Homeಕರ್ನಾಟಕಅಮುಲ್‌ನಿಂದ ಕೆಎಂಎಫ್‌ ಕಲಿಯುವಂತದ್ದು ಏನೂ ಇಲ್ಲ: ತಜ್ಞರು ಹೇಳುವುದೇನು?

ಅಮುಲ್‌ನಿಂದ ಕೆಎಂಎಫ್‌ ಕಲಿಯುವಂತದ್ದು ಏನೂ ಇಲ್ಲ: ತಜ್ಞರು ಹೇಳುವುದೇನು?

- Advertisement -
- Advertisement -

“ಅಮುಲ್‌ ಈಗ ಗುಜರಾತ್ ಸಹಕಾರಿ ಸಂಸ್ಥೆಯಾಗಿ ಉಳಿದಿಲ್ಲ. ಅಂತಹ ಸಂಸ್ಥೆಯೊಂದಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದರ ಒಕ್ಕೂಟ (ಕೆಎಂಎಫ್) ವಿಲೀನಗೊಳಿಸುವುದು ಒಕ್ಕೂಟ ವ್ಯವಸ್ಥೆಗೆ ಮಾರಕ. ಅಮುಲ್‌ನಿಂದ ಕೆಎಂಎಫ್‌ ಕಲಿಯುವಂತದ್ದು ಏನೂ ಇಲ್ಲ” ಎನ್ನುತ್ತಾರೆ ಐಐಎಂಬಿ ಪ್ರೊಫೆಸರ್ ಎಂ.ಎಸ್.ಶ್ರೀರಾಮ್.

ʼನಂದಿನಿʼ ಹಾಲು ಉತ್ಪನ್ನಗಳ ಹೆಸರಾದ ಕೆಎಂಎಫ್‌ಅನ್ನು ಗುಜರಾತಿನ ʼಅಮುಲ್‌ʼ ಬ್ರಾಂಡಿನ ಹಾಲು ಉತ್ಪಾದಕ ಸಂಸ್ಥೆಯಾದ ಗುಜರಾತ್‌ ಸಹಕಾರ ಹಾಲು ಮಾರಾಟ ಒಕ್ಕೂಟ(ಜಿಸಿಎಂಎಂಎಫ್)ದೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಡಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿವೆ.

ಕಳೆದ ಅಕ್ಟೋಬರ್‌ 9ರಂದು ಅಸ್ಸಾಂನ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳ ಕೌನ್ಸಿಲ್‌ ಸಭೆಯಲ್ಲಿ ಅಮಿತ್‌ ಶಾ ಅವರು ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದರು. “ದೇಶದ ನೈಸರ್ಗಿಕ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾನ್ಯತೆ ಪಡೆಯಲು ಕೆಎಂಎಫ್‌ ಸೇರಿದಂತೆ ದೇಶದ ಪ್ರಮುಖ ಐದು ಸಹಕಾರ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸಿ ರಾಷ್ಟ್ರಮಟ್ಟದಲ್ಲಿ ಬಹುರಾಜ್ಯ ಸಹಕಾರ ಒಕ್ಕೂಟ ರಚಿಸಲು ಉದ್ದೇಶಿಸಲಾಗಿದೆ” ಎಂದಿದ್ದರು.

