Homeಕರ್ನಾಟಕಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ...

ಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ…

- Advertisement -
- Advertisement -

ಜಿ ರಾಜಶೇಖರ್‌ರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ. ಅವಕಾಶ ಬರಲಿಲ್ಲ. ಅಥವಾ ಅವಕಾಶ ಮಾಡಿಕೊಳ್ಳಲಿಲ್ಲ. ಆದರೆ ಜಿ ರಾಜಶೇಖರ್ ಹತ್ತಿರ ಅನ್ನಿಸುತ್ತಿದ್ದರು. ಪರಿಚಿತರು ಅನ್ನಿಸುತ್ತಿತ್ತು. ಅವರ ಬಿಡಿ ಬರಹಗಳನ್ನು, ಲೇಖನಗಳನ್ನು ಓದಿಕೊಂಡ ನನಗೆ ಮತ್ತು ನನ್ನಂತಹ ಅನೇಕರಿಗೆ ಹೀಗೆ ಅನ್ನಿಸಿರುವುದರಲ್ಲಿ ಅಚ್ಚರಿಯೇನಾದರೂ ಉಂಟೆ. ಚೆ ಗುವೆರಾ ಹೇಳುತ್ತಾನಲ್ಲ, “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಿನ್ನ ಎದೆ ಕಂಪಿಸಿದರೆ ನೀನು ನನ್ನ ಸಂಗಾತಿ”, ಹಾಗೇ ಅನ್ಯಾಯವೊ, ಅಹಿತಕರವಾದದ್ದೊ, ಜೀವವಿರೋಧಿಯಾದದ್ದೊ ನಡೆದಾಗ ಮಾತನಾಡುವವರು ನಮ್ಮದೆ ಮಾತನ್ನು ಮಾರ್ದನಿಸಿದಂತೆ ಇರುತ್ತದೆ ನೋಡಿ, ಹಾಗೇ ಅವರು ನಮ್ಮವರಾಗಿಬಿಡುತ್ತಾರೆ.

ಎಡಪಂಥೀಯ ಸಂಘಟನೆಯೊಳಗಿದ್ದು, ಅದರ ತಪ್ಪುಗಳನ್ನು ಕಟುವಾಗಿ ಟೀಕಿಸಬಲ್ಲವರಾಗಿದ್ದರು ಎಂಬುದೇ ಜಿಆರ್ ಬದ್ಧತೆ ಮತ್ತು ನ್ಯಾಯಕ್ಕೆ, ಸತ್ಯಕ್ಕೆ ಹೊರತಾದ ಚೌಕಟ್ಟುಗಳು ಅವರ ಬಳಿ ಸುಳಿಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಶಾಲೆಯ ಮೇಷ್ಟ್ರಾಗಿ, ವಿಮಾ ಸಂಸ್ಥೆಯ ಉದ್ಯೋಗಿಯಾಗಿ ಜನರೊಂದಿಗೆ ಬೆರೆತ ಜಿಆರ್ ಜೀವಪರ ಜೀವವಾಗಿ ಅಸಂಖ್ಯರ ಪ್ರೀತಿಗೆ ಪಾತ್ರರಾಗಿದ್ದನ್ನು ನಾನು ತಿಳಿದೆ.

ಅವರು ನಿಧನರಾದಾಗ ಫೇಸ್‌ಬುಕ್ಕಿನಲ್ಲಿ ಬಹಳಷ್ಟು ಮಂದಿ ಅವರನ್ನು ನೆನೆದು ತಮ್ಮ ನೆನಪು, ವಿದಾಯದ ಸಂಕಟಗಳನ್ನು ಹಂಚಿಕೊಂಡರು. ಕರಾವಳಿಯ ಕೋಮುವಾದದ ಬಗ್ಗೆ ಹಲವರು ಪ್ರಸ್ತಾಪಿಸಿದ್ದನ್ನು ಓದಿದೆ. ನನಗೂ ಜಿಆರ್ ಹೆಚ್ಚು ಪರಿಚಯವಾಗಿದ್ದು ಅದೇ ಕಾರಣಕ್ಕೆ. ದಕ್ಷಿಣ ಕನ್ನಡದವರೇ ಆದ ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ, ’ನೀವೂ ಕೋಮುವಾದದ ಬಗ್ಗೆ ಗಟ್ಟಿಯಾಗಿ ಮಾತನಾಡಿದಿರಿ. ಅವರೂ ಕೋಮುವಾದ ವಿರೋಧಿಸಿದವರು’ ಎಂದು ಮೆಲುಕು ಹಾಕಿದೆ.

