ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಶಾಲಾ ಪಠ್ಯದಲ್ಲಿ ಭಗತ್ ಸಿಂಗ್, ನಾರಾಯಣ ಗುರುಗಳ ಪಠ್ಯ ಕೈಬಿಟ್ಟು ಹೆಡಗೇವಾರ್ ಪಠ್ಯ ಸೇರಿಸಿರುವುದಕ್ಕೆ ಬಿಜೆಪಿ ಸರ್ಕಾರದ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞ ಅಲ್ಲ. ಶಿಕ್ಷಣ ತಜ್ಞರಲ್ಲದವರು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿರುವುದು ದುರಂತ ಎಂದು ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ಪಠ್ಯಪುಸ್ತಕ ಎಂಬುದು ರಾಜಕೀಯ ಸಂಘರ್ಷವಲ್ಲ. ಒಂದು ಸರ್ಕಾರದ ನೀತಿಯ ಮೇಲೆ ಅವುಗಳು ರಚನೆಯಾಗಬಾರದು. ಇನ್ನೊಂದು ಸರ್ಕಾರ ಅವುಗಳನ್ನು ಬದಲಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.
ಇವತ್ತು ನಾವು ಶಿಕ್ಷಣವನ್ನು ಹಾಳು ಮಾಡಿದರೆ ದೇಶವನ್ನು ಹಾಳು ಮಾಡಿದ ಹಾಗೆ ಅರ್ಥ. ಈ ರೋಹಿತ್ ಚಕ್ರತೀರ್ಥ ಎಂಬುವವರು ಯಾರು? ನೀನೇನು ಪ್ರೊಫೆಸರ? ಯಾವ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ್ದೀಯ? ನೀವು ಸಂಘಪರಿವಾರದ ಕಾರ್ಯಕರ್ತರು ಅಷ್ಟೇ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ಹೆಡಗೇವಾರ್ ಪಠ್ಯ ಸೇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಟಿಪ್ಪು ಸುಲ್ತಾನ್ಗೂ ಹೆಡಗೇವಾರ್ಗೂ ಹೋಲಿಕೆ ಸಾಧ್ಯವಿಲ್ಲ. ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನೆ ಒತ್ತೆ ಇಟ್ಟವನು. ಆತ ಬ್ರೀಟಿಷರ ಎದುರು ಮಂಡಿಯೂರಲಿಲ್ಲ. ಆದರೆ ಹೆಡಗೇವಾರ್ ಯಾರು? ಅವರ ಕೊಡುಗೆಯೇನು? ಆತ ಆರ್ಎಸ್ಎಸ್ ಸ್ಥಾಪಕ ಅಷ್ಟೆ ಎಂದರು.
ನಾರಾಯಣ ಗುರುರವರು ಹೋರಾಟ, ಚಳವಳಿ ಮಾಡದಿದ್ದರೆ ಕೇರಳ ಹೀಗೆ ಇರಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿನ ಮಹಿಳೆಯರು ಹಿಂದೆ ಬಟ್ಟೆ ಹಾಕದಂತಹ ಪರಿಸ್ಥಿತಿಯಲ್ಲಿದ್ದಾಗ ಹೋರಾಟ ಮಾಡಿದ ನಾರಾಯಣ ಗುರುಗಳ ಪಠ್ಯ ತೆಗೆದಿರುವುದು ಅಕ್ಷಮ್ಯ ಎಂದರು.
ಭಗತ್ ಸಿಂಗ್ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರು. ಅವರನ್ನು ಏಕೆ ತೆಗೆದು ಹಾಕಿದ್ದೀರಿ.ಇದಕ್ಕೆ ಮಂತ್ರಿಗಳು ಮತ್ತು ಸರ್ಕಾರ ಉತ್ತರ ಕೊಡಬೇಕು. ಡಿಎಸ್ಆರ್ಟಿಇ, ಎನ್ಸಿಆರ್ಟಿಇ ಗಳನ್ನು ಒಳಗೊಂಡು ಪಠ್ಯಪುಸ್ತಕ ರಚಿಸಬೇಕು. ರಾಷ್ಟ್ರೀಯ ಪಠ್ಯ ಚೌಕಟ್ಟಿನಲ್ಲಿ ಅದು ಇರಬೇಕು ಹೊರತು ಮನಸ್ಸಿಗೆ ಬಂದಾಗೆ ಸೇರಿಸಬಾರದು. ಹಿಂದಿನ ಯಾವ ಸರ್ಕಾರಗಳು ಇಂತಹ ಕೆಲಸ ಮಾಡಿಲ್ಲ ಎಂದರು.
ಈ ಸಮಿತಿಯಲ್ಲಿ ಯಾರು ಯಾರು ಇದ್ದಾರೆ? ಯಾವ ಯಾವ ಪಠ್ಯ ಕೈಬಿಟ್ಟೀದ್ದೀರಿ, ಯಾವುದನ್ನು ಸೇರಿಸಿದ್ದೀರಿ ಎಂಬುದನ್ನು ಹಾಗೂ ರೋಹಿತ್ ಚಕ್ರತೀರ್ಥರ ಹಿನ್ನೆಲೆ ಏನು ಎಂಬುದನ್ನು ಸರ್ಕಾರ ಇಡೀ ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ರಹಸ್ಯ ಕಾರ್ಯಸೂಚಿಗಳನ್ನು ಒಳಗೊಂಡ ನೂತನ ಪಠ್ಯಪುಸ್ತಕಗಳು ಬೇಕೆ?
ಪಠ್ಯಪುಸ್ತಕಗಳ ಕರಡು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ವೈಜ್ಞಾನಿಕವಾಗಿ, ವೈಚಾರಿಕತೆಯಿಂದ ಕೂಡಿರುವ ಪಠ್ಯಗಳು ನಮಗೆ ಬೇಕೆ ಹೊರತು ಧರ್ಮದ ಆಧಾರದ ಮೇಲೆ ರಚನೆಯಾದವು ಇರಬಾರದು ಎಂದು ಅಭಿಪ್ರಾಯಪಟ್ಟರು.