Homeಅಂತರಾಷ್ಟ್ರೀಯಚಿಲಿಯಿಂದ ನಾವು ಭಾರತೀಯರು ಕಲಿಯಬೇಕಾಗಿರುವುದು ಏನು?

ಚಿಲಿಯಿಂದ ನಾವು ಭಾರತೀಯರು ಕಲಿಯಬೇಕಾಗಿರುವುದು ಏನು?

- Advertisement -
- Advertisement -

ದಕ್ಷಿಣ ಅಮೆರಿಕದ ಚಿಲಿಯಲ್ಲಿ ಇದೇ ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕ ಸಾರಿಗೆ ದರ ಹೆಚ್ಚಳದ ವಿರುದ್ಧ ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಯು ಕೆಲವೇ ದಿನಗಳಲ್ಲಿ ಆಂದೋಲನವಾಗಿ, ನವ ಉದಾರವಾದಿ ದಬ್ಬಾಳಿಕೆ ಮತ್ತು ಪ್ರತಿಗಾಮಿ ಸಂವಿಧಾನವನ್ನೇ ಕಿತ್ತೆಸೆಯುವ ಹಂತಕ್ಕೆ ಬೆಳೆದುಬಿಟ್ಟಿದೆ. ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ನಡೆಯುತ್ತಿರುವ ವಿವಿಧ ಆಂದೋಲನಗಳು ನಮಗೆ ಭಾರತೀಯರಿಗೆ ಪಾಠವಾಗಬೇಕಾಗಿರುವ ಹೊತ್ತಲ್ಲಿ ಚಿಲಿಯಲ್ಲಿ ನಡೆಯುತ್ತಿರುವ ಈ ಆಂದೋಲನದ ಹಿನ್ನೆಲೆ ಕುರಿತು ಸ್ವಲ್ಪ ತಿಳಿಯೋಣ.
***
ಆಕ್ಟೋಬರ್ 2019ರಿಂದ ಚಿಲಿಯಲ್ಲಿ ಒಂದು ಭಾರೀ ಆಂದೋಲನ ನಡೆಯುತ್ತಿದೆ. ಸುಮಾರು 40 ಲಕ್ಷ ಜನರು ಅದರಲ್ಲಿ ಭಾಗವಹಿಸಿ, ದೇಶದ ನವ ಉದಾರೀಕರಣದ ಹಿನ್ನೆಲೆಯಿಂದ ಹೊರಬರಲು ಹೋರಾಡುತ್ತಿದ್ದಾರೆ. ಈ ಪ್ರತಿಭಟನೆಯು ಸಾರ್ವಜನಿಕ ಸಾರಿಗೆ ದರ ಹೆಚ್ಚಳದ ವಿರುದ್ಧ ಸಂಘಟಿತ ಶಾಲಾ ವಿದ್ಯಾರ್ಥಿಗಳ ಗುಂಪೊಂದರ ಪ್ರತಿಭಟನೆಯು ಜನಾಂದೋಲನವಾಗಿ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಚಿಲಿಯ ದಮನಕಾರಿ ಸಂವಿಧಾನದ ಪತನದ ತನಕ ಬೆಳೆದುನಿಂತಿದೆ.

ಒಂದು ಕಲ್ಯಾಣ ರಾಜ್ಯ (Welfare State) ಆಗಿದ್ದ ಚಿಲಿ ಮಿಲಿಟರಿ ಸರ್ವಾಧಿಕಾರವಾಗಿ ಬದಲಾದ ದೇಶ. 1930ರಲ್ಲಿ ದೇಶದಲ್ಲಿ ಕ್ರಾಂತಿ ಭುಗಿಲೇಳುವ ಭಯದಿಂದ ಪ್ರತಿಷ್ಟಿತ ಆಳುವ ವರ್ಗವು ಆಧುನಿಕ ಕಲ್ಯಾಣ ರಾಜ್ಯ ಮಾದರಿಯ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಆರಂಭಿಸಿತು. ಚಿಲಿಯ ಸರಕಾರ ಒಂದು ಆಧುನಿಕ ಪ್ರಜಾಪ್ರಭುತ್ವವಾಯಿತು. ಆ ಹೊತ್ತಿಗೆ ಚಿಲಿಯಲ್ಲಿ ಸಮಾಜವಾದ ಜನಪ್ರಿಯಗೊಳ್ಳಲು ಆರಂಭವಾಯಿತು.

