ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ 19 ವರ್ಷದ ದಲಿತ ಯುವತಿಯ ಕುಟುಂಬಸ್ಥರು ತಮಗೆ ರಕ್ಷಣೆ ಬೇಕು ಎಂದಿದ್ದು, ತಮ್ಮನ್ನು ಹತ್ರಾಸ್ನಿಂದ ದೆಹಲಿಗೆ ಸ್ಥಳಾಂತರಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಮೃತ ಸಂತ್ರಸ್ತ ಯುವತಿಯ ಸಹೋದರ ಎಎನ್ಐ ಜೊತೆಗೆ ಮಾತನಾಡಿ, ನಾವು ಸುರಕ್ಷಿತವಾಗಿರಲು ಬಯಸುತ್ತೇವೆ. ಹಾಗಾಗಿ ನಮ್ಮನ್ನು ಹಳ್ಳಿಯಿಂದ ಸ್ಥಳಾಂತರಗೊಳ್ಳಲು ಸಹಾಯ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಹತ್ರಾಸ್ನಲ್ಲಿ ಕೆಲವೇ ದಲಿತ ಕುಟುಂಬಗಳಿದ್ದು, ಪ್ರಕರಣ ನಡೆದಾಗಿನಿಂದ ಮೇಲ್ಜಾತಿ ಠಾಕೂರರಿಂದ ಬೆದರಿಕೆಗಳು ಬರುತ್ತಿರುವುದರಿಂದ ಅವರ ಸುರಕ್ಷತೆ ಮುಖ್ಯವಾಗಿದ್ದು, ಇನ್ನು ಹೆಚ್ಚಿನ ರಕ್ಷಣೆ ನೀಡಬೇಕೆಂದು ಅಲಹಾಬಾದ್ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿತ್ತು.
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದೆಹಲಿಯಲ್ಲಿಯೇ ತನಿಖೆ ನಿರ್ವಹಿಸಬೇಕೆಂದು ಅವರು ಬಯಸುತ್ತಾರೆ. ಕುಟುಂಬವು ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿದೆ. ಜೊತೆಗೆ “ನಾವು ದೆಹಲಿಗೆ ಸ್ಥಳಾಂತರಗೊಳ್ಳಲು ಬಯಸುತ್ತೇವೆ. ಎಲ್ಲೇ ಇದ್ದರೂ ಸುರಕ್ಷಿತವಾಗಿರಲು ನಾವು ಆಶಿಸುತ್ತೇವೆ” ಎಂದಿದ್ದಾರೆ ಎಂದು ಎಎನ್ಐ ಉಲ್ಲೇಖಿಸಿದೆ.
ಇದನ್ನೂ ಓದಿ: ಹತ್ರಾಸ್: ಸಂತ್ರಸ್ತೆ ಮನೆ ಸುತ್ತ 8 ಸಿಸಿಟಿವಿ ಅಳವಡಿಕೆ, 60 ಪೊಲೀಸರ ನಿಯೋಜನೆ
ಹತ್ರಾಸ್ ಯುವತಿಯ ಕುಟುಂಬವು ಪ್ರಕರಣವನ್ನು ಉತ್ತರ ಪ್ರದೇಶದಿಂದ ಬೇರೆಡೆಗೆ ವರ್ಗಾಯಿಸಲು ಒತ್ತಾಯಿಸಿತ್ತು. ಪ್ರಕರಣವನ್ನು ದೆಹಲಿ ಅಥವಾ ಮುಂಬೈಗೆ ವರ್ಗಾಯಿಸಲು ಹತ್ರಾಸ್ ಸಂತ್ರಸ್ತ ಕುಟುಂಬ ಅಲಹಾಬಾದ್ ಹೈಕೋರ್ಟ್ನಲ್ಲಿ ಒತ್ತಾಯಿಸಿದೆ ಎಂದು ಸಂತ್ರಸ್ತ ಕುಟುಂಬದ ಪರ ವಕೀಲೆ ಸೀಮಾ ಕುಶ್ವಾಹ ತಿಳಿಸಿದ್ದರು.
ಇನ್ನೂ ಸಂತ್ರಸ್ತೆ ಮನೆಯ ಸುತ್ತ 60 ಮಂದಿ ಭದ್ರತಾ ಸಿಬ್ಬಂದಿ, ಜೊತೆಗೆ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ,ಸಂತ್ರಸ್ತ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಅಗತ್ಯವಿದ್ದರೆ ಸಂತ್ರಸ್ತೆ ಮನೆಯ ಸುತ್ತ ಕಂಟ್ರೋಲ್ ರೂಮ್ ಕೂಡ ಸ್ಥಾಪಿಸಲಾಗುವುದು, ಸಂತ್ರಸ್ತ ಕುಟುಂಬದ ಪ್ರತಿ ಸದಸ್ಯರಿಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿದೆ ಎಂದು ನೋಡಲ್ ಅಧಿಕಾರಿಯಾಗಿ ಲಖನೌದಿಂದ ಹತ್ರಾಸ್ಗೆ ಬಂದಿರುವ ಡಿಐಜಿ ಶಲಾಭ್ ಮಾಥೂರ್ ತಿಳಿಸಿದ್ದರು.