Homeಮುಖಪುಟಹಾಥ್ರಸ್‌‌ನಲ್ಲಿ ಶವ ಸುಟ್ಟಿದ್ದು, ತೆಲಂಗಾಣದಲ್ಲಿ ನಡೆದ ಎನ್‌ಕೌಂಟರ್ ಎತ್ತುವ ಪ್ರಶ್ನೆಗಳೇನು?

ಹಾಥ್ರಸ್‌‌ನಲ್ಲಿ ಶವ ಸುಟ್ಟಿದ್ದು, ತೆಲಂಗಾಣದಲ್ಲಿ ನಡೆದ ಎನ್‌ಕೌಂಟರ್ ಎತ್ತುವ ಪ್ರಶ್ನೆಗಳೇನು?

ಹಾಥ್ರ‍್ರಸ್‌ನಲ್ಲಿ ದಲಿತ ಯುವತಿಯ ಶವವನ್ನು ಸುಟ್ಟಿದ್ದು ಹೇಗೆ ಪ್ರಶ್ನೆಗಳನ್ನು ಉಳಿಸುತ್ತದೋ ಹಾಗೆಯೇ ತೆಲಂಗಾಣದಲ್ಲಿ ರೇಪ್ ಆರೋಪಿಗಳ ಮೇಲೆ ನಡೆದ ಎನ್‌ಕೌಂಟರ್ ಕೂಡ ಪ್ರಶ್ನೆಗಳನ್ನು ಉಳಿಸುತ್ತವೆ.

- Advertisement -
- Advertisement -

ದೇಶದ ರಾಜಧಾನಿ ದೆಹಲಿಯಿಂದ ಕೇವಲ 200 ಕಿ.ಮೀ ದೂರದ ಊರಾದ ಹಾಥ್ರಸ್ ‌ನಲ್ಲಿ ಕಾಲ ಸರಿದೇ ಇಲ್ಲ ಎನಿಸುತ್ತದೆ. ದೆಹಲಿಯ ಗದ್ದುಗೆಯಲ್ಲಿ ನಡೆಯುವ ಯಾವ ಪ್ರಗತಿಪರ ಕಾಯ್ದೆ-ಕಾನೂನುಗಳು, ಯೋಜನೆಗಳು, ಅವುಗಳ ಬಗ್ಗೆ ಚರ್ಚೆಗಳು ಮತ್ತದರ ಲಾಭಗಳು ಯಾವುವೂ ಅಲ್ಲಿಗೆ ಮುಟ್ಟುವುದೇ ಇಲ್ಲ. ಅಲ್ಲಿ ಮೇಲ್ಜಾತಿಯ ಠಾಕೂರ್‌ಗಳು ಮಾಡಿದ್ದೇ ಕಾನೂನು, ಅದನ್ನು ತೆಪ್ಪಗೆ ಪಾಲಿಸುವುದಷ್ಟೇ ಅಧಿಕಾರಿಗಳ ಕೆಲಸ. ಇದೆಲ್ಲಾ ಕೇವಲ ಬಿಜೆಪಿ ಬಂದಮೇಲೆ ಶುರುವಾಗಿದೆ ಎಂದೇನೂ ಅಲ್ಲ, ಆದರೆ ಬಿಜೆಪಿಯ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಬಂದಮೇಲೆ ಇಂಥ ಕೆಲಸಗಳಿಗೆ ಸರಕಾರಿ ಶ್ರೀರಕ್ಷೆ ಹಾಗೂ ಅಭಯಹಸ್ತ ದೊರೆತಿದ್ದಂತೂ ನಿಜ.

ಜಾತಿವ್ಯವಸ್ಥೆಯ ಅನಿಷ್ಟಗಳು, ದಲಿತರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು, ಮೂಢನಂಬಿಕೆ, ಕಂದಾಚಾರಗಳೆಲ್ಲ ಸೇರಿ ಉತ್ತರ ಪ್ರದೇಶ ಹಾಗೂ ಅನೇಕ ಉತ್ತರ ಭಾರತದ ಎಷ್ಟೊ ರಾಜ್ಯಗಳು ಮಾನವಹಕ್ಕುಗಳ ಗಣತಿಯಲ್ಲಿ ಬಹಳ ಹಿಂದೆ ಬೀಳುತ್ತವೆ.