ಕೋಮುವಾದದ ಬಗ್ಗೆ ಈಗಂತೂ ಮಾತನಾಡಿ ಅರಗಿಸಿಕೊಳ್ಳುವುದು ಸುಲಭವಲ್ಲ. ವ್ಯವಸ್ಥೆಯೇ ಬೇಟೆಗೆ ಸೀಳುನಾಯಿಗಳನ್ನು ಛೂ ಬಿಡುವಷ್ಟು ಪರಿಸ್ಥಿತಿ ಹದಗಟ್ಟಿದೆ. ಆದರೂ ಜಿಆರ್ ಕೋಮುವಾದ ಕುಲುಮೆಯಲ್ಲಿ ನಿಂತು ಕೆಂಡವನ್ನು ಆರಿಸುವ ಛಾತಿ ತೋರಿದರು.

ಕೋಮುವಾದದ ವಿರುದ್ಧ ಹೋರಾಡುತ್ತಾ, ಕೋಮುವಾದಕ್ಕೆ ಜೀವತೆತ್ತ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕೆ ಅವರು ಸದಾ ಓಡಾಡಿದ್ದನ್ನು ಕೇಳಿದೆ. ಅವರ ಕೋಮುವಾದದ ಹೋರಾಟ ಬಾಬ್ರಿ ಮಸೀದಿ ಧ್ವಂಸಕಾಲದಿಂದಲೂ ನಡೆಯುತ್ತಾ ಬಂದಿದೆ. ಇದೇ ಕಾರಣಕ್ಕೆ ಅವರು ಲಂಕೇಶ್ ಪತ್ರಿಕೆಗೆ ಬರೆಯುವುದಕ್ಕೂ ಶುರು ಮಾಡಿದ್ದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡದ ಬಹುತೇಕ ಬುದ್ಧಿಜೀವಿಗಳು, ಚಿಂತಕರು ಬಾಯಿಮುಚ್ಚಿಕೊಂಡಿದ್ದಾಗ, ಲಂಕೇಶ್ ದೇಶ ಒಡೆದ ಘಟನೆಯನ್ನು ಖಂಡಿಸಿದ್ದರು ಎಂಬ ಕಾರಣಕ್ಕೆ ಜಿಆರ್ ಅವರ ಪತ್ರಿಕೆಗೆ ಬರೆಯಲಾರಂಭಿಸಿದ್ದರಂತೆ.

ಲಂಕೇಶರಿಗೆ ಜಿಆರ್ ಎಂದರೆ ಅಷ್ಟೇ ಪ್ರೀತಿ. “ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ. ನಿಷ್ಠುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡ ಆತ ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ” ಎಂದು ಸ್ವತಃ ಲಂಕೇಶ್ ಹೇಳಿದ್ದರಂತೆ. ಆದರೆ ಅದೇ ಲಂಕೇಶ್ ಅವರನ್ನು ಟೀಕಿಸುವುದಕ್ಕೆ ಅವರ ಸ್ನೇಹ ಅಡ್ಡಿಪಡಿಸಿರಲಿಲ್ಲ. ಲಂಕೇಶ್ ಪ್ರಗತಿರಂಗ ಎಂಬ ಪಕ್ಷ ಕಟ್ಟಿ ರಾಜಕೀಯಕ್ಕೆ ಇಳಿದಾಗ ಅದರ ಪ್ರಣಾಳಿಕೆಯನ್ನು ಗಂಭೀರವಾಗಿ ವಿಮರ್ಶಿಸಿದ್ದರು ಜಿಆರ್.

ಸದಾ ಕಾಲ ತಮ್ಮನ್ನು ಕೇಳಿಕೊಳ್ಳುತ್ತಾ, ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸುತ್ತಾ ತತ್ವಕ್ಕಿಂತ ಜೀವಕ್ಕೆ ಬೆಲೆ ಕಟ್ಟಿ ಬದುಕಿದವರು ಜಿಆರ್ ಎಂಬುದನ್ನು ಅವರ ಬದುಕೇ ಹೇಳುತ್ತದೆ. ಕೋಮುವಾದದ ವಿರುದ್ಧದ ಹೋರಾಟದ ಜೊತೆಜೊತೆಗೇ ಅವರು ಪ್ರಭುತ್ವದ ಕ್ರೌರ್ಯಗಳನ್ನು ಟೀಕಿಸಿದ್ದಾರೆ. ಆದರೆ ಅವರ ಆತಂಕ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೋಮುವಾದದ ಕಡೆಗಿತ್ತು. ಈ ದೇಶದಲ್ಲಿ ಹಿಂದೂ ಕೋಮುವಾದ ಅಧಿಕಾರ ಹಿಡಿಯಬಹುದು ಎಂದು ಹೇಳಿದ್ದವರಲ್ಲಿ ಜಿಆರ್ ಕೂಡ ಒಬ್ಬರು. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ನುಸುಳಿದ್ದಾಗ ಕನಲಿ ಎಚ್ಚರಿಸಿದವರು. ಜಿಆರ್ ಗಟ್ಟಿಯಾಗಿ ಕೋಮುವಾದದ ಕುರಿತು ಮಾತನಾಡುತ್ತಾ ಬಂದಿದ್ದರಿಂದಲೇ ಜೀವಪರವಾಗಿ ಮಿಡಿಯುವ ಯುವಪಡೆಯೊಂದು ಬೆಳೆದು
ನಿಂತಿದ್ದು ಎನ್ನುತ್ತಿದ್ದರು ಅಲ್ಲಿಯ ಗೆಳೆಯರು.

