Homeಕರ್ನಾಟಕಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

ಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

- Advertisement -
- Advertisement -

| ಶುದ್ದೋದನ |

ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ವಾರಾಹಿ, ಸಾವೆಂಹಕ್ಕಲು, ಗಾಜನೂರು, ಗೇರುಸೊಪ್ಪ, ಭದ್ರಾ, ಮಾಣಿ, ನಾಗಝರಿ ಯೋಜನೆಗಳಿಂದ ಕಷ್ಟ-ನಷ್ಟ ಅನುಭವಿಸಿದ ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸದ ಸರ್ಕಾರಿ ಮಂದಿ ಬೆಂಗಳೂರಿನ ಉದ್ಧಾರಕ್ಕಾಗಿ ಮತ್ತದೇ ಜನ ಸಮೂಹವನ್ನು ಬಲಿಗೊಡಲು ರೆಡಿಯಾಗಿದ್ದಾರೆಂಬುದೇ ವಿಪರ್ಯಾಸ! ಈ ನೀರು ಯೋಜನೆಯಿಂದ ಮರ-ಗಿಡ ನಾಶವಾಗುತ್ತದೆ.

ಇದೊಂಥರಾ ತಮಾಷೆ! ಶರಾವತಿ ನದಿ ದಡದಲ್ಲೇ ಕುಡಿವ ನೀರಿಗಾಗಿ ಹಾಹಾಕಾರ ಎದ್ದಿರುವಾಗ ಲಿಂಗನಮಕ್ಕಿ ಜಲಾಶಯದ ನೀರಿನಿಂದ ಬೃಹತ್ ಬೆಂಗಳೂರಿನ ದಾಹ ತೀರಿಸುವ “ವ್ಯರ್ಥ ಯೋಜನೆ”ಗೆ ಅಧಿಕಾರಸ್ಥ ಪ್ರಭೃತಿಗಳು ಸ್ಕೆಚ್ ಹಾಕುತ್ತಿದ್ದಾರೆ! ಬೆಂಗಳೂರು ಅಭಿವೃದ್ಧಿ ಮಂತ್ರಿ ಪರಮ್ ಸಾಹೇಬರ ಮೇಧಾವಿ ಮೆದುಳಿಗೆ ಈ ಯೋಚನೆ ಅದ್ಹೇಗೆ ಹೊಳೆಯಿತೋ ಏನೋ? ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದಿಸಿದ ನಂತರ ಸಮುದ್ರದತ್ತ ಸಾಗಿ ಪೋಲಾಗುವ ನೀರನ್ನು ಹಿಡಿದು ಬೆಂಗಳೂರಿನತ್ತ ಹೊರಳಿಸುವ ಬಗ್ಗೆ ಪರಮ್ ಹೇಳಿಕೆ ಕೊಟ್ಟಿದ್ದೇ ಕೊಟ್ಟಿದ್ದು ಮಲೆನಾಡಲ್ಲಿ ಸಿಡಿಲು ಬಡಿದಂತಾಗಿದೆ.

ಇದೊಂದು ಅಪ್ಪಟ ಅವೈಜ್ಞಾನಿಕ ಯೋಜನೆ; ತಾಂತ್ರಿಕವಾಗೂ ಕಾರ್ಯಸಾಧುವಲ್ಲ. ಆಡಳಿತಗಾರರ ಕಿಸೆ ತುಂಬುವ ಕಿಕ್‍ಬ್ಯಾಕ್ ಕರಾಮತ್ತು. ಈ ಯೋಜನೆಯಿಂದ ಹಲವು ಹೊಡೆತ ತಿಂದಿರುವ ಶರಾವತಿ ಕೊಳ್ಳದ ಪರಿಸರದ ಮೇಲೆ ಮತ್ತೊಂದು ಭೀಕರ ದಾಳಿಯಾಗುತ್ತದೆ. ಲಿಂಗನಮಕ್ಕಿ ವಿದ್ಯುತ್ ಯೋಜನೆಯಿಂದ ಮುಳುಗಡೆಯಾದ ಏರಿಯಾದ ಜನರಿಗೆ ಇವತ್ತಿಗೂ ನ್ಯಾಯ ಒದಗಿಸಲಾಗಿಲ್ಲ. ಪುನರ್ವಸತಿ ಕೇಂದ್ರಗಳಲ್ಲಿ ಬದುಕು ರೂಪಿಸಿಕೊಳ್ಳಲಾಗದೇ ಹಳ್ಳಿ-ಹಳ್ಳಿಗಳು ಬೀದಿ ಪಾಲಾಗಿವೆ. ನಿರಾಶ್ರಿತರ ಏರಿಯಾದಲ್ಲಿ ಕನಿಷ್ಟ ಗುಟುಕು ಕುಡಿವ ನೀರಿನ ವ್ಯವಸ್ಥೆಯೂ ಆಳುವ ಹೇತ್ಲಾಂಡಿಗಳಿಂದ ಮಾಡಲಾಗಿಲ್ಲ. ಈಗ ಮತ್ತೊಂದು ಜೀವಜಗತ್ತನೇ ಜರ್ಜರಿತಗೊಳಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಹುನ್ನಾರದ ಕತೆ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜನಜೀವನ ನರಕವಾಗಿಸುವ ಈ ಪ್ರಳಯಾಂತಕ ಪ್ಲಾನ್ ವಿರುದ್ಧ ಶಿವಮೊಗ್ಗ, ಸಾಗರ, ಹೊನ್ನಾವರ ಸೀಮೆ ಮಂದಿ ಸಂಘಟಿತರಾಗುತ್ತಿದ್ದಾರೆ.

