Homeಅಂಕಣಗಳುಹುಟ್ಟು ಬೈಗುಳವಾದಾಗ..

ಹುಟ್ಟು ಬೈಗುಳವಾದಾಗ..

- Advertisement -
- Advertisement -

ಭಾರತದ ಚುನಾವಣೆಗಳು ದೇಶದಲ್ಲಿ ವಿಚಿತ್ರವಾದ ಯುದ್ಧಗ್ರಸ್ತ ಅವಸ್ಥೆಯನ್ನು ಸೃಷ್ಟಿಸುತ್ತವೆ. ಬೀದಿಗಳೇ ರಂಗಭೂಮಿಯಾಗಿ ಜನ ಪ್ರೇಕ್ಷಕರಾಗಿ ರಾಜಕಾರಣಿಗಳು ನಟರಾಗುತ್ತಾರೆ; ಎದುರಾಳಿಯ `ದಹನ’ `ವಧೆ’ಗಳೂ ಸ್ವಂತದ `ವಿಜಯ’ `ಕಲ್ಯಾಣ’ಗಳೂ ಜಗ್ಗಿ ಜರುಗುತ್ತವೆ; ವ್ಯಂಗ್ಯ ವಿಡಂಬನೆ ಆಕ್ರೋಶ ದುಃಖದ ಭಾವಗಳು ಎಗ್ಗಿಲ್ಲದೆ ಪ್ರಕಟವಾಗುತ್ತವೆ. ಎದುರಾಳಿಯ ಭಂಜನಕ್ಕೆ ತೀಕ್ಷ್ಣ ಭಾಷೆ ಬಳಕೆಯಾಗುತ್ತದೆ. ನಾಲಗೆ ಹದ್ದು ಮೀರುತ್ತದೆ. ಈ ರಾಜಕೀಯ ಸಂಕಥನದಲ್ಲಿ ಬಳಕೆಯಾಗುವ ಭಾಷೆ ಮತ್ತು ನುಡಿಗಟ್ಟುಗಳಲ್ಲಿ, ಕೆಲವು ವ್ಯಕ್ತಿಗಳ ವೈಯಕ್ತಿಕ ಗುಣಸ್ವಭಾವಕ್ಕೆ ಸಂಬಂಧಿಸಿದವು-ನಿದ್ದೆಬಡುಕ, ಲೋಲುಪ, ಸೋಮಾರಿ, ದುರಹಂಕಾರಿ, ಹೇಡಿ ಇತ್ಯಾದಿ; ಕೆಲವು ದೇಶ ಧರ್ಮ ಸಂಸ್ಕೃತಿಗೆ ಬಗೆದ `ದ್ರೋಹ’ದ ಆಧಾರದಲ್ಲಿ ಟಂಕಿಸುತ್ತವೆ; ಇವುಗಳಲ್ಲೆಲ್ಲ ಹುಟ್ಟಿಗೆ ಸಂಬಂಧಿಸಿದ ನಿಂದೆಗಳು ಸ್ವಾರಸ್ಯಕರ.

ಹುಟ್ಟಿನ ನಿಂದೆಗಳು ಸಾಮಾನ್ಯವಾಗಿ ಎದುರಾಳಿಯನ್ನು ರಾಜಕೀಯವಾಗಿ ಸೈದ್ಧಾಂತಿಕವಾಗಿ ಎದುರಿಸುವ ಅಡ್ಡಹಾದಿಯಲ್ಲಿ ಸೃಷ್ಟಿಯಾಗುತ್ತವೆ. ವ್ಯಕ್ತಿಗೆ ವೇಶ್ಯೆಗೆ ಅಥವಾ ವಿಟರಿಗೆ ಹುಟ್ಟಿದವನು ಎನ್ನುವಾಗ ಅದು ಸಿಟ್ಟನ್ನು ಹೊರಹಾಕಲು ತಕ್ಷಣ ಸಿಕ್ಕ ಬೈಗುಳವಾಗಿರುತ್ತದೆ, ನಿಜ. ಆದರೆ ಅದು ಕೇವಲ ನಾಲಿಗೆ ಆಕಸ್ಮಿಕವಾಗಿ ಜಾರಿದ ಗಳಿಗೆಯ ಪರಿಣಾಮವಲ್ಲ. ಅದರ ಹಿಂದೆ ನಿರ್ದಿಷ್ಟ ಆಲೋಚನಾಕ್ರಮವೂ ಇರುತ್ತದೆ. ಮುಖ್ಯವಾಗಿ ಮಹಿಳೆಯರ ದಲಿತರ ಮುಸ್ಲಿಮರ; ಪ್ರಾಣಿ, ರಾಕ್ಷಸ ದೆವ್ವಗಳ ಉಲ್ಲೇಖವಿರುವ ನಿಂದಾವಾಚಕಗಳ ಹಿಂದೆ ಅಮಾನುಷ ಸಾಮಾಜಿಕ ಗ್ರಹಿಕೆಗಳಿವೆ.

