Homeಮುಖಪುಟಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳು: ಗೃಹ ಸಚಿವ ಆರಗ...

ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳು: ಗೃಹ ಸಚಿವ ಆರಗ ಜ್ಞಾನೇಂದ್ರ

ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸ್ಯಾಂಟ್ರೋ ರವಿ ಸಿಗಬಹುದೇನೋ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -
- Advertisement -

ವೇಶ್ಯಾವಾಟಿಕೆ ಮತ್ತು ವರ್ಗಾವಣೆ ದಂಧೆಯ ಕಿಂಗ್ ಪಿನ್ ಎನಿಸಿಕೊಂಡಿರುವ ಸ್ಯಾಂಟ್ರೊ ರವಿ ಹಿನ್ನೆಲೆ ಕುರಿತು ತನಿಖೆಗೆ ಸೂಚಿಸಿದ್ದೇನೆ. ಆದರೆ ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನನ್ನ ವಿರುದ್ಧ ಅತ್ಯಂತ ಬೇಜವಾಬ್ದಾರಿಯಿಂದ ಹೇಳುವ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿಯವರು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ. ಅವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.

ಸಾಂಟ್ರೋ ರವಿಯ ಹಿನ್ನೆಲೆ ಬಗ್ಗೆ ತನಿಖೆ ನಡೆಸಿ ವಿಚಾರಣೆ ಮಾಡಲು ಪೊಲೀಸರಿಗೆ ಸೂಚಿಸಿದ್ದೇನೆ. ನನ್ನ ಮನೆಯಲ್ಲಿ ಆತ ಹಣದ ಗಂಟು ಬಿಚ್ಚಿದ್ದಾನೆ ಎಂದು ಕುಮಾರಸ್ವಾಮಿಯವರು ಸತ್ಯಕ್ಕೆ ಅಪಚಾರವಾಗುವ ಆಪಾದನೆ ಮಾಡಿದ್ದಾರೆ. ಯಾವ ಕಾರಣದಿಂದ ನನ್ನ ತೇಜೋವಧೆ ಮಾಡುತ್ತಿದ್ದಾರೆಂದು ತಿಳಿದಿಲ್ಲ. ಇದರಿಂದ ಯಾವ ರೀತಿ ಲಾಭವಾಗುತ್ತದೆಂದೂ ಗೊತ್ತಿಲ್ಲ ಎಂದಿದ್ದಾರೆ.

ಗೃಹ ಸಚಿವನಾದ ನನ್ನನ್ನು ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ ನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲ ಎನ್ನುವ ಮೂಲಕ ಅವರು ಸ್ಯಾಂಟ್ರೋ ರವಿಯ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಯಾಂಟ್ರೋ ರವಿಯನ್ನ ಪೊಲೀಸರು ಹುಡುಕುತ್ತಿದ್ದಾರಂತೆ! ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವರು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ! ಪೊಲೀಸರು ಆತನನ್ನು ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ! ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ? ಎಂದು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ.

ಯಾರು ಸ್ಯಾಂಟ್ರೋ ರವಿ

ಕಳೆದ ನಾಲ್ಕು ದಿನಗಳಿಂದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಸರು ಸ್ಯಾಂಟ್ರೊ ರವಿ. ‘ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ, ನೀವು ಸರ್ ಅಂತಿಲ್ಲ, ಖಾಲಿ ಡಿವೈಎಸ್‌ಪಿ ನೀವು, ಯಾವ ಕೆಲಸವಾದರೂ ಮಾಡಿಕೊಡುತ್ತೇನೆ, ಕುಮಾರಕೃಪ ಗೆಸ್ಟ್ ಹೌಸ್‌ಗೆ ಬನ್ನಿ’ ಎಂದು ಆತ ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ. ಸಿಎಂ ಬೊಮ್ಮಾಯಿವರ ಮಗನ ಜೊತೆ, ಬಿಜೆಪಿ ಸಚಿವರುಗಳ ಜೊತೆ ಆತ ಇರುವ ಫೋಟೊಗಳು ಎಲ್ಲೆಡೆ ಹರಿದಾಡುತ್ತಿವೆ.