ಈ ಬಾರಿ ಮಲೆನಾಡಿನ ಜನರು ಕುಡಿಯುವ ನೀರಿಗಾಗಿ ಗೋಳಾಡಿದ್ದು ಹೇಳತೀರದು. ಜೂನ್ ಅರ್ಧ ಕಳೆದರೂ ಮಳೆಯೇ ಬರದೆ ತುಂಗಾ, ಭದ್ರಾ ಮತ್ತು ಶರಾವತಿ ನದಿ ಇಕ್ಕೆಲದ ಹಳ್ಳಿಗರು ನೀರಿಗಾಗಿ ಕಣ್ಣೀರು ಸುರಿಸಿದ್ದರು. ಅದೇ ಹೊತ್ತಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಪರಮ್ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ದೊಡ್ಡ, ದೊಡ್ಡ ಪೈಪ್‍ಗಳ ಮೂಲಕ ನೀರು ಸಾಗಿಸುವ ಯೋಜನೆಯ ವಿಸ್ತøತ ವರದಿ (ಡಿಪಿಆರ್) ತಯಾರಿಸಲು ಅಧಿಕಾರಿಗಳಿಗೆ ಅಪ್ಪಣೆ ಮಾಡಿದ್ದರು. ಕ್ಯಾಬಿನೆಟ್ ತೀರ್ಮಾನವಿಲ್ಲದೆ ಏಕಪಕ್ಷೀಯವಾಗಿ ಪರಮ್ ಹಾರಾಡುತ್ತಿರುವುದು ಕಿಕ್‍ಬ್ಯಾಕ್‍ನ ದೂ(ದು)ರಾಲೋಚನೆಯ ಅನೇಕ-ಅನುಮಾನ ಶರಾವತಿ ಕಣಿವೆಯ ಜನ ಮನದಲ್ಲಿ ಮೂಡಿಸಿದೆ! ದುಬಾರಿಯಾದ ಮತ್ತು ಫಲಪ್ರದವಾಗುವ ಗ್ಯಾರಂಟಿಯಿಲ್ಲದ ಈ ಪ್ರಾಜೆಕ್ಟ್ ಬಗ್ಗೆ ಪರಮ್ ತುಂಬ ಮುತುವರ್ಜಿ ವಹಿಸಿದ್ದು ಯಾಕಿರಬಹುದು?

