ಕಟ್ಟಡಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಕೊಡಿಸುವ ಆಮಿಷವೊಡ್ಡಿ ಏಜೆಂಟ್ಗಳು ಭಾರತದಿಂದ 100ಕ್ಕೂ ಅಧಿಕ ಮಂದಿಯನ್ನು ರಷ್ಯಾಗೆ ಕರೆಸಿಕೊಂಡು ರಷ್ಯಾ ಗಡಿಯಲ್ಲಿ ಯುದ್ಧಕ್ಕೆ ನಿಯೋಜಿಸಿರುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಗುಜರಾತ್ ನಿವಾಸಿಯೋರ್ವ ರಷ್ಯಾ-ಉಕ್ರೇನ್ ಗಡಿಯಲ್ಲಿರುವ ಡೊನೆಟ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವ ಸುದ್ದಿ ಬಹಿರಂಗವಾಗಿದೆ.
ಗುಜರಾತ್ ರಾಜ್ಯದ ಸೂರತ್ ನಿವಾಸಿ ಹೆಮಿಲ್ ಅಶ್ವಿನ್ಭಾಯ್ ಮಂಗುಕಿಯಾ ಮೃತರು. ರಷ್ಯಾದ ಕಟ್ಟಡದಲ್ಲಿ ಸೆಕ್ಯೂರಿಟಿ ಕೆಲಸಕ್ಕೆಂದು ಸಳ್ಳು ಹೇಳಿ ಇವರನ್ನು ಕರೆಸಿಕೊಂಡು ರಷ್ಯಾ ಗಡಿಯಲ್ಲಿ ಯುದ್ಧಕ್ಕೆ ನಿಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಹೆಮಿಲ್ ಅಶ್ವಿನ್ಭಾಯ್ ಮಂಗುಕಿಯಾ ಡಿಸೆಂಬರ್ 2023ರಿಂದ ರಷ್ಯಾದಲ್ಲಿದ್ದರು. ಸಾವಿನ ಬಗ್ಗೆ ನಮಗೆ ಮಾಹಿತಿ ನೀಡಲಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಮಂಗುಕಿಯಾ ಅವರ ತಂದೆಯ ಪರವಾಗಿ ಏಜೆಂಟರೊಬ್ಬರು ಈ ತಿಂಗಳ ಆರಂಭದಲ್ಲಿ ಭಾರತೀಯ ದೂತಾವಾಸಕ್ಕೆ ಪತ್ರ ಬರೆದು ಆತನನ್ನು ಮನೆಗೆ ಕರೆತರಲು ಸಹಾಯವನ್ನು ಕೇಳಿದ್ದರು ಎಂದು ಹಿಂದೂ ವರದಿ ಮಾಡಿತ್ತು. ಫೆಬ್ರವರಿ 2ರಂದು ಮಂಗುಕಿಯಾ ಅವರ ತಂದೆಯ ಪರವಾಗಿ ಭಾರತೀಯ ಕಾನ್ಸುಲೇಟ್ಗೆ ಕಳುಹಿಸಲಾದ ಇಮೇಲ್ನಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ಉಲ್ಲೇಖಿಸಿ ಅವರ ಮಗನ ಮರಳಲು ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ರಷ್ಯಾದ ಸೈನ್ಯದೊಂದಿಗೆ ಕೆಲಸ ಮಾಡುವ ಭಾರತೀಯರನ್ನು ಬಿಡುಗಡೆಗಾಗಿ ರಷ್ಯಾದ ಅಧಿಕಾರಿಗಳನ್ನು ಸಂಪರ್ಕಿಸಿರುವುದಾಗಿ ಕೇಂದ್ರ ಸರ್ಕಾರ ಈ ಮೊದಲು ಹೇಳಿತ್ತು.
100ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ರಷ್ಯಾದ ಸೇನೆಯು ಭದ್ರತಾ ಸಹಾಯಕರನ್ನಾಗಿ ನೇಮಿಸಿಕೊಂಡಿದೆ ಮತ್ತು ಅವರಲ್ಲಿ ಕೆಲವರು ಅವರನ್ನು ಯುದ್ಧ ವಲಯಕ್ಕೆ ಕಳುಹಿಸುವುದಿಲ್ಲ ಎಂಬ ಭರವಸೆಯ ಹೊರತಾಗಿಯೂ ರಷ್ಯಾದ ಪಡೆಗಳೊಂದಿಗೆ ಹೋರಾಡಲು ಒತ್ತಾಯಿಸಲಾಗುತ್ತಿದೆ ಎಂದು ವರದಿಯಾಗಿದೆ.
ಕರ್ನಾಟಕದ ಗುಲ್ಬರ್ಗದ ನಿವಾಸಿ ಸಮೀರ್ ಅಹ್ಮದ್ ಈ ಕುರಿತು ಮಾತನಾಡಿದ್ದು, ಮಂಗುಕಿಯಾ ಹೆಮಿಲ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಡ್ರೋನ್ ನಮ್ಮ ಮೇಲೆ ಸುತ್ತಾಡುವುದನ್ನು ನಾವು ನೋಡಿದ್ದೇವೆ. ನಾವು ಕಂದಕವನ್ನು ಅಗೆಯುತ್ತಿದ್ದೆವು. ಇದ್ದಕ್ಕಿದ್ದಂತೆ ನಮಗೆ ಏನೋ ಶಬ್ದ ಕೇಳಿಸಿತು. ನಾನು ಮತ್ತು ಇತರ ಇಬ್ಬರು ಭಾರತೀಯರು, ಇತರ ರಷ್ಯಾದ ಸೈನಿಕರು ಕಂದಕದಲ್ಲಿ ಅಡಗಿಕೊಂಡೆವು. ಕ್ಷಿಪಣಿಗಳು ಹೊಡೆದವು ಮತ್ತು ಭೂಮಿಯು ನಡುಗಿತು. ಸ್ವಲ್ಪ ಸಮಯದ ನಂತರ ನಾವು ಹೊರಬಂದಾಗ, ಹೆಮಿಲ್ ಮೃತಪಟ್ಟಿರುವುದನ್ನು ಕಂಡುಕೊಂಡೆವು. ಅವರ ಶವವನ್ನು ಟ್ರಕ್ಗೆ ಹಾಕಿದ್ದು ನಾನೇ ಎಂದು ಸಮೀರ್ ಅಹ್ಮದ್ ಹೇಳಿದ್ದಾರೆ.