ಕ್ಯೂಬಾದ ಕ್ರಾಂತಿಯ ಬಳಿಕ ಪಶ್ಚಿಮ ಗೋಳದಲ್ಲಿ ಒಂದು ಸೋವಿಯತ್ ಒಕ್ಕೂಟದ ಮಿತ್ರ ರಾಷ್ಟ್ರ ಸ್ಥಾಪನೆಯಾಯಿತು. ಲ್ಯಾಟಿನ್ ಅಮೆರಿಕದ ಇನ್ನಷ್ಟು ದೇಶಗಳು ಅತ್ತ ವಾಲುವವು ಎಂದು ಯುಎಸ್‌ಎ ಆತಂಕಗೊಂಡಿತು. ಪರಿಣಾಮವಾಗಿ, 1960ರ ದಶಕದಲ್ಲಿ ಅನೇಕ ಪ್ರಜಾಪ್ರಭುತ್ವ ದೇಶಗಳಲ್ಲಿ ಮಿಲಿಟರಿ ಆಡಳಿತಗಳ ಸ್ಥಾಪನೆಯಾಯಿತು. ಇವೆಲ್ಲವೂ ನಡೆದುದು ‘ಮಹಾನ್ ಪ್ರಜಾಪ್ರಭುತ್ವ’ ಎಂದು ಕರೆದುಕೊಳ್ಳುವ ಯುಎಸ್‌ಎ ಪಿತೂರಿ ಮತ್ತು ಬೆಂಬಲದಿಂದ.

ಇದ‍ನ್ನೂ ಓದಿ: ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಚಿಲಿಯಲ್ಲಿ ಸಮಾಜವಾದ ವಿರೋಧಿ ಅಭ್ಯರ್ಥಿಗಳಿಗೆ ಯುಎಸ್‌ಎ ಸರಕಾರ ಬೆಂಬಲ ನೀಡಿತು. ಸಮಾಜವಾದಿಗಳು ಒಂದು ಭಾರಿ ಅಪಪ್ರಚಾರ ಅಭಿಯಾನದ ವಿರುದ್ಧ ಕಾದಾಡಬೇಕಾಯಿತು. ಕೊನೆಗೂ 1970ರಲ್ಲಿ, ಹಲವು ವಿಫಲ ಯತ್ನಗಳ ನಂತರ, ಚಿಲಿಯನ್ ಸೋಷಿಯಲಿಸ್ಟ್ ಪಾರ್ಟಿಯ ಸಾಲ್ವದೊರ್ ಗಿಲೆರ್ಮೊ ಅಲ್ಲಂದೆ ಗೊಸೆನ್ಸ್ ಚಿಲಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆಯ್ಕೆಯಾದ ತಕ್ಷಣ ಅಲ್ಲಂದೆ, ಕನಿಷ್ಟ ವೇತನವನ್ನು ಹೆಚ್ಚಿಸಿದರು, ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಹೆಚ್ಚಿಸಿದರು. ಆರೋಗ್ಯ ಮತ್ತು ಶಿಕ್ಷಣದ ಮೇಲಿನ ವೆಚ್ಚವನ್ನು ಹೆಚ್ಚಿಸಿದರು. ಇದು ಯುಎಸ್‌ಎ ಬಂಡವಾಳಿಗರ, ಆ ಮೂಲಕ ಅಲ್ಲಿನ ಸರಕಾರದ ಕೆಂಗಣ್ಣಿಗೆ ಗುರಿಯಾಯಿತು. ಅಲ್ಲಂದೆ ಜೀವವೇ ಅಪಾಯಕ್ಕೆ ಸಿಲುಕಿತು.