ಬಲಪಂಥೀಯ ರಾಜಕೀಯ ಸಂಕಥನದಲ್ಲಿ ಮುಸ್ಲಿಮರನ್ನು ಟಿಪ್ಪು ಬಾಬರ್ ಔರಂಗಜೇಬ್ ಗಜನಿ ಘೋರಿಯರ ಸಂತಾನ ಎಂದೆಲ್ಲ ನಿಂದೆಗಳಿವೆ. ಚರಿತ್ರೆಯು ವರ್ತಮಾನದಲ್ಲಿ ಬೈಗುಳವಾಗಿ ಪರಿವರ್ತಿತವಾಗುವ ಈ ಬಗೆಯೇ ವಿಚಿತ್ರ. ಜನರನ್ನು ಮಧ್ಯಕಾಲೀನ ಆಳರಸರ ಸಂತಾನ ಎನ್ನುವವರಿಗೆ, ಅವರು ಧರ್ಮ ಪರಿವರ್ತನೆ ಮಾಡಿಕೊಂಡ ಬಗ್ಗೆ ಸಿಟ್ಟಿರುತ್ತದೆ; ಬಾಬರಿ ಮಸೀದಿ ಕೆಡವಿದ್ದು ಅಥವಾ ಔರಂಗಜೇಬ್ ಹೆಸರಿನ ರಸ್ತೆಯ ಹೆಸರು ಬದಲಾವಣೆ ಮಾಡಿದ್ದು ಚಾರಿತ್ರಿಕ ಕುರುಹು ಅಳಿಸುವ ಕೆಲಸವೆಂದು ತಾತ್ವಿಕವಾಗಿ ವಾದಿಸುವರಿಗೂ, `ಬಾಬರ್ ಕಿ ಔಲಾದ್’ ಎಂದು ಝಂಕಿಸಲಾಯಿತು. ಇಲ್ಲಿ ವ್ಯಕ್ತಿಗಳ ವಿಚಾರಕ್ಕೂ ಅವರ ಹುಟ್ಟಿನ ಧರ್ಮಕ್ಕೂ ಸಂಬಂಧ ಕಲ್ಪಿಸುವಿಕೆಯಿದೆ. ತಮ್ಮ ಧರ್ಮಕ್ಕೆ ಸೇರಿದವರು ಚರಿತ್ರೆಯಲ್ಲಿ ಮಾಡಿದ ಕೃತ್ಯಗಳ ಅವರು ಭಾರ ಹೊರಬೇಕು ಎಂಬ ಒತ್ತಾಸೆಯಿದೆ.

ಈ ಒತ್ತಾಸೆಯು, ಮುಸ್ಲಿಮರ ಅಥವಾ ಕ್ರೈಸ್ತರ ಪರವಾಗಿ ರಾಜಕೀಯ ತೀರ್ಮಾನ ತೆಗೆದುಕೊಳ್ಳುವ ರಾಜಕಾರಣಿಗಳಿಗೆ ಆಯಾ ಧರ್ಮದ ನಾಮಕರಣ ಮಾಡಿ ಗೇಲಿಗೊಳಿಸುವ ಪದ್ಧತಿಯಾಗಿ ವಿಸ್ತರಣೆ ಪಡೆಯುತ್ತದೆ. ಕೋಮುವಾದ ಮೂಲಭೂತವಾದವನ್ನು ಸೈದ್ಧಾಂತಿಕವಾಗಿ ವಿಮರ್ಶಿಸುವ ಚಿಂತಕರ ಮೇಲೆ ಇದು ಹಾಯುತ್ತದೆ. ವಿಶೇಷವಾಗಿ ಈ ನಿಂದೆಯೊಳಗೆ ಸಾಮಾನ್ಯ ಜನರೂ ಬರುವುದು. ಕರಾವಳಿಯಲ್ಲಿ ಬಿಜೆಪಿಯನ್ನು ಬೆಂಬಲಿಸದವರಿಗೆ `ನೀನು ಯಾರಿಗೆ ಹುಟ್ಟಿದ್ದು, ಬ್ಯಾರಿಗಾ?’ ಎಂಬ ಪ್ರಶ್ನೆಯನ್ನು ಕೇಳಿರುವುದುಂಟು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಒಬ್ಬ ರಾಜಕಾರಣಿ ಜನರಿಗೆ `ನಿಮ್ಮ ಮತ ರಾಮಜಾದಾಗಳಿಗೊ ಹರಾಮಜಾದಾಗಳಿಗೊ?’ ಎಂದು ಪ್ರಶ್ನಿಸಿದರು. `ಜ’ ಜನ್ಮವನ್ನು ಸೂಚಿಸುವ ಕ್ರಿಯಾರೂಪ. ರಾಮಜಾದಾ ಎಂದರೆ ರಾಮನ ಮಕ್ಕಳು; ಹರಾಮಜಾದ ಎಂದರೆ ಹಾದರಕ್ಕೆ ಹುಟ್ಟಿದವರು. ಸೆಕ್ಯುಲರಿಸಂ ಪರವಾಗಿ ವಾದಿಸುವವರು ಅಪ್ಪ ಅಪ್ಪ ಇಲ್ಲದವರು ಎಂದು ಸಂಸದರೊಬ್ಬರು ಹೇಳುವಲ್ಲೂ ಇದೇ ದನಿ.