ಹಾಥ್ರಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಯತ್ನ ದೇಶದ ಜನರ ಎದುರು ಬಂದಿದ್ದು ಘಟನೆ ನಡೆದ 2 ವಾರಗಳ ನಂತರ! ಅದೂ ಕೂಡ ಎಷ್ಟೋ ಜನರ ನಿರಂತರ ಪ್ರಯತ್ನಗಳ ನಂತರ. ದೇಶದ ಅನಿಷ್ಟ ಜಾತಿ ವ್ಯವಸ್ಥೆಯ ಅರಿವೇ ಇಲ್ಲದೆ ಒಳ್ಳೆಯ ಶಾಲೆಗಳಲ್ಲಿ ಓದಿ ಜೀವನದಲ್ಲಿ ಮೇಲೆ ಬಂದ ಕೆಲವರಿಗೆ ದೆಹಲಿಯ “ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ” ಮತ್ತು ಹಾಥ್ರಸ್‌ನ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ನಡುವೆ ಇರುವ ವ್ಯತ್ಯಾಸಗಳೂ ಕಾಣುವುದಿಲ್ಲ. ಹಾಗೆ ಕಾಣದೇ ಇರುವಂತೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಟಿಆರ್‌ಪಿ ಜರ್ನಲಿಸ್ಟ್‌ಗಳು ಯಶಸ್ವಿಯಾಗಿ ಮಾಡುತ್ತಾರೆ.

ಘಟನೆಯ ವಿವರಗಳು

ಸೆಪ್ಟೆಂಬರ್ 14ನೇ ತಾರೀಕು ಹಾಥ್ರಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತಾಯಿಯ ಜೊತೆಗೆ ಹೊಲದಲ್ಲಿ ಹುಲ್ಲು ಕೀಳಲು ಹೋಗಿದ್ದ ದಲಿತ ಯುವತಿಯನ್ನು ಅಲ್ಲಿಂದಲೇ ಎಳೆದೊಯ್ದು ಠಾಕೂರ್ ಎಂಬ ಮೇಲ್ಜಾತಿಗೆ ಸೇರಿದ 4 ಯುವಕರಾದ ಸಂದೀಪ್, ಲವಕುಶ್, ರಾಮು ಹಾಗೂ ರವಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅವಳನ್ನು ಅರೆಜೀವಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು. ಮಗಳನ್ನು ಅಂಥ ಸ್ಥಿತಿಯಲ್ಲಿ ಕಂಡ ತಾಯಿ ಕೂಡಲೇ ತನ್ನ ಮಗ ಹಾಗೂ ಇತರರ ಸಹಾಯದಿಂದ ಹತ್ತಿರದ ‘ಚಾಂದಪಾ’ ಪೊಲೀಸ್ ಠಾಣೆಗೆ ಕರೆದೊಯ್ದು ಅತ್ಯಾಚಾರದ ದೂರು ದಾಖಲಿಸಿ ಕೂಡಲೇ ಆಸ್ಪತ್ರೆಗೆ ಮಗಳನ್ನು ದಾಖಲಿಸಲು ಬೇಡಿಕೊಂಡರೂ ಪೊಲೀಸರು ಮಾತ್ರ ದೂರು ದಾಖಲಿಸಲಿಲ್ಲ. ಆಂಬ್ಯುಲೆನ್ಸ್ನ್ನೂ ಕರೆಸಲಿಲ್ಲ. ಠಾಣೆಯ ಎದುರಿಗೆ ಇರುವ ಸಿಮೆಂಟ್ ನೆಲದ ಮೇಲೆ ಯುವತಿಯನ್ನು ಮಲಗಿಸಲಾಗಿತ್ತು. ಕಾಮುಕರು ಅವಳದೇ ದುಪಟ್ಟಾದಿಂದ ಕುತ್ತಿಗೆಗೆ ಬಿಗಿದು ಎಳೆದಾಡಿದ್ದರಿಂದ ನಾಲಿಗೆ ಹೊರಬಂದು ದೊಡ್ಡದಾಗಿ ಗಾಯವಾಗಿತ್ತು. ಪೊಲೀಸರು ನಿರ್ಲಕ್ಷö್ಯದಿಂದ ಅವಳ ಜೊತೆ ಮಾತಾಡುತ್ತಿರುವ ವಿಡಿಯೋ ರೆಕಾರ್ಡಿಂಗ್ ಲಭ್ಯವಿದೆ. ಅಲ್ಲಿಂದ ಯುವತಿಯನ್ನು ಅಲಿಘರ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಘಟನೆಯ 11ನೇ ದಿನ ಅವಳ ದೇಹದಿಂದ ಸ್ಯಾಂಪಲ್‌ನ್ನು ಸಂಗ್ರಹಿಸಿ ಫೊರೆನ್ಸಿಕ್ ಲ್ಯಾಬ್‌ಗೆ ಕಳಿಸಲಾಯಿತು. 2 ವಾರಗಳ ನಂತರ ಯುವತಿಯಲ್ಲಿ ಯಾವುದೇ ಸುಧಾರಣೆ ಕಾಣದಿದ್ದಾಗ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಎಲ್ಲ ಅಮಾನವೀಯ ಘಟನೆಗಳನ್ನು ಗೆಲ್ಲದ ಯುವತಿ 29ನೇ ಸೆಪ್ಟೆಂಬರ್‌ಗೆ ಕೊನೆಯುಸಿರೆಳೆದಳು.