ಜನವರಿ 1 ರಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ಆಲಿಯಾಸ್ ಕೆ.ಎಸ್ ಮಂಜುನಾಥ್ ವಿರುದ್ಧ ವಂಚನೆ, ಅತ್ಯಾಚಾರ, ದೌರ್ಜನ್ಯ, ಕ್ರಿಮಿನಲ್ ಪಿತೂರಿಯ ದೂರು ದಾಖಲಾಗುತ್ತದೆ. ದೂರು ನೀಡಿದ್ದು ಆತನನ್ನು ಮದುವೆಯಾಗಿ ವಂಚನೆಗೊಳಗಾಗಿದ್ದ ದಲಿತ ಯುವತಿ. ಆನಂತರ ಆತ ಡಿವೈಎಸ್‌ಪಿ ಜೊತೆ ಮಾತನಾಡಿದ್ದ ಆಡಿಯೋ ಲೀಕ್ ಆಗುತ್ತದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೈಸೂರು “ಪೊಲೀಸರು ಎಫ್‌ಐಆರ್ ದಾಖಲು ಮಾಡಿರುವ ಅತ್ಯಾಚಾರ ಆರೋಪಿ ಸ್ಯಾಂಟ್ರೊ ರವಿಯೊಂದಿಗೆ ಬಿಜೆಪಿ ಸರ್ಕಾರದ ಕೆಲ ಪ್ರಭಾವಿ ಸಚಿವರು ಸಂಪರ್ಕ ಹೊಂದಿದ್ದಾರೆ. ಆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದು ಒತ್ತಾಯಿಸುತ್ತಾರೆ.

ಅಷ್ಟಕ್ಕೆ ಸುಮ್ಮನಾಗದೆ ಸ್ಯಾಂಟ್ರೊ ರವಿಯ ಜೊತೆ ಸಚಿವರುಗಳಾದ ಆರಗ ಜ್ಞಾನೇಂದ್ರ, ಎಸ್‌.ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಬಿ.ಸಿ ನಾಗೇಶ್ ಇರುವ ಫೋಟೊಗಳನ್ನು, ವಿಡಿಯೋಗಳನ್ನು ಬಿಡುಗಡೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ಸಾಲು ಸಾಲು ಟ್ವೀಟ್‌ಗಳನ್ನು ಮಾಡುತ್ತದೆ. ಹಾಗಿದ್ದರೆ ಏಕಾಏಕಿ ಸುದ್ದಿಯಲ್ಲಿರುವ ಈ ಸ್ಯಾಂಟ್ರೊ ರವಿ ಯಾರು? ಆತನಿಗೂ ಸರ್ಕಾರದ ನಡುವಿನ ಸಂಬಂಧವೇನು ಎಂಬುದರ ವಿವರ ಇಲ್ಲಿದೆ.

ಮಂಜುನಾಥ್ ಕೆ.ಎಸ್ ಅಲಿಯಾಸ್ ಕಿರಣ್ ಆಲಿಯಾಸ್ ಸ್ಯಾಂಟ್ರೋ ರವಿ (53) ಮಂಡ್ಯದ ನಗರದಿಂದ ಕೂಗಳತೆ ದೂರದಲ್ಲಿರುವ ಹೊಳಲು ಗ್ರಾಮದವನು. ಅವರ ತಂದೆ ಅಬಕಾರಿ ಇಲಾಖೆಯಲ್ಲಿ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯಾಗಿದ್ದರು. ಈತನ ಪ್ರಧಾನ ಕಸುಬು ಹೆಣ್ಣು ಮಕ್ಕಳ ಕಳ್ಳಸಾಗಣೆ, ವೇಶ್ಯಾವಾಟಿಕೆ ಜಾಲವಾಗಿತ್ತು. ಹೆಣ್ಣು ಮಕ್ಕಳನ್ನು ಪ್ರೀತಿಸುವುದಾಗಿ ನಂಬಿಸಿ, ಮದುವೆಯ ನಾಟಕವಾಡಿ ಆನಂತರ ಅವರನ್ನು ಪ್ರಭಾವಿಗಳ ಬಳಿ ವೇಶ್ಯಾವಾಟಿಕೆಗೆ ತಳ್ಳುವುದು ಈತನ ಕೆಲಸವಾಗಿತ್ತು. ಇದೇ ಕೆಲಸದಲ್ಲಿ 1987ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆಯಾದಾಗ ಸಿಕ್ಕಿಬಿದ್ದು ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದ.