ಈ ಬೈಗುಳಗಳು, ನಾವು ನಂಬಿದ ಸಿದ್ಧಾಂತ ಪಕ್ಷ ದೈವ ನಾಯಕತ್ವಗಳನ್ನು ಒಪ್ಪದವರೆಲ್ಲ ಪರಕೀಯರು. ಅವರು ಹೀಗೆ ವಿರುದ್ಧವಾಗಲು ಕಾರಣ, ಅವರ ಹುಟ್ಟಿನ ಹಿನ್ನೆಲೆಯಲ್ಲಿ ಅನ್ಯಧರ್ಮದವರ ಅಂಶವಿದೆ ಎಂಬ ಅರ್ಥಕೊಡುತ್ತವೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೋರಾಡುವ ಮಾನವ ಹಕ್ಕು ಹೋರಾಟಗಾರರಿಗೂ ಇಂತಹುದೇ ನುಡಿಗಟ್ಟಲ್ಲಿ ನಿಂದಿಸಲಾಗಿದೆ. ಹುಟ್ಟಿನ ಅಂಶವು ಸಹಜವಾಗಿ ಜನರಲ್ಲಿ ಅಪಮಾನಜನಕ ರೋಷ ಬರಿಸುತ್ತದೆ. ಇಂತಹ ನಿಂದೆಗಳು ಪರೋಕ್ಷವಾಗಿ ತಾಯ ಶೀಲವನ್ನು ಕಟಕಟೆಗೆ ನಿಲ್ಲಿಸುತ್ತವೆ. ರಾಜಕೀಯ ನಂಬಿಕೆ ವೈಚಾರಿಕ ಗ್ರಹಿಕೆಗಳಿಗೂ ನಿರ್ದಿಷ್ಟ ಧರ್ಮದ ವ್ಯಕ್ತಿಯಿಂದ ಹುಟ್ಟುವುದಕ್ಕೂ ಸಂಬಂಧವಿದೆ ಎಂದು ಭಾವಿಸುತ್ತವೆ. ಈ ಬೈಗುಳಗಳ ಉದ್ದೇಶ ಮನಸ್ಸನ್ನು ನೋಯಿಸುವುದು ಮಾತ್ರವಲ್ಲ; ವ್ಯಕ್ತಿ, ಸಮುದಾಯ ಹಾಗೂ ವಿಚಾರಧಾರೆಗಳನ್ನು ಪರಕೀಯಗೊಳಿಸುವುದು; ದುರುಳೀಕರಿಸುವುದು; ಚರಿತ್ರೆಯ ದೋಷಕ್ಕೆ ಹೊಣೆಹೊರಿಸುವುದು; ಆಕ್ರಮಣಕ್ಕೆ ಬೇಕಾದ ನ್ಯಾಯಬದ್ಧತೆ ಪಡೆಯುವುದು.

