ವಿಧಾನಸಭಾ ಚುನಾವಣೆಗೆ ಸುದೀರ್ಘ 8 ಹಂತದ ಚುನಾವಣಾ ಮತದಾನ ನಡೆದ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸಾಂಕ್ರಾಮಿಕ ಮಿತಿ ಮೀರಿದ್ದು, ನಾಳೆಯಿಂದ ಎರಡು ವಾರಗಳವರೆಗೆ (ಮೇ 16 ರಿಂದ 30) ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಲಾಕ್ಡೌನ್ ಘೋಷಿಸಿದೆ.
ಕೊರೊನಾ ಸೋಂಕು ಹರಡುವಿಕೆ ತಡೆಯಲು ಲಾಕ್ಡೌನ್ ವಿಧಿಸಿರುವ ಸರ್ಕಾರ ಈ ಅವಧಿಯಲ್ಲಿ ಎಲ್ಲಾ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲು ಆದೇಶಿಸಿದೆ. ಜೊತೆಗೆ ಕೋಲ್ಕತಾ ಮೆಟ್ರೋ ಸೇರಿದಂತೆ ಸಾರಿಗೆ ಸೇವೆಗಳು ಕೂಡ ಸ್ಥಗಿತಗೊಳ್ಳಲಿವೆ ಎಂದು ಸರ್ಕಾರ ತಿಳಿಸಿದೆ.
ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ರಾಜ್ಯದ ಅಧಿಸೂಚನೆ ತಿಳಿಸಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ದಿನಸಿ ಅಂಗಡಿಗಳು ಬೆಳಿಗ್ಗೆ 7 ರಿಂದ 10 ರವರೆಗೆ ತೆರೆದಿರುತ್ತವೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗೆ ಕಾಂಗ್ರೆಸ್ನಿಂದ 100 ಕೋಟಿ ನೆರವು- ಸಿದ್ದರಾಮಯ್ಯ
ಪೆಟ್ರೋಲ್ ಪಂಪ್ಗಳು ತೆರೆದಿರುತ್ತವೆ ಮತ್ತು ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಇರುತ್ತವೆ. ಕೈಗಾರಿಕೆಗಳನ್ನು ಬಂದ್ ಮಾಡಲಾಗುತ್ತದೆಯಾದರೂ, ಶೇಕಡಾ 50 ರಷ್ಟು ಚಹಾ ತೋಟಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಎಂದು ತಿಳಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಎಂಟು ಹಂತದ ಮತದಾನದ ನಂತರ ಕೊರೊನಾ ಸೋಂಕುಗಳ ಪ್ರಕರಣ ಬಂಗಾಳದಲ್ಲಿ ಹೆಚ್ಚಾಗಿತ್ತು. ರಾಜಕೀಯ ಪಕ್ಷಗಳು ಮತ್ತು ಮುಖಂಡರು ಕೊರೊನಾ ಸಾಂಕ್ರಾಮಿಕದ ನಿಯಮಾವಳಿಗಳನ್ನು ಅನುಸರಿಸದೇ ಬೃಹತ್ ರ್ಯಾಲಿಗಳು, ರೋಡ್ ಶೋಗಳನ್ನು ಆಯೋಜಿಸಿದ್ದು, ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಜೊತೆಗೆ ನ್ಯಾಯಾಲಯದ ಎಚ್ಚರಿಕೆ ಬಳಿಕ ಚುನಾವಣಾ ಆಯೋಗ ಕೂಡ ರಾಜಕೀಯ ಪಕ್ಷಗಳಿಗೆ ನಿಯಮಾವಳಿಗಳನ್ನು ಪಾಲಿಸುವಂತೆ ಆದೇಶ ನೀಡಿತ್ತು.
ಇನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಿರಿಯ ಸಹೋದರ ಆಶಿಮ್ ಬ್ಯಾನರ್ಜಿ ಕೊರೊನಾ ಸೋಂಕಿನಿಂದ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಲವ್ ಯು ಜಿಂದಗಿ ಎಂದಿದ್ದ 30 ವರ್ಷದ ಯುವತಿ ಕೊರೊನಾಗೆ ಬಲಿ