ಮರೆಯಾದ ನಾಯಕರು

ಅಲ್ಲಂದೆಯವರು ಚಿಲಿಯ ಗಣಿಗಾರಿಕೆ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿದಾಗ, ಆ ತನಕ ಚಿಲಿಯಲ್ಲಿ ಹೇರಳವಾಗಿ ದೊರೆಯುವ ತಾಮ್ರವನ್ನು ದೋಚುತ್ತಿದ್ದ ಯುಎಸ್‌ಎಯ ಕಂಪನಿಗಳು ನಷ್ಟ ಅನುಭವಿಸಿದವು. ಅಲ್ಲಂದೆ, ಶಾಂತಿಯುತ ಸಂಸದೀಯ ಹಾದಿಯ ಮೂಲಕ ಸಮಾಜವಾದದ ಸ್ಥಾಪನೆಯನ್ನು ಪ್ರತಿಪಾದಿಸುತ್ತಿದ್ದರು. ಆ ಕಾಲದಲ್ಲಿ ಸಮಾಜವಾದವನ್ನು ಹಿಂಸಾಚಾರದೊಂದಿಗೆ ತಳಕುಹಾಕಿ ಅಪಪ್ರಚಾರ ಮಾಡಲಾಗುತ್ತಿತ್ತು.

ಸಾಲ್ವದರ್ ಅಲ್ಲಂದೆ

ಇದ‍ನ್ನೂ ಓದಿ: ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಕಚೇರಿಯ ಮೇಲೆ ಸಿಬಿಐ ದಾಳಿ

ಈ ಶಾಂತಿಯುತ ಸಮಾಜವಾದದ ಪರಿಕಲ್ಪನೆ ಉಳಿದ ದೇಶಗಳಿಗೂ ಮಾದರಿಯಾಗಿ, ತನ್ನ ಬಂಡವಾಳಕ್ಕೆ ಕುತ್ತು ತರಲಿದೆ ಎಂದು ಭಯಗೊಂಡ ಯುಎಸ್ಎ, ನೇರವಾಗಿ ಚಿಲಿಯ ವ್ಯವಹಾರಗಳಲ್ಲಿ ತಲೆಹಾಕಿತು. ಮುಂದಿನ ಚುನಾವಣೆ ನಡೆಯುವುದಕ್ಕೆ ಬಹಳ ಮುಂಚೆಯೇ ಅಲ್ಲಂದೆ ವಿರೋಧಿ ಅಪಪ್ರಚಾರ ಆರಂಭಿಸಿತು. ಇದು ಚಿಲಿಯಲ್ಲಿ ಧ್ರುವೀಕರಣಕ್ಕೆ ಕಾರಣವಾಯಿತು. ಯುಎಸ್ಎ, ಚಿಲಿಯಲ್ಲಿ ಹಣದುಬ್ಬರ ಹೆಚ್ಚಿಸುವಂತಹ ಆರ್ಥಿಕ ತಂತ್ರಗಳ ಸರಣಿಯನ್ನೇ ಆರಂಭಿಸಿತು.ಅಲ್ಲಂದೆಯವರು ಕನಿಷ್ಟ ವೇತನವನ್ನು ಹೆಚ್ಚಿಸಿದ್ದರೂ, ಸರಾಸರಿ ವೇತನದಲ್ಲಿ ಇಳಿಕೆಯಾಯಿತು.