ಹುಟ್ಟಿನ ಬೈಗುಳಗಳು ಸೈದ್ಧಾಂತಿಕ ಎದುರಾಳಿಗಳನ್ನೂ ಗುರಿ ಮಾಡುತ್ತವೆ. ಕಮ್ಯುನಿಸ್ಟರನ್ನು ಮಾರ್ಕ್ಸ್ ಲೆನಿನ್ ಮಾವೊ ಸಂತಾನ ಎನ್ನುವುದು; ಬಲಪಂಥೀಯರನ್ನು ಹಿಟ್ಲರ್ ಗೋಡ್ಸೆಯ ಸಂತಾನವೆನ್ನುವುದು ಇದಕ್ಕೆ ನಿದರ್ಶನ. ಇವು ನಿರ್ದಿಷ್ಟ ಸಿದ್ಧಾಂತವನ್ನು ಪರಕೀಯ, ವಿದೇಶಿ, ನಮ್ಮ ಧರ್ಮಕ್ಕೆ ನೆಲಕ್ಕೆ ಅದಕ್ಕೆ ಸಂಬಂಧಿಸಿದವರು ಬಾಹಿರರು ಎಂದು ವ್ಯಾಖ್ಯಾನಿಸುತ್ತವೆ. ಪಾಶ್ಚಿಮಾತ್ಯ ಚಿಂತನೆಯನ್ನು ಕುರುಡಾಗಿ ಒಪ್ಪಿಕೊಂಡವರನ್ನು ಟೀಕಿಸಲು ವಸಾಹತೋತ್ತರ ಚಿಂತಕರು ಮೆಕಾಲೆಯ ಮಕ್ಕಳು ಎಂಬ ಶಬ್ದ ಬಳಸಿದರು. ಭಾರತೀಯರಿಗೆ ಆಂಗ್ಲಶಿಕ್ಷಣ ಕೊಟ್ಟರೆ ಅವರು ಆಲೋಚನೆಯಲ್ಲಿ ಬ್ರಿಟಿಷರಾಗುತ್ತಾರೆ ಎಂದು ಲಾರ್ಡಮೆಕಾಲೆ ಸರ್ಕಾರಕ್ಕೆ ಸಲ್ಲಿಸಿದ ಟಿಪ್ಪಣಿ ಈ ನುಡಿಗಟ್ಟಿಗೆ ಮೂಲ. ಇದನ್ನು ಕಮ್ಯುನಿಸ್ಟ್ ಚಿಂತಕರನ್ನು ಗೇಲಿಮಾಡಲು ಭಾರತೀಯ ಸಂಸ್ಕ್ಕೃೃತಿಯ ವಾರಸಿಕೆ ಹೊತ್ತವರು ಬಳಸುವುದುಂಟು. ವ್ಯಂಗ್ಯವೆಂದರೆ, ಅವರಿಗೆ ತಾವು ಅನುಸರಿಸುವ ಸಿದ್ಧಾಂತವೂ ಇಟಲಿ ಜರ್ಮನಿಯ ರಾಷ್ಟ್ರವಾದಗಳಿಂದ ಬಂದಿದ್ದು ಎನ್ನುವುದು ಮರೆತುಹೋಗುವುದು.

ರಾಜಕೀಯ ಸಂಕಥನದಲ್ಲಿ ನಿಂದಾತ್ಮಕವಲ್ಲದ ಪರಿಭಾಷೆಯೂ ಬಳಕೆಯಾಗುತ್ತದೆ. ಮೋದಿಯವರು ರಾಹುಲ್ ಗಾಂಧಿಯವರನ್ನು ವ್ಯಂಗ್ಯಮಾಡಲು ಶೆಹಜಾದಾ (ಶಾಹ-ದೊರೆಗೆ, ಜ-ಹುಟ್ಟಿದವನು) ಎಂದು ಬಳಸುವರು. ಅಲ್ಲಿನ ಉದ್ದೇಶ ತಾನು ಬೀದಿಯಲ್ಲಿ ಚಹ ಮಾರುತ್ತ ನೆಲಮೂಲದಿಂದ ಬಂದವನು ಎಂದು ಹೇಳುವುದು; ಸಿರಿವಂತ ಕುಟುಂಬದಲ್ಲಿ ಹುಟ್ಟಿದವರಿಗೆ ದೇಶದ ಕಷ್ಟಗಳು ಗೊತ್ತಾಗುವುದಿಲ್ಲ ಎಂದು ಸೂಚಿಸುವುದು. ಆದರೆ ಚರಿತ್ರೆಯಲ್ಲಿ ತೃಣಮೂಲದಿಂದ ಬಂದವರು ವಿಲಾಸಿಗಳಾಗುವ, ಸಿರಿಯ ಗರ್ವದಿಂದ ಬಂದವರು ತಳಸ್ತರಕ್ಕೆ ಹೋಗುವ ಪಲ್ಲಟಗಳು ಸಂಭವಿಸಿವೆ.