ವಿದ್ಯುತ್ ಉತ್ಪಾದನೆ ಬಳಿಕ ಲಿಂಗನಮಕ್ಕಿ ಜಲಾಶಯದಿಂದ ಹೊರಹೋಗುವ ನೀರು ವ್ಯರ್ಥವಾಗುತ್ತದೆ ಎಂಬ ವಾದ ಆಡಳಿತಗಾರ ಪಂಡಿತರದು. ಸರಿ, ನೀರು ಪೋಲಾಗುತ್ತದೆಂದು ಬರೋಬ್ಬರಿ 400 ಕಿ.ಮೀ ದೂರ ಕೊಳವೆಗಳ ಮೂಲಕ ನೀರನ್ನು ತಳ್ಳುವ ಸಾವಿರಾರು ಕೋಟಿ ರೂಪಾಯಿ ಯೋಜನೆ ಬೇಕಾ? ಶರಾವತಿ ತೀರದ ಹಲವು ಹಳ್ಳಿಗಳು ಬೊಗಸೆ ನೀರಿಗಾಗಿ ಪರಿತಪಿಸುತ್ತಿವೆ. ನಾಡಿಗೆ ಬೆಳಕು ನೀಡಲು ಸರ್ವಸ್ವ ತ್ಯಾಗ ಮಾಡಿದ ಶರಾವತಿ ನಿರಾಶ್ರಿತರ ಕೇರಿಗಳಿಗೇ ನೀರಿನ ಬರ ಬಡಿದಿದೆ. ಲಿಂಗನಮಕ್ಕಿ ಡ್ಯಾಮ್‍ನ ಆಚೀಚೆಯ ಈ ಜಲ ಬರದ ಪ್ರದೇಶಕ್ಕೆ ಪೋಲಾಗುವ ನೀರನ್ನು ಹರಿಸಿದ್ದರೆ ಪರಮ್‍ಗೆ ಪುಣ್ಯ ಬರುತ್ತಿತ್ತು. ದುಂದುವೆಚ್ಚವೂ ತಪ್ಪುತ್ತಿತ್ತು. ಬೆಂಗಳೂರಿಗೆ ಮಳೆಕೊಯ್ಲಿನ ಮೂಲಕ ಕುಡಿವ ನೀರಿನ ಯೋಜನೆ ರೂಪಿಸಲಾಗದೇ?

ಅಷ್ಟು ಸುಲಭ- ಸರಳವಾಗಿ ನೀರನ್ನು ಕಾರ್ಗಲ್‍ನಿಂದ ಬೆಂಗಳೂರಿಗೆ ಒಯ್ಯಲಾಗದು. ಶರಾವತಿಯಿಂದ ಹೆಚ್ಚು ಕಡಿಮೆ 1500 ಅಡಿ ಎತ್ತರಕ್ಕೆ ನೀರನ್ನು ಎತ್ತಬೇಕಾಗುತ್ತದೆ. ಅಷ್ಟೇ ಅಲ್ಲ 400 ಕಿ.ಮೀ ದೂರಕ್ಕೆ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಸಮುದ್ರ ಮಟ್ಟದಿಂದ ಲಿಂಗನಮಕ್ಕಿ ಎತ್ತರ ಪೂರ್ಣ ತುಂಬಿದಾಗ 1819 ಅಡಿ. ಹಾಗಾಗಿ ಲಿಂಗನಮಕ್ಕಿ ಡ್ಯಾಮ್‍ನಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಟ 1650 ಅಡಿ ಮಟ್ಟದಿಂದ ಪೈಪ್ ಲೈನ್ ಅಳವಡಿಸಬೇಕು. ಸಮುದ್ರಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 300 ಅಡಿ. ಬೆಂಗಳೂರಿನ ತೀರ ಎತ್ತರದ ದೊಡ್ಡ ಬೆಟ್ಟಹಳ್ಳಿ ಇರುವುದು 3150 ಅಡಿ ಎತ್ತರದಲ್ಲಿ. ಈ ಲೆಕ್ಕಾಚಾರದಂತೆ ಕಾರ್ಗಲ್‍ನಿಂದ ಬೆಂಗಳೂರಿಗೆ ನೀರು ತರಲು 1500 ಅಡಿ ಎತ್ತರಕ್ಕೆ ನೀರು ಲಿಫ್ಟ್ ಮಾಡಬೇಕು.

