ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ತಂಗಿರುವ ರಾಜೀನಾಮೆ ನೀಡಿರುವ ಶಾಸಕರನ್ನು ಭೇಟಿಯಾಗಲು ಬಂದಿರುವ ಡಿಕೆಶಿಯನ್ನು ಪೊಲೀಸರು ತಡೆದಿದ್ದಾರೆ. ‘ತಾನು ಈ ಹೋಟೆಲ್ ನಲ್ಲಿ ರೂಮು ಬುಕ್ ಮಾಡಿದ್ದೇನೆ, ನನ್ನ ಬಳಿ ಯಾವ ಆಯುಧಗಳೂ ಇಲ್ಲ, ನನ್ನ ಸ್ನೇಹಿತರ ಜೊತೆಗೆ ಮಾತನಾಡಬೇಕಿದೆ’ ಎಂದು ಡಿಕೆಶಿ ಹೇಳಿದರು. ಆದರೆ, ‘ನಿಮ್ಮನ್ನು ಒಳಗೆ ಬಿಡಲಾಗುವುದಿಲ್ಲ, ಏಕೆಂದರೆ ಒಳಗಿರುವವರು ನಿಮ್ಮ ಬಗ್ಗೆ ನಮಗೆ ಪತ್ರವೊಂದನ್ನು ಬರೆದಿದ್ದಾರೆ’ ಎಂದು ಸ್ಥಳದಲ್ಲಿದ್ದ ಡಿಸಿಪಿ ಹೇಳಿದ್ದಾರೆ.
‘ಆ ಸ್ನೇಹಿತರೇ ನನ್ನನ್ನು ಕರೆದಿರುವುದರಿಂದಷ್ಟೇ ಬಂದಿದ್ದೇನೆ. ನೀವು ನನ್ನನ್ನು ತಡೆಯಬಾರದು’ ಎಂಬುದು ಡಿಕೆಶಿಯವರ ಉತ್ತರವಾಗಿತ್ತು. ‘ಅವರೇನಾದರೂ ಹೇಳಿದರೆ ನಾನು ಬಿಡುತ್ತೇನೆ’ ಎಂದು ಡಿಸಿಪಿ ಉತ್ತರಿಸಿದರು. ಹೋಟೆಲ್.ನಲ್ಲಿ ರೂಮು ಬುಕ್ ಮಾಡಿ ಕಾಫಿ ಕುಡಿಯಲೂ ಅವಕಾಶವಿಲ್ಲವೇ? ನಾನು ಇಲ್ಲಿಂದ ಹೋಗಲು ಬಂದಿಲ್ಲ. ಇಡೀ ದಿನ ಇಲ್ಲಿಯೇ ಇರುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ ಡಿ.ಕೆ.ಶಿವಕುಮಾರ್ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ: ಮುಂದಿನ ಐದು ದಿನ ಏನೂ ಆಗದಂತೆ ನೋಡಿಕೊಂಡ ಸ್ಪೀಕರ್
ಆ ನಂತರ ಪೊಲೀಸರು ಹೋಟೆಲ್.ನಿಂದ ಅಲ್ಲಿಗೇ ಕಾಫಿ ತರಿಸಿದರು. ಅಲ್ಲಿಂದಲೇ ಶಾಸಕರನ್ನು ಫೋನ್ ಮೂಲಕ ಸಂಪರ್ಕಿಸುವ ಕೆಲಸವನ್ನು ಶಿವಕುಮಾರ್ ಮಾಡಿದರು.
ಈ ಸದ್ಯ ಮುಂಬೈನ ರೆನೆಸಾನ್ಸ್ ಹೋಟೆಲ್ ಮುಂದೆ ಭಾರೀ ಪೊಲೀಸ್ ಪಡೆ ಮತ್ತು ಮಾಧ್ಯಮಗಳ ಕೆಮೆರಾಮನ್.ಗಳು ಬೀಡು ಬಿಟ್ಟಿದ್ದು ಡಿ.ಕೆ.ಶಿವಕುಮಾರ್ ಅವರು ಮುಂದೇನು ಮಾಡುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.