ಯುವತಿ ಸಾಯುವವರೆಗೆ ನಡೆದದ್ದು ಒಂದು ಕತೆಯಾದರೆ ನಂತರ ನಡೆದದ್ದು ಮಾತ್ರ ಪ್ರಜಾಪ್ರಭುತ್ವದಲ್ಲಿ ಇನ್ನೂ ಸ್ವಲ್ಪ ನಂಬಿಕೆ ಉಳಿಸಿಕೊಂಡವರ ಪಾಲಿಗೆ ಆಘಾತಕಾರಿ ಬೆಳವಣಿಗೆ. ಯುವತಿಯ ಸಾವಿನ ಸುದ್ದಿಯಿಂದ ಹಾಥ್ರಸ್‌ಗೆ ಬಂದಿದ್ದ ಎಲ್ಲಾ ಮೀಡಿಯಾದ ಕಣ್ಣು ತಪ್ಪಿಸಿ, ಹುಡುಗಿಯ ಮನೆಯವರನ್ನು ಕೂಡಿಹಾಕಿ ಅವರ ಮೊಬೈಲ್‌ಗಳನ್ನು ಕಿತ್ತುಕೊಂಡ ಪೊಲೀಸರು ಮಧ್ಯರಾತ್ರಿ 2.30ರ ಸುಮಾರಿಗೆ ಎಲ್ಲರ ಕಣ್ಣು ತಪ್ಪಿಸಿ ಪೆಟ್ರೋಲ್ ಹಾಗೂ ಕೆರೊಸಿನ್ ಬಳಸಿ ಶವವನ್ನು ಸುಟ್ಟುಹಾಕಿದರು. ಮಗಳಿಗೆ ಅಂತಿಮ ವಿಧಿಗಳನ್ನಾದರೂ ಮಾಡುತ್ತೇವೆ ಎಂದು ಬೇಡಿಕೊಂಡ ಕುಟುಂಬದ ಸದಸ್ಯರನ್ನು ದೂರ ಇಟ್ಟು ಶವವನ್ನು ಸುಟ್ಟು ಹಾಕಲಾಯಿತು. ಪೊಲೀಸರ ದುರಾದೃಷ್ಟಕ್ಕೆ ತನುಶ್ರಿ ಪಾಂಡೆ ಎಂಬ ಪತ್ರಕರ್ತೆ ಮಧ್ಯರಾತ್ರಿಯಲ್ಲಿ ಇವರ ಎಲ್ಲ ಕುಕರ್ಮಗಳನ್ನು ರೆಕಾರ್ಡ್ ಮಾಡಿಕೊಂಡು ದಿಟ್ಟತನದಿಂದ ಪೊಲೀಸರನ್ನು ಪ್ರಶ್ನಿಸಿದಳು. ಇಡೀ ದೇಶ ಉತ್ತರಪ್ರದೇಶದ ಪೊಲೀಸರ ಕಾರ್ಯ ಹಾಗೂ ಸರಕಾರದ ಧೋರಣೆಯನ್ನು ಖಂಡಿಸುತ್ತಿರಬೇಕಾದರೆ ಅಲ್ಲಿಯ ಎಡಿಜಿಪಿ ಪ್ರಶಾಂತ್‌ಕುಮಾರ್ ಪತ್ರಿಕಾ ಹೇಳಿಕೆ ಕೊಟ್ಟು ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದದ್ದಲ್ಲದೆ ಆಕೆಯ ದೇಹದಲ್ಲಿ ಯಾವುದೇ ವೀರ್ಯ ಪತ್ತೆಯಾಗಿಲ್ಲ ಎಂದು ಹೇಳಿದರು. ಅದೇ ಸಮಯದಲ್ಲಿ ಹಾಥ್ರಸ್‌ನ ಜಿಲ್ಲಾ ಮ್ಯಾಜಿಸ್ಟ್ರಟ್ ಯುವತಿಯ ಕುಟುಂಬದವರನ್ನು ಬೆದರಿಸುತ್ತಿರುವ ವಿಡಿಯೋ ಕೂಡ ಹೊರಬಂದಿತ್ತು. ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೊರಟ ಕಾಂಗ್ರೆಸ್‌ನ ರಾಹುಲ್‌ಗಾಂಧಿ, ಪ್ರಿಯಾಂಕಾಗಾಂಧಿ ಹಾಗೂ ಟಿಎಂಸಿ ಪಕ್ಷದ ಡೆರೆಕ್ ಓಬ್ರಿಯನ್ ಅವರನ್ನು ದಾರಿಯಲ್ಲಿ ತಡೆದ ಉತ್ತರಪ್ರದೇಶ ಪೊಲೀಸರು ಅವರೆಲ್ಲರ ಮೇಲೆ ದೈಹಿಕ ಹಲ್ಲೆ ಕೂಡ ಮಾಡಿದರು.