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದ ಮೆಗಾ ಡೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್‌ ಶಾ, “ಗುಜರಾತಿನ ಅಮುಲ್‌ ಸಹಕಾರ ಒಕ್ಕೂಟ ಪ್ರಗತಿಯ ಹಾದಿಯಲ್ಲಿದೆ. ಕರ್ನಾಟಕದ ನಂದಿನಿಯ ಕೆಎಂಎಫ್‌ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮುಲ್‌ ಮತ್ತು ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ಆ ಹಿನ್ನೆಲೆಯಲ್ಲಿ ಅಮುಲ್‌ ಜೊತೆ ನಂದಿನಿಯನ್ನು ವಿಲೀನ ಮಾಡಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪ್ರೊ.ಎಂ.ಎಸ್.ಶ್ರೀರಾಮ್‌, “ಅಮುಲ್‌ ನಂತರದಲ್ಲಿ ನಂದಿನಿ ಅತಿದೊಡ್ಡ ಬ್ರಾಂಡ್ ಆಗಿ ಬೆಳೆದಿದೆ. ಎರಡು ಸೇರಿದರೆ ಮಾರ್ಕೆಟ್ ಶೇರ್‌ ಹೆಚ್ಚುತ್ತದೆ ಎಂಬುದು ನಿಜ. ಆದರೆ ವಿಲೀನ ಮಾಡುವುದು ಸರಿಯಲ್ಲ. ‘ಸಹಕಾರ’ ಎಂಬುವುದು ಸ್ಥಳೀಯರಿಗೆ ಸಂಬಂಧ ಪಟ್ಟ ಸಂಸ್ಥೆ. ಅದು ವಿಲೀನವಾಗುತ್ತಾ ಹೋದಷ್ಟು ಸ್ಥಳೀಯರಿಂದ ದೂರವಾಗುತ್ತದೆ. ಕೆಎಂಎಫ್‌ಗಿಂತ ದೊಡ್ಡದಾದ ಅಮುಲ್‌ ಜೊತೆ ಸೇರಿಕೊಂಡರೆ, ಅಮುಲ್‌ ಹೇಳಿದಂತೆ ಕೇಳಿಕೊಂಡು ಇರಬೇಕಾಗುತ್ತದೆ” ಎಂದು ಎಚ್ಚರಿಸಿದರು.

“ದೊಡ್ಡವರ ಬಳಿ ಚಿಕ್ಕವರು ಸೇರಿಕೊಂಡರೆ ದೊಡ್ಡವರ ಮಾತೇ ಹೆಚ್ಚು ನಡೆಯುತ್ತದೆ. ಕಿರಾಣಿ ಅಂಗಣಿ ಚೆನ್ನಾಗಿಯೇ ನಡೆಯುತ್ತಿರುವಾಗ, ಸೂಪರ್‌ ಮಾರ್ಕೆಟ್‌ನಲ್ಲಿ ಹೋಗಿ ಸಿಕ್ಕಿಕೊಳ್ಳುವ ಅಗತ್ಯವಿಲ್ಲ. ಅಮುಲ್‌ನಿಂದ ನಂದಿನಿ ಕಲಿಯಬೇಕಾದ ಯಾವುದೇ ಪಾಠವಿಲ್ಲ. ಮೊದಲೆಲ್ಲ ಅಮುಲ್ ರಾಜಕೀಯದಿಂದ ಸ್ವಲ್ಪ ದೂರವಿತ್ತು. ಆದರೀಗ ಸಂಪೂರ್ಣವಾಗಿ ರಾಜಕೀಯ ನಡೆಯುತ್ತಿದೆ. ಕೆಎಂಎಫ್‌ನಲ್ಲಿ ಮೊದಲಿನಿಂದಲೂ ರಾಜಕೀಯವಿತ್ತು. ಆದರೆ ಅಮುಲ್‌ನಿಂದ ಇವರು ಕಲಿಯುವಂತಹದ್ದು ಏನೂ ಇಲ್ಲ” ಎಂದರು.

“ಅಮುಲ್ ಈಗ ಸಹಕಾರಿ ಸಂಸ್ಥೆಯಾಗಿ ಉಳಿದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಘಟಕಗಳನ್ನು ತೆರೆದು ವ್ಯವಹರಿಸುತ್ತಿದೆ. ಯುಪಿ, ಹರಿಯಾಣ, ಪಂಜಾಬ್, ಬಿಹಾರದಲ್ಲಿ ಅಮುಲ್‌ ಘಟಕಗಳನ್ನು ತೆರೆಯಲಾಗಿದೆ. ಅದೀಗ ಅಮುಲ್‌ ಗುಜರಾತಿನ ಸಂಸ್ಥೆಯಾಗಿ ಉಳಿದಿಲ್ಲ. ಗುಜರಾತ್‌ ರೈತರಿಂದ ಮಾತ್ರ ಹಾಲು ಖರೀದಿಸುವಂತಿದ್ದರೆ ಅದು ಗುಜರಾತ್ ಸಂಸ್ಥೆಯಾಗಿ ಉಳಿಯುತ್ತಿತ್ತು. ಮಾರಾಟ ಎಲ್ಲಿ ಬೇಕಾದರೂ ಮಾಡಬಹುದು, ಆದರೆ ಎಲ್ಲಿಂದ ಹಾಲನ್ನು ಖರೀದಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ” ಎಂದು ಹೇಳಿದರು.

