ಶನಿವಾರದಂದು 16 ವರ್ಷದ ಬಾಲಕಿಯೊಬ್ಬಳು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.
ಮೃತರು ಕಾಣಿಯೂರು ಗ್ರಾಮದ ನಿವಾಸಿಯಾಗಿದ್ದು, ಆಕೆ ಮನ್ಶರ್ ಪ್ಯಾರಾ ಮೆಡಿಕಲ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು.
ಬಾಲಕಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹೃದಯ ಸ್ತಂಭನದಿಂದ ಸಾವಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ: 10ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ; ಮೂವರ ಬಂಧನ
ಬಾಲಕಿ ಮತ್ತು ಆಕೆಯ ತಂದೆ ಶನಿವಾರ ಮನೆಯಿಂದ ಗೇರುಕಟ್ಟೆ ಶಾಲೆಗೆ ತೆರಳಿದ್ದರು. ನಂತರ ಆಕೆಯನ್ನು ಕುಪ್ಪೆಟ್ಟಿಯಲ್ಲಿ ಬಿಟ್ಟು ತಂದೆ ಮಂಗಳೂರಿಗೆ ತೆರಳಿದ್ದರು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಎಂಎಂ ತಿಳಿಸಿದ್ದಾರೆ.
“ಬೆಳಿಗ್ಗೆ 9.15ಕ್ಕೆ ಶಾಲೆಯ ಬಳಿಯ ಇರುವ ಐಮನ್ ಆರ್ಕೇಡ್ನಲ್ಲಿರುವ ಮನೆಯ ವಾಶ್ ರೂಂ ಅನ್ನು ಅವಳು ಬಳಸಿದ್ದಳು. ಬಹಳ ಸಮಯ ಕಳೆದ ನಂತರವೂ ಆಕೆ ಹೊರಗೆ ಬಾರದಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ಅವರು ಕಿಟಕಿಯ ಮೂಲಕ ಪರಿಶೀಲಿಸಿದಾಗ ಅವರು ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ” ಎಂದು ನಂದಕುಮಾರ್ ಹೇಳಿದರು.
“ಶಾಲೆಯ ಪ್ರಾಂಶುಪಾಲರು ತಕ್ಷಣ ಬಾಗಿಲು ಒಡೆದು ಬಾಲಕಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಅನ್ನು ನೀಡಿದ್ದರು. ನಾಡಿಮಿಡಿತ ಮರಳಿ ಬಂದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಲಾಗಿದೆ. ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿ ನಂತರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ದೂರಿನಲ್ಲಿ ಬಾಲಕಿಯ ತಂದೆಯವರು, ಇದು ಅನುಮಾನಾಸ್ಪದ ಸಾವು ಎಂದು ಹೇಳಿದ್ದಾರೆ ಆದರೆ, ಮೃತನ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ನಾವು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪಿಎಸ್ಐ ಹೇಳಿದ್ದಾರೆ.
ಈ ಘಟನೆಯ ಕುರಿತು ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರೀಕ್ಷಿಸಿದ್ದೇವೆ. ಆದರೆ, ಈ ಸಾವಿನಲ್ಲಿ ಯಾವುದೇ ಅನುಮಾನಗಳು ಕಂಡುಬಂದಿಲ್ಲ. ತನಿಖೆ ನಡೆಯುತ್ತಿದೆ, ಶವಪರೀಕ್ಷೆಯಲ್ಲಿ ಏನು ವರದಿ ಬರುತ್ತದೆಯೋ ಕಾದುನೋಡೋಣ ಎಂದು ಹೇಳುವ ಮೂಲಕ ಅನುಮಾನಾಸ್ಪದ ಸಾವು ಎನ್ನುವ ಸಂಶಯವನ್ನು ನಂದಕುಮಾರ್ ನಿರಾಕರಿಸಿದ್ದಾರೆ.