‘ಸೆಕ್ರೆಟರಿಯೇಟ್ ಚಲೋ’ ನಡೆಸುತ್ತಿದ್ದ ಆಂಧ್ರ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕ(ಎಪಿಸಿಸಿ) ದ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಅವರನ್ನು ವಿಜಯವಾಡ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಮೆರವಣಿಗೆಗೆ ಅನುಮತಿ ಇರಲಿಲ್ಲ. ಈ ಕಾರಣಕ್ಕೆ ವೈ.ಎಸ್ ಶರ್ಮಿಳಾ, ಎಪಿಸಿಸಿ ಮುಖ್ಯಸ್ಥ ಜಿ ರುದ್ರರಾಜು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಪೇದೆಗಳು ಶರ್ಮಿಳಾ ಅವರನ್ನು ಬಲವಂತವಾಗಿ ಎಳೆದೊಯ್ದು ಪೊಲೀಸ್ ವಾಹನಕ್ಕೆ ಹತ್ತಿಸಿದ್ದು, ಈ ವೇಳೆ ಅವರ ಕೈಗಳಿಗೆ ಸ್ವಲ್ಪ ಗಾಯಗಳಾಗಿವೆ ಎಂದು ವರದಿಗಳು ಹೇಳಿವೆ. ರಾಜ್ಯದ ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಪರಿಹರಿಸುವಂತೆ ಶರ್ಮಿಳಾ ಅವರು ಗುರುವಾರ ಬೆಳಗ್ಗೆ ವಿಜಯವಾಡದಲ್ಲಿ’ಚಲೋ ಸೆಕ್ರೆಟರಿಯೇಟ್’ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರು. ಮೆರವಣಿಗೆ ನಗರದ ಏಲೂರು ರಸ್ತೆಗೆ ಬರುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಶರ್ಮಿಳಾ ಮತ್ತು ಅವರ ಬೆಂಬಲಿಗರು ರಸ್ತೆಯಲ್ಲೇ ನಿಂತಿದ್ದರು.
జగన్ పార్టీ ప్రత్యేక రాజ్యాంగంలో ప్రజాస్వామ్యం ఖూనీ అయ్యింది. మీరు పూర్తి చేయని హామీలను ప్రశ్నిస్తే అరెస్ట్ చేసి నిర్బంధిస్తారా? కాంగ్రెస్ పార్టీ అధ్యక్షురాలిగా నాకే ఈ పరిస్థితి ఉంటే ఇక సామాన్యుడి పరిస్థితి ఏంటి? ప్రజాస్వామ్య దేశంలో ఉన్నామా? లేక రాచరికపు పాలన లో ఉన్నామా?మెగా… pic.twitter.com/61LVRvN1Yw
— YS Sharmila (@realyssharmila) February 22, 2024
“ಸಿಎಂ ಮತ್ತು ಅವರ ಸರ್ಕಾರ ನಮ್ಮ ಪ್ರತಿಭಟನೆಯಿಂದ ಹೆದರಿಕೊಂಡಿದೆ. ನಾನು ಸೆಕ್ರೆಟರಿಯೇಟ್ಗೆ ಹೋಗಿ ಯುವಕರಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಮಾತನಾಡಲು ಬಯಸುತ್ತೇನೆ. ಒಬ್ಬ ಮಹಿಳಾ ರಾಜಕಾರಣಿಯನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಖಂಡನೀಯ. ನಾನು ರಾಜಶೇಖರ ರೆಡ್ಡಿ ಅವರ ಮಗಳು, ಹೆದರುವವಲಲ್ಲ. ನನ್ನ ಹೋರಾಟ ಮುಂದುವರಿಸುತ್ತೇನೆ” ಎಂದು ವಿಜಯವಾಡದ ಮಂಗಳಗಿರಿ ಪೊಲೀಸ್ ಠಾಣೆಯ ಮುಂದೆ ಶರ್ಮಿಳಾ ಹೇಳಿದ್ದಾರೆ.
ಇಂದು ಸೆಕ್ರೆಟರಿಯೇಟ್ ಚಲೋ ನಡೆಸುವುದಾಗಿ ಶರ್ಮಿಳಾ ಘೋಷಿಸಿದ ಬಳಿಕ ಅವರನ್ನು ಪೊಲೀಸರು ಗೃಹ ಬಂಧನಲ್ಲಿಡುವ ಭೀತಿಯಿತ್ತು. ಈ ಹಿನ್ನೆಲೆ, ಶರ್ಮಿಳಾ ನಿನ್ನೆ(ಬುಧವಾರ) ಕಾಂಗ್ರೆಸ್ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ಭೀತಿಯಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಸಂಸದ ಕೆವಿಪಿ ರಾಮಚಂದ್ರ ರಾವ್ ಅವರ ಮನೆಗೆ ಭೇಟಿ ನೀಡುವುದನ್ನೂ ಶರ್ಮಿಳಾ ರದ್ದುಪಡಿಸಿದ್ದರು.
