ಪಂಜಾಬ್ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯ ಭದ್ರತಾ ಲೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಈ ಮಧ್ಯೆ, ಘಟನೆಯ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ಸಮಿತಿಗಳನ್ನು ತಡೆಹಿಡಿಯುವಂತೆ ಒಕ್ಕೂಟ ಮತ್ತು ಪಂಜಾಬ್ ಸರ್ಕಾರಗಳೆರಡಕ್ಕೂ ಕೇಳಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಪ್ರಕರಣದ ಬಗ್ಗೆ ಲಾಯರ್ಸ್ ವಾಯ್ಸ್ ಎಂಬ ಸಂಸ್ಥೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ:ಪಂಜಾಬ್ ಭದ್ರತಾ ಲೋಪ ಆರೋಪ: 100 ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ಎಫ್ಐಆರ್
ಶುಕ್ರವಾರದಂದು ಸರ್ವೋಚ್ಚ ನ್ಯಾಯಾಲಯವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಪ್ರಧಾನಮಂತ್ರಿಯ ಪಂಜಾಬ್ ಭೇಟಿಯಲ್ಲಿ “ಬೃಹತ್ ಭದ್ರತಾ ಲೋಪ” ಉಂಟಾದಾಗ ಮಾಡಿದ ವ್ಯವಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು “ಭದ್ರಪಡಿಸಿ ಮತ್ತು ಸಂರಕ್ಷಿಸಲು” ನಿರ್ದೇಶಿಸಿತ್ತು.
ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಪ್ರತ್ಯೇಕವಾಗಿ ರಚಿಸಿರುವ ತನಿಖಾ ಸಮಿತಿಗಳನ್ನು ತಡೆದಿಟ್ಟು, ಜನವರಿ 10 ರವರೆಗೆ ಈ ವಿಷಯವನ್ನು ನ್ಯಾಯಾಲಯವು ಮತ್ತೆ ಕೈಗೆತ್ತಿಕೊಳ್ಳುವವರೆಗೆ ತಮ್ಮ ವಿಚಾರಣೆಯನ್ನು ಮುಂದುವರಿಸಬಾರದು ಎಂದು ಅದು ಹೇಳಿದೆ. ಆದರೆ ನ್ಯಾಯಪೀಠವು ಇದನ್ನು ಆದೇಶದ ಭಾಗವಾಗಿ ನಿರ್ದೇಶಿಸದೆ, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸುವಂತೆ ವಕೀಲರನ್ನು ಕೇಳಿಕೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ವಿವರವಾದ ಆದೇಶಗಳನ್ನು ನೀಡಲಿದೆ.
ಸಿಜೆಐ ಎನ್ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ಒಕ್ಕೂಟ ಸರ್ಕಾರವನ್ನು ಸುಪ್ರೀಂಕೊರ್ಟ್ ತರಾಟೆಗೂ ತೆಗೆದುಕೊಂಡಿದೆ.
ಇದನ್ನೂ ಓದಿ:ಪಂಜಾಬ್ ಭದ್ರತಾ ಲೋಪ ಆರೋಪ: ಹೊಸ ವಿಡಿಯೊ ವೈರಲ್ ನೊಂದಿಗೆ ಮತ್ತಷ್ಟು ಪ್ರಶ್ನೆಗಳು
ಒಕ್ಕೂಟ ಸರ್ಕಾರದ ಪರವಾಗಿ ಹಾಜರಾದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, “ಪಂಜಾಬ್ ಪೊಲೀಸರಿಂದ ಯಾವುದೇ ಗುಪ್ತಚರ ಮಾಹಿತಿ ಇರಲಿಲ್ಲ. ಈ ಮಾಹಿತಿ ನೀಡುವುದು ಅವರ ಜವಾಬ್ದಾರಿಯಾಗಿದೆ. ಮಾರ್ಗದಲ್ಲಿ ಪ್ರತಿಭಟನಾಕಾರರ ಗುಂಪು ಗುಂಪು ಸೇರಿದೆ ಎಂದು ಬೆಂಗಾವಲು ಪಡೆಗೆ ಯಾವುದೇ ಸೂಚನೆ ನೀಡಿಲ್ಲ, ಸಂಪೂರ್ಣ ಗುಪ್ತಚರ ವೈಫಲ್ಯ ಕಂಡುಬಂದಿದೆ. ಪಂಜಾಬ್ ಪೊಲೀಸ್ ಡಿಜಿ ಅವರು ಪ್ರಧಾನಿ ಬೆಂಗಾವಲು ಪಡೆಗೆ ಸ್ಪಷ್ಟ ಸಂವಹನವನ್ನು ನೀಡಬೇಕಿತ್ತು.