ಆದರೆ ಚಾಲಾಕಿ ಬುದ್ದಿಯ ಆತ ಅನಾರೋಗ್ಯದ ನೆಪವೊಡ್ಡಿ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಂದ ಪರಾರಿಯಾಗಿದ್ದ. ಆಗ ಆತನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಪ್ರಧಾನವಾಗಿ ಮೈಸೂರನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಆತ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹೆಣ್ಣು ಮಕ್ಕಳನ್ನು ಪೂರೈಸುವ ಅನೈತಿಕ ದಂಧೆಗಿಳಿದಿದ್ದ. ಆ ಸಂದರ್ಭದಲ್ಲಿ ಆತ ಹೊಸದಾಗಿ ಸ್ಯಾಂಟ್ರೊ ಕಾರೊಂದನ್ನು ಖರೀದಿಸಿ ಊರು ಊರು ಸುತ್ತುತ್ತಿದ್ದ. ಬಡವರಾದ, ದಲಿತ-ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಮರಳು ಮಾಡಿ ಅವರನ್ನು ಮಾರಾಟ ಮಾಡುತ್ತಿದ್ದ. ಈ ವೇಳೆ ಪೊಲೀಸರು ದಾಳಿ ಮಾಡುತ್ತಿದ್ದ ವೇಳೆಯಲ್ಲೆಲ್ಲ ತನ್ನ ಸ್ಯಾಂಟ್ರೊ ಕಾರಿನಲ್ಲಿ ತಪ್ಪಿಸಿಕೊಳ್ಳುತ್ತಿದ್ದ. ಹಾಗಾಗಿ ಆತನಿಗೆ ಸ್ಯಾಂಟ್ರೊ ರವಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.

2000 ಇಸವಿಯಿಂದ 2014ರವರೆಗೆ ಆತನ ವಿರುದ್ಧ ಹೆಣ್ಣು ಮಕ್ಕಳ ಕಳ್ಳ ಸಾಗಣಿಕೆ, ಅತ್ಯಾಚಾರ, ವಂಚನೆ, ಕ್ರಿಮಿನಲ್ ಆರೋಪದ ಮೇಲೆ ಹತ್ತಾರು ಪ್ರಕರಣಗಳನ್ನು ಒಡನಾಡಿ ಸಂಸ್ಥೆ ದಾಖಲಿಸಿತ್ತು. ಆದರೆ ಪ್ರಭಾವಿಗಳ  ಕೃಪಾಕಟಾಕ್ಷದಲ್ಲಿದ್ದ ಆತ ಪೊಲೀಸರನ್ನು ಸಹ ಬುಟ್ಟಿಗೆ ಹಾಕಿಕೊಂಡು ತಪ್ಪಿಸಿಕೊಳ್ಳುತ್ತಿದ್ದ ಎನ್ನುವುದು ಅವನ ಮೇಲಿರುವ ಆರೋಪ.