ಎಷ್ಟೇ ಉತ್ತಮ ಗುಣಮಟ್ಟದ ಪಂಪ್ ಆದರೂ ನೂರಕ್ಕೆ ನೂರು ಕಾರ್ಯಕ್ಷಮತೆ ಹೊಂದಿರಲು ಸಾಧ್ಯವಿಲ್ಲ. ಹಾಗಾಗಿ ವಿದ್ಯುತ್ ವ್ಯರ್ಥ ಆಗೇ ಆಗುತ್ತದೆ. ಶರಾವತಿ ಟರ್ಬೈನ್‍ಗಳ ಎತ್ತರ ಅಂತರ (ಗ್ರಾಸ್ ಹೆಡ್) ಸುಮಾರು 1525 ಅಡಿ. ಈ ಹೆಡ್ ಬಳಸಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಹೆಚ್ಚು ಕಡಿಮೆ 10 ಕ್ಯೂಸೆಕ್ಸ್ ನೀರು ಬೇಕಾಗುತ್ತದೆ. ಬೆಂಗಳೂರಿಗೆ ಒಯ್ಯುವ ನೀರನ್ನು ಲಿಂಗನಮಕ್ಕಿಯಿಂದ ಬೆಂಗಳೂರಿನ ಎತ್ತರ ಏರಿಸಲು ಶರಾವತಿ ವಿದ್ಯುತ್‍ಗಾರದಲ್ಲಿ ತಯಾರಾಗುವ ಎಲ್ಲ ವಿದ್ಯುತ್ ಅವಶ್ಯ! ಇನ್ನು 400 ಕಿ.ಮೀ ದೂರಕ್ಕೆ ನೀರು ತಳ್ಳಲು ಬೇರೆಡೆಯಿಂದ ವಿದ್ಯುತ್ ಶಕ್ತಿ ತರಬೇಕೆಂದಾಯ್ತು. ಅಂದರೆ ಬೆಂಗಳೂರಿಗೆ ಪ್ರತಿ ಕ್ಯೂಸೆಕ್ಸ್ ನೀರು ತರಲು ಅದೇ ನೀರಿಂದ ಶರಾವತಿಯಲ್ಲಿ ಉತ್ಪಾದನೆಯಾಗುವ ಕರೆಂಟ್‍ನಿಂದ ಒಂದೂವರೆ ಪಟ್ಟು ವಿದ್ಯುತ್ ಬೇಕಾಗುತ್ತದೆ. ಇದಕ್ಕೆ ನೀರು ಮತ್ತು ವಿದ್ಯುತ್ ಸೋರಿಕೆ ಪ್ರಮಾಣ ಸೇರಿಸಿದರೇ ಹಾನಿ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಇದೊಂದು ಎಡವಟ್ಟು ಪ್ರಾಜೆಕ್ಟ್!

ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ವಾರಾಹಿ, ಸಾವೆಂಹಕ್ಕಲು, ಗಾಜನೂರು, ಗೇರುಸೊಪ್ಪ, ಭದ್ರಾ, ಮಾಣಿ, ನಾಗಝರಿ ಯೋಜನೆಗಳಿಂದ ಕಷ್ಟ-ನಷ್ಟ ಅನುಭವಿಸಿದ ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸದ ಸರ್ಕಾರಿ ಮಂದಿ ಬೆಂಗಳೂರಿನ ಉದ್ಧಾರಕ್ಕಾಗಿ ಮತ್ತದೇ ಜನ ಸಮೂಹವನ್ನು ಬಲಿಗೊಡಲು ರೆಡಿಯಾಗಿದ್ದಾರೆಂಬುದೇ ವಿಪರ್ಯಾಸ! ಈ ನೀರು ಯೋಜನೆಯಿಂದ ಮರ-ಗಿಡ ನಾಶವಾಗುತ್ತದೆ. ಅಪರೂಪದ ಜೀವಸಂಕುಲದ ಅಳಿದುಳಿದ ಶರಾವತಿ ಕಣಿವೆಗೆ ದೊಡ್ಡ ಆಘಾತವಾಗಲಿದೆ. ಪೈಪ್‍ಲೈನ್ ಹಾದುಹೋಗುವ ಊರುಗಳ ಜನರು ಬೀದಿಗೆ ಬೀಳುತ್ತಾರೆ.