ಇದು ಎಸ್ಪಿಜಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಕ್ಕೆಲ್ಲಾ ಪೊಲೀಸ್ ಅಧಿಕಾರಿಗಳೇ ಹೊಣೆ. ಆದರೆ ರಾಜ್ಯ ಸರ್ಕಾರ ಅವರನ್ನು ರಕ್ಷಿಸುತ್ತಿದೆ ಎಂಬುದು ತುಂಬಾ ಗಂಭೀರ ವಿಚಾರವಾಗಿದೆ. ಕೇಂದ್ರ ಸಮಿತಿ ರಚಿಸಬೇಕಿತ್ತು” ಎಂದು ಹೇಳಿದ್ದಾರೆ.
ತುಷಾರ್ ಮೆಹ್ತಾ ಅವರಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ, “ನೀವು ಈಗಾಗಲೇ ಶೋಕಾಸ್ ನೋಟಿಸ್ಗಳಲ್ಲಿ ಎಲ್ಲವನ್ನೂ ಊಹಿಸಿದರೆ ನ್ಯಾಯಾಲಯಕ್ಕೆ ಬರುವುದರಲ್ಲಿ ಏನು ಪ್ರಯೋಜನ?” ಎಂದು ಕೇಳಿದ್ದಾರೆ.
ಇದನ್ನೂ ಓದಿ:ಭದ್ರತಾ ಲೋಪ: ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್, ಪಂಜಾಬ್ ಸರ್ಕಾರದಿಂದ ತನಿಖಾ ತಂಡ…10 ಪಾಯಿಂಟ್ಸ್
“ನಿಮ್ಮ ಶೋಕಾಸ್ ನೋಟಿಸ್ ಸಂಪೂರ್ಣವಾಗಿ ಸ್ವಯಂ ವ್ಯತಿರಿಕ್ತವಾಗಿದೆ. ನೀವು ಎಸ್ಪಿಜಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ವಿಚಾರಣೆ ಮಾಡಲು ಸಮಿತಿಯನ್ನು ರಚಿಸುತ್ತೀರಿ. ಇದರ ನಂತರ ನೀವು ರಾಜ್ಯದ ಮುಖ್ಯ ಕಾರ್ಯದರ್ಶಿ(ಸಿಎಸ್) ಮತ್ತು ಪೊಲೀಸ್ ಮಹಾನಿರ್ದೇಶಕ(ಡಿಜಿ)ರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತೀರಿ. ಅವರನ್ನು ಅಪರಾಧಿ ಎಂದು ಪರಿಗಣಿಸಿದವರು ಯಾರು? ಅವರನ್ನು ಯಾರು ಪ್ರಶ್ನಿಸಿದ್ದಾರೆ?” ಎಂದು ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಸೂರ್ಯ ಕಾಂತ್ ಕೇಳಿದ್ದಾರೆ.
