ಏಪ್ರಿಲ್ ತಿಂಗಳಿನಿಂದಲೂ ಏಳು ಬರಹಗಾರರು ಸ್ವೀಕರಿಸಿರುವ ಕನಿಷ್ಠ 19 ಕೊಲೆ ಬೆದರಿಕೆ ಪತ್ರಗಳ ತನಿಖೆಗೆ ಪೊಲೀಸ್ ಅಧೀಕ್ಷಕ (ಎಸ್ಪಿ) ಶ್ರೇಣಿಯ ಅಧಿಕಾರಿಯನ್ನು ಕರ್ನಾಟಕ ಪೊಲೀಸ್ ಇಲಾಖೆ ನೇಮಿಸಿದೆ.
ಕೊಲೆ ಬೆದರಿಕೆಗಳು ಬಂದರೂ ಎಫ್ಐಆರ್ಗಳು ದಾಖಲಾಗಿಲ್ಲ, ಪೋಲೀಸರ ನಿಷ್ಕ್ರಿಯರಾಗಿದ್ದಾರೆ ಎಂದು ಲೇಖಕರು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
“ಒಬ್ಬನೇ ವ್ಯಕ್ತಿ ಎಲ್ಲಾ ಬರಹಗಾರರಿಗೆ ಈ ಬೆದರಿಕೆ ಪತ್ರಗಳನ್ನು ಬರೆಯುತ್ತಿರುವುದು ಸ್ಪಷ್ಟವಾಗಿದೆ. ಕೆಲವು ಲೋಪಗಳಾಗಿವೆ, ಆದರೂ ತನಿಖೆಗಳು ಈಗಾಗಲೇ ನಡೆಯುತ್ತಿವೆ. ಈಗ ತನಿಖೆಯನ್ನು ಹೆಚ್ಚು ಸಂಘಟಿತ ರೀತಿಯಲ್ಲಿ ಮಾಡಲಾಗುತ್ತದೆ ” ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಸಹಿಷ್ಣು ಹಿಂದೂ’ಎಂದು ಸಹಿ ಹಾಕಿರುವ ವ್ಯಕ್ತಿಯು ಏಳು ಬರಹಗಾರರಿಗೆ 19 ಕೊಲೆ ಬೆದರಿಕೆ ಪತ್ರಗಳನ್ನು ಬರೆದಿದ್ದಾನೆ. ಈ ಬರಹಗಾರರ ನಿಲುವುಗಳನ್ನು “ಹಿಂದೂ ವಿರೋಧಿ” ಎಂದು ಕರೆದಿದ್ದಾನೆ. ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಆರು ಪತ್ರ, ಚಿಂತಕ ಬಂಜಗೆರೆ ಜಯಪ್ರಕಾಶ್ ಅವರಿಗೆ ಐದು ಪತ್ರ ಬಂದಿವೆ. ಹಿಜಾಬ್ ವಿವಾದದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದ 61 ಬರಹಗಾರರನ್ನು ಪಟ್ಟಿ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನೂ ಟಾರ್ಗೆಟ್ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ. ರಾಜ್ಯ ಪೊಲೀಸರು ಎಫ್ಐಆರ್ಗಳನ್ನು ದಾಖಲಿಸುವಲ್ಲಿ ಎಡವಿದ್ದಾರೆ ಎಂದು ಆರೋಪಗಳು ಬಂದಿದ್ದವು. ಲೇಖಕಿ ವಸುಂಧರಾ ಭೂಪತಿ ಅವರು ಬುಧವಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡು ಬಸವೇಶ್ವರನಗರದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಜುಲೈ 2ರಂದು ತಮ್ಮ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರ ಬಂದಿದ್ದ ಕುರಿತು ಎಂ.ಎಸ್.ಭೂಪತಿ ಅವರು ಬಸವೇಶ್ವರನಗರ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದರು.
“ಬುಧವಾರ ಬೆಳಿಗ್ಗೆ, ನನ್ನ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ನನ್ನ ಫೋನ್ಗೆ ಸಂದೇಶ ಬಂದಿತು. ಸ್ವಲ್ಪ ಸಮಯದ ನಂತರ, ಇಬ್ಬರು ಪೊಲೀಸರು ನನ್ನ ಮನೆಗೆ ಬಂದು ನನ್ನ ನಿವಾಸದಲ್ಲಿ ಪೊಲೀಸ್ ಬೀಟ್ ಪಾಯಿಂಟ್ ಹಾಕಿದರು. ಭದ್ರತೆಯ ಭರವಸೆ ನೀಡಿದರು” ಎಂದು ಅವರು ತಿಳಿಸಿದ್ದಾರೆ.
