Homeಕರ್ನಾಟಕಅಮುಲ್‌ನಿಂದ ಕೆಎಂಎಫ್‌ ಕಲಿಯುವಂತದ್ದು ಏನೂ ಇಲ್ಲ: ತಜ್ಞರು ಹೇಳುವುದೇನು?

ಅಮುಲ್‌ನಿಂದ ಕೆಎಂಎಫ್‌ ಕಲಿಯುವಂತದ್ದು ಏನೂ ಇಲ್ಲ: ತಜ್ಞರು ಹೇಳುವುದೇನು?

- Advertisement -
- Advertisement -

“ಅಮುಲ್‌ ಈಗ ಗುಜರಾತ್ ಸಹಕಾರಿ ಸಂಸ್ಥೆಯಾಗಿ ಉಳಿದಿಲ್ಲ. ಅಂತಹ ಸಂಸ್ಥೆಯೊಂದಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದರ ಒಕ್ಕೂಟ (ಕೆಎಂಎಫ್) ವಿಲೀನಗೊಳಿಸುವುದು ಒಕ್ಕೂಟ ವ್ಯವಸ್ಥೆಗೆ ಮಾರಕ. ಅಮುಲ್‌ನಿಂದ ಕೆಎಂಎಫ್‌ ಕಲಿಯುವಂತದ್ದು ಏನೂ ಇಲ್ಲ” ಎನ್ನುತ್ತಾರೆ ಐಐಎಂಬಿ ಪ್ರೊಫೆಸರ್ ಎಂ.ಎಸ್.ಶ್ರೀರಾಮ್.

ʼನಂದಿನಿʼ ಹಾಲು ಉತ್ಪನ್ನಗಳ ಹೆಸರಾದ ಕೆಎಂಎಫ್‌ಅನ್ನು ಗುಜರಾತಿನ ʼಅಮುಲ್‌ʼ ಬ್ರಾಂಡಿನ ಹಾಲು ಉತ್ಪಾದಕ ಸಂಸ್ಥೆಯಾದ ಗುಜರಾತ್‌ ಸಹಕಾರ ಹಾಲು ಮಾರಾಟ ಒಕ್ಕೂಟ(ಜಿಸಿಎಂಎಂಎಫ್)ದೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಡಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿವೆ.

ಕಳೆದ ಅಕ್ಟೋಬರ್‌ 9ರಂದು ಅಸ್ಸಾಂನ ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳ ಕೌನ್ಸಿಲ್‌ ಸಭೆಯಲ್ಲಿ ಅಮಿತ್‌ ಶಾ ಅವರು ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದರು. “ದೇಶದ ನೈಸರ್ಗಿಕ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾನ್ಯತೆ ಪಡೆಯಲು ಕೆಎಂಎಫ್‌ ಸೇರಿದಂತೆ ದೇಶದ ಪ್ರಮುಖ ಐದು ಸಹಕಾರ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸಿ ರಾಷ್ಟ್ರಮಟ್ಟದಲ್ಲಿ ಬಹುರಾಜ್ಯ ಸಹಕಾರ ಒಕ್ಕೂಟ ರಚಿಸಲು ಉದ್ದೇಶಿಸಲಾಗಿದೆ” ಎಂದಿದ್ದರು.

