ಖ್ಯಾತ ಪತ್ರಕರ್ತೆ, ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯನ್ನು ಗುಜರಾತ್ ಪೊಲೀಸರು ವಿರೋಧಿಸಿದ್ದು, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ನಡೆಸಿದ “ಭಾರಿ ಪಿತೂರಿ”ಯ ಭಾಗವಾಗಿ ಅವರಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಜನರನ್ನು ತಪ್ಪಾಗಿ ಸಿಲುಕಿಸಲು ಸಂಚು ರೂಪಿಸಿದ ಆರೋಪದ ಮೇಲೆ ಇತ್ತೀಚೆಗೆ ಅಹಮದಾಬಾದ್ ಕ್ರೈಂ ಬ್ರಾಂಚ್ ಬಂಧಿಸಿದ ಇಬ್ಬರು ವ್ಯಕ್ತಿಗಳಲ್ಲಿ ತೀಸ್ತಾ ಸೆಟಲ್ವಾಡ್ ಒಬ್ಬರು.
2002 ರ ಗಲಭೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ನಿರ್ದೇಶನದ ಮೇರೆಗೆ ನಡೆಸಿದ “ಭಾರಿ ಪಿತೂರಿ”ಯ ಭಾಗವಾಗಿ ತೀಸ್ತಾ ಇದ್ದರು ಎಂದು ಪೊಲೀಸ್ ವಿಶೇಷ ತನಿಖಾ ತಂಡವು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಹೇಳಿಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಶೇಷ ತನಿಖಾ ತಂಡದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ದಿವಂಗತ ಅಹ್ಮದ್ ಪಟೇಲ್ ವಿರುದ್ಧದ ಕ್ಷುಲ್ಲಕ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತೇವೆ. 2002 ರಲ್ಲಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಕೋಮು ಹತ್ಯಾಕಾಂಡದ ಎಲ್ಲಾ ಹೊಣೆಗಾರಿಕೆಯಿಂದ ಮುಕ್ತವಾಗಲು ಪ್ರಧಾನಿಯ ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿ ಮಾಡಲಾದ ಆರೋಪ. ಈ ಹತ್ಯಾಕಾಂಡವನ್ನು ನಿಯಂತ್ರಿಸಲು ಅವರಿಗೆ ಇಷ್ಟವಿಲ್ಲದಿರುವುದು ಮತ್ತು ಅಸಮರ್ಥತೆಯಿಂದಾಗಿಯೆ ಆಗಿನ ಭಾರತದ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಖ್ಯಮಂತ್ರಿಗೆ ತಮ್ಮ ರಾಜಧರ್ಮವನ್ನು ನೆನಪಿಸಿದ್ದರು” ಎಂದು ಹೇಳಿದೆ.
ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, “ಅಗಲಿ ಹೋದ ರಾಜಕೀಯ ವಿರೋಧಿಗಳನ್ನು ಕೂಡಾ ಪ್ರಧಾನಿಯ ರಾಜಕೀಯ ಸೇಡಿನ ಯಂತ್ರ ಬಿಡುವುದಿಲ್ಲ. ಎಸ್ಐಟಿ ತನ್ನ ರಾಜಕೀಯ ಯಜಮಾನನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಅವರು ಎಲ್ಲಿ ಹೇಳಿದರೂ ಹೋಗಿ ಕುಳಿತುಕೊಳ್ಳುತ್ತದೆ. ಮುಖ್ಯಮಂತ್ರಿಗೆ ಕ್ಲೀನ್ ಚಿಟ್ ನೀಡಿದ ಹಿಂದಿನ ಎಸ್ಐಟಿ ಮುಖ್ಯಸ್ಥರಿಗೆ ಅವರಿಗೆ ರಾಜತಾಂತ್ರಿಕ ಹುದ್ದೆಯನ್ನು ಹೇಗೆ ನೀಡಲಾಯಿತು ಎಂಬುದು ನಮಗೆ ತಿಳಿದಿದೆ” ಎಂದು ಹೇಳಿದೆ.