1973ರಲ್ಲಿ ಸೇನಾನಾಯಕರ ಕೂಟವೊಂದು ಸೇನಾಕ್ರಾಂತಿ ನಡೆಸಿತು. ಅದರ ನಾಯಕ, ಮುಂದೆ ಮರಿಹಿಟ್ಲರ್ ಅನಿಸಿಕೊಂಡ ಅಗಸ್ತೋ ಪಿನೋಷೆ ಅಧಿಕಾರಕ್ಕೆ ಬಂದ. ಅವನೊಂದಿಗೆ ಸಂಧಾನ ನಡೆಸಲು ಒಪ್ಪದ ಅಲ್ಲಂದೆ ಆತ್ಮಹತ್ಯೆ ಮಾಡಿಕೊಂಡರು. ಇದೊಂದು ಸಿಐಎ ಯೋಚಿತ ಹತ್ಯೆ ಎಂದೂ ಹೇಳಲಾಗುತ್ತದೆ. ಈ ಕ್ರಾಂತಿಯಲ್ಲಿ ಯುಎಸ್ಎಯ ನೇರ ಪಾತ್ರ ಇದೆಯೆಂದು ಸಾಬೀತಾಗಿಲ್ಲವಾದರೂ, ಅದರ ಬೆಂಬಲ ಇಲ್ಲದೇ, ಮಿಲಿಟರಿ ನಾಯಕತ್ವವು ಉಳಿಯುವ ಸಾಧ್ಯತೆ ಇರಲಿಲ್ಲ. ಇದಕ್ಕೆ ಸಾಕ್ಷ್ಯ ಹೇಳುವಂತೆ ಪಿನೋಷೆ ಮುಂದೆ ಕೈಗೊಂಡ ಕ್ರಮಗಳು ಯುಎಸ್‌ಎಗೆ ಅನುಕೂಲಕರವಾಗಿದ್ದವು.

ಪಿನೋಷೆ

ಆತ ತ್ವರಿತವಾಗಿ ಅಲ್ಲಂದೆಯವರ  ಸುಧಾರಣೆಗಳನ್ನು ಬದಿಗೆ ಸರಿಸಿ, ಚಿಲಿಯನ್ನು ಒಂದು ಅನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯತ್ತ ನೂಕಿದ. ರಾಷ್ಟ್ರೀಕೃತ ಕೈಗಾರಿಕೆಗಳನ್ನು ಭಾರತದಲ್ಲಿ ಈಗ ನಡೆಯುತ್ತಿರುವಂತೆ ಖಾಸಗೀಕರಣಗೊಳಿಸಿದ. ಕಾರ್ಮಿಕ ಸಂಘಟನೆಗಳನ್ನು, ವಿದ್ಯಾರ್ಥಿಗಳನ್ನು ಚಿತ್ರಹಿಂಸೆ, ಸಾಮೂಹಿಕ ಹತ್ಯಾಕಾಂಡಗಳ ಮೂಲಕ ಹಿಂಸಾತ್ಮಕವಾಗಿ ದಮನಿಸಲಾಯಿತು. ಆತನ ಅತ್ಯಂತ ದೊಡ್ಡ ಫ್ಯಾಸಿಸ್ಟ್ ಕೃತ್ಯ ಎಂದರೆ, ಚಿಲಿಯ ರಾಜಧಾನಿ ಸಾಂತಿಯಾಗೊ ದಿ ಚಿಲಿಯ ‘ಎಸ್ಟೇಡಿಯೋ ನ್ಯಾಸಿಯೋನಲ್’ -ನ್ಯಾಷನಲ್ ಸ್ಟೇಡಿಯಂ-ರಾಷ್ಟ್ರೀಯ ಕ್ರೀಡಾಂಗಣವನ್ನು ಜೈಲು ಶಿಬಿರವನ್ನಾಗಿ ಪರಿವರ್ತಿಸಿದುದು. ಇಲ್ಲಿ ಸಾವಿರಾರು ಅಲ್ಲಂದೆ ಬೆಂಬಲಿಗರನ್ನು ಸರಪಳಿ ತೊಡಿಸಿ ಇರಿಸಲಾಯಿತು. ಅವರಿಗೆ ಚಿತ್ರಹಿಂಸೆ ನೀಡಲಾಯಿತು  ಮತ್ತು ಹತ್ಯೆ ಮಾಡಲಾಯಿತು.

