ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ನ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ನೂತನ ಬಿಜೆಪಿ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದ್ದಾರೆ. ಪಂಚಮಸಾಲಿ ಲಿಂಗಾಯತ ಸಮುದಾಯ ಮೀಸಲಾತಿಗಾಗಿ ನಡೆಸಿದ ಸಮಾವೇಶದಲ್ಲಿ ಯತ್ನಾಳ್ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನು ಖಂಡಿಸಿದ ನಿರಾಣಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಸಿ. ಪಾಟೀಲ ಮತ್ತು ಮುರುಗೇಶ ನಿರಾಣಿ, “ಯತ್ನಾಳ್ ಮತ್ತು ಕಾಂಗ್ರೆಸ್ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಪಂಚಮಸಾಲಿ ಮಠಾಧೀಶ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ತಮ್ಮ ಕಪಿಮುಷ್ಠಿಗೆ ತೆಗೆದುಕೊಂಡು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಪಂಚಮಸಾಲಿಗಳ 2 ಎ ಮೀಸಲಾತಿ ಹೋರಾಟವನ್ನು ವಿಜಯಾನಂದ ಕಾಶಪ್ಪನವರ ಅವರು ತಮ್ಮ ಕುಟುಂಬದ ಹೋರಾಟವಾಗಿ ಪರಿವರ್ತಿಸಿದರು. ಇದಕ್ಕೆ ಕಾಂಗ್ರೆಸ್ನ ‘ಬಿ’ ಟೀಮ್ ಆಗಿ ವರ್ತಿಸುತ್ತಿರುವ ಯತ್ನಾಳ ನೆರವಾದರು” ಎಂದು ಹೇಳಿದರು.
ಇದನ್ನೂ ಓದಿ: ಹೈಕಮಾಂಡ್ ನೀಡಿದ ನೋಟಿಸ್ಗೆ ಉತ್ತರಿಸಿದ ಯತ್ನಾಳ್: ಯಡಿಯೂರಪ್ಪ ವಿರುದ್ಧ 11 ಪುಟಗಳ ಆರೋಪ
“ಕಾಂಗ್ರೆಸ್ ಸರ್ಕಾರ ಇದ್ದಾಗ ಶಾಸಕರಾಗಿದ್ದ ಕಾಶಪ್ಪನವರ ಅವರು 2 ಎ ಮೀಸಲಾತಿ ಸಂಬಂಧಿಸಿದಂತೆ ಏನು ಹೋರಾಟ ಮಾಡಿದ್ದರು? ಆಗ ಏನೂ ಮಾಡದೇ ಈಗ ಬೂಟಾಟಿಕೆ ಮಾತನಾಡುತ್ತಿದ್ದಾರೆ. ಪಂಚಮಸಾಲಿ ಸಮಾಜ ಟ್ರಸ್ಟ್ಗೆ ತಾವೇ ಸ್ವಯಂ ಘೋಷಿತವಾಗಿ ಅಧ್ಯಕ್ಷ ಎಂದು ಕರೆದುಕೊಂಡಿದ್ದಾರೆ. ಅಧ್ಯಕ್ಷ ಎಂದು ಹೇಳಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಟ್ರಸ್ಟ್ ಪದಾಧಿಕಾರಿಗಳು ಪಕ್ಷಾತೀತ ವ್ಯಕ್ತಿ ಆಗಿರಬೇಕು. ಇವರನ್ನು ಅಧ್ಯಕ್ಷ ಎಂದು ಸಮಾಜದ ಯಾವುದೇ ವ್ಯಕ್ತಿ ಒಪ್ಪಲು ತಯಾರಿಲ್ಲ” ಎಂದು ಸಿ ಸಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
“ಪಂಚಮಸಾಲಿ ಮಂತ್ರಿಗಳು ಮತ್ತು ಶಾಸಕರು ರಾಜೀನಾಮೆ ನೀಡಬೇಕು ಎಂದು ಯತ್ನಾಳ್ ಸಮಾವೇಶದಲ್ಲಿ ಹೇಳಿದ್ದಾರೆ. ನಾವು ನಮ್ಮ ನಮ್ಮ ಕ್ಷೇತ್ರಗಳ ಎಲ್ಲ ಮತದಾರರ ಆಶೀರ್ವಾದದಿಂದ ಗೆದ್ದು ಬಂದಿದ್ದೇವೆ. ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಯವರು ನಮ್ಮನ್ನು ಮಂತ್ರಿ ಮಾಡಿದ್ದು. ಮೊದಲಿಗೆ ಅವರು (ಯತ್ನಾಳ) ರಾಜೀನಾಮೆ ಕೊಟ್ಟು, ವಿಜಯಪುರದಿಂದ ಸ್ವರ್ಧಿಸಿ ಗೆದ್ದು ಬರಲಿ” ಎಂದು ಮುರಗೇಶ ನಿರಾಣಿ ಸವಾಲು ಹಾಕಿದರು.