2004ರಲ್ಲಿ ಸ್ಯಾಂಟ್ರೊ ರವಿ ತನ್ನ ಅನೈತಿಕ ಚಟುವಟಿಕೆಗಳನ್ನು ಮುಂದುವರೆಸಿದ್ದರಿಂದ ಆತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿಡಲಾಗಿತ್ತು. ಅಲ್ಲಿದ್ದ ಒಂದೂವರೆ ವರ್ಷದಲ್ಲಿ ಮತ್ತಷ್ಟು ರೌಡಿಗಳ, ರಾಜಕಾರಣಿಗಳ ನಂಟು ಬೆಳೆಸಿಕೊಂಡಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ವರ್ಗಾವಣೆ ದಂಧೆಗಿಳಿದಿದ್ದ ಎನ್ನಲಾಗಿದೆ. ಈ ಎಲ್ಲಾ ದಂಧೆಗಳಲ್ಲಿನ ಅಕ್ರಮ ಹಣವನ್ನು ತನ್ನ ಹೆಂಡತಿ ಚಂದ್ರಿಕಾ ಎಂಬುವವರ ಬ್ಯಾಂಕ್ ಖಾತೆಯಿಂದ ನಿರ್ವಹಿಸುತ್ತಿದ್ದ.

ಹೆಂಡತಿಯನ್ನೇ ಕೊಂದ ಆರೋಪ

2004ರಲ್ಲಿ ಸ್ಯಾಂಟ್ರೋ ರವಿ ಜೈಲು ಸೇರುವ ವೇಳೆಗೆ ಆತನ ಹೆಂಡತಿ ಚಂದ್ರಿಕಾರವರ ಖಾತೆಯಲ್ಲಿ 22 ಲಕ್ಷ ರೂ ಇತ್ತು ಎನ್ನಲಾಗಿದೆ. ಆದರೆ ಆತ 2006ರಲ್ಲಿ ಜೈಲಿನಿಂದ ಹೊರಬಂದಾಗ ಹಣ ಕೊಡಲು ಚಂದ್ರಿಕಾ ಮೀನಾಮೇಷ ಎಣಿಸಿದ್ದಾರೆ. ಆಗ ಹಣಕ್ಕಾಗಿ ತನ್ನ ಮಗಳನ್ನೇ ಅಪಹರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಆದರೆ ಚಂದ್ರಿಕಾ ಬಗ್ಗಿಲ್ಲ. ಬದಲಿಗೆ ಆತನ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಹೆಂಡತಿಗೆ ಆಸಿಡ್ ಹಾಕಿ ಸುಟ್ಟು ಪಾಂಡವಪುರದ ವಿ.ಸಿ ನಾಲೆಗೆ ಎಸೆದುಕೊಂದಿದ್ದ ಎಂಬ ಆರೋಪ ಎದುರಿಸುತ್ತಿದ್ದನು.

ಕೊಲೆಯಾದ ಪತ್ನಿ ಚಂದ್ರಿಕಾಳೊಂದಿಗೆ ಸ್ಯಾಂಟ್ರೊ ರವಿ

ಆದರೆ ಈ ಸಂದರ್ಭದಲ್ಲಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದಲ್ಲದೆ, ಪತ್ರಿಕೆಗಳಲ್ಲಿ ಕಾಣೆಯಾಗಿದ್ದಾರೆ ಎಂಬ ಜಾಹೀರಾತು ಸಹ ಕೊಟ್ಟಿದ್ದ. ಆನಂತರ ಪೊಲೀಸರೊಂದಿಗೆ ಅಡ್ಜೆಸ್ಟ್ ಮಾಡಿಕೊಂಡು ಕೇಸು ಖುಲಾಸೆಗೊಳಿಸಿದ ಎಂಬ ಆರೋಪ ಆತನ ಮೇಲಿದೆ.