 

ಯುಎಸ್ಎ ಅಂತರರಾಷ್ಟ್ರೀಯವಾಗಿ ಬಾಯ್ಮಾತಿನಲ್ಲಿ ಈ ಆಡಳಿತವನ್ನು ಟೀಕಿಸಿತಾದರೂ ಆರ್ಥಿಕ ಬದಲಾವಣೆಗಳನ್ನು ಬೆಂಬಲಿಸಿ ಖಾಗೀಕರಣದ ದುಷ್ಪರಿಣಾಮಗಳು ತಟ್ಟದಂತೆ ನೋಡಿಕೊಂಡಿತು. ಚಿಲಿಯು ಇದರಿಂದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಯಿತು. ವೇತನಗಳು ಕಡಿಮೆಯಾದರೂ, ಸ್ಥಿರಗೊಂಡವು. ಆದರೆ, ಗ್ರಾಮೀಣ ಪ್ರದೇಶಗಳ ಸಂಕಷ್ಟ ಮುಂದುವರಿದು, ಅವುಗಳ ಅಭಿವೃದ್ಧಿ ಕುಂಠಿತವಾಯಿತು. ಅಸಮಾನತೆ ಹೆಚ್ಚಿತು. ಇದೆಲ್ಲ ಸಾಧ್ಯವಾದುದು ಹೇಗೆಂದರೆ, ಯುಎಸ್ಎ ನಿಯಂತ್ರಿತ ವಿಶ್ವಬ್ಯಾಂಕ್ ಸಾಲದ ಮೂಲಕ! ಇದು ಸಾಲ ಮಾಡಿ ತುಪ್ಪ ತಿಂದಂತಾಯಿತು. ಈ ಸಾಲದ ಪ್ರಮಾಣ ಬಿಕ್ಕಟ್ಟಿನ ಹಂತಕ್ಕೆ ತಲಪಿ ಪಿನೋಷೆಯ ಪತನಕ್ಕೆ ಕಾರಣವಾಯಿತು. 1980ರಲ್ಲಿ ಆತ ಕೆಳಗಿಳಿದು ಒಂದು ಸಮ್ಮಿಶ್ರ ಸರಕಾರ ಸ್ಥಾಪನೆಯಾಯಿತು. ಆಗ ದೇಶದ ಮುಂದಿನ ಸಂವಿಧಾನ ಎನಿಸಿದ ಒಂದು ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲಾಯಿತು.

ಹೊಸ ಸಂವಿಧಾನವನ್ನು ರೂಪಿಸಿದವರು ಪಿನೋಷೆಯ ಬೆಂಬಲಿಗರೇ ಆಗಿದ್ದರು. ಅದು ಮಿಲಿಟರಿಗೆ ಬಹಳಷ್ಟು ಅಧಿಕಾರವನ್ನು ಕೊಟ್ಟಿತ್ತು. ಸಂಘಟನೆಯನ್ನು ದೇಶಕ್ಕೆ ಬೆದರಿಕೆ ಎಂದು ಪರಿಗಣಿಸಿತ್ತು. ಚುನಾಯಿತ ಸದನಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿತ್ತು. ಆದರೂ, ಈ ಸಂವಿಧಾನವನ್ನು ಸೇನಾ ಉಸ್ತುವಾರಿಯಲ್ಲಿ  (ಬೆದರಿಕೆ, ಹಸ್ತಕ್ಷೇಪದಲ್ಲಿ) ನಡೆದ ಜನಮತಗಣನೆಯಲ್ಲಿ ಅಂಗೀಕರಿಸುವಂತೆ ಮಾಡಲಾಯಿತು. ಪರಿಣಾಮವಾಗಿ, ಪಿನೋಷೆ ಮತ್ತೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದಂತೆ, ಚಿಲಿಯು ಎಡ-ಮಧ್ಯ ರಾಜಕೀಯ ಗುಂಪುಗಳಲ್ಲಿ ಸಂಘಟಿತವಾಯಿತು. ಈ ಗುಂಪುಗಳು ಜನಮತಗಣನೆಯನ್ನು ವಿರೋಧಿಸುತ್ತಾ, ‘ಕಂಸೆರ್ಟೇಸಿಯೋನ್ ಪೊರ್ ಎಲ್ ನೋ”- ಕ್ಯಾಂಪೇನ್ ಫಾರ್ ನೋ- ‘ಬೇಡ’ ಅಭಿಯಾನದ ಹೆಸರಿನಲ್ಲಿ ಅಧಿಕಾರದಲ್ಲಿ ಪಾಲುದಾರರಾದವು.

