ಎಚ್.ವಿಶ್ವನಾಥ್ ಸೇರಿದಂತೆ 10 ಶಾಸಕರು ನಿನ್ನೆ ಮಧ್ಯರಾತ್ರಿ ಮುಂಬೈ ಪೊಲೀಸ್ ಕಮೀಷನರ್ ಅವರಿಗೆ ಪತ್ರವೊಂದನ್ನು ಬರೆದು, ನಮ್ಮನ್ನು ರಕ್ಷಿಸಿ ಎಂದು ಮೊರೆಯಿಟ್ಟಿದ್ದಾರೆ. ಕೆಳಗೆ ಸಹಿ ಹಾಕಿರುವ ನಾವು ಶಾಸಕರಾಗಿದ್ದು, ಮುಂಬೈನ ಪೋವೈನಲ್ಲಿರುವ ಹೋಟೆಲ್ ರೆನೆಸಾನ್ಸ್ ನಲ್ಲಿ ಉಳಿದುಕೊಂಡಿದ್ದೇವೆ. ನಮಗೆ ಗೊತ್ತಾಗಿರುವ ಹಾಗೆ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಮತ್ತಿತರರು ಹೋಟೆಲ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು, ನಾವು ಅವರನ್ನು ಭೇಟಿಯಾಗಲು ಇಚ್ಛಿಸುವುದಿಲ್ಲ. ಈ ವಿಚಾರದಲ್ಲಿ ನಮಗೆ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ ಮತ್ತು ಅವರನ್ನು ಹೋಟೆಲ್ ಪ್ರವೇಶಿಸದಂತೆ ತಡೆಯಬೇಕೆಂದು ಕೋರುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪತ್ರಕ್ಕೆ ಶಿವರಾಮ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಎಚ್.ವಿಶ್ವನಾಥ್, ನಾರಾಯಣಗೌಡ ಮತ್ತು ಮಹೇಶ್ ಕುಮಟಳ್ಳಿ ಸಹಿ ಹಾಕಿದ್ದಾರೆ.
ಎಚ್.ವಿಶ್ವನಾಥ್ ಥರದವರು ಇಂತಹ ಪತ್ರಕ್ಕೆ ಸಹಿ ಹಾಕಿರುವುದು ಅಚ್ಚರಿ ಮೂಡಿಸಿದೆ. ತಮ್ಮ ಜೊತೆಗಿರುವ ಶಾಸಕರ ದೃಢತೆಯ ಕುರಿತು ಸಂಶಯವಿದ್ದು, ಡಿಕೆಶಿ ಅಥವಾ ಎಚ್.ಡಿ.ಕೆಯವರ ಜೊತೆಗಿನ ಒಂದು ಭೇಟಿ ಅದನ್ನು ಬದಲಾಯಿಸಿಬಿಡುತ್ತದೆ ಎಂದು ಅವರು ಭಾವಿಸಿದಂತಿದೆ. ಹೀಗಾಗಿ ಪೊಲೀಸ್ ಕಮೀಷನರ್ ಅವರಿಗೆ ನಡುರಾತ್ರಿ ಪತ್ರವನ್ನು ಬರೆದಿರುವಂತೆ ಕಾಣುತ್ತಿದೆ.