“ಗಾಝಾ ಸಾವಿನ ಮನೆಯಾಗಿ ಮಾರ್ಪಟ್ಟಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಗಾಝಾದ ಹೆಚ್ಚಿನ ಪ್ರದೇಶಗಳು ನಾಶವಾಗಿವೆ. ಬರೋಬ್ಬರಿ 29,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ, ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ. ಸಾವಿರಾರು ಜನರು ಗಾಯಗೊಂಡಿದ್ದಾರೆ” ಎಂದು ಘೆಬ್ರೆಯೆಸಸ್ ತಿಳಿಸಿದ್ದಾರೆ.
ಅಪೌಷ್ಠಿಕತೆ ಹೆಚ್ಚಳ :
“ಅಕ್ಟೋಬರ್ 7ರಂದು ಯುದ್ಧ ಪ್ರಾರಂಭವಾದಾಗಿನಿಂದ ಗಾಝಾದಲ್ಲಿ ಅಪೌಷ್ಠಿಕತೆಯ ಪ್ರಮಾಣ ಭಾರೀ ಹೆಚ್ಚಳವಾಗಿದೆ. ಕೆಲ ಪ್ರದೇಶಗಳಲ್ಲಿ ಶೇ.1ಕ್ಕಿಂತ ಕಡಿಮೆ, ಕೆಲ ಪ್ರದೇಶಗಳಲ್ಲಿ ಶೇ.15ಕ್ಕಿಂತ ಹೆಚ್ಚು ಅಪೌಷ್ಠಿಕತೆಯಿದೆ” ಎಂದು ಹೇಳಿದ್ದಾರೆ.
“ಯುದ್ಧ ಮುಂದುವರೆಯಲಿರುವ ಹಿನ್ನೆಲೆ, ಆಹಾರ ಸಾಮಗ್ರಿಗಳ ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಇದರಿಂದ ಜನರಿಗೆ ಸರಿಯಾದ ಆಹಾರ ಸಿಗದೆ ಅಪೌಷ್ಠಿಕತೆಯ ಪ್ರಮಾಣ ಇನ್ನೂ ಹೆಚ್ಚಳವಾಗಬಹುದು. ಉತ್ತರ ಗಾಝಾ ಪ್ರದೇಶಕ್ಕೆ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್ಪಿ) ಯಂತಹ ಸಂಸ್ಥೆಗಳು ತೆರಳಲು ಸಾಧ್ಯವಾಗುತ್ತಿಲ್ಲ. ಮಾನವೀಯ ಸಿಬ್ಬಂದಿ ಮತ್ತು ಸಹಾಯವನ್ನು ಬಯಸುವವರಿಗೆ ಭದ್ರತೆಯ ಕೊರತೆಯಿಂದಾಗಿ ಡಬ್ಲ್ಯುಎಫ್ಪಿ ಅಲ್ಲಿ ತನ್ನ ಸಹಾಯ ವಿತರಣೆಯನ್ನು ಸ್ಥಗಿತಗೊಳಿಸಿದೆ” ಎಂದು ಘೆಬ್ರೆಯೆಸಸ್ ಕಳವಳ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ನೆರವಿನ ಮೇಲೆ ದಾಳಿ :
ಯುದ್ಧದಿಂದ ಸಂತ್ರಸ್ತ ಜನರಿಗೆ ಸಹಾಯ ಒದಗಿಸುತ್ತಿರುವ ಸ್ವಯಂ ಸೇವಕರಿಗೆ ದೊಡ್ಡ ಭೀತಿ ಉಂಟಾಗಿದೆ. ನೂರಾರು ಮಾನವೀಯ ನೆರವಿನ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ. ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (ಎಂಎಸ್ಎಫ್) ಶಿಬಿರದ ಮೇಲೆ ಮಂಗಳವಾರ (ಫೆ.20) ರಾತ್ರಿ (ಸ್ಥಳೀಯ ಕಾಲಮಾನ) ಶೆಲ್ ದಾಳಿ ನಡೆದಿದೆ. ಇರಿಂದ ಅಲ್ಲಿನ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
ವಿಶ್ವಸಂಸ್ಥೆಯ ತುರ್ತು ಪರಿಹಾರ ಯೋಜನೆಯ ಸಂಯೋಜಕ ಮಾರ್ಟಿನ್ ಗ್ರಿಫಿತ್ಸ್, “ಗಾಝಾ ಮೇಲಿನ ದಾಳಿಯಿಂದ ತಾನು ದಿಗ್ಭ್ರಮೆಗೊಂಡಿದ್ದೇನೆ. ಅಲ್ಲಿನ ಜನರ ದುಃಖದಲ್ಲಿ ಭಾಗಿಯಾಗಿದ್ದೇನೆ. ಇತರ ನಾಗರಿಕರಂತೆ ಮಾನವೀಯ ನೆರವು ಒದಗಿಸುತ್ತಿರುವ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಿಸಬೇಕು” ಎಂದು ಎಕ್ಸ್ ಪೋಸ್ಟ್ನಲ್ಲಿ ಮನವಿ ಮಾಡಿದ್ದಾರೆ.
‘ನಾವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ’?
ಮಾನವೀಯತೆಯ ಗಂಭೀರ ಅಪಾಯವನ್ನು ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಪುನರುಚ್ಚರಿಸಿದ್ದಾರೆ. ಎಲ್ಲಾ ನಾಗರಿಕರನ್ನು ತುರ್ತಾಗಿ ರಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ. “ಜನರಿಗೆ ಆಹಾರ, ನೀರು ಸಿಗುತ್ತಿಲ್ಲ. ಕನಿಷ್ಠ ಪಕ್ಷ ಸ್ವತಂತ್ರವಾಗಿ ಓಡಾಡಲು ಆಗುತ್ತಿಲ್ಲ. ನಾವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ?” ಎಂದು ಘೆಬ್ರೆಯೆಸಸ್ ಬೇಸರ ವ್ಯಕ್ತಪಡಿಸಿದ್ದಾರೆ.
“ಸಂಕಷ್ಟದಲ್ಲಿರುವ ಜನರ ಜೀವ ಉಳಿಸಲು ಧಾವಿಸುವ ಆರೋಗ್ಯ ಕಾರ್ಯಕರ್ತರು ಬಾಂಬ್ ದಾಳಿಯ ಅಪಾಯದಲ್ಲಿದ್ದಾರೆ. ಔಷಧಗಳ ಕೊರತೆಯಿಂದ ಆಸ್ಪತ್ರೆಗಳು ಮುಚ್ಚಲ್ಪಡುತ್ತಿವೆ. ಹಾಗಾದರೆ, ನಾವು ಯಾವ ಜಗತ್ತಿನಲ್ಲಿದ್ದೇವೆ?” ಎಂದು ಘೆಬ್ರೆಯೆಸಸ್ ಪುನರುಚ್ಚರಿಸಿದ್ದಾರೆ.
ತಕ್ಷಣದ ಕದನ ವಿರಾಮದ ಘೋಷಿಸಬೇಕು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು, ಬಂದೂಕುಗಳು ಮೌನವಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ : ಕನ್ನಡಿಗರು ಸೇರಿದಂತೆ ಭಾರತೀಯ ಯುವಕರನ್ನು ಯುದ್ಧಕ್ಕೆ ಕಳುಹಿಸಿದ ರಷ್ಯಾ: ರಕ್ಷಿಸುವಂತೆ ಓವೈಸಿ ಮನವಿ