1989ರಲ್ಲಿ ಈ ಕೂಟ ಪಿನೋಷೆಯನ್ನು ಸೋಲಿಸಿತು. 2010ರ ತನಕ ಪ್ರಬಲ ಶಕ್ತಿಯಾಗಿ ಉಳಿಯಿತು. ಆದು ಸಂವಿಧಾನದಲ್ಲಿ ಹಲವು ತಿದ್ದುಪಡಿಗಳನ್ನು ತಂದರೂ, ಹಿಂದಿನ ನವ ಉದಾರವಾದಿ/ಮಿಲಿಟರಿ ಚೌಕಟ್ಟು ಹಾಗೆಯೇ ಉಳಿಯಿತು. ಇದು ತೀವ್ರವಾದ ಅಸಮಾನತೆಗೆ ಕಾರಣವಾಗಿ, ಜನರು ನಿತ್ಯ ಜೀವನಕ್ಕೆ ಪರದಾಡುವಂತಾಯಿತು. ಆಹಾರ, ಇಂಧನ, ಶಿಕ್ಷಣ, ಆರೋಗ್ಯ, ಸಾರಿಗೆ ವೆಚ್ಚಗಳ ಏರಿಕೆಗಳಿಗೆ ಕಾರಣವಾಗಿ, ಜನರು ಇಂತಹಾ ಸ್ಥಿತಿಯಲ್ಲಿಯೇ ಎರಡು ದಶಕಗಳಿಂದ ನರಳಿದ್ದಾರೆ. ಇದೀಗ ಜನರಿಗೆ ಇವುಗಳೇ ಮುಖ್ಯ ಪ್ರಶ್ನೆಗಳಾಗಿವೆ. ಆದುದರಿಂದಲೇ, ಶಾಲಾ ವಿದ್ಯಾರ್ಥಿಗಳು ಆರಂಭಿಸಿದ ಈ ಹೋರಾಟ ಅಭಿಯಾನವಾಗಿ ದಮನಕಾರಿ ಸಂವಿಧಾನ ಕಸದ ಬುಟ್ಟಿ ಸೇರುವ ಹಂತದಲ್ಲಿದೆ.

ಇಲ್ಲಿನ ಹಿಂದಿನ ವಿದ್ಯಮಾನಗಳತ್ತವೇ ಭಾರತವೂ ಈಗ ಸಾಗುತ್ತಿದೆ. ಆದರೆ, ಅವರಿಗೆ ಮುಖ್ಯವಾದ ಜೀವನದ ಪ್ರಶ್ನೆಗಳು ನಮಗೆ ಮುಖ್ಯ ಪ್ರಶ್ನೆಗಳಾಗುವುದು ಯಾವಾಗ? ನಾವು ಜಾತಿ ಗಲಾಟೆ, ಕೋಮುವಾದ, ಪಾಕಿಸ್ತಾನದ ಬೆದರಿಕೆ, ವ್ಯಕ್ತಿಪೂಜೆ ಇತ್ಯಾದಿ ಕ್ಷುಲ್ಲಕ ವಿಷಯಗಳಿಂದ ಹೊರಬರುವುದು ಯಾವಾಗ? ನಾವು ಚಿಲಿ ಸೇರಿದಂತೆ ಇತರ ಲ್ಯಾಟಿನ್ ಅಮೆರಿಕಾ ದೇಶಗಳ ಪರಿಸ್ಥಿತಿಯನ್ನೂ, ಅವುಗಳಲ್ಲಿ ನಡೆಯುತ್ತಿರುವ ಹೋರಾಟಗಳನ್ನೂ ಹತ್ತಿರದಿಂದ ಗಮನಿಸಿ, ನಮ್ಮ ಹಾದಿಯನ್ನು ಕಂಡುಕೊಳ್ಳುವ ಅಗತ್ಯವಿದೆ.

-ನಿಖಿಲ್ ಕೋಲ್ಪೆ

(ಅತಿಥಿ ಲೇಖಕರ ಬರಹಗಳಲ್ಲಿನ ಅಭಿಪ್ರಾಯಗಳು ಅವರ ಸ್ವಂತದ್ದೇ ಹೊರತು, ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅನಿಸಿಕೆಗಳಾಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...