ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿರುವ ಎಲ್ಲಾ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ‘ದನದ ಮಾಂಸ (ಗೋಮಾಂಸ)’ ಎಂದು ಬರೆದಿರುವ ಬೋರ್ಡ್ಗಳನ್ನು ತೆಗೆದುಹಾಕಬೇಕು ಎಂದು ಜಿಲ್ಲಾಡಳಿತ ಆದೇಶ ಮಾಡಿತ್ತು. ಇದೀಗ ಈ ಆದೇಶವನ್ನು ಮುಂದಿನ ಸೂಚನೆವರೆಗೆ ತಡೆಹಿಡಿಯಲಾಗಿದೆ ಎಂದ ವರದಿಯಾಗಿದೆ.
ಜುಲೈ 13ರ ಬುಧವಾರದಂದು ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಸೋಮವಾರದೊಳಗೆ “ದನದ ಮಾಂಸ (ಬೀಫ್)” ಎಂಬ ಪದವುಳ್ಳ ಬೋಡ್ಗಳನ್ನು ತೆಗೆದುಹಾಕುವಂತೆ ಸರ್ಕಾರ ಆದೇಶ ಮಾಡಿತ್ತು. ಆದೇಶವನ್ನು ಉಲ್ಲಂಘಿಸಿದವರಿಗೆ 2,000 ರೂಪಾಯಿ ದಂಡ ಹಾಗೂ ಹೋಟೆಲ್ಗಳ ಟ್ರೇಡ್ ಲೈಸೆನ್ಸ್ ರದ್ದುಪಡಿಸುವುದಾಗಿ ಬೆದರಿಕೆಯನ್ನೂ ಹಾಕಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸರ್ಕಾರದ ಈ ಆದೇಶವನ್ನು ಅರುಣಾಚಲ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ACCI) ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ವಿರೋಧಿಸಿದ್ದು, ಪ್ರತಿಭಟನೆಗಳು ನಡೆಸಿದ್ದವು. ಪ್ರತಿಭಟನಾಕಾರರು ಇದನ್ನು ‘ಅನಾವಶ್ಯಕ’ ಎಂದು ಕರೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.
ಇದನ್ನೂ ಓದಿ: ರಾಜ್ಯದ ಜನರಿಗೆ ಹೆಚ್ಚು ‘ಬೀಫ್’ ತಿನ್ನುವಂತೆ ಹೇಳಿದ ಮೇಘಾಲಯದ ಬಿಜೆಪಿ ಸಚಿವ!
ಜುಲೈ 13 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ರಾಜಧಾನಿ ಇಟಾನಗರದ ಜಿಲ್ಲಾಡಳಿತವು, “ಭಾರತೀಯ ಸಂವಿಧಾನದ ಜಾತ್ಯತೀತ ಮನೋಭಾವವನ್ನು ನಂಬುತ್ತೇವೆ. ಆದರೆ ‘ದನದ ಮಾಂಸ’ ಎಂಬ ಪದದ ಬಹಿರಂಗ ಪ್ರದರ್ಶನವು ಸಮುದಾಯದ ಕೆಲವು ವರ್ಗಗಳ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆಯಿದೆ. ಜೊತಗೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡಬಹುದು” ಎಂದು ಹೇಳಿತ್ತು.
ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಅರುಣಾಚಲ ಪ್ರದೇಶ ಘಟಕ, “ಈ ಆದೇಶವು ಅಶಾಂತಿಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ” ಎಂದು ಹೇಳಿತ್ತು.
ಈ ಆದೇಶವನ್ನು ವಾಪಾಸು ಪಡೆಯುವಂತೆ ಯುವ ಕಾಂಗ್ರೆಸ್ ಅಗ್ರಹಿಸಿತ್ತು. “ಅರುಣಾಚಲ ಪ್ರದೇಶದ ನಾಗರಿಕರು ಅನಾದಿ ಕಾಲದಿಂದಲೂ ಗೋಮಾಂಸ ಸೇವಿಸುತ್ತಿದ್ದಾರೆ. ಇದು ಯಾವುದೇ ಸಮುದಾಯದ ಸದಸ್ಯರ ಭಾವನೆಗಳಿಗೆ ಧಕ್ಕೆ ತಂದಿಲ್ಲ” ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ತಾರ್ ಜಾನ್ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗೆ ಪತ್ರ ಬರೆದಿದ್ದರು. ಜಿಲ್ಲಾಡಳಿತದ ಹಠಾತ್ ಮತ್ತು ಆಶ್ಚರ್ಯಕರ ಆದೇಶವು ರಾಜ್ಯದ ವಿವಿಧ ಗುಂಪುಗಳ ಜನರ ಮನಸ್ಸಿನಲ್ಲಿ, ವಿಶೇಷವಾಗಿ ರಾಜಧಾನಿಯಲ್ಲಿ ಕಳವಳವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಜಾರಿಯಿಂದ ಜನರ ಜೀವನೋಪಾಯಕ್ಕೆ ಧಕ್ಕೆ, ಗೂಂಡಾಗಿರಿ ಹೆಚ್ಚಳ: ಅಧ್ಯಯನ ವರದಿ
ರಾಜಧಾನಿ ಇಟಾನಗರದ ನಹರ್ಲಗುನ್ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಅವರು ಈ ಆದೇಶವನ್ನು ಹೊರಡಿಸಿದ್ದರು. “ಮಾಂಸಾಹಾರ ಸೇವನೆಗೆ ಯಾವುದೇ ನಿರ್ಬಂಧವಿಲ್ಲದಿದ್ದರೂ ಹೆದ್ದಾರಿಗಳ ಉದ್ದಕ್ಕೂ ತೆರೆದ ಪ್ರದರ್ಶನವು ರಾಜಧಾನಿಯನ್ನು ಕೆಟ್ಟದಾಗಿ ಬಿಂಬಿಸುತ್ತದೆ” ಎಂದು ಅವರು ಹೇಳಿದ್ದರು. ಆದೇಶಕ್ಕೆ ಕೋಮು ಬಣ್ಣ ಬಳಿಯದಂತೆ ಮನವಿ ಮಾಡಿದ್ದ ಜಿಲ್ಲಾಧಿಕಾರಿ, ಮುಂಜಾಗ್ರತಾ ಕ್ರಮವಾಗಿ ಸದುದ್ದೇಶದಿಂದ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದರು.