Homeಮುಖಪುಟದಿ ಕ್ವಿಂಟ್ ಸಂಪಾದಕನ ಮೇಲಿನ `ಐಟಿ ಹಲ್ಲೆ’ ಏನನ್ನು ಸೂಚಿಸುತ್ತಿದೆ...?

ದಿ ಕ್ವಿಂಟ್ ಸಂಪಾದಕನ ಮೇಲಿನ `ಐಟಿ ಹಲ್ಲೆ’ ಏನನ್ನು ಸೂಚಿಸುತ್ತಿದೆ…?

ಕೇಂದ್ರ ಸರ್ಕಾರದ ಐಟಿ ಇಲಾಖೆಯ `ಕಾರ್ಯಾಚರಣೆ’ ಹೇಗೆ ಕಾನೂನು ಉಲ್ಲಂಘನೆ ಮಾಡಿ ತನ್ನನ್ನು `ಟ್ರ್ಯಾಪ್’ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಅವರು ಅದರಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

- Advertisement -
- Advertisement -

| ಗೌರಿ ಡೆಸ್ಕ್ |

ಮೇ 29, `ದಿ ಕ್ವಿಂಟ್’ ಆನ್‍ಲೈನ್ ಪೋರ್ಟಲ್‍ನ ಸಂಸ್ಥಾಪಕ ಸಂಪಾದಕ ರಾಘವ್ ಬಹ್ಲ್ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರು. ಅವತ್ತಿಗೆ ಸರಿಯಾಗಿ ಇಪ್ಪತ್ತೆಂಟು ದಿನಗಳ ಹಿಂದೆ (ಮೇ 1ರಿಂದ) ಶುರುವಾದ ಕೇಂದ್ರ ಸರ್ಕಾರದ ಐಟಿ ಇಲಾಖೆಯ `ಕಾರ್ಯಾಚರಣೆ’ ಹೇಗೆ ಕಾನೂನು ಉಲ್ಲಂಘನೆ ಮಾಡಿ ತನ್ನನ್ನು `ಟ್ರ್ಯಾಪ್’ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಅವರು ಅದರಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದರ ಸಾರಾಂಶ ಹೀಗಿದೆ.

ಮೇ 29, 2019ರಂದು ರಾಘವ್ ಅವರಿಗೆ ಅಧಿಕೃತ `ಇ ಕೋಟ್ರ್ಸ್’ ಆನ್‍ಲೈನ್ ಸೇವೆಯಿಂದ ಒಂದು ಸುದ್ದಿ ಬಂದು ತಲುಪುತ್ತದೆ. ಅವರ ವಿರುದ್ಧ ಮೀರತ್‍ನ ಚೀಫ್ ಜ್ಯೂಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ಮೇ 3ರಂದು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಅವುಗಳ ವಿಚಾರಣೆ ಜೂನ್ 6ಕ್ಕೆ ಇದೆ ಎಂಬುದು ಅದರ ಸಾರಾಂಶ.

ಐ.ಟಿ ಇಲಾಖೆಯ ಶೋಕಾಸ್ ನೋಟಿಸ್

ಅದನ್ನು ನೋಡಿದ ರಾಘವ್‍ರಿಗೆ ನಿಜಕ್ಕೂ ಶಾಕ್ ಆಗುತ್ತದೆ. ಯಾಕೆಂದರೆ, ದೂರು ದಾಖಲಾಗಿ ಹೆಚ್ಚೂಕಮ್ಮಿ ಒಂದು ತಿಂಗಳು ಕಳೆಯುತ್ತಾ ಬಂದರು ಅದರ ಬಗ್ಗೆ ಸಮನ್ಸ್ ಆಗಲಿ, ನೋಟಿಸನ್ನೇ ಆಗಲಿ ನೀಡದ ಐಟಿ ಇಲಾಖೆ, ಮುಂದಿನ ವಿಚಾರಣೆ ಇನ್ನೇನು ಬೆರಳೆಣಿಕೆಯ ದಿನಗಳಿರುವಾಗ ಸಾಕ್ಷ್ಯ ಸಮೇತ ವಿಚಾರಣೆಗೆ ಹಾಜರಾಗಿ ಎಂದದ್ದು ನಮ್ಮ ಸಂವಿಧಾನದ `ನೈಸರ್ಗಿಕ ನ್ಯಾಯ’ದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ಇದೇ ವಿಚಾರವಾಗಿ ಈ ಹಿಂದೆ ಐಟಿ ಇಲಾಖೆ ಕೊಟ್ಟಿದ್ದ ಶೋಕಾಸ್ ನೋಟಿಸ್‍ಗೆ ಪ್ರತಿಕ್ರಿಯಿಸುತ್ತಾ ಅದು ಆರೋಪಿಸುತ್ತಿರುವ ವ್ಯವಹಾರದಲ್ಲಿ ತಾವು ಯಾವ ಅಕ್ರಮವನ್ನೂ ನಡೆಸಿಲ್ಲ ಎಂಬುದನ್ನು ಸಾಬೀತುಪಡಿಸಲು ವಹಿವಾಟು ನಡೆದ ಎಲ್ಲಾ ದಾಖಲೆಗಳನ್ನೂ ಮತ್ತು ಈ ಆರ್ಥಿಕ ವರ್ಷದಲ್ಲಿ ತಾವು, ತಮ್ಮ ಮಡದಿ ರಿತು ಕಪೂರ್ ಸಲ್ಲಿಸಿದ್ದ ಆದಾಯ ತೆರಿಗೆ ಪಾವತಿ ಪ್ರಮಾಣಪತ್ರಗಳನ್ನು ತಮ್ಮ ಚಾರ್ಟೆಡ್ ಅಕೌಂಟೆಂಟ್ (ಸಿಎ) ಮೂಲಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದರು. ಅವ್ಯಾವುಗಳನ್ನೂ ಲೆಕ್ಕಕ್ಕೆ ಪರಿಗಣಿಸದೆ ಐಟಿ ಇಲಾಖೆ ಈ ದೂರುಗಳನ್ನು ದಾಖಲಿಸಿದ್ದು ಇಲ್ಲಿ ಸ್ಪಷ್ಟವಾಗಿತ್ತು.

ಮೇ 1ರಂದು ರಾಘವ್ ಅವರ ಮೇಲ್ ಐಡಿಗೆ  incometax.gov.in ಅಕೌಂಟ್‍ನಿಂದ ಒಂದು ಶೋಕಾಸ್ ನೋಟಿಸ್ ಬಂದಿತ್ತು. `ನೀವು ಲಂಡನ್‍ನಲ್ಲಿ ಖರೀದಿಸಿರುವ ಆಸ್ತಿಯೊಂದರ ಮೌಲ್ಯವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲುವಾಗ ತಪ್ಪೆಸಗಿದ್ದೀರಿ, ಆ ಆಸ್ತಿಯ ಮೌಲ್ಯಕ್ಕಿಂತ 2.45 ಕೋಟಿ ಕಡಿಮೆ ಮೌಲ್ಯ ತೋರಿಸಿ ತೆರಿಗೆ ವಂಚಿಸಿದ್ದೀರಿ ಎಂದು ಕಪ್ಪುಹಣ ನಿಗ್ರಹ ಕಾಯ್ದೆ-2015ರ ಸೆಕ್ಷನ್ 50 ಮತ್ತು 51ರಡಿ ನಿಮ್ಮ ವಿರುದ್ಧ ಯಾಕೆ ದೂರು ದಾಖಲಿಸಬಾರದು ಎಂಬುದಕ್ಕೆ ಸೂಕ್ತ ದಾಖಲೆಗಳ ಸಹಿತ ವಿವರಣೆ ಕೊಡಿ. ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ನಿಮ್ಮ ಅಭ್ಯಂತರವಿಲ್ಲವೆಂದು ಪರಿಗಣಿಸಬೇಕಾಗುತ್ತದೆ’ ಎಂಬುದು ಇಡೀ ನೋಟಿಸಿನ ಸಾರಾಂಶ. ವಿಪರ್ಯಾಸವೆಂದರೆ ಮೇ 1ನೇ ತಾರೀಕು ನೋಟಿಸು ಬರುತ್ತೆ, ದಾಖಲೆ ಸಲ್ಲಿಸಲು ಮೇ 2ನೇ ತಾರೀಕು ಮಧ್ಯಾಹ್ನ 3.30ಕ್ಕೆ ಡೆಡ್‍ಲೈನ್ ಫಿಕ್ಸ್ ಮಾಡಲಾಗುತ್ತೆ. ಅಂದರೆ ಕೇವಲ 24 ಗಂಟೆಗಳ ಒಳಗೆ ಅವರು ದಾಖಲೆಗಳನ್ನು ಹಾಜರುಪಡಿಸಬೇಕಾಗಿತ್ತು.

ರಾಘವ್ ಅವರ ಸಿಎ,  incometax.gov.in ಅಕೌಂಟ್‍ಗೆ ಮೇಲ್ ಮಾಡಿ ನಿಮ್ಮ ಶೋಕಾಸ್ ನೋಟಿಸ್‍ನಲ್ಲಿ ಸಾಕಷ್ಟು ತಪ್ಪು ಆರೋಪಗಳಿವೆ, ಅವುಗಳಿಗೆಲ್ಲ ಸೂಕ್ತ ದಾಖಲೆ ಒದಗಿಸಿ, ಕಾನೂನು ಸಲಹೆ ಪಡೆಯಲು ಎರಡು ವಾರ ಕಾಲಾವಕಾಶ ಬೇಕೆಂದು ಮೇ 2ರಂದು ಇಮೇಲ್ ರವಾನಿಸಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿದ್ದ ಐಟಿ ಇಲಾಖೆ, ಎರಡು ವಾರ ಕಾಲಾವಕಾಶ ಕೊಡಲು ಸಾಧ್ಯವೇ ಇಲ್ಲ, ಆದರೆ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದರು ಫ್ಯಾಕ್ಚುಯಲ್ ಎರರ್‍ಗಳನ್ನಾದರು ನೀವು ಇವತ್ತೇ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಾಕೀತು ಮಾಡಿತ್ತು. ರಾಘವ್ ಅವರ ಸಿಎ ಅವತ್ತೇ `ಫ್ಯಾಕ್ಚುಯಲ್ ಪೊಸಿಷನ್’ಗಳನ್ನು ದಾಖಲಿಸಿ ಇಮೇಲ್ ರವಾನಿಸಿದ್ದರು.