ಹುಟ್ಟು ಅಪಮಾನ ದಮನ ಮಾಡಿರುವ ನೂರಾರು ನಿದರ್ಶನಗಳಿವೆ. ಮಹಾಭಾರತದ ಕರ್ಣ, ಏಕಲವ್ಯ, ರಾಮಾಯಣದ ಶಂಬೂಕ, ಉಪನಿಷತ್ತಿನ ಕವಷ ಇದನ್ನು ಉಂಡಿದ್ದಾರೆ. ಆದರೆ ಈ ಅಪಮಾನಿತರು ನೋವನ್ನೇ ಸವಾಲಾಗಿ ತೆಗೆದುಕೊಂಡು ಗೆಲುವನ್ನೂ ಸಾಧಿಸಿದರು. ಭಾರತದ ಎಷ್ಟೊ ತಾಯಂದಿರು ಮಕ್ಕಳಿಗೂ ತಮಗೂ ಆಗುವ ಅಪಮಾನವನ್ನು ಹಲ್ಲುಕಚ್ಚಿ ನುಂಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಸತ್ಯಕಾಮನ ತಾಯಿ ಜಾಬಾಲಿ ನೆನಪಾಗುತ್ತಾಳೆ. ಪಾಂಡವರು ನಿಯೋಗ ಜನಿತರಾದರೂ ಹುಟ್ಟಿನ ಹಿನ್ನೆಲೆಯಿಂದ ಅಪಮಾನಿತರಾಗುವುದಿಲ್ಲ. ಅದೊಂದು ಒಪ್ಪಿತ ಮೌಲ್ಯವಾಗಿತ್ತು. ಅವರ ಜೀವನಕಥೆ ದೇಶದ ಮಹಾಕಾವ್ಯವಾಯಿತು. ಅದರ ನಾಯಕರು ದೈವಗಳಾದರು. ಭಾರತಕ್ಕೆ ಈ ಹೆಸರು ಬರಲು ಕಾರಣನಾದ ಭರತನು, ಕೂಸಾಗಿ ಶಕುಂತಲೆಯ ಹೊಟ್ಟೆಯಲ್ಲಿರುವಾಗ, ಅವನ ಅಪ್ಪನೇ ಈ ಗರ್ಭಕ್ಕೆ ಕಾರಣ ನಾನಲ್ಲ ಎಂದು ತುಂಬಿದ ಸಭೆಯಲ್ಲಿ ಅಪಮಾನಿಸಿದ್ದನು.

ಸಮಾಜಗಳು ಗಂಡೆಜಮಾನಿಕೆಯ ಅವಸ್ಥೆಗೆ ದಾಟಿ, ವಿವಾಹದ ಚೌಕಟ್ಟಿನೊಳಗೆ ಹುಟ್ಟಿದ ವ್ಯಕ್ತಿಗೆ ಮಾತ್ರ ಮಾನ್ಯತೆ ಕೊಡುವುದನ್ನು ರೂಢಿಸಿಕೊಂಡವೊ, ಆಗ ಅದರಾಚೆ ಹುಟ್ಟಿದವರೆಲ್ಲ ಪ್ರಶ್ನಿತರಾದರು. ಅವರೂ ಅವರ ತಾಯಿಯೂ ಬೈಗುಳದ ಪರಿಭಾಷೆಯಾದರು. ಈ ಬೈಗುಳ ಬೀದಿಯ ಭಾಗವಾಯಿತು. ನಿಂದಾಭಾಷೆ ರಾಜಕೀಯ ಸಂಕಥನಕ್ಕೆ ಬರುವುದೇ ಬೀದಿಯಿಂದ. ಬೀದಿಯ ಚಿಂತನೆ ರಾಜಕಾರಣಕ್ಕೂ ರಾಜಕಾರಣದ ನುಡಿಗಟ್ಟು ಬೀದಿಗೂ ವಿನಿಮಯವಾಗುತ್ತದೆ.

ವ್ಯಕ್ತಿಯ ರಕ್ತದೊಳಗೆ ಹುಟ್ಟಿನ ಸ್ಮತಿಗಳಿರುತ್ತವೆ ಎನ್ನುವುದು ವಿಚಿತ್ರ ಕಲ್ಪನೆ. ಜೈವಿಕವಾಗಿ ಹೇಳುವುದಾದರೆ, ಭಾರತದ ಮುಸ್ಲಿಮರು ಮೂಲದಲ್ಲಿ ಈ ದೇಶದ ಎಲ್ಲ ಜಾತಿಗಳಿಗೂ ಸೇರಿದವರಾಗಿದ್ದು ಹೊಸ ಧರ್ಮ ಬಂದಾಗ ನಾನಾಕಾರಣದಿಂದ ಸ್ವೀಕರಿಸಿದವರು. ಕಾಶ್ಮೀರದಲ್ಲಿ ಬಂದೂಕು ಹಿಡಿದಿರುವ ಬಹಳಷ್ಟು ಜನ ಮೂಲದಲ್ಲಿ ಬ್ರಾಹ್ಮಣರು; ಅವರ ಹೆಸರಲ್ಲಿ ಈಗಲೂ ಭಟ್ ಎಂಬ ಕುಲನಾಮವಿದೆ; ಔರಂಗಜೇಬನ ದುಷ್ಟತನದಲ್ಲಿ ವಿದೇಶಿಗ ಬಾಬರನ ರಕ್ತವಿದೆ ಎನ್ನುವುದಾದರೆ, ಆತನ ಮುತ್ತಜ್ಜಿ ರಜಪೂತರವಳು. ಕೊಲೆ ಅತ್ಯಾಚಾರ ದೋಚುವಿಕೆಗಳೇ ಧರ್ಮವಾಗಿದ್ದ ರಾಜಪ್ರಭುತ್ವದ ಸೈನ್ಯವು, ನಿರಂತರ ಯುದ್ಧಗಳಿಗಾಗಿ ಸಾವಿರಾರು ವರ್ಷಗಳಿಂದ ಹರಿದಾಡಿರುವ ಎಲ್ಲ ದೇಶಗಳಲ್ಲಿ, ರಕ್ತಸಂಕರ ಜನಾಂಗಮಿಶ್ರಣ ಅವ್ಯಾಹತವಾಗಿ ಸಂಭವಿಸಿದೆ. ಮೂಲ ಹುಡುಕುತ್ತ ಹೋದರೆ ಜನಾಂಗಶುದ್ಧತೆಯ ಪ್ರಶ್ನೆ ಹಾಸ್ಯಾಸ್ಪದವೆನಿಸುತ್ತದೆ.