ಇದೆಲ್ಲ ನಡೆದದ್ದು ಸಂತನೆಂದು ಹೇಳಿಕೊಂಡು ಆಡಳಿತ ನಡೆಸುತ್ತಿರುವ ವ್ಯಕ್ತಿಯ ರಾಜ್ಯದಲ್ಲಿ. ಇಷ್ಟೆಲ್ಲ ಆದರೂ ಈ ಯೋಗಿ ಘಟನೆಯ ಬಗ್ಗೆ ಬಾಯಿ ಬಿಟ್ಟಿಲ್ಲ. ಇವರ ಪೋಷಕರಾದ ಮಹಾಯೋಗಿಗೆ ಟ್ರಂಪ್ ದಂಪತಿಗೆ ಕೋವಿಡ್‌ನಿಂದ ಗುಣಮುಖವಾಗಲೆಂದು ಟ್ವೀಟಿಸಲು, ನವಿಲಿನೊಂದಿಗೆ, ಬಾತುಕೋಳಿಯೊಂದಿಗೆ ಫೋಟೊಶೂಟ್ ಮಾಡುವುದರಿಂದ ಹೊರತು ಪುರುಸೊತ್ತಿಲ್ಲ. ಇಂಥದ್ದರಲ್ಲಿ ನಿಜವಾದ ಪ್ರಶ್ನೆಕೇಳಬೇಕಾಗಿದ್ದ ಟಿವಿ ಜರ್ನಲಿಸ್ಟ್‌ಗಳಲ್ಲಿ ಬಹುತೇಕರು ಡ್ರಗ್ಸ್‌ನಲ್ಲಿ ಮುಳುಗಿ ವೀಕ್ಷಕರಿಗೆ ನಶೆ ಹಚ್ಚಿದ್ದಾರೆ.

ಪ್ರಶ್ನೆಗಳು ಮತ್ತು ಲೋಪದೋಷಗಳು

ಹಾಥ್ರಸ್‌ನ ದಲಿತ ಯುವತಿಯ ಸಾವಿನಲ್ಲಿ ಎಷ್ಟೋ ಉತ್ತರ ಸಿಗದ ಪ್ರಶ್ನೆಗಳು ಉಳಿದುಹೋಗುತ್ತವೆ. ಅವುಗಳೆಂದರೆ, ನಿರ್ಭಯಾ ಘಟನೆಯ ನಂತರ ಬಂದ ತಿದ್ದುಪಡಿಗಳು ಹೆಸರಿಗೆ ಮಾತ್ರವೇ ಇವೆಯೇ? ಸಂತ್ರಸ್ತೆ ಠಾಣೆಗೆ ಬಂದಿದ್ದರೂ ಪೊಲೀಸರು ದೂರು ದಾಖಲಿಸಲಿಲ್ಲ ಏಕೆ? ಬೆನ್ನುಮೂಳೆ ಮುರಿದು, ನಾಲಿಗೆ ಕತ್ತರಿಸಿ, ಮೈತುಂಬಾ ಗಾಯಗಳಾಗಿದ್ದಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಿಲ್ಲವೇಕೆ? ಆಸ್ಪತ್ರೆಯಲ್ಲಿ ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಿದ್ದು 11 ದಿನಗಳ ಕಾಲ ಸ್ಯಾಂಪಲ್ ಪಡೆದಿರಲಿಲ್ಲವೇಕೆ? ಘಟನೆಯ ನಂತರ ಹೆಚ್ಚೆಂದರೆ ೪ ದಿನಗಳ ಕಾಲ ದೇಹದಲ್ಲಿ ಸಾಕ್ಷಿ ಸಿಗಬಹುದು ಎಂದು ವೈದ್ಯರಿಗೆ ಗೊತ್ತಿರಲಿಲ್ಲವೆ?