ಎಪ್ಪತ್ತರ ದಶಕದಿಂದ ಬೀದಿ ಹೋರಾಟಗಳಲ್ಲಿ ಭಾಗವಹಿಸುತ್ತಾ ಅದೆಷ್ಟು ಮನಸ್ಸುಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೊ ಲೆಕ್ಕವಿಲ್ಲ. “ಸಂವಿಧಾನವನ್ನು ಬದಲಾಯಿಸಲು ಅದನ್ನೆನು ಜನಿವಾರವೆ?” ಎಂಬ ಘೋಷಣೆಯ ಪ್ಲಕಾರ್ಡ್ ಹಿಡಿದು ನಿಂತ ಜಿಆರ್ ಅವರ ಕುಬ್ಜ ದೇಹ ಎಷ್ಟು ಅಗಾಧ ಆತ್ಮಶಕ್ತಿಯನ್ನು ಹೊಂದಿತ್ತು ಮತ್ತು ಅದು ಎಚ್ಚರವಾಗಿ ಕರಾವಳಿಯನ್ನು, ಈ ನಾಡನ್ನು ಹೇಗೆ ಆವರಿಸಿಕೊಂಡಿರಬಹುದು ಎಂಬುದು ಸಾಮಾನ್ಯದ ಬೆರಗಲ್ಲ.

ಎಲ್ಲೇ ಏನೇ ಗಲಭೆ, ಅಹಿತಕರ ಘಟನೆಗಳು ನಡೆದರೆ ಅಲ್ಲಿಗೆ ಖುದ್ದು ಭೇಟಿ ನೀಡಿ ಸತ್ಯಶೋಧನೆ ನಡೆಸಿ ಸಿದ್ಧಪಡಿಸಿದ ವರದಿಗಳು ಬಹುಶಃ ಯಾವ ಪತ್ರಕರ್ತನೂ, ಸತ್ಯಶೋಧನಾ ತಂಡಗಳು ಮಾಡಿರಲಾರವು. ಸುರತ್ಕಲ್ ಗಲಭೆ, ಮಂಗಳೂರಿನ ಪಬ್‌ದಾಳಿ, ಹೋಮ್‌ಸ್ಟೇ ದಾಳಿ, ಕುಂದಾಪುರದಲ್ಲಿ ನಡೆದ ಗಲಭೆ, ಆದಿ ಉಡುಪಿಯ ಬೆತ್ತಲೆ ಪ್ರಕರಣ ಹೀಗೆ ಹಲವು ಘಟನೆಗಳ ಹಿಂದಿನ ಅಮಾನವೀಯ, ಜೀವವಿರೋಧಿ ಶಕ್ತಿ ಮತ್ತು ಉದ್ದೇಶಗಳನ್ನು ಬೆತ್ತಲು ಮಾಡಿದವರು ಜಿಆರ್.

ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸಿ ನೂರಾರು ಲೇಖನಗಳನ್ನು ಬರೆದು, ಬಹುತ್ವದ ಚಿಂತನೆಗಳ ಮೂಲಕ ಈ ದೇಶ, ಈ ನಾಡು ಎದುರಿಸಿದ ಹಿಂಸೆಯ ವಿಕೃತಿಗಳನ್ನು ಅಕ್ಷರಗಳ ರೂಪದಲ್ಲಿ ಎಚ್ಚರಿಸಿದವರು ಜಿಆರ್.

ನಿರಂಕುಶತೆ, ಮತಾಂಧತೆ ಹಲವು ರೂಪಗಳಲ್ಲಿ ಆವರಿಸಿಕೊಳ್ಳುತ್ತಿರುವಾಗ, ಜಿಆರ್ ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ಬೆಳಕಿದ್ದು, ಆ ಮಾರ್ಗದಲ್ಲಿ ನಡೆಯುವುದು ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿಯಾಗಬಹುದು.

ಎಸ್ ಕುಮಾರ್
ಸಂಪಾದಕರು, ಈದಿನ.ಕಾಂ


ಇದನ್ನೂ ಓದಿ: “ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು” – ಜಿ. ರಾಜಶೇಖರ್ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...