Homeಮುಖಪುಟಎಲೆಕ್ಟ್ರಿಕ್ ವಾಹನಗಳ ಹಬ್ ಆಗಲಿದೆಯೇ ಭಾರತ?

ಎಲೆಕ್ಟ್ರಿಕ್ ವಾಹನಗಳ ಹಬ್ ಆಗಲಿದೆಯೇ ಭಾರತ?

- Advertisement -
- Advertisement -

ಭಾರತ ವಿಶ್ವದ 4ನೇ ಅತಿದೊಡ್ಡ ವಾಹನದ ಮಾರುಕಟ್ಟೆ. ಆಟೋಮೊಬೈಲ್ ಕ್ಷೇತ್ರ ಭಾರತದ ರಸ್ತೆಗಳಿಗೆ ಪ್ರತಿವರ್ಷ ಹೊಸಹೊಸ ವಾಹನಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಪರಿಣಾಮ ಭಾರತದ ಪ್ರತಿದಿನದ ಅಂದಾಜು ಇಂಧನದ ಬಳಕೆ ಕನಿಷ್ಠ 5,154 ಬ್ಯಾರೆಲ್ ಎನ್ನುತ್ತಿವೆ ಅಂಕಿಅಂಶಗಳು. ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಲೀಟರ್ ಪಳೆಯುಳಿಕೆ ಇಂಧನ (ಪೆಟ್ರೋಲ್-ಡೀಸೆಲ್) ದಹನವಾಗುತ್ತಲೇ ಇದೆ. ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಎಚ್ಚರಿಕೆಯ ಘಂಟೆ ಬಾರಿಸುತ್ತಲೇ ಇದೆ.

ಆದರೆ, ಕೊರೊನೋತ್ತರ ಕಾಲದಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ನಿಜಕ್ಕೂ ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿವೆ ಎಂದೇ ಹೇಳಬೇಕು. ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಗೆ ಅನೇಕ ಹೆಚ್ಚೆಚ್ಚು ಒತ್ತುನೀಡುತ್ತಿವೆ. ಜಾಗತಿಕ ತಾಪಮಾನ ಹೆಚ್ಚಿ ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿಯೂ ’ಕ್ಲೀನ್ ಎನರ್ಜಿ’ ಎಂದು ಕರೆಯಲಾಗುವ ಇಂಧನಗಳಿಂದ ಚಾಲನೆಯಾಗುವ ವಾಹನಗಳ ಅಭಿವೃದ್ಧಿ ಮತ್ತು ಉತ್ಪಾದನೆಗೆ ಒತ್ತುನೀಡಲಾಗುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಹೀಗಾಗಿ ಭಾರತವೂ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಗೆ ಅಣಿಯಾಗುತ್ತಿದೆ ಎಂದರೆ ತಪ್ಪಾಗಲಾರದು.

ಎಕ್ಟ್ರಿಕ್ ವಾಹನಗಳ ಹಬ್ ಆಗುತ್ತಿದೆಯೇ ಭಾರತ?

ಕಳೆದ ಐದಾರು ವರ್ಷಗಳ ಅವಧಿಯಲ್ಲಿ ದೇಶದ ಇಪ್ಪತ್ತೊಂದಕ್ಕೂ ಹೆಚ್ಚು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿ ರೂಪಿಸಿದ್ದು, ಹೊಗೆ ಉಗುಳುವ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ರಸ್ತೆಯಿಂದ ಹೊರಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿವೆ. ಗ್ಲಾಸ್ಗೊ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಸರ್ಕಾರ, 2030ರ ವೇಳೆಗೆ ನೂರು ಕೋಟಿ ಟನ್ ಇಂಗಾಲದ ಹೊಮ್ಮುವಿಕೆಯನ್ನು ಕಡಿಮೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದೆ. ದೇಶದ ಪ್ರತೀ ನಗರಕ್ಕೂ ತನ್ನದೇ ಆದ ಶುದ್ಧ ಗಾಳಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಆ ದಿಸೆಯಲ್ಲಿ 132 ನಗರಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ.