ನಿಜವಾದ ಹುಟ್ಟು ತಾತ್ವಿಕ ಇಲ್ಲವೇ ವೈಚಾರಿಕವಾದುದು. ರಾಜಪುತ್ರನಾಗಿ ಹುಟ್ಟಿದ ಸಿದ್ಧಾರ್ಥ ಬುದ್ಧನಾಗಿ ಮರುಹುಟ್ಟು ಪಡೆಯುತ್ತಾನೆ; ಮೇಲ್ಜಾತಿಯಿಂದ ಬಂದ ಸನಾತನಿ ಎಂದುಕೊಳ್ಳುತ್ತಿದ್ದ ಗಾಂಧಿ ಭಂಗಿಯಾಗಲು ಹಿಂಜರಿಯುವುದಿಲ್ಲ; ಜನಸಂಘದ ಪ್ರಥಮ ಅಧ್ಯಕ್ಷರಾಗಿ ಈಗಿನ ಬಿಜೆಪಿಗೆ ಬುನಾದಿ ಹಾಕಿದ ಎ.ಕೆ. ಸುಬ್ಬಯ್ಯ, ಹಿಂದುತ್ವದ ಪ್ರಬಲ ಟೀಕಾಕಾರರಾಗಿ ಮರುಹುಟ್ಟು ಪಡೆದರು; ಸಮಾಜವಾದಿ ಸೆಳೆತವಿದ್ದ ಅಡಿಗರು ಕಡೆಗೆ ಅದರ ವಿರುದ್ಧ ಗತಿಯಲ್ಲಿ ಚಲಿಸಿದರು. ಕುವೆಂಪು ಪ್ರಕಾರ ವಿಶ್ವಮಾನವರಾಗಿ ಜನಿಸುವ ಮಕ್ಕಳು, ಮತದ ಪ್ರಭಾವಕ್ಕೆ ಸಿಕ್ಕು ಅಲ್ಪಮಾನವರಾಗುವರು. ಅವರು ವಿಶ್ವಮಾನವರಾಗಲು ಇನ್ನೊಂದು ಹುಟ್ಟು ಪಡೆಯಬೇಕು. ಇದು ದ್ವಿಜವಲ್ಲ; ತ್ರಿಜದ ಕಲ್ಪನೆ. ನಮ್ಮ ವ್ಯಕ್ತಿತ್ವ ರೂಪುಗೊಳ್ಳುವುದು ಜೈವಿಕ ಹಿನ್ನೆಲೆಯಿಂದಲ್ಲ. ಯಾವ ವಿಚಾರಧಾರೆಯ ಜತೆ ಗುರುತಿಸಿಕೊಂಡು ಏನು ಮಾಡುತ್ತೇವೆ ಎಂಬುದರಿಂದ. ದ್ವಿಜನಾಗಿ ಹುಟ್ಟಿದ ಬಸವಣ್ಣ, ಶೋಷಕ ಬ್ರಾಹ್ಮಣವಾದದ ವಿರುದ್ಧ ಬಂಡೆದ್ದಾಗ, ಬಹುಶಃ ವಿರೋಧಿಗಳು ಅವನ ಹುಟ್ಟನ್ನು ಶಂಕಿಸಿ ಮಾತಾಡಿರಬೇಕು. ಎಂತಲೇ ಅವರಿಗೆ ಅವನು ದಿಟ್ಟತನದಿಂದ ಬೊಪ್ಪನು ನಮ್ಮ ಮಾದಾರ ಚೆನ್ನಯ್ಯ ಎಂದು ಹೇಳಿ ಬಾಯಿಮುಚ್ಚಿಸಿದನು. ತನ್ನನ್ನು ದಲಿತರ ಮಗನೆಂದು ಹೇಳಿಕೊಳ್ಳುವುದು ೧೨ನೇ ಶತಮಾನದಲ್ಲಿ ಸಣ್ಣಸಂಗತಿಯಲ್ಲ.