Statement Issued by @Jairam_Ramesh , General Secretary In- Charge, Communications, AICC pic.twitter.com/vZo55UcDcN
— Congress (@INCIndia) July 16, 2022
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿಡಿ ಠಕ್ಕರ್ ಅವರು ವಿಶೇಷ ತನಿಖಾ ತಂಡದ ಅಫಿಡವಿಟ್ ಅನ್ನು ದಾಖಲೆಯಲ್ಲಿ ತೆಗೆದುಕೊಂಡು ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ಪ್ರಕಟಿಸಿದ್ದಾರೆ.
ಗುಜರಾತ್ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಬಂಧಿಸಲು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ ಆರೋಪದಲ್ಲಿ ಮಾಜಿ ಐಪಿಎಸ್ ಅಧಿಕಾರಿಗಳಾದ ಆರ್.ಬಿ. ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರೊಂದಿಗೆ ತೀಸ್ತಾ ಸೆಟಲ್ವಾಡ್ ಅವರನ್ನೂ ಬಂಧಿಸಲಾಗಿದೆ.
ಇದನ್ನೂ ಓದಿ: ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?
“ಚುನಾಯಿತ ಸರ್ಕಾರವನ್ನು ವಜಾಗೊಳಿಸುವುದು ಅಥವಾ ಅಸ್ಥಿರಗೊಳಿಸುವ ರಾಜಕೀಯ ಉದ್ದೇಶದಿಂದ ತೀಸ್ತಾ ಅವರು ಈ ಭಾರಿ ಪಿತೂರಿಯನ್ನು ಮಾಡಿದ್ದರು…ಅವರು ಅಮಾಯಕರನ್ನು ತಪ್ಪಾಗಿ ಸಿಲುಕಿಸುವ ಪ್ರಯತ್ನಕ್ಕೆ ಪ್ರತಿಫಲವಾಗಿ ಪ್ರತಿಸ್ಪರ್ಧಿ ರಾಜಕೀಯ ಪಕ್ಷದಿಂದ ಅಕ್ರಮ ಹಣಕಾಸು ಮತ್ತು ಇತರ ಪ್ರಯೋಜನಗಳನ್ನು ಮತ್ತು ಬಹುಮಾನಗಳನ್ನು ಪಡೆದರು” ಎಂದು ಎಸ್ಐಟಿ ಅಫಿಡವಿಟ್ ಹೇಳಿದೆ.
ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿರುವ ಎಸ್ಐಟಿ, “ಕಾಂಗ್ರೆಸ್ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಸೂಚನೆಯ ಮೇರೆಗೆ ಸಂಚು ನಡೆಸಲಾಗಿದೆ. 2002 ರಲ್ಲಿ ಗೋಧ್ರಾ ನಂತರದ ಗಲಭೆಯ ನಂತರ ಅಹ್ಮದ್ ಪಟೇಲ್ ಅವರ ಆದೇಶದ ಮೇರೆಗೆ ತೀಸ್ತಾ ಅವರು 30 ಲಕ್ಷ ರೂ. ಪಡೆದರು” ಎಂದು ಆರೋಪಿಸಿದೆ.
“ತೀಸ್ತಾ ಅವರು ಬಿಜೆಪಿ ಸರ್ಕಾರದ ಹಿರಿಯ ನಾಯಕರ ಹೆಸರನ್ನು ಗಲಭೆ ಪ್ರಕರಣಗಳಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರದಲ್ಲಿ ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದರು” ಎಂದು ಎಸ್ಐಟಿ ಆರೋಪಿಸಿದೆ.
ಇದನ್ನೂ ಓದಿ: ತೀಸ್ತಾ, ಜುಬೇರ್ ಬಂಧನ ಆತಂಕಕಾರಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ
ಗುಜರಾತ್ ಗಲಭೆ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ನೀಡಿದ್ದ ಕ್ಲೀನ್ ಚಿಟ್ ಅನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎತ್ತಿಹಿಡಿದ ಒಂದು ದಿನದ ನಂತರ ರಾಜ್ಯ ಪೊಲೀಸರು ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ್ದರು.