ರಾಘವ್ ಅವರು ಒಪ್ಪಿಕೊಳ್ಳುವಂತೆ 2015ರಲ್ಲಿ ಅವರು ಲಂಡನ್‍ನಲ್ಲಿ 27.76 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದು ನಿಜ. ಆದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರವನ್ನು ಬ್ಯಾಂಕ್ ಮಾರ್ಗಗಗಳಲ್ಲೇ ನಡೆಸಿದ್ದಾರೆ. ಹಾಗಾಗಿ ಕಪ್ಪು ಹಣ ವಹಿವಾಟಿಗೆ ಅವಕಾಶವೇ ಇಲ್ಲ. ಖರೀದಿಯ ಮುಂಗಡವಾಗಿ ರಾಘವ್ ಅವರ ಅಕೌಂಟ್‍ನಿಂದ 2.4 ಕೋಟಿ ವರ್ಗಾವಣೆಯಾದರೆ, ಅವರ ಮಡದಿ ರಿತು ಕಪೂರ್ ಅಕೌಂಟ್‍ನಿಂದ ಅಷ್ಟೇ ಮೊತ್ತ ವರ್ಗಾವಣೆಯಾಗಿದೆ. ಸಾಮಾನ್ಯವಾಗಿ ವಿದೇಶಗಳಲ್ಲಿ ಆಸ್ತಿ ಖರೀದಿಸುವಾಗ ಅಲ್ಲಿನ ಕಟ್ಟಳೆಗಳಿಗೆ ಒಳಪಟ್ಟು ಖರೀದಿ ಪ್ರಕ್ರಿಯೆಯನ್ನು ಸರಾಗವಾಗಿ ಪೂರ್ಣಗೊಳಿಸಿಕೊಡುವ ಕೆಲ ಏಜೆನ್ಸಿಗಳಿರುತ್ತವೆ. ಅಂತದ್ದೇ ಒಂದು ಆರ್.ಬಿ.ಆರ್.ಕೆ ಇನ್ವೆಸ್ಟ್‍ಮೆಂಟ್ ಕಂಪನಿಗೆ ರಾಘವ್ ತಮ್ಮ ಖರೀದಿ ವ್ಯವಹಾರ ಒಪ್ಪಿಸಿದ್ದರು. ಆ ಕಂಪನಿ ಇಂಗ್ಲೆಂಡ್‍ನ ಬರ್‍ಕ್ಲೇ ಬ್ಯಾಂಕ್‍ನಿಂದ ರಾಘವ್ ಅವರಿಗೆ ಸುಮಾರು 17.95 ಕೋಟಿಯಷ್ಟು ಸಾಲ ಮಂಜೂರು ಮಾಡಿಸಿದ್ದಲ್ಲದೆ, ಮಿಕ್ಕುಳಿದ 2.45 ಕೋಟಿಯನ್ನು ತನ್ನ ಅಕೌಂಟ್‍ನಿಂದ ಆಸ್ತಿ ಒಡೆಯರಿಗೆ ವರ್ಗಾವಣೆ ಮಾಡಿತ್ತು. ಈಗ ಐಟಿ ಇಲಾಖೆ ಹೆಚ್ಚುವರಿ ಮೌಲ್ಯ ಮುಚ್ಚಿಟ್ಟಿದ್ದೀರಿ ಎಂದು ಆರೋಪಿಸುತ್ತಿರುವುದು ಇದೇ ರೂ. 2.45 ಕೋಟಿಯ ಮೇಲೆ.

ಈ ಕಂಪನಿಯಲ್ಲಿ ರಾಘವ್ ಅವರ ಹೆಂಡತಿ ರಿತು ಕಪೂರ್ ಅವರು ಹೂಡಿಕೆ ಮಾಡಿದ್ದು, ಆ ಹೂಡಿಕೆ ಆಧಾರದಲ್ಲಿ ಕಂಪನಿ ಅಷ್ಟು ಮೊತ್ತ ಪಾವತಿಸಿದೆ. ಆ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಕ್ಕೆ ರಿತು ಅವರ ಬಳಿ ಎಲ್ಲಾ ದಾಖಲೆಗಳಿದ್ದು ಅದನ್ನು ಐಟಿ ಇಲಾಖೆಯ ಮುಂದೆ ಘೋಷಿಸಿಕೊಂಡು, ಕಟ್ಟಬೇಕಾದ ತೆರಿಗೆಯನ್ನೆಲ್ಲ ಪಾವತಿಸಿದ್ದಾರೆ. ಹಾಗಾಗಿ ಕಂಪನಿ ಪಾವತಿಸಿದ ಮೊತ್ತಕ್ಕೂ ರಾಘವ್ ದಂಪತಿಗಳು ನ್ಯಾಯಬದ್ಧವಾಗಿಯೇ ತೆರಿಗೆ ಕಟ್ಟಿದ್ದಾರೆ.