ಇದನ್ನೂ ಓದಿ: ನನ್ನನ್ನು ಹೆದರಿಸೋಕೆ ನೋಟಿಸ್ ನೀಡಿದ್ದಾರೆ, ಫೆ. 21ರೊಳಗೆ ಹಿಂಪಡೆಯುತ್ತಾರಂತೆ: ಯತ್ನಾಳ್
“ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು. ಇದರ ಅವಶ್ಯಕತೆ ಏನಿತ್ತು? ಪಕ್ಷದ ಶಾಸಕನಾಗಿ ನಾಯಕತ್ವದ ವಿರುದ್ಧವೇ ಹರಿಹಾಯ್ದಿರುವುದು ಸರಿಯಲ್ಲ. ಯತ್ನಾಳ ಕಾಂಗ್ರೆಸ್ನ ಬಿ ಟೀಮ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾವು ಸಚಿವರು ಮತ್ತು ಶಾಸಕರು ಸೇರಿ 2 ಎ ಗೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಅದಕ್ಕೂ ನೀತಿ ನಿಯಮ ಎಂಬುದಿದೆ. ಮುಖ್ಯಮಂತ್ರಿಯವರು ಅಧ್ಯಯನ ನಡೆಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿದ್ದಾರೆ. ವರದಿ ಬಂದ ಬಳಿಕ ಸೇರಿಸುವ ಕೆಲಸ ಆಗುತ್ತದೆ. ಅಲ್ಲಿಯವರೆಗೆ ಕಾಲಾವಕಾಶ ನೀಡಬೇಕಲ್ಲವೇ? ಅದನ್ನು ಬಿಟ್ಟು ನಾಳೆ ಮಾಡಿ ಎಂದು ಪಟ್ಟು ಹಿಡಿದು ಕುಳಿತರೆ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿಲ್ಲದ ಮಾತು” ಎಂದು ಹೇಳಿದರು.
ಪಂಚಮಸಾಲಿ ಲಿಂಗಾಯತ ಸಮುದಾಯವು ಕಳೆದ ಒಂದು ತಿಂಗಳಿನಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದರ ಅಂತಿಮ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಪಂಚಮಸಾಲಿ ಲಿಂಗಾಯತ ಸಮುದಾಯ ಜನ ಸೇರಿದ್ದು, 2 ಎ ಮೀಸಲಾತಿಗಾಗಿ ಒತ್ತಾಯಿಸಿದರು.
ಇದನ್ನೂ ಓದಿ: ಸಿಎಂ ವಿರುದ್ಧ ಟೀಕೆ: ಯತ್ನಾಳ್ಗೆ ನೀಡಿದ್ದ ವೈಯಕ್ತಿಕ ಭದ್ರತೆ ಹಿಂಪಡೆದ ರಾಜ್ಯ ಸರ್ಕಾರ!