ವರ್ಗಾವಣೆ ದಂಧೆ

ರಾಜಕಾರಣಿಗಳಿಗೆ ಹೆಣ್ಣು ಮಕ್ಕಳನ್ನು ಪೂರೈಸುವ ಮೂಲಕ ಸ್ನೇಹ ಸಂಪಾದಿಸಿದ್ದ ಈತ ವರ್ಗಾವಣೆ ದಂಧೆಗೆ ಕೈಹಾಕಿದ್ದ. ಅದರಿಂದ ಬಂದ ಹಣದಲ್ಲಿ ಐಷರಾಮಿ ಜೀವನ ಸಾಗಿಸುತ್ತಿದ್ದ ಎಂಬುದನ್ನು ದುಡ್ಡಿನ ಕಂತೆಗಳೊಂದಿಗೆ ಆತ ಇರುವ ಫೋಟೊಗಳೆ ಸಾರಿ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಬರುವುದರಲ್ಲಿ ಈತನ ಪಾತ್ರವಿದೆ ಎನ್ನಲಾಗುತ್ತಿದೆ. ಬಾಂಬೆಗೆ ತೆರಳಿದ ಕೆಲ ಶಾಸಕರಿಗೆ ಹೆಣ್ಣು ಮಕ್ಕಳನ್ನು ಪೂರೈಸಿದ್ದು ಈತನೇ ಎಂಬ ಆರೋಪ ಕೇಳಿಬರುತ್ತಿದೆ.

ಬಿಜೆಪಿ ಸರ್ಕಾರ ಬಂದ ಮೇಲಂತೂ ತನ್ನ ಕಾರ್ಯಚಟುವಟಿಕೆಗಳನ್ನು ಕುಮಾರ ಕೃಪಾ ಅತಿಥಿ ಗೃಹದಿಂದಲೇ ನಡೆಸುತ್ತಿದ್ದ ಸ್ಯಾಂಟ್ರೊ ರವಿ ಕೊನೆಗೂ ಬೆತ್ತಲಾಗಿದ್ದಾನೆ. ಇತ್ತೀಚಿಗೆ ಮದುವೆಯಾಗಿದ್ದ ಮಹಿಳೆಯನ್ನು ನಿವೃತ್ತ ಐಎಎಸ್ ಅಧಿಕಾರಿಯೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒತ್ತಾಯಿಸಿದ್ದ. ಒಪ್ಪದಿದ್ದಾಗ ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಹಣಕ್ಕಾಗಿ ಯಾವ ಮಟ್ಟಕ್ಕೆ ಇಳಿಯಲೂ ಹೇಸದ ವ್ಯಕ್ತಿಯೇ ಸ್ಯಾಂಟ್ರೊ ರವಿ.

ಇಂತಹ ಒಬ್ಬ ವ್ಯಕ್ತಿಯನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸರ್ ಎಂದು ಕರೆಯುತ್ತಾರಂತೆ. ಸಚಿವರು ಆತನ ಪರವಾಗಿ ವರ್ಗಾವಣೆ ಮಾಡಿಕೊಡುತ್ತಾರೆ. ಅನೈತಿಕತೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವಿದು. ದೂರು ನೀಡದ ವಾರವಾಗುತ್ತ ಬಂದರೂ ಸಹ ಆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

40% ಕಮಿಷನ್ ಹಗರಣ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್‌ಐ ಹಗರಣ, ಕರಾವಳಿಯಲ್ಲಿ ಮತೀಯ ಗೂಂಡಾಗಿರಿಗಳ ಹೆಚ್ಚಳ, ಪೆಸಿಎಂ, ಪಕ್ಷಕ್ಕೆ ರೌಡಿಗಳ ಸೇರ್ಪಡೆಯಿಂದ ಟೀಕೆಗೆ ಒಳಗಾಗಿದ್ದ ರಾಜ್ಯ ಬಿಜೆಪಿ ಸರ್ಕಾರವು ಸದ್ಯ ಸ್ಯಾಂಟ್ರೊ ರವಿ ಸಹವಾಸದಿಂದ ಮುಜುಗರಕ್ಕೆ ಸಿಲುಕಿದೆ.

ಇದನ್ನೂ ಓದಿ: ಬಿಜೆಪಿಯಿಂದ ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆ ಇಂದು: ಕಾರ್ಯಕ್ರಮ ರದ್ದುಗೊಳಿಸಲು ಕಾಂಗ್ರೆಸ್ ದೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...