ಇಷ್ಟೆಲ್ಲ ಅವಾಂತರ, ಅನಾಹುತದ ನಂತರವಾದರೂ ಯೋಜನೆಯ ಮೂಲ ಉದ್ದೇಶ ಈಡೇರಬಹುದಾ? ಶರಾವತಿ ನೀರು ಬೆಂಗಳೂರು ತಲುಪುವುದು ಅನುಮಾನ! ಯೋಜನೆ ಸರ್ಕಾರಿ ಫೈಲುಗಳಲ್ಲಿ ಕಾರ್ಯಗತವಾಗಿ ರಾಜಕಾರಣಿ-ಅಧಿಕಾರಿ-ಕಂಟ್ರಾಕ್ಟರ್ ಲಾಬಿಯ ದೆಸೆ ಬದಲಿಸಬಹುದಷ್ಟೇ! ಇಂಥ ಹುಚ್ಚು ಯೋಜನೆಗಳನ್ನು ಮಾಡುವುದು ಬಿಟ್ಟು ಬೆಂಗಳೂರಿನ ಅನಿಯಂತ್ರಿತ ಯದ್ವಾತದ್ವಾ ಬೆಳವಣಿಗೆಗೆ ಕಡಿವಾಣ ಹಾಕಿದರೆ ನೀರಡಿಕೆ ಸಮಸ್ಯೆಯೊಂದೇ ಅಲ್ಲ ಟ್ರಾಫಿಕ್ ಜಾಮ್, ಕಸದ ಸಮಸ್ಯೆ, ಪರಿಸರ ಮಾಲಿನ್ಯದಂಥ ಗಂಡಾಂತರದಿಂದಲೂ ಬಚಾವಾಗಬಹುದು. ಎಲ್ಲಾ ಮೂಲ ಸೌಕರ್ಯಗಳನ್ನು ತಾನೊಂದೇ ನುಂಗುವ ಬೆಂಗಳೂರಿನ ಕೈಗಾರಿಕೆಗಳನ್ನು ವಿಕೇಂದ್ರೀಕರಣಕ್ಕೆ ಒಳಪಡಿಸಿದರೆ ಕನಿಷ್ಟವೆಂದರೂ ಸಾಗರ, ಶಿರಸಿ, ಶಿವಮೊಗ್ಗ, ಚಿಕ್ಕಮಗಳೂರು, ಕಾರವಾರ ವ್ಯವಸ್ಥಿತವಾಗಿ ಉದ್ಧಾರವೂ ಆಗುತ್ತದೆ.

ತಮಿಳು-ತೆಲುಗರಿಗೆ ಹತ್ತಿರವಾದ ಬೆಂಗಳೂರನ್ನು ಕುರುಡಾಗಿ ಬೆಳೆಸುವ ಬದಲು ಕನ್ನಡ ನಾಡಿನ ಒಡಲೊಳಗೆ ಇರುವ ಸಾಗರ, ಶಿರಸಿ, ಶಿವಮೊಗ್ಗವನ್ನೇಕೆ ಅಭಿವೃದ್ಧಿಪಡಿಸಬಾರದೆಂಬ ಕೂಗು ಈಗ ಮಲೆನಾಡಲ್ಲಿ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶಿವಮೊಗ್ಗ, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ ಬೆಂಗಳೂರಿನ ಐಟಿ-ಬಿಟಿ ಇಂಡಸ್ಟ್ರಿಗಳನ್ನು ಸಾಗರ-ಶಿರಸಿಯತ್ತ ಏಕೆ ತರಬಾರದೆಂಬ ವಾದ ಬಲಗೊಳ್ಳುತ್ತಿದೆ. ಇದರಿಂದ ಒಂದೇ ಕಾಲದಲ್ಲಿ ಬೆಂಗಳೂರು ಮತ್ತು ಹಿಂದುಳಿದ ಮಲೆನಾಡಿನ ಹಲವು ಸಮಸ್ಯೆ-ಸಂಕಷ್ಟ ಪರಿಹಾರವಾಗುತ್ತದೆ. ಬರಡಾದ ಹಳ್ಳಿಗಳಲ್ಲಿ ಶಕ್ತಿ, ಮಾನವ ಸಂಪನ್ಮೂಲ ಉಳಿಯುತ್ತದೆ; ಪರಿಸರ ಪಸಂದಾಗಿರುತ್ತದೆ. ಬೆಂಗಳೂರಲ್ಲಿ ನೌಕರಿ ಮಾಡುತ್ತಿರುವ ಮಕ್ಕಳ ನೆನಪಲ್ಲಿ ಚಡಪಡಿಸುತ್ತಿರುವ ಅಮಾಯಕ ತಾಯ್ತಂದೆಯರ ಬದುಕು ಬಚಾವಾಗುತ್ತದೆ.

ಇಂಥ ಸುಸ್ಥಿರ ಅಭಿವೃದ್ಧಿ ಬೇಕಾ? ಬರಡು ಯೋಜನೆ ಕಡತದಲ್ಲಿ ಶುರುವಾಗೋದು ಬೇಕಾ? ಪರಮ್ ಸಾಹೇಬರಿಗೆ ಅರ್ಥ ಮಾಡಿಸೋರ್ಯಾರು?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...