ಇದೆಲ್ಲವನ್ನು ವಿವರಿಸಿ ಇಮೇಲ್ ಕಳಿಸಿದ್ದರೂ ಅದನ್ನು ಲೆಕ್ಕಿಸದೆ, ಐಟಿ ಇಲಾಖೆ ಮೇ 3ನೇ ತಾರೀಕು ಎರಡು ದೂರುಗಳನ್ನು ದಾಖಲಿಸುತ್ತದೆಂದರೆ ಇದು ಪೂರ್ವ ನಿಯೋಜಿತ ಸಂಚು ಎಂಬುದು ರಾಘವ್ ಅವರ ಅಭಿಪ್ರಾಯ. ಯಾಕೆಂದರೆ, ಮೇಲ್‍ನಲ್ಲಿ ವಿವರಿಸಿದ್ದು ಮಾತ್ರವಲ್ಲದೆ ಮೇ 13ರಂದು ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಐಟಿ ಕಚೇರಿಗೆ ಹೋದ ರಾಘವ್ ಅವರ ಪ್ರತಿನಿಧಿಗಳು ಅವುಗಳನ್ನು ಸ್ವೀಕರಿಸಿ, ತಮ್ಮ ಸ್ಪಷ್ಟೀಕರಣ ದಾಖಲಿಸಲು ಅವಕಾಶ ಕೊಡುವಂತೆ ಕೇಳಿದ್ದರು. ಆದರೆ ಅಧಿಕಾರಿಗಳು ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಮಾತ್ರವಲ್ಲದೆ, ಅವರ ಸ್ಪಷ್ಟೀಕರಣವನ್ನೂ ದಾಖಲಿಸಿಕೊಳ್ಳದೆ ವಾಪಾಸು ಕಳಿಸಿದ್ದರು. ಅವತ್ತು ಸಹಾ, ನಿಮ್ಮ ಕಕ್ಷಿದಾರರ ಮೇಲೆ ಈಗಾಗಲೇ (ಮೇ 3ರಂದು) ಕೇಸು ದಾಖಲಿಸಿದ್ದೇವೆ ಎಂಬ ಗುಟ್ಟನ್ನು ಐಟಿ ಅಧಿಕಾರಿಗಳು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ರೆಜಿಸ್ಟಾರ್ ಪೋಸ್ಟ್ ಮೂಲಕ ಅವುಗಳನ್ನೆಲ್ಲ ಐಟಿ ಕಚೇರಿಗೆ ಕಳುಹಿಸಿ, ಮೇ 14ರಂದು ಅದೇ ದಾಖಲೆಗಳ ಪ್ರತಿಗಳನ್ನು iಟಿಛಿomeಣಚಿx.gov.iಟಿ ಅಕೌಂಟಿಗೆ ಮೇಲ್ ಕೂಡಾ ಮಾಡಿದ್ದರು. ಆದರೆ ಅಲ್ಲಿಂದ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ.

ಫ್ಯಾಕ್ಚುಯಲ್ ದೋಷಗಳಿರುವ ಶೋಕಾಸ್ ನೋಟಿಸ್ ನೀಡುವುದು, ನೋಟಿಸ್ ತಲುಪಿದ ಒಂದೇ ದಿನಕ್ಕೆ ದಾಖಲೆ ಒದಗಿಸುವಂತೆ ಅಪ್ರಾಯೋಗಿಕ ಗಡುವು ನೀಡುವುದು, ಅವಧಿ ವಿಸ್ತರಣೆ ಕೋರಿಕೆಯನ್ನು ಮನ್ನಿಸದೆ ಅವರು ಸಲ್ಲಿಸುವ ಪ್ರತಿಕ್ರಿಯೆಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಮಾರನೇ ದಿನವೇ ದೂರು ದಾಖಲಿಸುವುದು, ಆ ದೂರಿನ ಕುರಿತು ಯಾವ ಸುಳಿವನ್ನೂ ಬಿಟ್ಟುಕೊಡದಿರುವುದು, ದಾಖಲೆ ಸಲ್ಲಿಸಲು ಕಚೇರಿಗೆ ಹೋದರೆ ಸ್ವೀಕರಿಸದೆ ವಾಪಾಸು ಕಳಿಸುವುದು, ವಿಚಾರಣೆಗೆ ಕೆಲವೇ ದಿನ ಇರುವಾಗ ಇವರಿಗೆ ಸುದ್ದಿ ಗೊತ್ತಾಗುವುದು, ಇವೆಲ್ಲವನ್ನೂ ಗಮನಿಸಿದರೆ ಕೇಂದ್ರ ಐಟಿ ಇಲಾಖೆ ಉದ್ದೇಶಪೂರ್ವಕವಾಗೇ, ಎಲ್ಲಾ ಕಟ್ಟಳೆಗಳನ್ನು ಧಿಕ್ಕರಿಸಿ ತನ್ನನ್ನು ಟ್ರ್ಯಾಪ್ ಮಾಡಲು ಯತ್ನಿಸುತ್ತಿದೆ ಎಂಬುದು ರಾಘವ್ ಅವರ ಸ್ಪಷ್ಟ ನಿಲುವು.

