ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ಮುಂದೂಡುವಂತೆ ಮತ್ತು ಸರ್ಕಾರದೊಂದಿಗೆ ಮತ್ತೆ ಮಾತುಕತೆ ಪ್ರಾರಂಭಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.
“ಕೊರೊನಾ ದೃಷ್ಟಿಯಿಂದ ಮಕ್ಕಳು ಮತ್ತು ವೃದ್ಧರಿಗೆ ಮನೆಗೆ ಹಿಂತಿರುಗುವಂತೆ ಹೇಳಬೇಕೆಂದು ನಾನು ಸಂಘಟನೆಯ ಮುಖಂಡರನ್ನು ಹಲವು ಬಾರಿ ಒತ್ತಾಯಿಸಿದ್ದೆ. ಈಗ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ರೈತರು ಮತ್ತು ಅವರ ಸಂಘಗಳು ಕೊರೊನಾ ನಿಯಮಾವಳಿಗಳನ್ನು ಅನುಸರಿಸಬೇಕು” ಎಂದಿದ್ದಾರೆ.
“ರೈತರು ತಮ್ಮ ಪ್ರತಿಭಟನೆಯನ್ನು ಮುಂದೂಡಬೇಕು ಮತ್ತು ನಮ್ಮೊಂದಿಗೆ ಚರ್ಚಿಸಬೇಕು. ಪ್ರತಿಭಟನಾ ನಿರತ ರೈತರೊಂದಿಗೆ ಮೂರು ಕಾನೂನುಗಳ ಬಗ್ಗೆ ಚರ್ಚಿಸಲು ಕೇಂದ್ರವು ಮುಂದಿನ ಸುತ್ತಿನ ಮಾತುಕತೆಗೆ ಸಿದ್ಧವಾಗಿದೆ ಎಂದು ಕೃಷಿ ಸಚಿವ ತೋಮರ್ ಹೇಳಿದ್ದಾರೆ
ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್
“ಅನೇಕ ರೈತ ಸಂಘಗಳು, ಅರ್ಥಶಾಸ್ತ್ರಜ್ಞರು ಕೃಷಿ ಮಸೂದೆಗಳನ್ನು ಬೆಂಬಲಿಸುತ್ತಿದ್ದಾರೆ. ಆದರೆ ಕೆಲವು ರೈತರು ಅವುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತ ಸಂಘಗಳೊಂದಿಗೆ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದೆ. ನಾವು ಮುಂದಿನ ಮಾತುಕತೆಗೆ ಸಿದ್ಧರಿದ್ದೇವೆ ”ಎಂದು ಹೇಳಿದ್ದಾರೆ.
ಜನವರಿ 22 ರಂದು ನಡೆದ ಹನ್ನೊಂದನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ, ಕೃಷಿ ಕಾನೂನುಗಳನ್ನು 12 ರಿಂದ 18 ತಿಂಗಳವರೆಗೆ ಸ್ಥಗಿತಗೊಳಿಸಲು ಕೇಂದ್ರವು ಪ್ರಸ್ತಾಪಿಸಿತ್ತು, ಆದರೆ ರೈತ ಸಂಘಗಳು ತಮ್ಮ ನಿಲುವಿಗೆ ಬದ್ಧರಾಗಿದ್ದರು. ವಿವಾದಿತ ಮೂರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾಯ್ದೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ನಿರ್ಲಕ್ಷಿಸುತ್ತಿದೆ. ಮಾತುಕತೆಗೆ ಆಹ್ವಾನಿಸಿಲ್ಲ ಎಂದು ಆರೋಪಿಸಿದೆ. ಏನೇ ಆದರೂ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ.
“ಈ ಕಾನೂನುಗಳನ್ನು ರದ್ದುಪಡಿಸುವವರೆಗೂ ರೈತರು ಮನೆಗೆ ಹಿಂತಿರುಗುವುದಿಲ್ಲ. ಕೇಂದ್ರವು ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಾರೆ ಆದರೆ ಶಹೀನ್ಬಾಗ್ ಅನ್ನು ನಡೆಸಿಕೊಂಡಂತೆ ರೈತರನ್ನು ನಡೆಸಿಕೊಳ್ಳಬಾರದು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ. ಈ ಆಂದೋಲನ ಕೊನೆಗೊಳ್ಳುವುದಿಲ್ಲ. ನಾವು ಕೊರೊನಾ ವೈರಸ್ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ. ಈ ಆಂದೋಲನವು ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಂದುವರಿಯುತ್ತದೆ” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ: ಶಾಹಿನ್ಬಾಗ್ ಅನ್ನು ನಡೆಸಿಕೊಂಡಂತೆ ರೈತ ಹೋರಾಟಗಾರರನ್ನು ನಡೆಸದಿರಿ: ಕೇಂದ್ರಕ್ಕೆ ಟಿಕಾಯತ್