ಅಗ್ನಿಪಥ್ ಯೋಜನೆಗೆ ನೇಮಕಾತಿಯಾಗುವವರಿಗೆ ಚಾಲನೆ, ಎಲೆಕ್ಟ್ರಿಷಿಯನ್, ಬಟ್ಟೆ ಒಗೆಯುವ ಮತ್ತು ಕ್ಷೌರ ಕೌಶಲ್ಯಗಳ ತರಬೇತಿ ನೀಡಲಾಗುವುದು ಎಂದು ಒಕ್ಕೂಟ ಸರ್ಕಾರದ ಸಚಿವ ಜಿ. ಕಿಶನ್ ರೆಡ್ಡಿ ಅವರು ಹೇಳಿ ವಿವಾದ ಸೃಷ್ಟಿಸಿದ್ದು, “ಅಗ್ನಿವೀರರು ತಮ್ಮ ನಾಲ್ಕು ವರ್ಷಗಳ ಅವಧಿ ಮುಗಿದ ನಂತರ, ಹುದ್ದೆಗಳಿಗೆ ಸೇರಲು ಅವರಿಗೆ ಈ ಕೌಶಲ್ಯ ಸಹಾಯಕವಾಗುತ್ತದೆ” ಎಂದು ಹೇಳಿದ್ದಾರೆ.
ಸಚಿವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕಿ, ಸಂಸದೆ ಪ್ರಿಯಾಂಕಾ ಚತುರ್ವೇದಿ, “ಸಶಸ್ತ್ರ ಪಡೆಗಳು ಈಗ ಅಗ್ನಿಪಥ್ ನೇಮಕಾತಿ ಯೋಜನೆಯಡಿ ಚಾಲನೆ, ಎಲೆಕ್ಟ್ರಿಷಿಯನ್ ಮುಂತಾದ ದೇಶಕ್ಕೆ ಕೌಶಲ್ಯಪೂರ್ಣ ಕಾರ್ಮಿಕರಿಗೆ ತರಬೇತಿ ಕೇಂದ್ರವಾಗಲಿದೆ. ಹೊಸ ಸಾಧನೆಯೊಂದು ಹೊರಹೊಮ್ಮಿದೆ!” ಎಂದು ಅವರು ಹೇಳಿದ್ದಾರೆ.
Armed Forces will now be a training ground for skilled labour work force for the nation such as drivers, electricians etc under the Agneepath recruitment scheme. A new achievement unlocked!
Video courtesy: @krishanKTRS pic.twitter.com/WC0hcoWuYQ— Priyanka Chaturvedi🇮🇳 (@priyankac19) June 19, 2022
ಈ ವಿಡಿಯೋವನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ನಾಯಕ ಕ್ರಿಶಾಂಕ್ ಮನ್ನೆ ಕೂಡ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ಹಿಂಸಾಚಾರದಲ್ಲಿ ಭಾಗಿಯಾದವರು ಸೇನೆ ಸೇರಲು ಸಾಧ್ಯವಿಲ್ಲ- ಲೆ. ಜನರಲ್ ಪುರಿ
ಅಗ್ನಿಪಥ್ ಯೋಜನೆ ಎಂದರೇನು?
ಒಕ್ಕೂಟ ಸರ್ಕಾರದವು ಮಂಗಳವಾರ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿದೆ. ಹೊಸ ಸೇನಾ ನೇಮಕಾತಿ ಯೋಜನೆಯಡಿ ಹದಿನೇಳುವರೆಯಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೈನ್ಯಕ್ಕೆ ಸೇರಿಸಲಾಗುತ್ತದೆ.
ಈ ರೀತಿ ಸೇರಿದ 25% ಜನರನ್ನು ಮಾತ್ರ ನಾಲ್ಕು ವರ್ಷಗಳ ನಂತರ ಖಾಯಂ ಮಾಡಲಾಗುತ್ತದೆ. ಉಳಿದವರು ಒಂದಿಷ್ಟು ಪರಿಹಾರದೊಂದಿಗೆ ಕಡ್ಡಾಯ ನಿವೃತ್ತಿಯನ್ನು ಪಡೆಯಬೇಕಾಗುತ್ತದೆ. ಆದರೆ ಅವರಿಗೆ ಯಾವುದೇ ಪಿಂಚಣಿ ನೀಡಲಾಗುವುದಿಲ್ಲ. ಹೊಸ ಯೋಜನೆಯಡಿ ನೇಮಕಗೊಳ್ಳುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ಉದ್ಯೋಗದ ಮೊದಲ ವರ್ಷದಲ್ಲಿ ಅಗ್ನಿವೀರ್ನ ಮಾಸಿಕ ವೇತನವು 30,000 ರೂ. ಆಗಿರುತ್ತದೆ. ಆದರೆ ಅವರ ಕೈಗೆ ಪ್ರತಿ ತಿಂಗಳು ಸಿಗುವ ಮೊತ್ತ 21,000 ರೂ. ಆಗಿದ್ದು, ಉಳಿದ 9 ಸಾವಿರ ರೂ.ಗಳನ್ನು ಉಳಿಸಿ ನಾಲ್ಕು ವರ್ಷಗಳ ನಂತರ ನೀಡಲಾಗುತ್ತದೆ. ಇದರ ನಂತರ ಎರಡನೇ, ಮೂರನೇ ಮತ್ತು ನಾಲ್ಕನೇ ವರ್ಷದಲ್ಲಿ ಮಾಸಿಕ ವೇತನವು 33 ಸಾವಿರ ರೂ., 36,500 ರೂ. ಮತ್ತು 40,000 ಆಗಿರುತ್ತದೆ.
ಇದನ್ನೂ ಓದಿ:ಅಗ್ನಿಪಥ್ ವಿರೋಧಿಸಿ ಇಂದು ಭಾರತ್ ಬಂದ್: ಬಿಹಾರದಲ್ಲಿ 350 ರೈಲುಗಳ ಸಂಚಾರ ರದ್ದು
ಸರ್ಕಾರದ ಈ ಯೋಜನೆಯ ವಿರುದ್ಧ ದೇಶದಾದ್ಯಂತ ಸೇನಾ ಉದ್ಯೋಗಾಕಾಂಕ್ಷಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ಭುಗಿಲೆದ್ದಿದ್ದು, ಹಿಂಸೆಗೆ ತಿರುಗಿದೆ.