ರಾಘವ್ ಮತ್ತು ರಿತು ದಂಪತಿಗಳು `ನ್ಯೂಸ್ 18’ ಸಂಸ್ಥೆಯಿಂದ ಹೊರಬಂದ ನಂತರ 2015ರಲ್ಲಿ `ದಿ ಕ್ವಿಂಟ್’ ಎಂಬ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆನ್‍ಲೈನ್ ನ್ಯೂಸ್ ಪೋರ್ಟಲ್ ಆರಂಭಿಸಿದ್ದರು. 2016ರಲ್ಲಿ ಬ್ಲೂಮ್‍ಬರ್ಗ್ ನ್ಯೂಸ್ ಸಂಸ್ಥೆ ಪಾಲುದಾರನಾಗಿ ಇದರಲ್ಲಿ ಹೂಡಿಕೆ ಮಾಡಿದೆ. ಬಹುಪಾಲು ಮಾಧ್ಯಮಗಳು, ಪತ್ರಿಕೆಗಳು ಆಳುವ ಸರ್ಕಾರದ ಕೈಗೊಂಬೆಯಂತೆ, ಒಂದು ಪ್ರಬಲ ರಾಜಕೀಯ ಪಕ್ಷದ ಪಕ್ಷಪಾತಿಗಳಂತೆ ವರ್ತಿಸುತ್ತಿವೆ ಎಂಬ ಅಭಿಪ್ರಾಯ ಜನರ ನಡುವೆ ಮೂಡುತ್ತಿದ್ದ ಕಾಲದಲ್ಲಿ `ದಿ ಕ್ವಿಂಟ್’ ಅದಕ್ಕೆ ತದ್ವಿರುದ್ಧವಾಗಿ ಯಾರ ಮುಲಾಜಿಗೂ ಒಳಗಾಗದೆ ಅಧಿಕಾರಸ್ಥರ ವಿರುದ್ಧವೇ ಆಘಾತಕಾರಿ ಸತ್ಯಗಳನ್ನು ಹೊರಗೆಡವುವ ಸುದ್ದಿಸಂಸ್ಥೆಯಾಗಿ ಗುರುತಿಸಿಕೊಂಡಿತ್ತು. 2018ರಲ್ಲಿ ರಾಘವ್ ಅವರ ಮೇಲೆ ಐಟಿ ದಾಳಿ ನಡೆದಾಗ, ಅದರ ಹಿಂದೆ `ದಿ ಕ್ವಿಂಟ್’ ನ್ಯೂಸ್ ಸಂಸ್ಥೆಯನ್ನು ಹತ್ತಿಕ್ಕುವ ಹುನ್ನಾರಗಳಿರಬಹುದೆಂದು ಹಲವಾರು ವಿಶ್ಲೇಷಕರು ಅಂದಾಜಿಸಿದ್ದರು. ಈಗ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ ಅದು ನಿಜವೆನ್ನಿಸುತ್ತದೆ.

ಇದನ್ನೂ ಓದಿರಿ: ಕನ್ನಡದ ನಟರ ಮೇಲೆಕೆ ಐ.ಟಿ ಕಣ್ಣು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...