ಯುವತಿಯ ದೇಹದಲ್ಲಿ ಯಾವುದೇ ವೀರ್ಯ ಸಿಕ್ಕಿಲ್ಲ. ಆದ್ದರಿಂದ ಇದು ರೇಪ್ ಅಲ್ಲ ಎಂದು ಹೇಳುವ ಪೊಲೀಸ್ ವರಿಷ್ಠಾಧಿಕಾರಿಗೆ ಕಾಂಡೋಮ್ ಉಪಯೋಗಿಸಿದಾಗಲೂ ವೀರ್ಯ ಸಿಗುವುದಿಲ್ಲ ಎಂಬ ಕನಿಷ್ಟ ಜ್ಞಾನವೂ ಇಲ್ಲವೇ?

ಹೊಸ ತಿದ್ದುಪಡಿನಂತರ ಸಂಭೋಗ ಎಂದರೆ ಕೇವಲ ದೇಹದ ಅಂಗದಿಂದ ಮಾತ್ರವಲ್ಲ ಅದು ಇತರ ವಸ್ತ್ರಗಳನ್ನು ಉಪಯೋಗಿಸಿಯೂ ಮಾಡಬಹುದು ಎಂದು ವ್ಯಖ್ಯಾನಿಸಿರುವುದು ಎಡಿಜಿಪಿಗೆ ಗೊತ್ತಿಲ್ಲವೆಂದರೆ ಇನ್ನು ಸಾಮಾನ್ಯ ಪೊಲೀಸರ ಪಾಡೇನು?

ಮಧ್ಯರಾತ್ರಿಯಲ್ಲಿ ಶವವನ್ನು ಸುಟ್ಟುಹಾಕಿ, ಮುಂದೇನಾದರೂ ಹೆಚ್ಚಿನ ತನಿಖೆಗಾಗಿ ಶವವನ್ನು ಮರಳಿ ಶವಪರೀಕ್ಷೆಗೆ ಒಳಪಡಿಸಬಹುದಾಗಿದ್ದ ಅವಕಾಶವನ್ನು ಕೊನೆಗೊಳಿಸಿದ್ದು ಯಾರನ್ನು ರಕ್ಷಿಸಲು ಮತ್ತು ಯಾರ ಆದೇಶದ ಮೇರೆಗೆ?

ಈ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ, ಆದರೆ ಇದರ ಹಿಂದೆ ಅಡಗಿರುವ ಮತ್ತು ದಿನದಿಂದ ದಿನಕ್ಕೆ ವಿಕಾರಗೊಳ್ಳುತ್ತ ಸಾಗುತ್ತಿರುವ ಜನರ ಮನಸ್ಥಿತಿ ಇನ್ನೂ ಭಯ ಹುಟ್ಟಿಸುತ್ತದೆ.