ಭಾರತದ ಪಾಲಿಗೆ ದೊಡ್ಡ ಪ್ರಮಾಣದಲ್ಲಿ ಇಂಗಾಲವನ್ನು ಉಗುಳುತ್ತಿರುವುದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ. ಹೀಗಾಗಿ ಆಂಧ್ರಪ್ರದೇಶ, ಕೇರಳ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ದಶಕದ ಕೊನೆಯ ವೇಳೆಗೆ ತಲಾ ಹತ್ತು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ತಯಾರಿಸಿವೆ. ಮೇಘಾಲಯ, ಗೋವಾ, ಹರಿಯಾಣ, ದೆಹಲಿ, ಒಡಿಶಾ, ಅಸ್ಸಾಂ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಇನ್ನೈದು ವರ್ಷಗಳಲ್ಲಿ ತಮ್ಮ ರಾಜ್ಯದ ರಸ್ತೆಗಳ ಮೇಲೆ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳು ಸಂಚರಿಸಲಿವೆ ಎಂದಿವೆ.

ಕೇಂದ್ರ ಸರ್ಕಾರ ಇದಕ್ಕಾಗಿ -10 ಸಾವಿರ ಕೋಟಿ ಬಂಡವಾಳ ಮೀಸಲಿಟ್ಟಿದೆ. ಇದರಿಂದ 10 ಲಕ್ಷ ದ್ವಿಚಕ್ರ, 5 ಲಕ್ಷ ತ್ರಿಚಕ್ರ ವಾಹನಗಳು, 55 ಸಾವಿರ ಕಾರು ಹಾಗೂ 70,000 ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ ಇಳಿಯಲಿವೆ. ಸತತ ವಾಯುಮಾಲಿನ್ಯದಿಂದ ಕಂಗಾಲಾಗಿರುವ ದೆಹಲಿ ಸರ್ಕಾರ ಮುಂದಿನ ವರ್ಷದ ಕೊನೆಯ ವೇಳೆಗೆ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿ ಇಟ್ಟುಕೊಂಡಿದ್ದು, ಈ ವರ್ಷಾಂತ್ಯಕ್ಕೆ, ಡೀಸೆಲ್‌ನಿಂದ ಓಡುವ ಎಲ್ಲ ತ್ರಿಚಕ್ರ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸುವ ತೀರ್ಮಾನ ಮಾಡಿದೆ.

ಒಡಿಶಾ ತನ್ನ ರಾಜ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್‌ನಿಂದ ಓಡುವ ಆಟೊರಿಕ್ಷಾಗಳನ್ನು ಎಲೆಕ್ಟ್ರಿಕ್‌ಗೆ ಬದಲಾಯಿಸುವ ಕೆಲಸಕ್ಕೆ ಕೈ ಹಾಕಿದೆ. ಕೊಚ್ಚಿನ್ ನಗರದಲ್ಲಿ ಚಾಲಕರು ಕೈನೆಟಿಕ್ ಗ್ರೀನ್ ಕಂಪನಿಯಿಂದ ಇ-ಆಟೊ ರಿಕ್ಷಾಗಳನ್ನು ಬಾಡಿಗೆಗೆ ಪಡೆದು ಓಡಿಸುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ಒಂದೂವರೆ ಲಕ್ಷ ಇ-ವಾಹನಗಳಿವೆ. ಇವುಗಳಿಗಾಗಿ 2016ರಲ್ಲೇ ನೀತಿ ರೂಪಿಸಿದ್ದ ದೇಶದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಸರ್ಕಾರ ಅಂದಿನಿಂದಲೇ ಇ-ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಿತ್ತು. ಇತರ ರಾಜ್ಯಗಳು ಶೂನ್ಯ ರಸ್ತೆ ತೆರಿಗೆಯ ಜೊತೆ ಹಲವು ರಿಯಾಯಿತಿಗಳನ್ನೂ ನೀಡುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯವು 2021ರ ಆಗಸ್ಟ್‌ನಲ್ಲಿ ಇ-ವಾಹನಗಳ ನೋಂದಣಿ ಹಾಗೂ ನವೀಕರಣ ಶುಲ್ಕ ಎರಡನ್ನೂ ತೆಗೆದುಹಾಕಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸರ್ಕಾರಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ.