ಹುಟ್ಟಿನ ಹಿನ್ನೆಲೆಯನ್ನು ತಾತ್ವಿಕ ಸಮಸ್ಯೆಯಾಗಿ ಚಿತ್ರಿಸುವ ಕೃತಿಗಳಲ್ಲಿ ಭೈರಪ್ಪನವರ `ವಂಶವೃಕ್ಷ’ವೂ ಒಂದು. ಶೋತ್ರಿಗೆ ತಾನು ಯಾರಿಗೆ ಹುಟ್ಟಿದವನು ಎಂಬುದು ಜೀವನ್ಮರಣದ ಪ್ರಶ್ನೆಯಾಗಿ ಕಾಡುತ್ತದೆ. ಆತ ನರಳಿಕೆಯಿಂದ ಹೊರಬರುವುದಿಲ್ಲ. ಆದರೆ ಟಾಗೂರರ `ಗೋರಾ’ನ ಕತೆಯೇ ಬೇರೆ. ಸನಾತನ ಧರ್ಮದ ಉದ್ಧಾರ ಮೂಲಕ ದೇಶಕಟ್ಟಲೆಂದು ಹೊರಡುವ ಆತನಿಗೆ, ತಾನು ಹುಟ್ಟಿದ್ದು ಬಿಳಿಯ ತಂದೆತಾಯಿಗಳಿಗೆ ಎಂದು ಅರಿವಾಗುತ್ತದೆ. ಈ ಆಘಾತಕಾರ ಅರಿವು ಅವನನ್ನು ನಮ್ರ ಮನುಷ್ಯನನ್ನಾಗಿಸುತ್ತದೆ. ಗಂಡುಹೆಣ್ಣಿನ ಜೈವಿಕ ಮಿಲನದಿಂದ ಹುಟ್ಟುವ ಜೀವವನ್ನು ಮನುಷ್ಯರಾಗಿಸುವುದು ದೇಹದೊಳಗೆ ಹರಿವ ರಕ್ತವಲ್ಲ. ತತ್ವವಿಚಾರ; ಅದು ಯಾವತ್ತೂ ಎಷ್ಟೊ ದೇಶ ಕಾಲ ಜನಾಂಗ ಸಂಸ್ಕೃತಿಗಳ ಕೂಡು ಫಲವೇ ಆಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋವಿಡ್-19 ಲಸಿಕೆ ಮತ್ತು ಯುವ ವಯಸ್ಕರ ಹಠಾತ್ ಸಾವುಗಳ ನಡುವೆ ಯಾವುದೇ ವೈಜ್ಞಾನಿಕ ಸಂಬಂಧ ಕಂಡುಬಂದಿಲ್ಲ: ಏಮ್ಸ್ ಅಧ್ಯಯನ

ನವದೆಹಲಿ: ದೆಹಲಿಯ ಏಮ್ಸ್‌ನಲ್ಲಿ ನಡೆಸಿದ ಒಂದು ವರ್ಷದ ಸಮಗ್ರ, ಶವಪರೀಕ್ಷೆ ಆಧಾರಿತ ವೀಕ್ಷಣಾ ಅಧ್ಯಯನವು, ಯುವ ವಯಸ್ಕರಲ್ಲಿ ಕೋವಿಡ್-19 ಲಸಿಕೆಯನ್ನು ಹಠಾತ್ ಸಾವುಗಳೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ, ಇದು ಕೋವಿಡ್ ಲಸಿಕೆಗಳ...

ಬಿಜೆಪಿ ಜನ ನಾಟಕೀಯರು, ದೇಶದ್ರೋಹಿಗಳು; ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಮಲ್ಲಿಕಾರ್ಜುನ ಖರ್ಗೆ

"ಬಿಜೆಪಿಯವರು 'ಗದ್ದಾರ್‌ಗಳು' (ದೇಶದ್ರೋಹಿಗಳು) ಮತ್ತು 'ಡ್ರಮೆಬಾಜ್' (ನಾಟಕೀಯದಲ್ಲಿ ತೊಡಗಿಸಿಕೊಳ್ಳುವವರು). ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.  ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರಿ ಕುರಿತ...