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದ ಮೆಗಾ ಡೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್‌ ಶಾ, “ಗುಜರಾತಿನ ಅಮುಲ್‌ ಸಹಕಾರ ಒಕ್ಕೂಟ ಪ್ರಗತಿಯ ಹಾದಿಯಲ್ಲಿದೆ. ಕರ್ನಾಟಕದ ನಂದಿನಿಯ ಕೆಎಂಎಫ್‌ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮುಲ್‌ ಮತ್ತು ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ಆ ಹಿನ್ನೆಲೆಯಲ್ಲಿ ಅಮುಲ್‌ ಜೊತೆ ನಂದಿನಿಯನ್ನು ವಿಲೀನ ಮಾಡಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪ್ರೊ.ಎಂ.ಎಸ್.ಶ್ರೀರಾಮ್‌, “ಅಮುಲ್‌ ನಂತರದಲ್ಲಿ ನಂದಿನಿ ಅತಿದೊಡ್ಡ ಬ್ರಾಂಡ್ ಆಗಿ ಬೆಳೆದಿದೆ. ಎರಡು ಸೇರಿದರೆ ಮಾರ್ಕೆಟ್ ಶೇರ್‌ ಹೆಚ್ಚುತ್ತದೆ ಎಂಬುದು ನಿಜ. ಆದರೆ ವಿಲೀನ ಮಾಡುವುದು ಸರಿಯಲ್ಲ. ‘ಸಹಕಾರ’ ಎಂಬುವುದು ಸ್ಥಳೀಯರಿಗೆ ಸಂಬಂಧ ಪಟ್ಟ ಸಂಸ್ಥೆ. ಅದು ವಿಲೀನವಾಗುತ್ತಾ ಹೋದಷ್ಟು ಸ್ಥಳೀಯರಿಂದ ದೂರವಾಗುತ್ತದೆ. ಕೆಎಂಎಫ್‌ಗಿಂತ ದೊಡ್ಡದಾದ ಅಮುಲ್‌ ಜೊತೆ ಸೇರಿಕೊಂಡರೆ, ಅಮುಲ್‌ ಹೇಳಿದಂತೆ ಕೇಳಿಕೊಂಡು ಇರಬೇಕಾಗುತ್ತದೆ” ಎಂದು ಎಚ್ಚರಿಸಿದರು.

“ದೊಡ್ಡವರ ಬಳಿ ಚಿಕ್ಕವರು ಸೇರಿಕೊಂಡರೆ ದೊಡ್ಡವರ ಮಾತೇ ಹೆಚ್ಚು ನಡೆಯುತ್ತದೆ. ಕಿರಾಣಿ ಅಂಗಣಿ ಚೆನ್ನಾಗಿಯೇ ನಡೆಯುತ್ತಿರುವಾಗ, ಸೂಪರ್‌ ಮಾರ್ಕೆಟ್‌ನಲ್ಲಿ ಹೋಗಿ ಸಿಕ್ಕಿಕೊಳ್ಳುವ ಅಗತ್ಯವಿಲ್ಲ. ಅಮುಲ್‌ನಿಂದ ನಂದಿನಿ ಕಲಿಯಬೇಕಾದ ಯಾವುದೇ ಪಾಠವಿಲ್ಲ. ಮೊದಲೆಲ್ಲ ಅಮುಲ್ ರಾಜಕೀಯದಿಂದ ಸ್ವಲ್ಪ ದೂರವಿತ್ತು. ಆದರೀಗ ಸಂಪೂರ್ಣವಾಗಿ ರಾಜಕೀಯ ನಡೆಯುತ್ತಿದೆ. ಕೆಎಂಎಫ್‌ನಲ್ಲಿ ಮೊದಲಿನಿಂದಲೂ ರಾಜಕೀಯವಿತ್ತು. ಆದರೆ ಅಮುಲ್‌ನಿಂದ ಇವರು ಕಲಿಯುವಂತಹದ್ದು ಏನೂ ಇಲ್ಲ” ಎಂದರು.

“ಅಮುಲ್ ಈಗ ಸಹಕಾರಿ ಸಂಸ್ಥೆಯಾಗಿ ಉಳಿದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಘಟಕಗಳನ್ನು ತೆರೆದು ವ್ಯವಹರಿಸುತ್ತಿದೆ. ಯುಪಿ, ಹರಿಯಾಣ, ಪಂಜಾಬ್, ಬಿಹಾರದಲ್ಲಿ ಅಮುಲ್‌ ಘಟಕಗಳನ್ನು ತೆರೆಯಲಾಗಿದೆ. ಅದೀಗ ಅಮುಲ್‌ ಗುಜರಾತಿನ ಸಂಸ್ಥೆಯಾಗಿ ಉಳಿದಿಲ್ಲ. ಗುಜರಾತ್‌ ರೈತರಿಂದ ಮಾತ್ರ ಹಾಲು ಖರೀದಿಸುವಂತಿದ್ದರೆ ಅದು ಗುಜರಾತ್ ಸಂಸ್ಥೆಯಾಗಿ ಉಳಿಯುತ್ತಿತ್ತು. ಮಾರಾಟ ಎಲ್ಲಿ ಬೇಕಾದರೂ ಮಾಡಬಹುದು, ಆದರೆ ಎಲ್ಲಿಂದ ಹಾಲನ್ನು ಖರೀದಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ” ಎಂದು ಹೇಳಿದರು.

