ನಾಲ್ಕು ತಿಂಗಳಿಂದ ದೆಹಲಿಯ ಗಡಿಗಳಲ್ಲಿ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದರೆ ನಾವು ಮಾತುಕತೆಗೆ ಸಿದ್ದರಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹರಿಯಾಣದ ಗೃಹ ಸಚಿವ ಅನಿಲ್ ವಿಜ್, ʼಕೇಂದ್ರ ಸರ್ಕಾರ ಕೂಡಲೇ ಹೋರಾಟನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸಬೇಕುʼ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ರವರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದು, ಮಾತುಕತೆಗೆ ರೈತರು ಸಿದ್ದರಿದ್ದೇವೆ ಎಂದಿದ್ದಾರೆ.
“ಜನವರಿ 22 ರಂದು ನಡೆದ 11ನೇ ಸುತ್ತಿನ ಮಾತುಕತೆಗಳ ನಂತರ ಕೇಂದ್ರ ಸರ್ಕಾರ ಮತ್ತು ರೈತರೊಂದಿಗಿನ ಮಾತುಕತೆಗಳು ನಿಂತುಹೋಗಿವೆ. ಆದರೆ ಮೂರು ಕರಾಳ ಕಾನೂನುಗಳು ರದ್ದಾಗಬೇಕು ಮತ್ತು ಎಂಎಸ್ಪಿ ಖಾತ್ರಿಗಾಗಿ ಕಾನೂನು ಜಾರಿಗೊಳಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಇದರಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಸರ್ಕಾರ ಮಾತುಕತೆಗೆ ಕರೆದರೆ ಸಂಯುಕ್ತ ಕಿಸಾನ್ ಮೋರ್ಚಾ ಭಾಗವಹಿಸುತ್ತದೆ. ಇಲ್ಲದಿದ್ದಲ್ಲಿ ಕೊರೊನಾ ಅಲ್ಲ, ಅದಕ್ಕಿಂತಲೂ ದೊಡ್ಡದು ಬಂದರೂ ಸಹ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ರವರು ಹೋರಾಟ ಮುಂದೂಡಿ, ಮಾತುಕತೆಗೆ ಬನ್ನಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅವರು ಅಧಿಕೃತವಾಗಿ ನಮ್ಮನ್ನು ಆಹ್ವಾನಿಸಿಲ್ಲ. ಅಧಿಕೃತ ಕರೆ ಬಂದಲ್ಲಿ ಮಾತ್ರ ಮಾತುಕತೆಯಲ್ಲಿ ಭಾಗವಹಿಸುತ್ತೇವೆ. ಅಲ್ಲಿಯವರೆಗೂ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸುತ್ತಲೇ ನಮ್ಮ ರೈತ ಹೋರಾಟ ಮುಂದುವರೆಯಲಿದೆ ಎಂದು ಟಿಕಾಯತ್ ಹೇಳಿದ್ದಾರೆ.
“ಕೊರೊನಾ ದೃಷ್ಟಿಯಿಂದ ಮಕ್ಕಳು ಮತ್ತು ವೃದ್ಧರಿಗೆ ಮನೆಗೆ ಹಿಂತಿರುಗುವಂತೆ ಹೇಳಬೇಕೆಂದು ನಾನು ಸಂಘಟನೆಯ ಮುಖಂಡರನ್ನು ಹಲವು ಬಾರಿ ಒತ್ತಾಯಿಸಿದ್ದೆ. ಈಗ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ರೈತರು ಮತ್ತು ಅವರ ಸಂಘಗಳು ಕೊರೊನಾ ನಿಯಮಾವಳಿಗಳನ್ನು ಅನುಸರಿಸಬೇಕು” ಎಂದಿದ್ದಾರೆ.
“ರೈತರು ತಮ್ಮ ಪ್ರತಿಭಟನೆಯನ್ನು ಮುಂದೂಡಬೇಕು ಮತ್ತು ನಮ್ಮೊಂದಿಗೆ ಚರ್ಚಿಸಬೇಕು. ಪ್ರತಿಭಟನಾ ನಿರತ ರೈತರೊಂದಿಗೆ ಮೂರು ಕಾನೂನುಗಳ ಬಗ್ಗೆ ಚರ್ಚಿಸಲು ಕೇಂದ್ರವು ಮುಂದಿನ ಸುತ್ತಿನ ಮಾತುಕತೆಗೆ ಸಿದ್ಧವಾಗಿದೆ ಎಂದು ಕೃಷಿ ಸಚಿವ ತೋಮರ್ ನಿನ್ನೆ ಹೇಳಿದ್ದರು.
ಇದನ್ನೂ ಓದಿ: ಕೊರೊನಾ ಹಿನ್ನೆಲೆ ರೈತ ಹೋರಾಟ ಮುಂದೂಡಿ, ಮಾತುಕತೆಗೆ ಬನ್ನಿ ಎಂದ ಕೃಷಿ ಸಚಿವ
It is good to resolve on mutual discussion