ಭಾರತದಲ್ಲಿ ಟೆಲಿವಿಷನ್ ಚಾನೆಲ್ಗಳು ಸಮಾಜವನ್ನು ವಿಭಜಿಸುತ್ತಿವೆ ಮತ್ತು ಸುದ್ದಿಗಳನ್ನು ಸಂವೇದನಾಶೀಲಗೊಳಿಸುವ ಅಜೆಂಡಾ ಹೊಂದಿವೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಈ ವೇಳೆ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠವು, ಚಾನಲ್ಗಳಿಗೆ ಹಣ ನೀಡುವವರು ತಮ್ಮ ವಿಷಯವನ್ನು ನಿರ್ದೇಶಿಸುತ್ತಾರೆ ಎಂದು ಹೇಳಿದರು.
“ಎಲ್ಲವೂ TRP [ಟೆಲಿವಿಷನ್ ರೇಟಿಂಗ್ ಪಾಯಿಂಟ್] ನಿಂದ ನಡೆಸಲ್ಪಡುತ್ತದೆ, ಹಾಗಾಗಿ ಅವರು ವಿಷಯಗಳನ್ನು ಸಂವೇದನಾಶೀಲಗೊಳಿಸುತ್ತಾರೆ. ಇದರಿಂದ ಹೆಚ್ಚಿನ ವೀಕ್ಷಕರಕರನ್ನು ಸೆಳೆಯುವ ಕಾರ್ಯಸೂಚಿಯನ್ನು ಅವರು ಅನುಸರಿಸುತ್ತಾರೆ. ದೃಶ್ಯ ಮಾಧ್ಯಮವು ಪತ್ರಿಕೆಗಿಂತ ಹೆಚ್ಚು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.
ನ್ಯಾಯಪೀಠವು ದ್ವೇಷದ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ. ಟೆಲಿವಿಷನ್ ಸುದ್ದಿ ವಾಹಿನಿಗಳು ದ್ವೇಷ ಭಾಷಣಕ್ಕೆ ಅವಕಾಶ ನೀಡುವುದಲ್ಲದೇ ಅದಕ್ಕೆ ಯಾವುದೇ ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುವುದನ್ನು ಸೆಪ್ಟೆಂಬರ್ನಲ್ಲಿ ನ್ಯಾಯಾಲಯ ಗಮನಿಸಿತ್ತು. ಒಂದು ತಿಂಗಳ ನಂತರ, ಅಪರಾಧಿಗಳ ಯಾವುದೇ ಧರ್ಮವನ್ನು ಲೆಕ್ಕಿಸದೆ, ದೂರುಗಳಿಗೂ ಕಾಯದೆ ದ್ವೇಷ ಭಾಷಣದ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಂತೆ ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಪೊಲೀಸ್ ಪಡೆಗಳಿಗೆ ಸೂಚಿಸಿದೆ.
ದ್ವೇಷದ ಭಾಷಣವನ್ನು ಉತ್ತೇಜಿಸುವ ಅಥವಾ ತೊಡಗಿಸಿಕೊಳ್ಳುವ ಸುದ್ದಿ ನಿರೂಪಕರನ್ನು ಶಿಕ್ಷಿಸಬೇಕು ಎಂದು ಶುಕ್ರವಾರದ ವಿಚಾರಣೆಯಲ್ಲಿ ನ್ಯಾಯಾಲಯ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
“ವಾಹಿನಿಯಲ್ಲಿ ದ್ವೇಷದ ಮಾತುಗಳನ್ನಾಡಿದರೆ ಆಂಕರ್ಗಳ ಮೇಲೆ ದಂಡ ವಿಧಿಸಿಬೇಕು. ಅಂತಹ ಆಂಕರ್ಗಳನ್ನು ತೆಗೆಯಬಹುದು ಎಂದು ನ್ಯಾಯಾಲಯ ಹೇಳಿದೆ. ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ನ ಕಾರ್ಯವೈಖರಿಯನ್ನು ಟೀಕಿಸಿದ ಪೀಠ, ನಿಯಂತ್ರಕರು ಏನನ್ನೂ ಮಾಡುತ್ತಿಲ್ಲ ಎಂದು ಹೇಳಿದೆ.
ಲೈವ್ ಕಾರ್ಯಕ್ರಮಗಳ ಕಾನೂನಿನ ಪ್ರಕಾರ, “NBSA ಪಕ್ಷಪಾತ ಮಾಡಬಾರದು” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು. “ನೀವು ಎಷ್ಟು ಬಾರಿ ಆಂಕರ್ಗಳನ್ನು ತೆಗೆದಿದ್ದೀರಿ? ಚಾನೆಲ್ಗಳು ಜನರನ್ನು ಸಮಾನವಾಗಿ ಮಾತನಾಡಲು ಬಿಡುವುದಿಲ್ಲ. ನಿಮ್ಮ ಅಜೆಂಡಾಗಳ ವಿರುದ್ಧ ಜನರು ಅಥವಾ ವಕ್ತಾರರು ಪ್ರಶ್ನೆಗಳನ್ನು ಕೇಳಲು ಬಯಸಿದಾಗ ಅವರ ಧ್ವನಿಯನ್ನು ಮ್ಯೂಟ್ ಮಾಡಲಾಗುತ್ತದೆ. ಆಗ ಪ್ರಶ್ನೆ ಕೇಳಲು ಅವಕಾಶವೇ ಇರುವುದಿಲ್ಲ ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.
ಈ ವೇಳೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಪರ ವಕೀಲ ಅರವಿಂದ್ ದಾತಾರ್ ಮಾತನಾಡಿ, ‘ಹಲವು ಬಾರಿ ಇಂತಹ ಉಲ್ಲಂಘನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಪೀಠಕ್ಕೆ ತಿಳಿಸಿದರು. ಆದರೆ ಸುದರ್ಶನ್ ಟಿವಿ ಮತ್ತು ರಿಪಬ್ಲಿಕ್ ಟಿವಿಯಂತಹ ದೂರದರ್ಶನ ಚಾನೆಲ್ಗಳು ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಅವರು ಹೇಳಿದರು.
2020 ರಲ್ಲಿ ಸುದರ್ಶನ್ ನ್ಯೂಸ್ನಲ್ಲಿ “ಯುಪಿಎಸ್ಸಿ ಜಿಹಾದ್” ಎಂಬ ಕಾರ್ಯಕ್ರಮಕ್ಕೆ ಪ್ರಸಾರವಾಗಿತ್ತು. ಇದಕ್ಕೆ ಸಂಬಂಧಿಸಿದ ಒಂದು ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ವಿದೇಶದಿಂದ ಬರುವ ಭಯೋತ್ಪಾದಕ ನಿಧಿಯನ್ನು ಬಳಸಿಕೊಂಡು ಮುಸ್ಲಿಮರು ನಾಗರಿಕ ಸೇವೆಗಳಿಗೆ “ನುಸುಳುತ್ತಿದ್ದಾರೆ” ಎಂದು ಚಾನೆಲ್ ಹೇಳಿಕೊಂಡಿದೆ.