ಆಸ್ಟ್ರೇಲಿಯಾ | ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ : 12 ಜನರು ಸಾವು

ಭಾನುವಾರ (ಡಿ.14) ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಸಮುದಾಯದ 'ಹನುಕ್ಕಾ' ಕಾರ್ಯಕ್ರಮದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....

ಕೋಲ್ಕತ್ತಾದಲ್ಲಿ ನಡೆದ ಅವ್ಯವಸ್ಥೆ: ‘ಮೆಸ್ಸಿ ಭಾರತ ಪ್ರವಾಸ 2025’ರ ಪ್ರಮುಖ ಆಯೋಜಕರಿಗೆ 14 ದಿನಗಳ ಕಸ್ಟಡಿ

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಲಿಯೋನೆಲ್ ಮೆಸ್ಸಿ ಅವರ ಇಂಡಿಯಾ ಟೂರ್ 2025 ರ ಪ್ರಮುಖ ಆಯೋಜಕರನ್ನು ವಶಕ್ಕೆ ಪಡೆದಿದ್ದಾರೆ.  ಈ ಘಟನೆಯು ಪ್ರತಿಭಟನೆಗಳಿಗೆ...

ಹೆಡ್ಗೆವಾರ್ ಸ್ಮಾರಕ ಭೇಟಿ ತಪ್ಪಿಸಿಕೊಂಡ ಅಜಿತ್ ಪವಾರ್ : ನಮ್ಮದು ಅಂಬೇಡ್ಕರ್, ಫುಲೆ ಸಿದ್ಧಾಂತ ಎಂದ ಎನ್‌ಸಿಪಿ ವಕ್ತಾರ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ (ಡಿ.14) ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಸ್ಮಾರಕ ಭೇಟಿ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದು, ಅವರ ಪಕ್ಷ ಎನ್‌ಸಿಪಿ ರಾಜ್ಯದ ಅಭಿವೃದ್ಧಿಗಾಗಿ ಮಹಾಯುತಿ ಮೈತ್ರಿಕೂಟಕ್ಕೆ ಸೇರಿರುವುದಾಗಿ ಒತ್ತಿ...

ದೆಹಲಿಗೆ ಬರುವ ನಮ್ಮ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ : ಡಿಕೆಶಿ

ದೆಹಲಿ ಬರುತ್ತಿರುವ ನಮ್ಮವರ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್‌ಲೀಲಾ...

ಹೊಸೂರು ವಿಮಾನ ನಿಲ್ದಾಣ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಿಂದ 2,900 ಎಕರೆ ಸ್ವಾಧೀನ ಸಾಧ್ಯತೆ

ಚೆನ್ನೈ: ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸರ್ಕಾರಿ ಸ್ವಾಮ್ಯದ 800 ಎಕರೆ ಸೇರಿದಂತೆ ಸುಮಾರು 3,000...

ಸೋನಮ್ ವಾಂಗ್‌ಚುಕ್ ಸಂಸ್ಥೆ ಅನುಕರಣೀಯ ಕೆಲಸ ಮಾಡುತ್ತಿದೆ, ಯುಜಿಸಿ ಮಾನ್ಯತೆ ನೀಡಬೇಕು ಎಂದ ಸಂಸದೀಯ ಸಮಿತಿ

ಲಡಾಖ್‌ನ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (ಹೆಚ್‌ಐಎಎಲ್‌) 'ಅನುಕರಣೀಯ' ಕೆಲಸ ಮಾಡುತ್ತಿದೆ. ಹಾಗಾಗಿ, ಆ ಸಂಸ್ಥೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಮಾನ್ಯತೆ...

ಮುಸ್ಲಿಂ ಎಂದು ಪರಿಶೀಲಿಸಿ ಗುಂಪುಹಲ್ಲೆ: ತೀವ್ರ ದಾಳಿಗೆ ಒಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ  ಸಾವು

ನವಾಡಾ ಜಿಲ್ಲೆಯ ರೋಹ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಕ್ರೂರವಾಗಿ ಹಲ್ಲೆಗೊಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಥರ್ ಹುಸೇನ್ ಶುಕ್ರವಾರ ತಡರಾತ್ರಿ ಬಿಹಾರ್ಷರೀಫ್ ಸದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಸೆಂಬರ್...

ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 2 ಸಾವು, 8 ಜನರಿಗೆ ತೀವ್ರ ಗಾಯಗಳಾಗಿವೆ

ಅಮೆರಿಕಾದ ರೊಡ್ ಐಲ್ಯಂಡ್ ರಾಜ್ಯದ ಪ್ರೊವಿಡೆನ್ಸ್ ನಗರದಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಸಮಯದಲ್ಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದಿದೆ, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಡಿಸೆಂಬರ್ 13ರ,...