ಅಸ್ಸಾಂ ಕ್ಯಾಬಿನೆಟ್ ‘ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯಿದೆ-1935’ನ್ನು ರದ್ದುಗೊಳಿಸಲು ಅನುಮೋದನೆ ನೀಡಿದೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದು, ಅಸ್ಸಾಂ ಬಿಜೆಪಿ ಸರಕಾರದ ಮುಸ್ಲಿಂ ವಿರೋಧಿ ನಿಲುವುಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ‘ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯಿದೆ-1935’ನ್ನು ರದ್ದುಗೊಳಿಸುವ ಕ್ರಮವು ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಅಸ್ಸಾಂ ಕ್ಯಾಬಿನೆಟ್ ‘ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯಿದೆ’ಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಾಯಿದೆಯು ವಧು ಮತ್ತು ವರನ ಕಾನೂನುಬದ್ಧ ವಯಸ್ಸನ್ನು 18 ಮತ್ತು 21 ಆಗದಿದ್ದರೂ ವಿವಾಹ ನೋಂದಣಿಯನ್ನು ಅನುಮತಿಸುವ ನಿಬಂಧನೆಗಳನ್ನು ಒಳಗೊಂಡಿತ್ತು. ಇದೀಗ ಬಾಲ್ಯವಿವಾಹಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದೆ ಎಂದು ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ ಕ್ರಮವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ದೃಷ್ಟಿಯಲ್ಲಿ ತೆಗೆದುಕೊಂಡ ಒಂದು ಹೆಜ್ಜೆಯಾಗಿದೆ ಎಂದು ಅಸ್ಸಾಂ ಸಚಿವ ಜಯಂತ ಮಲ್ಲ ಬರುವಾ ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ. ಕಾನೂನು ಪ್ರಸ್ತುತ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ಸ್ವಯಂಪ್ರೇರಿತ ನೋಂದಣಿಯ ಅವಕಾಶವನ್ನು ಒದಗಿಸುತ್ತದೆ. ಕಾನೂನನ್ನು ರದ್ದುಗೊಳಿಸಿದ ನಂತರ ಮುಸ್ಲಿಮರು ಮದುವೆ ಮತ್ತು ವಿಚ್ಛೇದನವನ್ನು ಸುಲಭವಾಗಿ ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಕಾನೂನನ್ನು ರದ್ದುಗೊಳಿಸಿದ ನಂತರ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಿಜಿಸ್ಟ್ರಾರ್ಗಳ ವ್ಯಾಪ್ತಿಗೆ ಇದು ಬರಲಿದೆ ಎಂದು ಹೇಳಲಾಗಿದೆ. ಎಲ್ಲಾ ವಿವಾಹಗಳನ್ನು ‘ವಿಶೇಷ ವಿವಾಹ ಕಾಯ್ದೆಯಡಿ’ ನೋಂದಾಯಿಸಬೇಕೆಂದು ಅಸ್ಸಾಂ ಸರ್ಕಾರ ಬಯಸುತ್ತದೆ ಎಂದು ಅಸ್ಸಾಂ ಸಚಿವ ಜಯಂತ ಬರುವಾ ಹೇಳಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಮುಖ್ಯಮಂತ್ರಿಯಾದಾಗಿನಿಂದ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಅಸ್ಸಾಂನ ಜನರಿಗೆ ಅವರ ಪ್ರಮುಖ ಭರವಸೆಯಾಗಿತ್ತು. ಇದಲ್ಲದೆ ಈ ತಿಂಗಳ ಆರಂಭದಲ್ಲಿ, ರಾಜ್ಯದಲ್ಲಿ ಬಹುಪತ್ನಿತ್ವವನ್ನು ಸರ್ಕಾರ ನಿಷೇಧಿಸುತ್ತದೆ ಎಂದು ಅಸ್ಸಾಂ ಸರಕಾರದ ಮೂಲಗಳು ಹೇಳಿವೆ. ಉತ್ತರಾಖಂಡ ಮತ್ತು ಗುಜರಾತ್ ನಂತರ ಅಸ್ಸಾಂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮೂರನೇ ರಾಜ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಉತ್ತರಾಖಂಡ ಸರ್ಕಾರವು ಈ ತಿಂಗಳ ಆರಂಭದಲ್ಲಿ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಮಸೂದೆಯನ್ನು ಅಂಗೀಕರಿಸಿದೆ. ಮಸೂದೆಯು ಮದುವೆಗಳು, ವಿಚ್ಛೇದನಗಳು ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸುವ ಹಲವಾರು ಧಾರ್ಮಿಕ ವೈಯಕ್ತಿಕ ಕಾನೂನುಗಳನ್ನು ಸಾಮಾನ್ಯ ನಿಯಮಗಳೊಂದಿಗೆ ಬದಲಾಯಿಸುತ್ತದೆ ಇದು ಎಲ್ಲಾ ಧರ್ಮಗಳ ಜನರಿಗೆ ಸಮಾನವಾಗಿ ಅನ್ವಯಿಸುತ್ತದೆ. ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮ ಜಾರಿಗೆ ತರುವುದು. ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ.
ಏಕರೂಪ ಎನ್ನುವುದು ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ಆಧಾರದ ಮೇಲೆ ಭಾರತೀಯ ಗಣರಾಜ್ಯವನ್ನು ಬಲಪಡಿಸುವ ಸಾಂವಿಧಾನಿಕ ಬದ್ಧತೆಯನ್ನು ಸೋಲಿಸುತ್ತದೆ.
ಇದನ್ನು ಓದಿ: ರೈತರ ‘ದೆಹಲಿ ಚಲೋ’ ದೇಶದಾದ್ಯಂತ ವಿಸ್ತರಣೆ? ಟ್ರಾಕ್ಟರ್ ಮೆರವಣಿಗೆ ಘೋಷಣೆ!