“ಡಿಜಿ ಮತ್ತು ಸಿಎಸ್ ನಮ್ಮ ಮುಂದೆ ಬಂದಿದ್ದಾರೆ. ಲೋಪಕ್ಕೆ ಯಾರು ಹೊಣೆ ಎಂದು ನಾವು ತಿಳಿದುಕೊಳ್ಳುತ್ತೇವೆ. ರಾಜ್ಯ ಸರ್ಕಾರ ಮತ್ತು ಅರ್ಜಿದಾರರು ನ್ಯಾಯಯುತ ವಿಚಾರಣೆಯನ್ನು ಬಯಸುತ್ತಾರೆ. ನೀವು ಕೂಡಾ ನ್ಯಾಯಯುತ ವಿಚಾರಣೆಯನ್ನು ವಿರೋಧಿಸಲು ಸಾಧ್ಯವಿಲ್ಲ. ಹಾಗಾದರೆ ನಿಮ್ಮಿಂದ ಈ ಆಡಳಿತಾತ್ಮಕ ಮತ್ತು ಸತ್ಯಶೋಧನೆಯ ವಿಚಾರಣೆ ಏಕೆ?” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಸಿದ ತುಷಾರ್ ಮೆಹ್ತಾ, “ಶೋಕಾಸ್ ನೋಟಿಸ್ಗಳ ಅಡಿಪಾಯವು ಬ್ಲೂಬುಕ್ ಆಗಿದ್ದು, ಭದ್ರತೆಯ ಜವಾಬ್ದಾರಿ ಪೊಲೀಸ್ ಅಧಿಕಾರಿಗಳದ್ದಾಗಿದೆ ಎಂದು ಹೇಳುತ್ತದೆ. ರಸ್ತೆ ದಿಗ್ಬಂಧನದ ಬಗ್ಗೆ ಯಾವುದೇ ಪೂರ್ವ ಎಚ್ಚರಿಕೆ ಇರಲಿಲ್ಲ… ಡಿಜಿ ನಿಯಮಗಳನ್ನು ಅನುಸರಿಸಬೇಕಿತ್ತು. ನಿಯಮಗಳ ಬಗ್ಗೆ ಯಾವುದೇ ವಿವಾದವಿಲ್ಲ” ಎಂದು ಹೇಳಿದ್ದಾರೆ.
ಇದಕ್ಕೆ ಮತ್ತೇ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, “ಭದ್ರತಾ ಉಲ್ಲಂಘನೆಯಾಗಿದೆ ಮತ್ತು ಅದು ಗಂಭೀರ ವಿಷಯವಾಗಿದೆ. ಆದರೆ ಯಾರು ಹೊಣೆಗಾರರಾಗಿದ್ದರು ಎಂದು ಉಳಿದ ಸತ್ಯಾಂಶಗಳ ಬಗ್ಗೆ ಪರಿಶೀಲಿಸಬೇಕಾಗಿದೆ” ಎಂದು ಹೇಳಿದ್ದಾರೆ.
“ನೀವು ನಮ್ಮ ಆದೇಶಕ್ಕಿಂಲೂ ಮುಂಚೆ ನೋಟಿಸ್ ನೀಡಿದ್ದೀರಿ, ಇದರ ನಂತರ ನಾವು ನಮ್ಮ ಆದೇಶವನ್ನು ನೀಡಿದ್ದೇವೆ. ನೀವು ಅವರನ್ನು 24 ಗಂಟೆಗಳಲ್ಲಿ ಉತ್ತರಿಸಲು ಕೇಳುತ್ತಿರುವುದು ಸ್ವಲ್ಪ ಕಠಿಣವಾಗಿರಬಹುದು..” ಎಂದು ನ್ಯಾಯಮೂರ್ತಿ ಕೋಹ್ಲಿ ಅವರು ಹೇಳಿದ್ದಾರೆ.
“ನೀವು ರಾಜ್ಯದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಯಸಿದರೆ ಈ ನ್ಯಾಯಾಲಯಕ್ಕೆ ಮಾಡಲು ಏನು ಕೆಲಸವಿದೆ?”ಎಂದು ಮುಖ್ಯ ನ್ಯಾಮೂರ್ತಿ ಎನ್ವಿ ರಮಣ ಅವರು ಒಕ್ಕೂಟ ಸರ್ಕಾರವನ್ನು ಕೇಳಿದ್ದಾರೆ.
ಇದನ್ನೂ ಓದಿ:ಪಂಜಾಬ್ ಭಇದದ್ರತಾ ಲೋಪ ವಿವಾದ; ಪತ್ರಕರ್ತೆಯೊಬ್ಬರ ಹಲವು ಪ್ರಶ್ನೆಗಳು!