‘ಪ್ರಕರಣ ದಾಖಲಿಸಲಾಗಿದೆ’
ಅನಾಮಧೇಯ ಪತ್ರ ಬರೆದಿರುವ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 507 (ಅನಾಮಧೇಯ ಸಂವಹನದ ಮೂಲಕ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್ ಅವರ ದೂರು ಆಧರಿಸಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಎಫ್ಐಆರ್ ದಾಖಲಾಗಿದೆ. ಆದಾಗ್ಯೂ, ರಾಜ್ಯದ ಇತರ ಬರಹಗಾರರಿಗೆ ಇದೇ ರೀತಿಯ ಬೆದರಿಕೆ ಪತ್ರಗಳು ಬಂದಿರುವ ಕುರಿತು ಯಾವುದೇ ಎಫ್ಐಆರ್ಗಳು ದಾಖಲಾಗಿಲ್ಲ.
ಇದನ್ನೂ ಓದಿರಿ: 10% ಮೀಸಲಾತಿ: ಆರ್ಎಸ್ಎಸ್ ಮಂದಿ ಹಬ್ಬಿಸಿರುವ 100% ಸುಳ್ಳುಗಳು!
“ಒಬ್ಬನೇ ವ್ಯಕ್ತಿ ಎಲ್ಲಾ ಪತ್ರಗಳನ್ನು ಬರೆಯುತ್ತಿರುವುದು ಸ್ಪಷ್ಟವಾಗಿದೆ. ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.
ಸಿದ್ದರಾಮಯ್ಯ ಆಕ್ರೋಶ
ಕೊಲೆ ಬೆದರಿಕೆ ಬಂದಿರುವ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. “ಕುಂ. ವೀರಭದ್ರಪ್ಪನವರಿಗೆ 6 ಪತ್ರ, ಬಂಜಗೆರೆ ಜಯಪ್ರಕಾಶ್ ಅವರಿಗೆ 5 ಪತ್ರ, ಬಿ.ಟಿ.ಲಲಿತಾ ನಾಯಕ್, ಬಿ.ಎಲ್ ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ 2 ಪತ್ರ, ಎಸ್.ಜಿ ಸಿದ್ದರಾಮಯ್ಯ ಮತ್ತು ವಸುಂಧರ ಭೂಪತಿಯವರುಗಳಿಗೆ ಒಂದೊಂದು ಪತ್ರಗಳನ್ನು ಬರೆಯಲಾಗಿದೆ. ಇವರುಗಳೆಲ್ಲ ಪ್ರಜಾತಾಂತ್ರಿಕ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ. ಹಾಗಾಗಿ ಹಲವು ಬಾರಿ ಆಡಳಿತಾರೂಢ ಸರ್ಕಾರದ ವಿರುದ್ಧ ಮಾತನಾಡಲೇಬೇಕಾಗುತ್ತದೆ. ಇದಿಷ್ಟನ್ನೂ ಸಹಿಸದ ಕಿಡಿಗೇಡಿಗಳು ಜೀವ ಬೆದರಿಕೆಗಳನ್ನು ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅನೇಕ ಸಾರಿ ನನ್ನ ಸೋಷಿಯಲ್ ಮೀಡಿಯಾ ಖಾತೆಗಳಿಗೂ ಬಂದು ಹೀನಮನೋವೃತ್ತಿ ತೋರುವವರೂ ಇದ್ದಾರೆ” ಎಂದು ತಿಳಿಸಿದ್ದರು.
“ನನಗೂ ಹಲವು ಬೆದರಿಕೆ ಪತ್ರಗಳು ಬಂದಿವೆ. ಸ್ವತಃ ಡಿಜಿಯವರಿಗೆ ನಾನು ಈ ಕುರಿತು ಮಾತನಾಡಿದ್ದೆ. ಇತ್ತೀಚೆಗೆ ಟಿವಿಯೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ನನಗೆ ಗುಂಡು ಹಾರಿಸಬೇಕೆಂದು ಹೇಳಿಕೆ ಕೊಟ್ಟಿದ್ದ. ಈ ಬೆದರಿಕೆಯ ಹೇಳಿಕೆ ಹಾಗೂ ಪತ್ರಗಳ ಕುರಿತು ದೂರು ದಾಖಲಿಸಲಾಗಿದೆ. ಆದರೂ ಇದುವರೆಗೆ ಸರ್ಕಾರ ಎಫ್ಐಆರ್ ದಾಖಲಿಸಿಲ್ಲ. ಇದೇ ವಿಷಯಕ್ಕೆ ಹಲವು ಬಾರಿ ದೂರು ದಾಖಲಿಸಿದರೂ ಎಫ್ಐಆರ್ ಮಾಡಿ ತನಿಖೆ ನಡೆಸದಿರುವುದು ಸರ್ಕಾರದ ಬೇಜವಾಬ್ಧಾರಿಯುತವಾದ ನಡವಳಿಕೆ” ಎಂದು ಬೇಸರ ವ್ಯಕ್ತಪಡಿಸಿದ್ದರು.



ನಗರ ನಕ್ಸಲರಿಗೆಲ್ಲಾ ಸಾರ್ವಜನಿಕರ ಹಣದಲ್ಲಿ ಭದ್ರತೆ ಯಾಕೆ,ಭದ್ರತೆಯ ವೆಚ್ಚವನ್ನ ಈ ದ್ರೋಹಿಗಳ ಮೂಲಕವೇ ವಸೂಲಿ ಮಾಡಬೇಕಿದೆ