೇಕಿದೆ” ಎಂದು ಆಶಿಸಿದರು.

ಜಿಲ್ಲಾ ದಲಿತ ಹಕ್ಕುಗಳ ಸಮಿತಿಯ ಮರಡಿ ಜಂಬಯ್ಯ ನಾಯಕ ಮಾತನಾಡಿ, “ಆರ್‌ಎಸ್‌ಎಸ್‌ ಆಳ ಮತ್ತು ಅಗಲ ಕೃತಿಯು ಬಹುಭಾಷೆಗಳಿಗೆ ತರ್ಜುಮೆಯಾಗುತ್ತಿದೆ. ಈ ವಿದ್ಯಮಾನವು ಕೃತಿಯ ಮಹತ್ವವನ್ನು ಹಾಗೂ ಆರ್‌ಎಸ್‌ಎಸ್‌ ಕುರಿತು ತಿಳಿದುಕೊಳ್ಳಬೇಕೆಂಬ ಜನರ ತವಕವನ್ನು ತೋರಿಸುತ್ತದೆ. ದೇಶ ಆತಂಕ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಈ ಕೃತಿ ನಮಗೆ ಮಾರ್ಗದರ್ಶನ ತೋರಿದೆ” ಎಂದು ವಿವರಿಸಿದರು.

ವಿಜಯನಗರ ಬಂಡಾಯ ಸಾಹಿತ್ಯ ಸಂಚಾಲಕರಾದ ಪಿ.ಆರ್. ವೆಂಕಟೇಶ ಮಾತನಾಡಿ, “ಪ್ರಗತಿಪರರು, ಸಮಾನತೆ ಬಯಸುವವರು ವಿದೇಶದ ವಿಚಾರಗಳನ್ನು ತುರುಕುತ್ತಿದ್ದಾರೆಂದು ಆರ್‌ಎಸ್‌ಎಸ್‌ ಹೇಳುತ್ತಿದೆ. ಆದರೆ ಗೋಲ್ವಲ್ಕರ್‌ ಅವರ ಬಂಚ್‌ ಆಫ್ ಥಾಟ್ಸ್‌ ಯಾವ ದೇಶದ್ದು ಎಂದು ದೇವನೂರರು ಕೇಳುತ್ತಿದ್ದಾರೆ. ನಾಜಿ ಸಿದ್ಧಾಂತ ಎಲ್ಲಿಯದ್ದು ಎಂದು ಪ್ರಶ್ನಿಸಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿರಿ: ಆರ್‌ಎಸ್‌ಎಸ್‌ ಅಜೆಂಡಾಗಳನ್ನು ಬಯಲುಗೊಳಿಸುವ ಕನ್ನಡ ಕೃತಿಗಳು

ಬಣ್ಣದ ಮನೆ ಸೋಮಶೇಖರ್ ಮಾತನಾಡಿ, “ದೇವನೂರರ ಆರ್.ಎಸ್.ಎಸ್ ಆಳ ಮತ್ತು ಅಗಲ ಕೃತಿಯಿಂದ ಕೆಲವರ ಎದೆಯಲ್ಲಿ ನಡುಕ ಹುಟ್ಟಿರುವುದು ಸತ್ಯ. ಹೀಗಾಗಿ ಪುಸ್ತಕ ಹಂಚುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ಆವರಣಗಳಲ್ಲಿ ಆಯೋಜಿಸಬೇಕು. ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಬೇಕು” ಎಂದು ಆಶಿಸಿದರು.

ಪ್ರಗತಿಪರ ಸಂಘಟನೆಯ ದುರ್ಗಪ್ಪ ಪೂಜಾರಿ, ಆಟೋ ಯುನಿಯನ್ ರಾಮಚಂದ್ರ ಮತ್ತು ಎಮ್.ಆರ್.ಎಮ್ ಮಂಜು, ಸ್ಲಮ್ ಜಾಗೃತಿಯ ವೆಂಕಟೇಶ್‌ ಸೇರಿದಂತೆ ಅನೇಕ ಚಿಂತಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈ ಓದುಕಟ್ಟಿನಲ್ಲಿ ಹಲವಾರು ಕಡೆ ಸಂಸ್ಕೃತ ಪದಗಳಿಗೆ ಕನ್ನಡ ಪದಗಳನ್ನು ಬಳಸಬಹುದಿತ್ತು.

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...