“ಸರ್ಕಾರ ಕೈಗೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳು ಕೇಂದ್ರೀಕರಣಕ್ಕೆ ಒತ್ತು ನೀಡುತ್ತಿವೆ. ಇದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ” ಎಂದು ಅಭಿಪ್ರಾಯಪಟ್ಟರು.

ಚಿಂತಕರಾದ ಶಿವಸಂದರ್‌ ಅವರು ಪ್ರತಿಕ್ರಿಯಿಸಿ, “ಸಹಕಾರಿ ಹಾಲು ಉತ್ಪನ್ನಗಳ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿದೆ. ಸಹಕಾರಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಇಟ್ಟಿರುವ ಮೊದಲ ಹೆಜ್ಜೆ ಇದು. ಗುಜರಾತ್‌ ಬಿಟ್ಟರೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಹಕಾರಿ ಹಾಲು ಒಕ್ಕೂಟ ಬಲವಾಗಿದೆ. ಹೀಗಾಗಿ ಕಾರ್ಪೊರೇಟ್ ಶಕ್ತಿಗಳ ಕಣ್ಣು ಬಿದ್ದಿದೆ” ಎಂದರು.

ಇದನ್ನೂ ಓದಿರಿ: ಗೋವು ಸಾಕಣೆಯ ಗೋಳು ಕೇಳುವವರ್‍ಯಾರು? ಇದು ಹೈನುಗಾರಿಕೆಯ ಕಥೆ-ವ್ಯಥೆ!

ಅಮಿತ್‌ ಶಾ ಅವರ ಈ ಹೇಳಿಕೆಗೆ ಹಾಲು ಉತ್ಪಾದಕರು, ಮಾರಾಟಗಾರರು ಮತ್ತು ಕನ್ನಡಪರ ಸಂಘಸಂಸ್ಥೆಗಳಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಲಾಭದಲ್ಲಿರುವ ಮತ್ತು ಅದಕ್ಕಿಂತ ಮುಖ್ಯವಾಗಿ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ಬ್ರಾಂಡಿನ ಕೆಎಂಎಫ್‌ ಒಕ್ಕೂಟವನ್ನು ಯಾವ ಕಾರಣಕ್ಕೂ ಗುಜರಾತ್‌ನ ಅಮುಲ್‌ ಬ್ರಾಂಡಿನೊಂದಿಗೆ ವಿಲೀನ ಮಾಡಬಾರದು.

ದೇಶದ ರೈಲ್ವೆ, ವಿಮಾನ, ಹೆದ್ದಾರಿಗಳು, ಟೆಲಿಕಾಂ ವಲಯ ಸೇರಿದಂತೆ ಪ್ರತಿ ವಲಯದಲ್ಲಿ ಗುಜರಾತಿನ ಅಂಬಾನಿ ಮತ್ತು ಅದಾನಿ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಟ್ಟು, ಇಡೀ ದೇಶವನ್ನು ಗುಜರಾತಿನ ವಸಾಹತು ಮಾಡಿರುವವರು, ಇದೀಗ ಸಹಕಾರ ವಲಯವನ್ನೂ ಗುಜರಾತಿನ ಕೈವಶ ಮಾಡಲು ಹೊರಟಿದ್ದಾರೆ. ಕನ್ನಡಿಗರ ದಶಕಗಳ ಬದ್ಧತೆ ಮತ್ತು ಕಾಳಜಿಯಿಂದ ಕಟ್ಟಿದ ಕೆಎಂಎಫ್‌ ಲಾಭದಲ್ಲಿರುವಾಗಲೇ ಅದನ್ನು ವಶಪಡಿಸಿಕೊಳ್ಳುವ ಗುಜರಾತಿ ಹುನ್ನಾರ ಇದು ಎಂದು ಆಕ್ರೋಶ ವ್ಯಕ್ತವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...