“ಸರ್ಕಾರ ಕೈಗೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳು ಕೇಂದ್ರೀಕರಣಕ್ಕೆ ಒತ್ತು ನೀಡುತ್ತಿವೆ. ಇದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ” ಎಂದು ಅಭಿಪ್ರಾಯಪಟ್ಟರು.

ಚಿಂತಕರಾದ ಶಿವಸಂದರ್‌ ಅವರು ಪ್ರತಿಕ್ರಿಯಿಸಿ, “ಸಹಕಾರಿ ಹಾಲು ಉತ್ಪನ್ನಗಳ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿದೆ. ಸಹಕಾರಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಇಟ್ಟಿರುವ ಮೊದಲ ಹೆಜ್ಜೆ ಇದು. ಗುಜರಾತ್‌ ಬಿಟ್ಟರೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಹಕಾರಿ ಹಾಲು ಒಕ್ಕೂಟ ಬಲವಾಗಿದೆ. ಹೀಗಾಗಿ ಕಾರ್ಪೊರೇಟ್ ಶಕ್ತಿಗಳ ಕಣ್ಣು ಬಿದ್ದಿದೆ” ಎಂದರು.

ಇದನ್ನೂ ಓದಿರಿ: ಗೋವು ಸಾಕಣೆಯ ಗೋಳು ಕೇಳುವವರ್‍ಯಾರು? ಇದು ಹೈನುಗಾರಿಕೆಯ ಕಥೆ-ವ್ಯಥೆ!

ಅಮಿತ್‌ ಶಾ ಅವರ ಈ ಹೇಳಿಕೆಗೆ ಹಾಲು ಉತ್ಪಾದಕರು, ಮಾರಾಟಗಾರರು ಮತ್ತು ಕನ್ನಡಪರ ಸಂಘಸಂಸ್ಥೆಗಳಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಲಾಭದಲ್ಲಿರುವ ಮತ್ತು ಅದಕ್ಕಿಂತ ಮುಖ್ಯವಾಗಿ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ಬ್ರಾಂಡಿನ ಕೆಎಂಎಫ್‌ ಒಕ್ಕೂಟವನ್ನು ಯಾವ ಕಾರಣಕ್ಕೂ ಗುಜರಾತ್‌ನ ಅಮುಲ್‌ ಬ್ರಾಂಡಿನೊಂದಿಗೆ ವಿಲೀನ ಮಾಡಬಾರದು.

ದೇಶದ ರೈಲ್ವೆ, ವಿಮಾನ, ಹೆದ್ದಾರಿಗಳು, ಟೆಲಿಕಾಂ ವಲಯ ಸೇರಿದಂತೆ ಪ್ರತಿ ವಲಯದಲ್ಲಿ ಗುಜರಾತಿನ ಅಂಬಾನಿ ಮತ್ತು ಅದಾನಿ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಟ್ಟು, ಇಡೀ ದೇಶವನ್ನು ಗುಜರಾತಿನ ವಸಾಹತು ಮಾಡಿರುವವರು, ಇದೀಗ ಸಹಕಾರ ವಲಯವನ್ನೂ ಗುಜರಾತಿನ ಕೈವಶ ಮಾಡಲು ಹೊರಟಿದ್ದಾರೆ. ಕನ್ನಡಿಗರ ದಶಕಗಳ ಬದ್ಧತೆ ಮತ್ತು ಕಾಳಜಿಯಿಂದ ಕಟ್ಟಿದ ಕೆಎಂಎಫ್‌ ಲಾಭದಲ್ಲಿರುವಾಗಲೇ ಅದನ್ನು ವಶಪಡಿಸಿಕೊಳ್ಳುವ ಗುಜರಾತಿ ಹುನ್ನಾರ ಇದು ಎಂದು ಆಕ್ರೋಶ ವ್ಯಕ್ತವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...