ಭಾರತ ಮಾರುಕಟ್ಟೆಗೆ ಪೈಪೋಟಿ

ಎಲೆಕ್ಟ್ರಿಕ್ ವಾಹನಗಳು ಅಭಿವೃದ್ಧಿಯಾಗುತ್ತಿದ್ದಂತೆ ವಿಶ್ವದ ಅನೇಕ ವಾಹನ ಕಂಪನಿಗಳು ಡೀಸೆಲ್ ಎಂಜಿನ್ ಅಭಿವೃದ್ಧಿಯನ್ನು ನಿಲ್ಲಿಸಿ ಅಥವಾ ಕಡಿತಗೊಳಿಸಿ ಇ ಮತ್ತು ಹೈಬ್ರಿಡ್ ಕಾರುಗಳ ತಯಾರಿಕೆಗೆ ಮುಂದಾಗಿವೆ. ಪರಿಣಾಮ ಭಾರತ ಇದೀಗ ಅಂತಹ ವಾಹನಗಳ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಗುತ್ತಿದೆ.

ಬೆಂಗಳೂರಿನ ನವೋದ್ಯಮ ಏಥರ್ ಎನರ್ಜಿ ಕಳೆದ ನಾಲ್ಕೈದು ವರ್ಷಗಳಿಂದ ದೇಶದ ಆಯ್ದ ನಗರಗಳಲ್ಲಿ ಇ-ಸ್ಕೂಟರ್ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ರಾವಿನ್, ಮಹೀಂದ್ರ, ಟಾಟಾ ಕಾರು ಕಂಪನಿಗಳು ಇ-ಕಾರುಗಳನ್ನು ಪರಿಚಯಿಸಿ ಈಗಾಗಲೇ ದಶಕಗಳೇ ಕಳೆದಿವೆ.

ಇದಲ್ಲದೆ, ದೇಶದ ಗ್ರೀನ್ ಮೊಬಿಲಿಟಿ ವಲಯದ ಅತಿದೊಡ್ಡ ಒಪ್ಪಂದವೊಂದಕ್ಕೆ ಟಾಟಾ ಮೋಟಾರ್ಸ್ ಮತ್ತು ಉಬರ್ ಇತ್ತೀಚೆಗೆ ಸಹಿ ಹಾಕಿರುವುದು ಭಾರತದ ಆಟೋಮೊಬೈಲ್ ಕ್ಷೇತ್ರದ ಪಾಲಿಗೆ ಗಮನಾರ್ಹ ಬೆಳವಣಿಗೆ. ಈ ಒಪ್ಪಂದದ ಪ್ರಕಾರ ಉಬರ್‌ಗೆ 25,000 ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ವಾಹನಗಳನ್ನು ಟಾಟಾ ಮೊಟಾರ್ಸ್ ಪೂರೈಸಲಿದೆ.

ಈ ಎರಡು ಕಂಪನಿಗಳ ನಡುವಿನ ಒಪ್ಪಂದದ ಪ್ರಕಾರ ಉಬರ್ ತನ್ನ ಪ್ರೀಮಿಯಂ ವರ್ಗದ ಸೇವೆಯಲ್ಲಿ ಎಲೆಕ್ಟ್ರಿಕ್ ಸೆಡಾನ್ ವಾಹನಗಳನ್ನು ಬಳಸಿಕೊಳ್ಳಲಿದೆ. ಈ ಎಲೆಕ್ಟ್ರಿಕ್ ವಾಹನಗಳು ದಿಲ್ಲಿ ಎನ್‌ಸಿಆರ್, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಈ ಒಪ್ಪಂದ ಯಶಸ್ವಿಯಾದರೆ ಭಾರತದ ಆಟೋಮೊಬೈಲ್ ಕ್ಷೇತ್ರದ ಪಾಲಿಗೆ “ಗೇಮ್ ಚೇಂಜರ್” ಆಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ವಿಶ್ವದ ಪ್ರಮುಖ ಕಾರ್ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ನಿಸ್ಸಾನ್ ಸಹ, 2026ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅತಿದೊಡ್ಡ ಮಾರುಕಟ್ಟೆ ಸೃಷ್ಟಿಯಾಗಲಿರುವುದನ್ನು ಊಹಿಸಿ, ಅತೀ ಶೀಘ್ರದಲ್ಲಿ ತಮ್ಮ ಕಂಪೆನಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ. ನಿಸ್ಸಾನ್ ಕಂಪೆನಿ ಈಗಾಗಲೇ ಯೂರೋಪ್ ಮತ್ತು ಜಪಾನ್ ದೇಶಗಳಲ್ಲಿ ತಮ್ಮ ಕಂಪೆನಿಯ ಎಲೆಕ್ಟ್ರಿಕ್ ಕಾರ್‌ಗಳನ್ನು ಪರಿಚಯಿಸಿ ಯಶಸ್ವಿಯಾಗಿದೆ ಎಂಬುದು ಉಲ್ಲೇಖಾರ್ಹ.

