ಮುಂಬೈ: ಬಿಜೆಪಿಯು ತನ್ನ ರಾಜಕೀಯ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು, “ನಮ್ಮ ಪಕ್ಷವು ರಾಜ್ಯದ ಹೊರಗೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ, ರಾಷ್ಟ್ರ ರಾಜಕಾರಣಕ್ಕೂ ಕಾಲಿಡಲಿದೆ” ಎಂದು ಭಾನುವಾರ ಹೇಳಿದ್ದಾರೆ.
ಅಕಾಲಿದಳ ಮತ್ತು ಶಿವಸೇನೆಯಂತಹ ಪಕ್ಷಗಳು ಈಗಾಗಲೇ ಹೊರನಡೆದಿರುವುದರಿಂದ ಬಿಜೆಪಿ ನೇತೃತ್ವದ ಎನ್ಡಿಎ ಶಕ್ತಿ ಕುಗ್ಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಸಂಸ್ಥಾಪಕ ಮತ್ತು ಅವರ ತಂದೆ ಬಾಳ ಠಾಕ್ರೆ ಅವರ 96ನೇ ಜನ್ಮ ವಾರ್ಷಿಕೋತ್ಸವದಂದು ಶಿವಸೇನೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಅಧಿಕಾರದ ಮೂಲಕ ಹಿಂದುತ್ವದ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲು ಸೇನೆಯು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿ ಎಂದು ತಿಳಿಸಿದ್ದಾರೆ.
ಹಿಂದುತ್ವಕ್ಕೆ ಅಧಿಕಾರ ಬೇಕು ಎಂಬ ಕಾರಣಕ್ಕೆ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಸೇನೆ ಎಂದಿಗೂ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿಲ್ಲ. ಶಿವಸೇನೆ ಬಿಜೆಪಿಯನ್ನು ಬಿಟ್ಟಿದೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿಯ ಅವಕಾಶವಾದಿ ಹಿಂದುತ್ವ ಅಧಿಕಾರಕ್ಕಾಗಿ ಮಾತ್ರ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಶಿವಸೇನೆಯು ಬಿಜೆಪಿಯೊಂದಿಗೆ ಮಿತ್ರಪಕ್ಷವಾಗಿ ಕಳೆದ 25 ವರ್ಷಗಳನ್ನು ವ್ಯರ್ಥ ಮಾಡಿಕೊಂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
2019ರ ಮಹಾರಾಷ್ಟ್ರ ಚುನಾವಣೆಯ ನಂತರ ಶಿವಸೇನೆಯು ಬಿಜೆಪಿಯಿಂದ ಹೊರಗುಳಿದು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಲು ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿತು.
“ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ನಾವು ಬಿಜೆಪಿಯನ್ನು ಪೂರ್ಣ ಹೃದಯದಿಂದ ಬೆಂಬಲಿಸಿದೆವು. ಮಹಾರಾಷ್ಟ್ರದಲ್ಲಿ ನಾವಿದ್ದರೆ, ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬು ಭಾವಿಸಿದ್ದೆವು. ಆದರೆ ನಮಗೆ ದ್ರೋಹ ಬಗೆದರು. ನಮ್ಮ ಮನೆಯಲ್ಲಿ ನಮ್ಮನ್ನು ನಾಶಮಾಡಲು ಪ್ರಯತ್ನಿಸಲಾಯಿತು. ಆದ್ದರಿಂದ ನಾವು ಉಲ್ಟಾ ಹೊಡೆಯಬೇಕಾಯಿತು” ಎನ್ನುವ ಮೂಲಕ 2019ರ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ತಮ್ಮ ನಿರ್ಧಾರವನ್ನು ಠಾಕ್ರೆ ಸಮರ್ಥಿಸಿದ್ದಾರೆ.
ಬಿಜೆಪಿ ತನ್ನ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಮಿತ್ರಪಕ್ಷಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಿವಸೇನೆ ಅಧಿಕಾರಕ್ಕಾಗಿ ಹಿಂದುತ್ವವನ್ನು ತ್ಯಜಿಸಿದೆ ಎಂಬ ಬಿಜೆಪಿಯ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಅವರು, “ನಮ್ಮ ಪಕ್ಷವು ಬಿಜೆಪಿಯನ್ನು ತೊರೆದಿದೆಯೇ ಹೊರತು ಹಿಂದುತ್ವದ ಸಿದ್ಧಾಂತವನ್ನಲ್ಲ” ಎಂದು ಉತ್ತರಿಸಿದ್ದಾರೆ.
“ಬಿಜೆಪಿ ಎಂದರೆ ಹಿಂದುತ್ವವಲ್ಲ, ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 25 ವರ್ಷಗಳನ್ನು ವ್ಯರ್ಥ ಮಾಡಿಕೊಂಡಿದೆ ಎಂಬ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಸೇನೆ ಕಳಪೆ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಗಳಿಸಿದ ಇತ್ತೀಚಿನ ನಗರ ಪಂಚಾಯತ್ ಚುನಾವಣೆಗಳನ್ನು ಉಲ್ಲೇಖಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ, ತಾವು ಸೇರಿದಂತೆ ಶಿವಸೇನೆಯ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಅದಕ್ಕೆ ತಕ್ಕಂತೆ ಪ್ರಚಾರ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಹೊಸ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ತಳಮಟ್ಟದಲ್ಲಿ ಸಂಸ್ಥೆಗಳನ್ನು ನಿರ್ಮಿಸಿವೆ. ನಾವೂ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಕಳೆದ ಎರಡು ವರ್ಷಗಳಲ್ಲಿ ದ್ವೈವಾರ್ಷಿಕ ಚುನಾವಣೆಯಲ್ಲಿ ನಾವು ಹೊಂದಿದ್ದ ಎರಡು ವಿಧಾನ ಪರಿಷತ್ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪಕ್ಷದ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.
ಈ ಹಿನ್ನಡೆಯ ಹೊರತಾಗಿಯೂ, ಸೇನೆಯು ರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ದೆಹಲಿಯಲ್ಲಿ ಅಧಿಕಾರವನ್ನು ಹಿಡಿಯುವ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಸ್ಥೆಗಳನ್ನು ನಿರ್ಮಿಸುವತ್ತ ಗಮನಹರಿಸುವಂತೆ ಶಿವ ಸೇನಾ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ನಮ್ಮ ಕೈ ಬಲವಿಲ್ಲದಿದ್ದರೆ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI ಆಯೋಗದ ಉಪಾಧ್ಯಕ್ಷ