ಪ್ರಖ್ಯಾತ ಯೂಟ್ಯೂಬ್ ಧೃವ್‌ರಾಠಿ Whataboutism ಎಂಬ ಶಬ್ದವನ್ನು ಬಳಸುತ್ತಾರೆ. ಅದೇನೆಂದರೆ ಯಾವುದೇ ಘಟನೆಯ ಬಗ್ಗೆ ಯಾರಾದರೂ ಧ್ವನಿ ಎತ್ತಿದರೆ ಕೂಡಲೇ ಟ್ರೋಲ್‌ಆರ್ಮಿ ಹಾಗೂ ನವದೇಶಭಕ್ತರು ತದ್ವಿರುದ್ಧ ಪ್ರಶ್ನೆ ಎತ್ತಿ, ಪ್ರಶ್ನೆ ಕೇಳುವವರನ್ನು ಬೆದರಿಸುವುದು ಅಥವಾ ಕೀಳು ಭಾಷೆಯಲ್ಲಿ ಅವಮಾನಿಸುವುದು.
ಮುಸ್ಲಿಂ ಯುವತಿಯ ಮೇಲೆ ಅನ್ಯಾಯ ಆಗಿದೆ ಎಂದರೆ ಹಿಂದೂ ಯುವತಿಗೆ ಆದಾಗ ನೀನೆಲ್ಲಿದ್ದೆ ಎನ್ನುವುದು ಹಿಂದೂ ಹುಡುಗಿ, ಆದರೆ ಕೆಳಜಾತಿಯವರ ಮೇಲೆ ದೌರ್ಜನ್ಯಕ್ಕೆ ಧ್ವನಿ ಎತ್ತಿದರೆ ಮೇಲ್ಜಾತಿಯವರ ಮೇಲೆ ಇಂಥದ್ದಾಗ ನೀನ್ಯಾಕೆ ಪ್ರತಿಕ್ರಿಯಿಸಲಿಲ್ಲ ಎನ್ನುವುದು. ಇಂಥ ಪ್ರತಿಕ್ರಿಯೆಗಳು ತಮ್ಮದೇ ವಲಯದಲ್ಲಿ ತಮ್ಮ ಅಸಹನೆ, ಅಸಮಾಧಾನ ವ್ಯಕ್ತಪಡಿಸುವವರ ಧೈರ್ಯವನ್ನು ಉಡುಗಿಸುತ್ತವೆ.

ಹಾಥ್ರ‍್ರಸ್‌ನಲ್ಲಿ ದಲಿತ ಯುವತಿಯ ಶವವನ್ನು ಸುಟ್ಟಿದ್ದು ಹೇಗೆ ಪ್ರಶ್ನೆಗಳನ್ನು ಉಳಿಸುತ್ತದೋ ಹಾಗೆಯೇ ತೆಲಂಗಾಣದಲ್ಲಿ ರೇಪ್ ಆರೋಪಿಗಳ ಮೇಲೆ ನಡೆದ ಎನ್‌ಕೌಂಟರ್ ಕೂಡ ಪ್ರಶ್ನೆಗಳನ್ನು ಉಳಿಸುತ್ತವೆ. ವಿಪರ್ಯಾಸವೆಂದರೆ ತೆಲಂಗಾಣದಲ್ಲಿ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿದಾಗ ಪೊಲೀಸರನ್ನು ಕೊಂಡಾಡಿದ, ಅವರ ಮೇಲೆ ಹೂಮಳೆ ಸುರಿದ ಜನ, ಎನ್‌ಕೌಂಟರ್ ಸಮರ್ಥಿಸಿ ಇಂಥವರಿಗೆ ಇನ್ಮೇಲೆ ಹೀಗೇ ಆಗಬೇಕು ಎಂದು ಹೇಳಿದ ಜನರಾರೂ ಹಾಥ್ರಸ್‌ನ ಯುವತಿಯ ಮೇಲೆ ಅತ್ಯಾಚಾರ ಮಾಡಿದವರ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ದೇಶದ ಆಕ್ರೋಶವನ್ನು ಸಮಾಧಾನಮಾಡುವ ನಿಟ್ಟಿನಲ್ಲಿ ಅಲಹಾಬಾದ್ ಹೈಕೋರ್ಟ್ ಹಾಥ್ರಸ್‌ನ ಎಲ್ಲ ಅಧಿಕಾರಿಗಳನ್ನು ಕರೆಸಿ ಛೀಮಾರಿ ಹಾಕಿದೆ. ಉತ್ತರಪ್ರದೇಶದಲ್ಲಿ ನ್ಯಾಯ ದೊರಕುವ ಭರವಸೆಯೇ ಇಲ್ಲದ ಯುವತಿಯ ಕುಟುಂಬ ಅದ್ಯಾವ ಭರವಸೆಯಿಂದ ನ್ಯಾಯಕ್ಕಾಗಿ ಕಾಯಬೇಕೋ ಗೊತ್ತಿಲ್ಲ.

ರಾಜಲಕ್ಷ್ಮಿ ಅಂಕಲಗಿ
ಸಾಮಾಜಿಕ ಕಾರ್ಯಕರ್ತೆ, ಹೈಕೋರ್ಟ್ ವಕೀಲರು


ಇದನ್ನೂ ಓದಿ: ಹತ್ರಾಸ್ ಪ್ರಕರಣ ತನಿಖೆ: CBI ತಂಡದಲ್ಲಿ SC/ST/OBC ಸಮುದಾಯದವರಿಲ್ಲ- ಚಂದ್ರಶೇಖರ್ ಆಜಾದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...