ಇನ್ನು ವಿಶ್ವದಲ್ಲೇ ಅತ್ಯಂತ ಯಶಸ್ವಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪೆನಿಯಾದ ಟೆಸ್ಲಾ ಸಹ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ವರದಿಗಳ ಪ್ರಕಾರ ಕರ್ನಾಟಕ ಸರಕಾರದ ಅಧಿಕಾರಿಗಳ ಜೊತೆ ಟೆಸ್ಲಾ ಪ್ರತಿನಿಧಿಗಳ ಮೊದಲ ಸಭೆ 2021 ಸೆಪ್ಟೆಂಬರ್ 10 ರಂದೇ ನಡೆದಿತ್ತು.

ಸಭೆಗೆ ಮುನ್ನವೇ ಅಂದರೆ 2021 ಜನವರಿ 8ರಂದೇ ಟೆಸ್ಲಾ ಕಂಪೆನಿ ಬೆಂಗಳೂರಿನಲ್ಲಿ ತನ್ನ ಅಂಗಸಂಸ್ಥೆಯಾಗಿ ಟೆಸ್ಲಾ ಇಂಡಿಯಾ ಮೊಟರ್ಸ್ ಆಂಡ್ ಎನರ್ಜಿ ಪ್ರೈ. ಲಿ. ಎಂಬ ಹೆಸರಿನಲ್ಲಿ ಕಚೇರಿ ತೆರೆದಿತ್ತು. ಆದರೆ, ಮುಂದಿನ ಸಭೆ ಏನಾಯ್ತು? ಬೆಂಗಳೂರಿನಲ್ಲಿ ಟೆಸ್ಲಾ ಕಂಪೆನಿಯ ಭವಿಷ್ಯವೇನು? ಎಂಬ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಒಂದು ವೇಳೆ ಟೆಸ್ಲಾ ಭಾರತಕ್ಕೆ ಕಾಲಿಟ್ಟರೆ ಎಲೆಕ್ಟ್ರಿಕ್ ವಾಹನಗಳ ಉದ್ಯಮ ಮತ್ತೊಂದು ಮೈಲುಗಲ್ಲಿಗೆ ಏರಲಿರುವುದು ಖಚಿತ.

ಭಾರತದಲ್ಲಿ ಸದ್ಯಕ್ಕೆ ಎಷ್ಟು ಎಲೆಕ್ಟ್ರಿಕ್ ವಾಹನಗಳಿವೆ?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಅನೇಕ ರಾಜ್ಯಗಳು ನಾನಾ ನೀತಿಗಳನ್ನು ರೂಪಿಸಿವೆ. ಆದರೂ, ದೇಶದಾದ್ಯಂತ ನೋಂದಣಿಯಾಗಿರುವ ಇ-ವಾಹನಗಳ ಸಂಖ್ಯೆ ಕೇವಲ 18 ಲಕ್ಷ ಮಾತ್ರ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು 4.1 ಲಕ್ಷ, ದೆಹಲಿ 1.8 ಲಕ್ಷ, ಮಹಾರಾಷ್ಟ್ರ 1.7 ಲಕ್ಷ, ಕರ್ನಾಟಕ 1.5 ಲಕ್ಷ, ರಾಜಸ್ಥಾನ 1.2 ಲಕ್ಷ, ಬಿಹಾರ 1.1 ಲಕ್ಷ ಮತ್ತು ತಮಿಳುನಾಡಿನಲ್ಲಿ 1 ಲಕ್ಷ ಇ-ವಾಹನಗಳಿವೆ. ಆದರೆ, ಇಷ್ಟೇ ಪ್ರಮಾಣದ ವಾಹನಗಳ ಬಳಕೆಯಿಂದ 107 ಲಕ್ಷ ಲೀಟರ್ ಇಂಧನವನ್ನು ಉಳಿಸಲಾಗಿದೆ ಎಂಬುದು ಆಶಾದಾಯಕ ಬೆಳವಣಿಗೆ.

