ತೋಟವೊಂದರಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಓಡಿಸಲು ಗುಂಡು ಹಾರಿಸಿದ ಆರೋಪದ ಮೇಲೆ ಬಿಹಾರದ ಸಚಿವರೊಬ್ಬರ ಮಗ ಮತ್ತು ಸಹೋದರರನ್ನು ಗ್ರಾಮಸ್ಥರ ಗುಂಪೊಂದು ಥಳಿಸಿದೆ. ಸಚಿವರ ಮಗನನ್ನು ಥಳಿಸಿದ ಗುಂಪು ಆತ ಗುಂಡು ಹಾರಿಸಿದ್ದ ಎನ್ನಲಾದ ಬಂದೂಕನ್ನು ಸಹ ಕಸಿದುಕೊಂಡಿದ್ದಾರೆ.
ಬಿಜೆಪಿ ನಾಯಕ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ನಾರಾಯಣ ಪ್ರಸಾದ್ ಅವರ ಮಗ ಬಬ್ಲು ಕುಮಾರ್ ಮೇಲೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಮೊಫುಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಡಿಯ ಕೊಯೆರಿ ಟೋಲಾ ಗ್ರಾಮದಲ್ಲಿ ಹಲ್ಲೆ ನಡೆಸಲಾಗಿದೆ.
ಹಲ್ಲೆಗೊಳಗಾಗಿರುವ ಸಚಿವರ ಮಗ ಬಬ್ಲು ಕುಮಾರ್ ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದು ಕಾಲ್ತುಳಿತಕ್ಕೆ ಕಾರಣವಾಗಿದ್ದು, ಒಂದು ಮಗು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಬಬ್ಲು ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಪರಿಸ್ಥಿತಿ ಕೈ ಮೀರಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
“ಮಕ್ಕಳು ಇಲ್ಲಿ ಕ್ರಿಕೆಟ್ ಆಡುತ್ತಿದ್ದರು. 4 ರಿಂದ 5 ಜನರು ಅವರನ್ನು ಥಳಿಸಲು ಪ್ರಾರಂಭಿಸಿದರು, ಒಬ್ಬ ವ್ಯಕ್ತಿಗೆ ಬಂದೂಕಿನಿಂದ ಹೊಡೆದು ಗುಂಡು ಹಾರಿಸಿದರು. ಅವರಲ್ಲಿ ಒಬ್ಬರು ನಾರಾಯಣ್ ಅವರ ಮಗ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕಿ, ಸ್ವ ಕ್ಷೇತ್ರದಿಂದ ವಾಪಸ್ ಕಳುಹಿಸಿದ ಮಹಿಳೆಯರು
Champaran: Bihar tourism minister Narayan Prasad's son allegedly opened fire, injured a man. "Kids were playing cricket here; 4-5 people started beating them, hit a man with the butt of a gun & opened fire. One of them was Narayan's (tourism min) son," claims an eyewitness(23.01) pic.twitter.com/UljGmMnVs8
— ANI (@ANI) January 24, 2022
ಸದ್ಯ ಗಾಯಗೊಂಡ ಗ್ರಾಮಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಂಡು ಹಾರಿಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಯಾಳುಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಸಚಿವರ ಪುತ್ರ, ತಾವು ಯಾವುದೇ ಗುಂಡು ಹಾರಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತೋಟವೊಂದರ ಮೇಲಿನ “ಅತಿಕ್ರಮಣ”ದ ಬಗ್ಗೆ ತಿಳಿದ ನಂತರ ತಾವು ಸ್ಥಳಕ್ಕೆ ಹೋದೆವು. ಅಲ್ಲಿ ಗ್ರಾಮಸ್ಥರು ಹಲ್ಲೆ ನಡೆಸಿದರು. ಪರವಾನಗಿ ಪಡೆದ ಬಂದೂಕನ್ನು ಕಸಿದುಕೊಂಡು, ನಮ್ಮ ವಾಹನಗಳನ್ನು ಧ್ವಂಸಗೊಳಿಸಲಾಯಿತು ಎಂದು ಬಬ್ಲು ಕುಮಾರ್ ಆರೋಪಿಸಿದ್ದಾರೆ.
ಬಬ್ಲು ಕುಮಾರ್ ಅವರೊಂದಿಗೆ ಚಿಕ್ಕಪ್ಪ ಹರೇಂದ್ರ ಪ್ರಸಾದ್, ಮ್ಯಾನೇಜರ್ ವಿಜಯ್ ಸಾಹ್ ಮತ್ತು ಇತರ ಸಹಚರರು ಇದ್ದರು, ಅವರೆಲ್ಲರೂ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ವರ್ಮಾ ಹೇಳಿದ್ದಾರೆ.
ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ವರ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