ಇಂದು (ಗುರುವಾರ) ಬೆಳಗ್ಗೆ ಪೊಲೀಸರು ಕಾಂಗ್ರೆಸ್ ಕಚೇರಿಯನ್ನು ಸುತ್ತುವರಿದಿದ್ದರಿಂದ, ಶರ್ಮಿಳಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಅಲ್ಲೇ ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು. ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚುನಾವಣಾ ಪ್ರಚಾರದ ವೇಳೆ ನೀಡಿದ ಭರವಸೆಯಂತೆ 23,000 ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಬೇಕು ಎಂದು ಶರ್ಮಿಳಾ ಒತ್ತಾಯಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶರ್ಮಿಳಾ, “ಚುನಾವಣೆಗೆ ಎರಡು ತಿಂಗಳಿಗಿಂತ ಕಡಿಮೆ ಸಮಯವಿದೆ. ಈಗ 6,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಮೆಗಾ ಡಿಎಸ್ಸಿ (ನೇಮಕಾತಿಗಾಗಿ ಜಿಲ್ಲಾ ಆಯ್ಕೆ ಸಮಿತಿ) ನಡೆಸುವ ಬದಲು ಅವರು ದಗಾ (ವಂಚನೆ) ಡಿಎಸ್ಸಿ ಮಾಡುತ್ತಿದ್ದಾರೆ. ವೈಎಸ್ಆರ್ಸಿಪಿ ಆಡಳಿತವು ಸರ್ವಾಧಿಕಾರದಂತಿದೆ. ಇದನ್ನು ಪ್ರತಿಭಟಿಸುವವರನ್ನು ಗೃಹ ಬಂಧನದಲ್ಲಿ ಇರಿಸಲಾಗುತ್ತಿದೆ ಎಂದು ಕಿಡಿಕಾರಿದರು.
“ಸಾವಿರಾರು ಪೊಲೀಸರು ನಮ್ಮನ್ನು ಸುತ್ತುವರಿದಿದ್ದಾರೆ. ನಮ್ಮ ಸುತ್ತಲೂ ಕಬ್ಬಿಣದ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ನಮ್ಮನ್ನು ಒತ್ತೆಯಾಳಾಗಿ ಇರಿಸಲಾಗಿದೆ. ನಿರುದ್ಯೋಗಿಗಳ ಪರ ನಿಂತರೆ ಬಂಧಿಸಲಾಗುತ್ತಿದೆ. ನೀವು ನಮ್ಮನ್ನು ತಡೆಯಲು ಬಯಸುವ ಸರ್ವಾಧಿಕಾರಿಗಳು. ಇದಕ್ಕೆ ನಿಮ್ಮ ನಡೆಗಳೇ ಸಾಕ್ಷಿ” ಎಂದು ಶರ್ಮಿಳಾ ಗುಡುಗಿದರು. ಕಾಂಗ್ರೆಸ್ ನಾಯಕರು ಮತ್ತು ಜನರು ಪ್ರತಿಭಟನೆ ನಡೆಸದಂತೆ ವೈಎಸ್ಆರ್ಸಿಪಿ ಸರ್ಕಾರ ಮತ್ತು ಪೊಲೀಸರು ತಡೆಯುವುದು ‘ಅಸಂವಿಧಾನಿಕ’ ಎಂದರು.
ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರಿ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರು ಜನವರಿ 16 ರಂದು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ರಾಜ್ಯದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಹಾಗೂ ಕಾನೂನು ಸುವ್ಯಸ್ಥೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತನ್ನ ಸಹೋದರನ ಸರ್ಕಾರದ ವಿರುದ್ದ ಶರ್ಮಿಳಾ ಸಮರ ಸಾರಿದ್ದಾರೆ. ಕಾಂಗ್ರೆಸ್ ಸೇರಿದ ಬಳಿಕ ಮೊದಲ ಬಾರಿಗೆ ಸೆಕ್ರೆಟರಿಯೇಟ್ ಚಲೋ ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸಿದ್ದಾರೆ.
ಇದನ್ನೂ ಓದಿ: ಗೃಹ ಬಂಧನ ಭೀತಿ: ಕಾಂಗ್ರೆಸ್ ಕಚೇರಿಯಲ್ಲೇ ರಾತ್ರಿ ಕಳೆದ ವೈಎಸ್ ಶರ್ಮಿಳಾ