ಆದರೂ, ಮೇಲಿನ ಅಂಕಿಅಂಶಗನ್ನು ಗಮನಿಸಿದರೆ ಭಾರತದ ಮಟ್ಟಿಗೆ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ನಿರೀಕ್ಷಿತ ಮಟ್ಟದಲ್ಲಿ ಆಕರ್ಷಿತರಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಿರುವುದು ಮತ್ತು ಇ-ಚಾರ್ಜಿಂಗ್ ಘಟಕಗಳ ಕೊರತೆ. ಭಾರತದಲ್ಲಿರುವ ಒಟ್ಟಾರೆ ಇ-ಚಾಜಿಂಗ್ ಘಟಕಗಳ ಸಂಖ್ಯೆ ಕೇವಲ 6,000 ಮಾತ್ರ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಅಧಿಕವಾಗಿರಲು ಕಾರಣ ಲಿಥಿಯಂ. ಈ ಮಾದರಿ ವಾಹನಗಳ ಬ್ಯಾಟರಿಯನ್ನು ಲಿಥಿಯಂನಿಂದಲೇ ತಯಾರಿಸಲಾಗುತ್ತದೆ. ಲಿಥಿಯಂಅನ್ನು ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದು ಸಾಕಷ್ಟು ದುಬಾರಿಯಾಗಿದೆ. ಅದರ ನೇರ ಪರಿಣಾಮವನ್ನು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹಾಗೂ ನೂತನ ಖರೀದಿದಾರರು ಎದುರಿಸಬೇಕಾಗಿದೆ.

ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಮಾಹಿತಿ ನೀಡಿದೆ. ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯು ಇಲ್ಲಿನ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಎಂಬಲ್ಲಿ 59 ಲಕ್ಷ ಟನ್ ಲಿಥಿಯಂ ನಿಕ್ಷೇಪವಿರುವುದನ್ನು ಶೋಧಿಸಿದೆ. ಇಲ್ಲಿಂದ ಲಿಥಿಯಂಅನ್ನು ಪಡೆಯಲು ಸಾಧ್ಯವಾದರೆ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರುಗಳ ಬೆಲೆ ಇಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ.

ಇದರ ಜೊತೆಗೆ “ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಲಿಥಿಯಂ-ಐಯಾನ್ ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಬೇಕಾಗಿರುವ ಕಚ್ಚಾವಸ್ತುಗಳ ಆಮದಿಗೆ ಸುಂಕ ವಿನಾಯಿತಿ ವಿಸ್ತರಿಸಲಾಗಿದೆ” ಎಂದು ಕಳೆದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಘೋಷಿಸಿದ್ದರು ಎಂಬುದು ಉಲ್ಲೇಖಾರ್ಹ.

ಈ ನಡುವೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪೆನಿಗಳು ಇ-ಚಾರ್ಜಿಂಗ್ ಘಟಕಗಳನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಿರುವುದು ಮತ್ತು ದ್ವಿಚಕ್ರ ವಾಹನಗಳ ಬ್ಯಾಟರಿಗಳನ್ನು ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಚಾರ್ಚ್ ಮಾಡಿಕೊಳ್ಳಲು ಅನುವಾಗುವಂತೆ ಅಭಿವೃದ್ಧಿ ಪಡಿಸಿರುವುದು ಗಮನಾರ್ಹ ಬೆಳವಣಿಗೆ. ಒಟ್ಟಾರೆ ಪ್ರಸ್ತುತ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಎಲ್ಲ ಮಹತ್ವದ ಬೆಳವಣಿಗೆಗಳ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಮುಂಬರುವ ದಿನಗಳಲ್ಲಿ ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪಾರಮ್ಯ ಸಾಧಿಸುವ ಸಾಧ್ಯತೆ ದಟ್ಟವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...