ಮಂಗುಕಿಯಾ ಹೆಮಿಲ್ ದೇಹದ ಮೇಲಿನ ಗಾಯಗಳು ಮತ್ತು ಆತನ ರಕ್ತ ಸಿಕ್ತ ದೇಹಗಳನ್ನು ತೋರಿಸುವ ಪೋಟೋವನ್ನು ಇನ್ನೋರ್ವ ಭಾರತೀಯ ಸಿಬ್ಬಂದಿ ಹಂಚಿಕೊಂಡಿದ್ದಾರೆ. ಫೆಬ್ರವರಿ 21ರಂದು ದಾಳಿಗೆ ಒಳಗಾದ ಗುಂಪಿನಲ್ಲಿ ಮೃತ ಹೆಮಿಲ್ ಸೇರಿದಂತೆ ನಾಲ್ವರು ಭಾರತೀಯರು ಇದ್ದರು. ಹೆಮಿಲ್ ರಷ್ಯಾದ ಮಿಲಿಟರಿ ಕಮಾಂಡರ್ಗೆ ತುಂಬಾ ಹತ್ತಿರವಾಗಿದ್ದರು ಮತ್ತು ಅವರ ನಂಬಿಕಸ್ಥರಲ್ಲಿ ಹೆಮಿಲ್ ಕೂಡ ಇದ್ದರು. ಕಂದಕ ಅಗೆಯುತ್ತಿದ್ದಾಗ ವಾಯುದಾಳಿ ನಡೆದಿದೆ. ಕೊಲ್ಲಲ್ಪಟ್ಟವರಲ್ಲಿ ಒಬ್ಬ ನೇಪಾಳೀಯನೂ ಇದ್ದಾನೆ ಎಂದು ಮತ್ತೊಬ್ಬ ಭಾರತೀಯ ಸಿಬ್ಬಂದಿ ಹೇಳಿದ್ದಾರೆ.
ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಬಗ್ಗೆ ಮನವಿಯನ್ನು ಮಾಡಿದ್ದರೂ ನಮ್ಮ ಮನವಿಯನ್ನು ಪರಿಗಣಿಸಲಾಗಿಲ್ಲ ಎಂದು ಭಾರತೀಯ ಪ್ರಜೆಗಳು ಆರೋಪಿಸಿದ್ದರು. ನಾವು ಭಾರತದಿಂದ ಒಟ್ಟಿಗೆ ಬಂದಿದ್ದೇವೆ. ಹೆಮಿಲ್ ನನ್ನ ಮುಂದೆ ಸತ್ತು ಬಿದ್ದಿದ್ದಾರೆ. ಅವರು ನಮ್ಮನ್ನು ಗಡಿಗೆ ಕಳುಹಿಸುತ್ತಾರೆ ಮತ್ತು ನಮ್ಮನ್ನು ಕೂಡ ಹತ್ಯೆ ಮಾಡಲಾಗುತ್ತದೆ ಎಂದು ನಾವು ಹೆದರುತ್ತೇವೆ. ನಮ್ಮನ್ನು ಬಿಡುಗಡೆ ಮಾಡಲು ನಾವು ರಷ್ಯಾದ ಕಮಾಂಡರ್ನ್ನು ಕೇಳಿದಾಗ, ನಾವು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದು ಅವರು ಹೇಳುತ್ತಾರೆ. ದಯವಿಟ್ಟು ನಮ್ಮನ್ನು ಉಳಿಸಿ ಎಂದು ಸಮೀರ್ ಅಹ್ಮದ್ ಮನವಿಯನ್ನು ಮಾಡಿದ್ದಾರೆ.
ನಮ್ಮನ್ನು ಸೇನೆಯ ಭದ್ರತಾ ಸಹಾಯಕರಾಗಿ ನೇಮಿಸಲಾಗಿದೆ ಆದರೆ ಅವರು ರಷ್ಯಾ-ಉಕ್ರೇನ್ ಗಡಿಯಲ್ಲಿ ಹೋರಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ನಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ನಾವು ಭಯಪಡುತ್ತೇವೆ. ಪದೇ ಪದೇ ಮನವಿ ಮಾಡಿದರೂ ಸರ್ಕಾರ ನಮ್ಮನ್ನು ರಕ್ಷಿಸಲು ಏನನ್ನೂ ಮಾಡುತ್ತಿಲ್ಲ ಎಂದು ಭಾರತೀಯ ಸಿಬ್ಬಂದಿಗಳು ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನು ಓದಿ: ಉತ್ತರಪ್ರದೇಶದಲ್ಲಿ ಮುಂದುವರಿದ ಭಾರತ್ ಜೋಡೋ ನ್ಯಾಯ ಯಾತ್ರೆ: ಮೋದಿಯಿಂದ ಕೋಟ್ಯಾಧಿಪತಿಗಳ ತೆರಿಗೆ ಮನ್ನಾ; ರಾಹುಲ್ ವಾಗ್ಧಾಳಿ